Tuesday, January 4, 2011

0

ಪ್ರಾಚೀನ ಕಾಲದ ಜನತಾನ್ಯಾಯಾಲಯದ ಆಧುನಿಕ ರೂಪ ಲೋಕದಾಲತ್

  • Tuesday, January 4, 2011
  • ಡಾ.ಶ್ರೀಧರ ಎಚ್.ಜಿ.
  • Share
  • ಸಂಚಾರಿ ನ್ಯಾಯಾಲಯ ಅತ್ಯುತ್ತಮವಾದ ಕಲ್ಪನೆ. ಬದುಕಿನಲ್ಲಿ ಕಾನೂನಿನ ವ್ಯಾಪ್ತಿಗೆ ಬರದ ಯಾವ ಸಂಗತಿಯೂ ಇಲ್ಲ. ಆದ್ದರಿಂದ ಜನಸಾಮಾನ್ಯರೆಲ್ಲರೂ ಕಾನೂನಿನ ಅರಿವನ್ನು ಪಡೆದುಕೊಳ್ಳಬೇಕು. ಪ್ರಾಚೀನ ಕಾಲದ ಜನತಾ ನ್ಯಾಯಾಲಯಕ್ಕೆ ಆಧುನಿಕ ರೂಪವನ್ನು ಲೋಕ ಅದಾಲತ್‌ನಲ್ಲಿ ನೀಡಲಾಗಿದೆ ಎಂದು ಶ್ರೀಮತಿ ಅನಿತ ಎನ್. ಪಿ. ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಪುತ್ತೂರು ಇವರು ಹೇಳಿದರು.

    ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ತಾಲೂಕುಕಾನೂನು ಸೇವಾ ಸಮಿತಿ ಪುತ್ತೂರು ಮತ್ತು ಜಿಲ್ಲಾಡಳಿತ, ವಕೀಲರ ಸಂಘ ಪುತ್ತೂರು, ಪುತ್ತೂರು ತಾಲೂಕಿನ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ತಾಲೂಕು ಪಂಚಾಯತ್, ಪ್ರಾದೇಶಿಕ ಸಾರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಪುರಸಭೇ, ಜೆಸಿಐ ಉಪ್ಪಿನಂಗಡಿ, ಸಮಾಜ ಕಲ್ಯಾಣ ಇಲಾಖೆ ಇವುಗಳ ಸಹಯೋಗದಲ್ಲಿ ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ ಸಂಚಾರಿ ಲೋಕದಾಲತ್ ಮತ್ತು ಸಾಕ್ಷರತಾ ರಥ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ವಿವೇಕಾನಂದ ಕಾಲೇಜಿನಲ್ಲಿ ಮಾತನಾಡುತ್ತಿದ್ದರು.

    ಪಟ್ಟಣ ಕೇಂದ್ರಿತವಾಗಿದ್ದ ನ್ಯಾಯಾಲಯ ಲೋಕ ಅದಾಲತ್‌ನ ಮೂಲಕ ಇಂದು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಲು ಸಾಧ್ಯವಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ಅವರು ಅಭಿಪ್ರಾಯಪಟ್ಟರು.

    ಈ ಸಂದರ್ಭದಲ್ಲಿ ರ್ರ್ಯಾಗಿಂಗ್ ತಡೆ ಕಾಯ್ದೆ ಹಾಗೂ ಮಾಹಿತಿ ಹಕ್ಕು ಅಧಿನಿಯಮ ಎಂಬ ವಿಷಯದ ಮೇಲೆ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮಹೇಶ್ ಕಜೆ ಇವರು ಮಾಹಿತಿ ನೀಡುತ್ತಾ, ರ‍್ಯಾಗಿಂಗ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿ ಮಾತ್ರವಲ್ಲ, ಆತನ ಹೆತ್ತವರು ಮತ್ತು ಆತ ಕಲಿಯುತ್ತಿರುವ ವಿದ್ಯಾ ಸಂಸ್ಥೆಯೂ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಇದರಿಂದ ಇವರೆಲ್ಲರೂ ತೀವ್ರತರವಾದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದೇ ರೀತಿ ಮಾಹಿತಿ ಹಕ್ಕು ಅಧಿನಿಯಮವು ಜನಸಾಮಾನ್ಯರಿಗೆ ಸಿಕ್ಕಿದ ಬ್ರಹ್ಮಾಸ್ತ್ರವಾಗಿದೆ. ಅಧಿಕಾರ ಶಾಹಿಯ ವಿರುದ್ಧ ಹೋರಾಡಲು, ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಇದರಿಂದ ಸಾಧ್ಯವಾಗಿದೆ. ಮಾಹಿತಿ ಹಕ್ಕು ಅಧಿನಿಯಮ ಪ್ರತಿಯೊಬ್ಬ ಸಾಮಾಜಿಕನ ಜನ್ಮಸಿದ್ಧ ಹಕ್ಕು ಎಂದು ಅವರು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಿನ್ಸಿಪಾಲರಾದ ಡಾ. ಎಚ್. ಮಾಧವ ಭಟ್ ಮಾತನಾಡುತ್ತಾ ಕಾನೂನು ಸಾಕ್ಷರತೆ ಇಂದಿನ ತುರ್ತು ಅಗತ್ಯವಾಗಿದೆ. ಕಾನೂನಿನ ಒಳಗೆ ಇರುವ ದುರ್ಬಲ ಎಳೆಗಳನ್ನು ಗುರುತಿಸಿ ಸುಧಾರಿಸುವ ಅಗತ್ಯವಿದೆ. ಪ್ರತಿಯೊಂದು ವಿದ್ಯಾ ಸಂಸ್ಥೆಗೂ ಸಾಮಾಜಿಕ ಜವಾಬ್ದಾರಿಯಿದ್ದು ನ್ಯಾಯಾಂಗದ ಬಗೆಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಬಗೆಯ ಕಾರ್ಯಕ್ರಮಗಳು ಉಪಯುಕ್ತ ಎಂದು ಹೇಳಿದರು.

    ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಶೇಷಶಯನ, ಪುತ್ತೂರು ಬಾರ್ ಕೌನ್ಸಿಲ್‌ನ ಕಾರ್ಯದರ್ಶಿ ಜಗನ್ನಾಥ ರೈ, ಸಹಾಯಕ ಸರ್ಕಾರಿ ಅಭಿಯೋಜಕರಾದ ತಮ್ಮಣ್ಣ, ಶ್ರೀರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀಧರ ರೈ ಉಪಸ್ಥಿತರಿದ್ದರು.

    ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾಲಕ್ಷ್ಮಿ ಪ್ರಾರ್ಥಿಸಿದರು. ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿ ಡಾ. ಶ್ರೀಧರ ಎಚ್. ಜಿ. ವಂದಿಸಿದರು.

    0 Responses to “ಪ್ರಾಚೀನ ಕಾಲದ ಜನತಾನ್ಯಾಯಾಲಯದ ಆಧುನಿಕ ರೂಪ ಲೋಕದಾಲತ್”

    Subscribe