Sunday, January 2, 2011

0

ಪುತ್ತೂರಿನಲ್ಲಿ ಕಾಲು ಶತಮಾನದ ಕನ್ನಡದ ಸಣ್ಣಕಥೆಗಳು - ವಿಚಾರ ಸಂಕಿರಣ

  • Sunday, January 2, 2011
  • ಡಾ.ಶ್ರೀಧರ ಎಚ್.ಜಿ.
  • Share

  • ಕರಾವಳಿ ಲೇಖಕಿ - ವಾಚಕಿಯರ ಸಂಘ ಮತ್ತು ಉತ್ತರ ಕರ್ನಾಟಕ ಲೇಖಕಿಯರ ಸಂಘವು ಜನವರಿ ೮ ಮತ್ತು ೯ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಸಹಯೋಗದೊಂದಿಗೆ ವಿವೇಕಾನಂದ ಕಾಲೇಜಿನ ಬೈಂದೂರು ಪ್ರಭಾಕರರಾವ್ ಸಭಾಭವನದಲ್ಲಿ ಕಾಲು ಶತಮಾನದ ಕನ್ನಡದ ಸಣ್ಣಕಥೆಗಳು ಎಂಬ ವಿಚಾರ ಸಂಕಿರಣವನ್ನು ಆಯೋಜಿಸಿವೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ಈ ವಿಚಾರ ಸಂಕಿರಣದಲ್ಲಿ ನಾಡಿನ ಹಲವು ಖ್ಯಾತ ಸಾಹಿತಿಗಳು ಮತ್ತು ಚಿಂತಕರು ಭಾಗವಹಿಸಲಿದ್ದಾರೆ.

    ೧೯೮೭ರಲ್ಲಿ ಸ್ಥಾಪನೆಯಾದ ಕರಾವಳಿ ಲೇಖಕಿ - ವಾಚಕಿಯರ ಸಂಘವು ೧೯೯೪ ರಲ್ಲಿ ಪ್ರಥಮ ಮಹಿಳಾ ಸಮ್ಮೇಳನ ಮಂಗಳೂರಿನಲ್ಲಿ ನಡೆಸಿದೆ. ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು, ಕನ್ನಡ ಸಂಘಗಳು, ಕರ್ನಾಟಕ ಸಂಘ ಮುಂತಾದವುಗಳ ಸಹಯೋಗದಲ್ಲಿ ಮತ್ತು ಹಲವಾರು ಸಾಹಿತ್ಯಿಕ, ಶೈಕ್ಷಣಿಕ, ದತ್ತಿನಿಧಿಗಳ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಸಂಘದ ಮೊದಲ ಅಧ್ಯಕ್ಷೆಯಾದವರು ಖ್ಯಾತ ಸಾಹಿತಿ ಪದ್ಮಾಶೆಣೈ. ಅನಂತರದ ವರ್ಷಗಳಲ್ಲಿ ಆನಂದಿ ಸದಾಶಿವರಾವ್, ಕೆ.ವಿ.ಜಲಜಾಕ್ಷಿ, ಸಾರಾ ಅಬೂಬಕರ್, ಮನೋರಮಾಭಟ್ಟ, ಡಾ.ಸಬೀಹಾ ಭೂಮಿಗೌಡ, ಲೀಲಾವತಿರಾವ್, ಸಾವಿತ್ರಿಭಟ್ಟ, ರತ್ನಾಶೆಟ್ಟಿ, ಚಂದ್ರಕಲಾನಂದಾವರ ಸಂಘದ ಅಧ್ಯಕ್ಷರಾದವರು. ಶ್ರೀಮತಿ ಎ.ಪಿ.ಮಾಲತಿ ಈಗಿನ ಅಧ್ಯಕ್ಷೆ .
    ಹುಬ್ಬಳ್ಳಿಯ ಮೂರುಸಾವಿರ ಮಠದ ಪೂಜ್ಯ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳ ಆಶೀರ್ವಚನದಲ್ಲಿ ೧೯೮೫ರಲ್ಲಿ ಅಸ್ತಿತ್ವಕ್ಕೆ ಬಂದ ಉತ್ತರ ಕರ್ನಾಟಕ ಲೇಖಕಿಯರ ಸಂಘಕ್ಕೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ. ಆ ಪ್ರಯುಕ್ತ ರಾಜ್ಯದ ಬೇರೆ ಬೇರೆ ಕಡೆ ನಡೆಸಲಿರುವ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಒಂದು ಕಾರ್ಯಕ್ರಮವನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಹಯೋಗದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

    ವಿಚಾರ ಸಂಕಿರಣವನ್ನು ಖ್ಯಾತ ಸಾಹಿತಿ ಶ್ರೀಮತಿ ವೈದೇಹಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಕಾದಂಬರಿಗಾರ್ತಿ ಡಾ ಸಾರಾ ಅಬೂಬಕ್ಕರ್ ಮತ್ತು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾಮಧು ವೆಂಕಾ ರೆಡ್ಡಿ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣದ ಕುರಿತು ಡಾ.ಶಾಂತಾ ಇಮ್ರಾಪೂರ ಪ್ರಾಸ್ತಾವನೆ ಮಾಡಲಿದ್ದು, ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜು ಆಡಳಿತ ಮಂಡಲಿಯ ಅಧ್ಯಕ್ಷರಾದ ಪ್ರೊ.ಎ.ವಿ.ನಾರಾಯಣ ವಹಿಸಲಿದ್ದಾರೆ.

    ಎರಡು ದಿನಗಳ ವಿಚಾರ ಸಂಕಿರಣದಲ್ಲಿ ೧೯೮೫ರಿಂದ - ೨೦೧೦ ರ ಕಾಲಾವಧಿಯಲ್ಲಿ ಕನ್ನಡ ಸಣ್ಣಕಥೆ, ಜಾಗತೀಕರಣದ ಸುಳಿಯಲ್ಲಿ ಕುಟುಂಬದ ಪರಿಕಲ್ಪನೆ, ಧರ್ಮ - ಸಂಸ್ಕೃತಿಯ ಪ್ರಶ್ನೆಗಳು, - ಎಂಬ ವಿಷಯಗಳ ಮೇಲೆ ಗೋಷ್ಠಿಗಳು ನಡೆಯಲಿವೆ. ಡಾವಿನಯಾ ಒಕ್ಕುಂದ ಧಾರವಾಡ, ಶ್ರೀಮತಿ ಜ್ಯೋತಿ ಚೇಳ್ಯಾರು, ಡಾ.ಕವಿತಾ ರೈ, ಡಾ.ಮಹಾಲಿಂಗ ವಿವಿಧ ವಿಷಯಗಳ ಕುರಿತು ತಮ್ಮ ಚಿಂತನಶೀಲ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

    ಹೊಸ ಶತಮಾನದಲ್ಲಿ ಸಣ್ಣಕಥೆ - ಎಂಬ ವಿಷಯದ ಕುರಿತು ಸಂವಾದ ಗೋಷ್ಟಿಯನ್ನು ಏರ್ಪಡಿಸಿದ್ದು ಡಾ ಸಬಿತಾ ಬನ್ನಾಡಿ, ಡಾ.ಗೀತಾ ವಸಂತ, ಡಾ.ಸುಲತಾವಿದ್ಯಾಧರ, ಡಾ.ಸಿದ್ಧಗಂಗಮ್ಮ, ಶ್ರೀಮತಿ ಅನುಪಮಾ ಪ್ರಸಾದ್, ಶ್ರೀ.ಗೋಪಾಲಕೃಷ್ಣ ಕುಂಟಿನಿ, ಡಾ.ಬಸವರಾಜ ಡೋಣೂರು, ಡಾ.ಗಿರೀಶ ಭಟ್ ಅಜಕ್ಕಳ ಮತ್ತು ಡಾ.ಡಿಎಮ್ ಹಿರೇಮಠ ಈ ಸಂವಾದದಲ್ಲಿ ತಮ್ಮ ಅನಿಸಿಕೆಗಳನ್ನು ಮಂಡಿಸಲಿದ್ದಾರೆ. ವಿವಿಧ ಗೋಷ್ಠಿಗಳ ಅಧ್ಯಕ್ಷತೆಯನ್ನು ಪ್ರೊ.ಮಾಲತಿ ಪಟ್ಟಣ ಶೆಟ್ಟಿ, ಡಾ.ಸಬಿಹಾ ಭೂಮಿ ಗೌಡ, ಡಾ.ಪಾರ್ವತಿ ಐತಾಳ ವಹಿಸಲಿದ್ದಾರೆ.

    ಒಂಬತ್ತನೇ ತಾರೀಕು ನಡು ಮಧ್ಯಾಹ್ನ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯಲಿದೆ. ನಾಡಿನ ಖ್ಯಾತ ಚಿಂತಕರು ಮತ್ತು ಕಥಗಾರರಾದ ಡಾ.ಎಸ್.ದಿವಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಖ್ಯಾತ ಕಥೆಗಾರ್ತಿ ಡಾ.ವೀಣಾ ಶಾಂತೇಶ್ವರ ವಹಿಸಲಿದ್ದಾರೆ.

    ಅದೇ ವೇದಿಕೆಯಲ್ಲಿ ಅಪರಾಹ್ನ ೨.೩೦ರಿಂದ ಖ್ಯಾತ ಕವಯಿತ್ರಿ ಪ್ರೊ.ಮಾಲತಿ ಪಟ್ಟಣ ಶೆಟ್ಟಿ ಅವರಿಗೆ ನಿರಂಜನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

    0 Responses to “ಪುತ್ತೂರಿನಲ್ಲಿ ಕಾಲು ಶತಮಾನದ ಕನ್ನಡದ ಸಣ್ಣಕಥೆಗಳು - ವಿಚಾರ ಸಂಕಿರಣ”

    Subscribe