Sunday, October 31, 2010

1

ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ

  • Sunday, October 31, 2010
  • ಡಾ.ಶ್ರೀಧರ ಎಚ್.ಜಿ.
  • Share

  • ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ ಶಿವರಾಮಕಾರಂತ ಬಾಲವನ ಪ್ರಶಸ್ತಿ ಮತ್ತು ಬಹುಭಾಷಾ ಕವಿಗೋಷ್ಠಿ ೧೦.೧೦.೨೦೧೦.


    ಬಾಲವನದ ಮಟ್ಟಿಗೆ ಒಂದು ವಿಶಿಷ್ಟ ದಿನ. ಆಗಸದಲ್ಲಿ ಮೋಡಕಟ್ಟಿದ ವಾತಾವರಣ. ಆಗಾಗ ಹನಿಯುವ, ಒಮ್ಮೊಮ್ಮೆ ಧೋ ಎಂದು ಸುರಿಯುವ ಮಳೆ. ಬಾಲವನದ ವಾತಾವರಣ ಎಂದಿನಂತಿರಲಿಲ್ಲ. ಹೊಸದಾಗಿ ನಿರ್ಮಿಸಿದ ಬಯಲುರಂಗ ಮಂದಿರದಲ್ಲಿ ಎಲ್ಲಿ ನೋಡಿದರೂ ವಿದ್ಯಾರ್ಥಿಗಳು ಕುಳಿತಿದ್ದರು.

    ಎಲ್ಲರಿಗೂ ಮೊದಲ ವರ್ಷದ ಡಾ. ಶಿವರಾಮಕಾರಂತ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವ ಸಂಭ್ರಮ.

    ಅಂದು, ೨೦೦೯ರ ಶಿವರಾಮಕಾರಂತ ಜನ್ಮದಿನಾಚರಣೆಯ ಸಂದರ್ಭದಲ್ಲಿ ಬಾಲವನ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರಿನ ಸಹಾಯಕ ಕಮೀಷನರ್ ಡಾ. ಹರೀಶ್ ಕುಮಾರ್ ಕೆ. ಇವರು ಮುಂದಿನ ವರ್ಷ ಬಾಲವನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದ್ದರು. ಅವರು ಹೇಳಿದಂತೆ ಮಾಡಿ ತೋರಿಸಿದರು. ಮೊದಲ ಬಾಲವನ ಪ್ರಶಸ್ತಿಯನ್ನು ೧೦.೧೦.೨೦೧೦ರಂದು ನಡೆದ ಸಮಾರಂಭದಲ್ಲಿ ಕನ್ನಡದ ಹಿರಿಯ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿಯವರಿಗೆ ಬಾಲವನ ಸಮಿತಿಯ ವತಿಯಿಂದ ನೀಡಿ ಗೌರವಿಸಲಾಯಿತು.

    ಅನಂತರ ಕಾಲೇಜು ವಿದ್ಯಾರ್ಥಿಗಳ ಬಹುಭಾಷಾ ಕವಿಗೋಷ್ಠಿ. ವಿದ್ಯಾರ್ಥಿಗಳು ಒಂಬತ್ತು ಭಾಷೆಗಳಲ್ಲಿ ತಮ್ಮ ಕವಿತೆಗಳನ್ನು ಓದಿದರು. ಅಲ್ಲಿ ಸೇರಿದ್ದ ನೂರಾರು ಮಂದಿ ಹಿರಿಯರು ಮತ್ತು ಕಿರಿಯರು ವಿದ್ಯಾರ್ಥಿಗಳ ಕವಿಶಕ್ತಿಗೆ ತಲೆದೂಗಿದರು.

    ಡಾ. ವಸಂತಕುಮಾರ್ ಪೆರ್ಲರಿಂದ ಅಧ್ಯಕ್ಷೀಯ ನುಡಿಗಳು.

    ಗದ್ಯಕ್ಕಿಂತ ಭಿನ್ನವಾದುದು ಕವಿತೆ. ಕವಿ ತನ್ನ ಮನಸ್ಸಿನ ಅನಿಸಿಕೆಯನ್ನು ವ್ಯಕ್ತಪಡಿಸಲು ವಿವಿಧ ಪ್ರಕಾರಗಳನ್ನು ಬಳಸುತ್ತಾನೆ. ಇವುಗಳಲ್ಲಿ ಕವಿತೆಯೂ ಒಂದು. ಕವಿತೆಯು ಅದರ ಶಿಸ್ತಿನ ಎಲ್ಲ ಅಂಶಗಳನ್ನು ಒಳಗೊಳ್ಳಬೇಕು. ಅರ್ಥ, ಭಾವವೈವಿಧ್ಯ, ಸಂಕೀರ್ಣ ಅನುಭವಗಳನ್ನು ಓದುಗನಿಗೆ ಸಂವಹನಗೊಳಿಸಬೇಕು. ಗದ್ಯವು ಬುದ್ಧಿಗೆ, ಕವಿತೆ ಹೃದಯಕ್ಕೆ ಸಂಬಂಧಿಸಿದ್ದು. ಕಾವ್ಯ ಹೃದಯದೊಂದಿಗೆ ನೇರವಾಗಿ ಸಂವಾದ ಮಾಡುತ್ತದೆ. ಕವಿತೆ ಎಂದರೆ ಒಡೆದು ಕಟ್ಟುವ ಪ್ರಕ್ರಿಯೆ ಎಂದು ಕವಿ ಡಾ. ವಸಂತಕುಮಾರ ಪೆರ್ಲ ಹೇಳಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನುಭವಗಳಿಗೆ ದಕ್ಕುವ ವಿಷಯವನ್ನು ಆಯ್ದುಕೊಂಡಿದ್ದಾರೆ. ನಾವು ಮನೆಭಾಷೆಯನ್ನು ಶಕ್ತಿಯುತಗೊಳಿಸದಿದ್ದರೆ ಮುಖ್ಯಭಾಷೆ ನಿಸ್ಸತ್ವವಾಗುತ್ತದೆ. ಸ್ಥಳೀಯ ಭಾಷೆಗಳು ಸತ್ವಪೂರ್ಣವಾದರೆ ಮುಖ್ಯಭಾಷೆಗೆ ಚೈತನ್ಯ ಬರುತ್ತದೆ ಎಂದು ಈ ಸಂದರ್ಭದಲ್ಲಿ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

    ಬಹುಭಾಷಾ ಕವಿಗೋಷ್ಠಿಯಲ್ಲಿ ವಿವಿಧ ಕಾಲೇಜುಗಳಿಂದ ಬಂದ ೨೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವಿವೇಕಾನಂದ ಕಾಲೇಜು ಕನ್ನಡ ಸಂಘ ಮತ್ತು ಸಂತಫಿಲೋಮಿನಾ ಕಾಲೇಜು ಕನ್ನಡ ಸಂಘಗಳು ಜಂಟಿಯಾಗಿ ಆಯೋಜಿಸಿದ್ದವು. ಕಾರ್ಯಕ್ರಮದ ಕೊನೆಯಲ್ಲಿ ಬಾಲವನ ಸಮಿತಿಯ ವತಿಯಿಂದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

    1 Responses to “ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ”

    Anonymous said...
    November 21, 2010 at 9:56 PM

    olleya kaaryakrama. chennaayithu. girisha


    Subscribe