Sunday, October 3, 2010

1

ಸದ್ಗುಣಿ ಕೃಷ್ಣಾಬಾಯಿ - ಒಂದು ಮರುನೋಟ

  • Sunday, October 3, 2010
  • ಡಾ.ಶ್ರೀಧರ ಎಚ್.ಜಿ.
  • Share
  • (ಎಸ್.ಡಿ.ಎಂ. ಕಾಲೇಜು ಉಜಿರೆಯವರು ಪ್ರಕಟಿಸಿದ ಶೋಧನ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ)

    ಶಾಂತಾಬಾಯಿ ನೀಲಗಾರ ಬರೆದ 'ಸದ್ಗುಣಿ ಕೃಷ್ಣಾಬಾ ಅಥವಾ ಉತ್ತಮ ಗೃಹಿಣಿ' (೧೯೦೮) ಕಾದಂಬರಿ ಪ್ರಕಟವಾಗಿ ಒಂದು ಶತಮಾನ ಕಳೆಯಿತು. ಲೇಖಕಿಯೊಬ್ಬರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ಎಂದು ಇದನ್ನು ಸದ್ಯಕ್ಕೆ ಸ್ವೀಕರಿಸಲಾಗಿದೆ. ಹೀಗಾಗಿ ಐತಿಹಾಸಿಕವಾಗಿ ಮೊದಲ ಕಾದಂಬರಿಕಾರ್ತಿ ಎಂಬ ಹೆಸರು ಸದ್ಯಕ್ಕೆ ಶಾಂತಾಬಾಯಿ ನೀಲಗಾರ ಅವರಿಗೆ ಸಲ್ಲುತ್ತದೆ.

    ಕೃತಿಯಲ್ಲಿ ೯೧ ಪುಟವಿದ್ದು ಇದರ ಬೆಲೆ ಎಂಟು ಅಣೆ. " ಚಚಡಿ ದೇಸಗತಿಯ ಕಾರಬಾರಿಗಳಾದ ಮ.ರಾ. ನರಸಿಂಹಾಚಾರ್ಯ ಕಾವ್ಯಾನಂದ ಪುಣೇಕರ ಎಂಬ ಸಭ್ಯಗೃಹಸ್ಥರು ತಮ್ಮ ಸ.ವಾ.ಸೌ. ರಾಧಾಬಾಯಿ ಪುಣೇಕರ ಇವರ ಸ್ಮರಣಕ್ಕಾಗಿ ಸಂತುಷ್ಟೋ ಭಾರ್ಯಾಯಾ ಭರ್ತಾ ಭರ್ತಾಭಾರ್ಯಾ ಪರಸ್ಪರಮ್ಯಸ್ಮಿನ್ನೇವ ಕುಲೇನಿತ್ಯಂ ಕಲ್ಯಾಣಂ ತತ್ರವೈದ್ರುವಮ್ಈ ಮನೂಕ್ತಿ ಶಿರೋಲೇಖನದ ನಿಬಂಧವನ್ನು ಬರೆಸುವುದಕ್ಕೆ ೨೫ರೂ ಪಾರಿತೋಷಕ ಕೊಡುತ್ತೇವೆಂದು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ತಿಳುಹಿಸಿದರು. ಈ ನಿಬಂಧವನ್ನು ನಮ್ಮ ದೇಶಭಗಿನಿಯರೊಳಗಿನವರೊಬ್ಬರು ಬರೆದರೆ ಬಹಳ ವಿಹಿತವಾಗುವುದೆಂದೂ ತಮ್ಮ ಅಭಿಪ್ರಾಯವನ್ನು ವ್ಯಕ್ತಮಾಡಿದ್ದರು. ಅದರಂತೆ ಸಂಘದವರು ಅಂತ:ಕರಣ ಪೂರ್ವಕವಾಗಿ ಆ ಕಾರ್ಯವನ್ನು ನನಗೆ ಒಪ್ಪಿಸಿದರು. ನಾನು ಒಂದು ಕಥಾರೂಪದಿಂದ ಅದನ್ನು ಕ್ರಮಕ್ರಮವಾಗಿ ವಾಗ್ಭೂಷಣದಲ್ಲಿ ಕೊಟ್ಟು ಮುದ್ರಿಸಿ ತಮ್ಮ ಮುಂದೆ ಇಟ್ಟಿರುವೆನು" ಎಂಬ ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ಲೇಖಕಿ ಈ ಕೃತಿ ಹುಟ್ಟಿ ಬಂದ ಹಿನ್ನೆಲೆ ಮತ್ತು ಆಶಯವನ್ನು ವಿವರಿಸಿದ್ದಾರೆ.

    ಮಹಿಳೆಯರನ್ನು ಬರವಣಿಗೆಯಲ್ಲಿ ತೊಡಗಿಸಲು ಸಂಘ ಸಂಸ್ಥೆಗಳು ಬಹುಮಾನಗಳನ್ನು ನೀಡುತ್ತಿದ್ದ ಅಂಶ ಇಲ್ಲಿ ವ್ಯಕ್ತವಾಗಿದೆ. ಈ ಬಗೆಯ ಆಹ್ವಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯಾಗಿ 'ಮಹಿಳೆಯ ಅಕ್ಷರಲೋಕ' ತೆರೆದುಕೊಂಡಿತು ಎನ್ನುವುದು ಗಮನಾರ್ಹ ಅಂಶ. ಕೃತಿಯ ಶೀರ್ಷಿಕೆಯ ಪುಟದಲ್ಲಿ ೧೯೦೮ ಎಂದಿದ್ದು ಪ್ರಸ್ತಾವನೆಯ ಕೊನೆಯಲ್ಲಿ 'ಧಾರವಾಡ ೩೧.೦೩.೦೯' ಎಂಬ ದಿನಾಂಕವು ನಮೂದಾಗಿದೆ. ಬಹುತೇಕ ಕೃತಿಯನ್ನು ೧೯೦೮ರಲ್ಲಿ ಬರೆದು ವಾಗ್ಭೂಷಣದಲ್ಲಿ ಕ್ರಮವಾಗಿ ಮುದ್ರಿಸಿ ೧೯೦೯ರಲ್ಲಿ ಇದನ್ನು ಒಟ್ಟು ಸೇರಿಸಿ ಕೃತಿ ರೂಪದಲ್ಲಿ ಪ್ರಕಟಿಸಿರಬೇಕು. 'ಪ್ರಸ್ತಾವನೆಯು' ಆಗಲೇ ಸೇರಿಕೊಂಡಿರಬೇಕು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ ಗ್ರಂಥಮಾಲೆಯ ೪೬ನೆಯ ಪುಸ್ತಕವಾಗಿ ಶಾಂತಾಬಾಯಿಯವರ ಕೃತಿ ಪ್ರಕಟವಾಗಿದೆ.

    ಶಾಂತಾಬಾಯಿ ನೀಲಗಾರ ಅವರು 'ಗರ್ಲಸ್ಕೂಲಿನ ಹೆ. ಮಿಸ್‌ಟ್ರೆಸ್' ಆಗಿದ್ದರು. ಅಂದರೆ ಉನ್ನತ ಶಿಕ್ಷಣವನ್ನು ಪಡೆದ ಲೇಖಕಿ ಬಾಲಕಿಯರ ಶಾಲೆಯಲ್ಲಿ ಮುಖ್ಯೋಪಾಧ್ಯಾನಿಯಾಗಿದ್ದರು. ಉಳಿದಂತೆ ಶಾಂತಾಬಾಯಿಯವರ ಬಗೆಗೆ ಖಚಿತ ಮಾಹಿತಿಗಳು ದೊರೆತಿಲ್ಲ. ಈ ಅಪೂರ್ವ ಕೃತಿಯನ್ನು ೧೯೯೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮರುಮುದ್ರಣ ಮಾಡಿದ್ದು ಇದಕ್ಕೆ ವಿಜಯಾ ದಬ್ಬೆಯವರು 'ಸಾಂಪ್ರದಾಕ ರೂಪ ಆಧುನಿಕ ಸತ್ತ್ವ' ಎಂಬ ಹೆಸರಿನಲ್ಲಿ ಕೃತಿಪರಿಚಯದ ಮಾತುಗಳನ್ನು ಆರಂಭದಲ್ಲಿ ಬರೆದಿರುವರು. ೧೯೯೬ರಲ್ಲಿ ಪ್ರಕಟವಾದ ಕೃತಿಯ ಮುಖಪುಟವನ್ನು ಈ ಲೇಖನದೊಂದಿಗೆ ಪ್ರಕಟಿಸಿದೆ.

    ಪಾಶ್ಚಾತ್ಯರ ಸಂಪರ್ಕದಿಂದಾಗಿ ಶತಮಾನಗಳಿಂದ ಬಂದ ಹಲವು ಆಚಾರ, ವಿಚಾರ, ಪದ್ಧತಿ, ಸಾಂಪ್ರದಾಕ ಮೌಲ್ಯಗಳ ಸ್ವರೂಪವು ಗುರುತು ಹಿಡಿಯಲಾಗದಷ್ಟು ವೇಗವಾಗಿ ಬದಲಾಯಿತು. ವಿರೋಧ, ಹೊಂದಾಣಿಕೆ, ಪರಿಷ್ಕಾರದ ನೆಲೆಗಳಲ್ಲಿ ಹೊಸ ಚಿಂತನೆಗಳು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಎಡೆಪಡೆದವು. ರಾಜಾರಾಂ ಮೋಹನ್‌ರಾಯ್ ಮುಂತಾದ ಸಮಾಜ ಸುಧಾರಕರ ಸುಧಾರಣಾವಾದಿ ಚಳುವಳಿ ಹಾಗೂ ಇಂಗ್ಲಿಷ್ ವಿದ್ಯಾಭ್ಯಾಸದ ಪರಿಣಾಮವಾಗಿ ಪರಂಪರಾಗತ ಶಿಕ್ಷಣ ಪದ್ಧತಿ ತನ್ನ ಅರ್ಥವಂತಿಕೆಯನ್ನು ಕಳೆದುಕೊಂಡು ಹೊಸ ದಿಕ್ಕಿನ ಕಡೆಗೆ ಚಲಿಸಿತು. ಪುರುಷರೊಂದಿಗೆ ಮಹಿಳೆಯರಿಗೂ ಶಿಕ್ಷಣದ ಬಾಗಿಲು ತೆರೆದುಕೊಂಡಿತು.

    ವಸಾಹತುಶಾಹಿ ಆಡಳಿತ, ಆಧುನಿಕ ಶಿಕ್ಷಣ, ಉದ್ಯೋಗದ ಹೊಸ ಸಾಧ್ಯತೆಂದಾಗಿ ಸಿದ್ಧಮಾದರಿಯ ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಯ ಒಳನೆಲೆಗಳಲ್ಲಿ ಬದಲಾವಣೆಯ ಚಲನೆ ಕಾಣಿಸಿಕೊಂಡಿತು. ಈ ದೃಷ್ಟಿಯಿಂದ 'ಸದ್ಗುಣಿ ಕೃಷ್ಣಾಬಾಯಿ' ಒಂದು ಗಮನಾರ್ಹ ಕೃತಿ. ಆಧುನಿಕ ಶಿಕ್ಷಣ ಸ್ತ್ರೀಗೆ ನೀಡಿದ ಒಳ ಎಚ್ಚರ ಈ ಕೃತಿಯ ನಾಯಕಿಯಲ್ಲಿದೆ. ಹೀಗಾಗಿ ಆಕೆಯಲ್ಲಿ ತನ್ನ ಪರಿಸರದ ಬದುಕಿನ ಚಲನೆಯನ್ನು ಬದಲಿಸುವ, ಮರು ರೂಪಿಸುವ ಶಕ್ತಿರುವುದನ್ನು ನೋಡಬಹುದು.

    ಕೃತಿಯ ಆರಂಭದಲ್ಲಿ ಬರುವ ಮಾತುಗಳಿಗೆ ಬದಲಾಗಿ ಶಿಕ್ಷಣವನ್ನು ಪಡೆದ ಸ್ತ್ರೀಯ ವ್ಯಕ್ತಿತ್ವದ ಸಾಧ್ಯತೆಗಳನ್ನು ಗುರುತಿಸುತ್ತಾ ಹೋಗುತ್ತದೆ. ಜೊತೆಗೆ ಸಾಮಾಜಿಕ ಸ್ತರಗಳಲ್ಲಿ ನೆಲೆಯೂರಿದ್ದ ಸ್ತ್ರೀ ವಿರೋಧಿ ನಿಲುವುಗಳನ್ನು ಮೌನವಾಗಿ ಮುರಿದು ಕಟ್ಟುತ್ತದೆ. ಶಾಂತಾಬಾಯವರ ಬರವಣಿಗೆಯಲ್ಲಿನ ಈ ಶಕ್ತಿ ಮುಂದಿನ ಸ್ತ್ರೀ ಪರ ಚಲನೆಗೆ ಮುನ್ನುಡಿಯಂತಿದೆ. ಕೃತಿಯಲ್ಲಿ ಏಳು ಪುಟದ ಉಪೋದ್ಘಾತ ಮತ್ತು ಒಂಬತ್ತು ಭಾಗವಿದೆ. ಉಪೋದ್ಘಾತದ ಭಾಗದಲ್ಲಿ ಲೇಖಕಿ ಉತ್ತಮ ಗೃಹಿಣಿಯಲ್ಲಿ ಇರಬೇಕಾದ ಗುಣಗಳನ್ನು ಸಾಂಪ್ರದಾಕ ತಿಳುವಳಿಕೆಯ ಹಿನ್ನೆಲೆಯಲ್ಲಿ ಗುರುತಿಸುತ್ತದೆ. ಹೊರನೋಟಕ್ಕೆ ಇಲ್ಲಿ ಲೇಖಕಿಯ ಧೋರಣೆಯು ಸಂಪ್ರದಾಯಕ್ಕಿಂತ ಭಿನ್ನವಾಗಿಲ್ಲ.

    " ಸುಶೀಲ ಸ್ತ್ರೀ ದೊರೆತರೆ ಅವನು ಶ್ರೀಮಂತನೇ ಇರಲಿ, ಬಡವನೇ ಇರಲಿ ಅವನು ನಿಜವಾಗಿ ಸುಖಿಯಾಗುವನು"(ಪು.೧) "ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಕೀರ್ತಿ ತರತಕ್ಕಂಥವರೇ ಉತ್ತಮ ಗೃಹಿಣಿಯರು" (ಪು.೨) "ನೀತಿವಂತಳೂ, ಈಶ್ವರ ನಿಷ್ಠಳೂ ಇದ್ದ ಹೊರ್ತು ಯಾರಿಗೂ ಉತ್ತಮ ಸ್ತ್ರೀ ಎಂಬ ಹೆಸರು ಬರಲಾರದು"(ಪು.೩) "ಯಾವ ಸ್ತ್ರೀಯು ತನ್ನ ಮನಸ್ಸನ್ನೂ ವಾಣಿಯನ್ನೂ ದೇಹವನ್ನೂ ತನ್ನ ಸ್ವಾಧೀನದಲ್ಲಿಟ್ಟುಕೊಂಡು ಪತಿಯ ಆಜ್ಞೆಯ ಹೊರತಾಗಿ ಯಾವ ಕೆಲಸವನ್ನೂ ಮಾಡುವುದಿಲ್ಲವೋ ಆಕೆಯೇ ಸಾಧ್ವಿಯೆಂದು ಮನು ನುಡಿದಿರುವನು"(ಪು.೩) "ನಿಜವಾದ ಪತ್ನಿ ಪತಿಯ ಸುಖವೇ ತನ್ನ ಸುಖವೆಂದು ಎಣಿಸುವಳು ಮತ್ತು ಅವನ ದು:ಖಗಳಲ್ಲಿ ಪಾಲುಗಾರಳಾಗುವಳು"(ಪು.೬) "ನಿಜವಾದ ಪತ್ನಿಯು ದೊಡ್ಡಮನಸ್ಸಿನವಳೂ, ಮಮತೆಯುಳ್ಳವಳೂ, ಸ್ವಾರ್ಥಶೂನ್ಯಳೂ ಇರುವಳು. ಆಕೆಯು ತನ್ನ ಸುಖದ ಕಡೆಗೆ ಲಕ್ಷ್ಯಕೊಡದೆ, ತನ್ನ ಪತಿಯ ಸುಖವೆ ತನ್ನ ಸುಖವೆಂದು ಎಣಿಸುವಳು".(ಪು.೬) ಇಂತಹ ಹಲವು ಮಾತುಗಳು ಈ ಭಾಗದಲ್ಲಿ ಬರುತ್ತವೆ. ಉತ್ತಮ ಗೃಹಿಣಿಯಲ್ಲಿರಬೇಕಾದ ಅಂಶಗಳನ್ನು ವ್ಯಕ್ತಮಾಡಿ ತೋರಿಸುವ ಚಿಕ್ಕ ಕಥೆಯನ್ನು ಬರೆಯುವೆನೆಂದು ತಿಳಿಸುವುದರೊಂದಿಗೆ ಉಪೋದ್ಘಾತ ಮುಗಿಯುವುದು.

    ಉಪೋದ್ಘಾತದಲ್ಲಿ ಬರುವ ವಿವರಗಳಿಗೆ ಕೃಷ್ಣಾಬಾಯ ಬದುಕು ಒಂದು ಮಾದರಿಯಾಗಿ ನಿಲ್ಲುತ್ತದೆ. ಕಥಾಸಾರಾಂಶ : ಕಥಾನಾಯಕಿ ಕೃಷ್ಣಾಬಾಯಿಯ ಹೆತ್ತವರು ಕರ್ನಾಟಕ ದೇಶದವರಾದರೂ ಸರಕಾರಿ ಕೆಲಸದ ಸಲುವಾಗಿ ಮಹಾರಾಷ್ಟ್ರ ದೇಶದಲ್ಲಿ ಬಹುಕಾಲ ವಾಸವಾಗಿದ್ದರು. ಈಕೆಯ ತಂದೆ ಹರಿವಂತ. ತಾಯಿ ರಾಧಾಬಾಯಿ. ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡ ಕೃಷ್ಣಾಬಾಯಿ ತನ್ನ ಅಣ್ಣ ಶಾಮರಾಯ ಹಾಗೂ ಗುರುಗಳ ಪ್ರೋತ್ಸಾಹದಿಂದ ಶಿಕ್ಷಣವನ್ನು ಕಲಿತಳು. ಇದರೊಂದಿಗೆ ಅಡಿಗೆ, ಕಸೂತಿ, ರಂಗವಲ್ಲಿ, ಹಾಡು, ಹೆಣಿಕೆ ಮುಂತಾದ ಗೃಹಕೃತ್ಯವನ್ನು ಶ್ರದ್ದೆಯಿಂದ ಕಲಿತಳು.

    ಉದ್ಯೋಗದ ನಿಮಿತ್ತ ಮುಂಬಯಿಗೆ ಬಂದ ಶಾಮರಾಯ ತಂಗಿಯನ್ನು ಅಲ್ಲಿನ ಝನಾನಾ ಮಿಶನದ ಬಾಲಿಕಾ ಶಾಲೆಗೆ ಸೇರಿಸಿದನು. ಶಿಕ್ಷಣದಲ್ಲಿ ಮೊದಲ ಸ್ಥಾನವನ್ನು ಪಡೆದ ಕೃಷ್ಣಾಬಾಗೆ ಅನೇಕ ಗಣ್ಯರ ಸಮ್ಮುಖದಲ್ಲಿ ಸುವರ್ಣಪದಕವೂ ಹಲವು ಇನಾಮುಗಳು ದೊರೆತು. ಬಹುಮಾನ ವಿತರಣೆಯ ಸಮಾರಂಭದಲ್ಲಿ ಕರ್ನಾಟಕ ಮೂಲದ ಭಾವೂಸಾಹೇಬ ಮತ್ತು ಆತನ ಮಗ ಮಾಧವರಾಯನ ಪರಿಚಯವಾಯಿತು.

    ಯೋಗಾಯೋಗವೆಂಬಂತೆ ಭಾವೂಸಾಹೇಬ ಮತ್ತು ಕೃಷ್ಣಾಬಾಯ ತಂದೆ ಹರಿವಂತರು ಬಾಲ್ಯ ಸ್ನೇಹಿತರಾಗಿದ್ದರು. ಇಲ್ಲಿ ಆದ ಪರಿಚಯ ಸಂಬಂಧಕ್ಕೆ ತಿರುಗಿ ಕೃಷ್ಣಾಬಾಯಿ ಮತ್ತು ಮಾಧವರಾಯನ ನಡುವೆ ವಿವಾಹ ನಡೆತು. ಇದಾಗಿ ಸ್ವಲ್ಪ ಸಮಯದಲ್ಲಿಯೇ ರಾಧಾಬಾಯಿಯ ಅರೋಗ್ಯ ಹವಾಮಾನದ ವ್ಯತ್ಯಯದಿಂದ ಹಾಳಾಗಿದ್ದರಿಂದ ಶ್ಯಾಮರಾಯನು ತಾಯಿಯನ್ನು ಕರೆದುಕೊಂಡು ಊರಿಗೆ ಹಿಂದಿರುಗಿದರು. ಆದರೆ ಯಾವುದೇ ಚಿಕಿತ್ಸೆಯೂ ಪರಿಣಾಮ ಬೀರದೆ ರಾಧಾಬಾಯಿ ಮೃತಳಾದಳು. ಇದಾಗಿ ಸ್ವಲ್ಪ ಸಮಯದಲ್ಲಿ ಅತ್ತೆ ರಮಾಬಾಯಿ ಮತ್ತು ಮಾವ ಬಾವೂಸಾಹೇಬರು ತೀರಿಕೊಂಡಳು.

    ಇದರಿಂದಾಗಿ ಮನೆಯ ಜವಾಬ್ದಾರಿ ಕೃಷ್ಣಾಬಾಯ ಹೆಗಲೇರಿತು. ಈ ವೇಳೆಗೆ ಆಕೆಯ ಪತಿ ಮಾಧವರಾಯ ಎಲ್.ಎಲ್.ಬಿ. ಪರೀಕ್ಷೆಯನ್ನು ಬರೆಯಲು ಅಧ್ಯಯನ ಮಾಡುತ್ತಿದ್ದನು. ಸಂಸಾರದ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ವಿಶಾಲವಾದ ಮನೆಯನ್ನು ಬಿಟ್ಟು ಬೇರೆ ಮನೆಗೆ ಹೋದರು. ಮುಂಬುಯಂಥ ಶಹರದಲ್ಲಿ ಸದ್ಯ ವಕೀಲಿ ಮಾಡುವುದು ಲಾಭಕರವಲ್ಲವೆಂದು ಯೋಚಿಸಿ ಮಾಧವರಾಯ ಮುಂಬುಯ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ಸ್ವಲ್ಪ ಸಮಯದಲ್ಲಿಯೇ ಆ ವೃತ್ತಿಯನ್ನು ತ್ಯಜಿಸಿ ಉನ್ನತ ಶಿಕ್ಷಣವನ್ನು ಪಡೆಯುವ ಹಂಬಲ ಹೆಚ್ಚಿತು.

    ಕೃಷ್ಣಾಬಾಯಿ ಗುಟ್ಟಿನಲ್ಲಿ ತನ್ನ ಒಡವೆಯನ್ನು ಮಾರಿ ಹಣದ ವ್ಯವಸ್ಥೆಯನ್ನು ಮಾಡಿದ್ದರಿಂದ ಸಿವಿಲ್ ಸರ್ವಿಸ್ ಅಥವಾ ಬ್ಯಾರಿಸ್ಟರ್ ಪರೀಕ್ಷೆಯನ್ನು ಬರೆಯಲು ಪತ್ನಿಯೊಂದಿಗೆ ಇಂಗ್ಲೆಂಡಿಗೆ ಹೊರಟನು. ಅವರು ಪ್ರಯಾಣ ಮಾಡುತ್ತಿದ್ದ ಹಡಗು ದಾರಿಯ ನಡುವೆ ಮುಳುಗುವ ಹಂತ ತಲುಪಿದಾಗ ಅಲ್ಲಿಂದ ಪಾರಾಗುವ ಗೊಂದಲದಲ್ಲಿ ಕೃಷ್ಣಾಬಾ ಯಿ ಮತ್ತು ಮಾಧವರಾಯ ಬೇರೆ ಬೇರೆ ಹಡಗುಗಳಿಗೆ ವರ್ಗಾಸಲ್ಪಟ್ಟರು. ಇದರ ಪರಿಣಾಮವಾಗಿ ಕೃಷ್ಣಾಬಾಯಿ ಮರಳಿ ಮುಂಬಯಿಗೂ , ಮಾಧವರಾಯ ಇಂಗ್ಲೆಂಡಿಗೂ ತಲುಪಿದರು. ಕೃಷ್ಣಾಬಾಯಿ ಪುಣೆಯ ತನ್ನ ಅಕ್ಕನ ಮನೆಯಲ್ಲಿ ಆಶ್ರಯಕ್ಕೆ ಬಂದಳು. ಅಕ್ಕನ ಮಕ್ಕಳಾದ ಕಾಶಿ, ಗೋದಾವರಿ, ಬಳವಂತರಿಗೆ ಸೂಕ್ತ ಶಿಕ್ಷಣ, ಮಾರ್ಗದರ್ಶನವನ್ನು ನೀಡಿ - ಗಂಗಾಬಾಯಿಯ ಮತ್ಸರದ ನಡುವೆಯೂ- ಎಲ್ಲರ ಮೆಚ್ಚುಗೆಯನ್ನು ಗಳಿಸಿದಳು. ಇಂಗ್ಲೆಂಡಿನ ವ್ಯಾಪಾರಿ ಲ್ಯಾಂಬರ್ಟಿನ್ ಸಾಹೇಬನ ನೆರವಿನಿಂದ ಮಾಧವರಾಯ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಮುಗಿಸಿ ಮುಂಬುಗೆ ಮರಳಿ ಪುಣೆಯಲ್ಲಿದ್ದ ಪತ್ನಿಯನ್ನು ಭೇಟಿಯಾದನು. ಅನಂತರ ಪುಣೆಯ ಅಸಿಸ್ಟೆಂಟ್ ಕಲೆಕ್ಟರನಾಗಿ ನೇಮಕಗೊಂಡನು. (ಮುಂದುವರಿಯುವುದು )

    1 Responses to “ಸದ್ಗುಣಿ ಕೃಷ್ಣಾಬಾಯಿ - ಒಂದು ಮರುನೋಟ”

    Anonymous said...
    November 16, 2010 at 10:20 PM

    good article. informative. thanks. girisha


    Subscribe