Sunday, March 28, 2010

0

ಸಾಹಿತ್ಯಕ್ಕೆ ಪುತ್ತೂರಿನ ಕೊಡುಗೆ - ವಿಚಾರಗೋಷ್ಟಿ

  • Sunday, March 28, 2010
  • ಡಾ.ಶ್ರೀಧರ ಎಚ್.ಜಿ.
  • ಬಾಲವನ ಕನ್ನಡಿಗರಿಗೆಲ್ಲ ಪವಿತ್ರವಾದ ಸ್ಥಳ. ಶಿವರಾಮ ಕಾರಂತರಿಂದಾಗಿ ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಪುತ್ತೂರಿಗೆ ಹೆಸರು ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲವನದಲ್ಲಿ ನಿರಂತರವಾಗಿ ಸಾಹಿತ್ಯದ ಚಟುವಟಿಕೆಗಳು ನಡೆಯಬೇಕು. ಇಂದಿನ ವಿಚಾರಗೋಷ್ಟಿ ಚರ್ಚೆಗೆ ಆರಿಸಿಕೊಂಡಿರುವ ಉಗ್ರಾಣ ಮಂಗೇಶರಾವ್, ಎ.ಪಿ. ಸುಬ್ಬಯ್ಯ, ಕೆದಂಬಾಡಿ ಜತ್ತಪ್ಪ ರೈ, ಪ್ರೊ. ಬಿ. ಲೀಲಾಭಟ್ ಇವರೆಲ್ಲರೂ ಕಾರಂತರಿಗೆ ಹತ್ತಿರದವರಾಗಿದ್ದರು. ಅವರ ಬಗೆಗೆ ಬಾಲವನದಲ್ಲಿ ವಿಚಾರಗೋಷ್ಟಿ ನಡೆಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣ. ಇಂದು ವಿದ್ಯಾರ್ಥಿಗಳು ಕನ್ನಡದ ಕೆಲಸದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಎನ್. ಸುಬ್ರಹ್ಮಣ್ಯಂ ಹೇಳಿದರು.

    ಅವರು ಡಾ. ಶಿವರಾಮಕಾರಂತ ಬಾಲವನ ಸಮಿತಿ, ಕನ್ನಡ ಸಂಘ ಸಂತ ಫಿಲೋಮಿನಾ ಕಾಲೇಜು, ಕನ್ನಡ ಸಂಘ, ವಿವೇಕಾನಂದ ಕಾಲೇಜು ಇದರ ಸಹಯೋಗದಲ್ಲಿ ಬಾಲವನದಲ್ಲಿ ನಡೆದ ಕನ್ನಡ ಸಾಹಿತ್ಯಕ್ಕೆ ಪುತ್ತೂರಿನ ಕೊಡುಗೆ ಎಂಬ ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಬೌದ್ಧಿಕವಾಗಿ ಮತ್ತು ಬೌತಿಕವಾಗಿ ಬಾಲವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಕೆಲಸದಲ್ಲಿ ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕೆಂದು ಬಾಲವನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಆದ ಡಾ. ಹರೀಶ್ ಕುಮಾರ್ ಹೇಳಿದರು.

    ಪ್ರೊ. ವಿಷ್ಣುಭಟ್ ಸ್ವಾಗತಿಸಿದರು. ಪ್ರೊ. ಆರ್. ವೇದವ್ಯಾಸ ವಂದಿಸಿದರು. ಬಸ್ತಿಯಾಂ ಪಾಯಸ್ ಕಾರ್ಯಕ್ರಮ ನಿರ್ವಹಿಸಿದರು.

    ಅನಂತರ ನಡೆದ ವಿಚಾರಗೋಷ್ಟಿಯಲ್ಲಿ ಉಗ್ರಾಣ ಮಂಗೇಶ್ ರಾವ್ ಬದುಕು ಬರಹ ಎಂಬ ವಿಷಯದ ಮೇಲೆ ಡಾ. ಸುಬ್ರಹ್ಮಣ್ಯ ಭಟ್ ಪ್ರಬಂಧವನ್ನು ಮಂಡಿಸಿದರು. ಉಗ್ರಾಣರು ತಮ್ಮ ಬದುಕಿನಲ್ಲಿ ಎದುರಾದ ಸಂಘರ್ಷವನ್ನು ಮೀರಿ ನಿಂತವರು. ಅವರ ಕಾವ್ಯ, ಕಥೆಗಳು ಅತ್ಯಂತ ಸುಂದರವಾಗಿದೆ. ಹೃದ್ಯವಾದ ಗದ್ಯ ಅವರದು. ಪ್ರಾಚೀನ ಛಂದಸ್ಸನ್ನು ಬಳಸಿದ್ದರಿಂದ ಅವರ ಕವಿತೆಗಳು ಜನಪ್ರಿಯವಾಗಲಿಲ್ಲ. ಮಾನಂ ಪರಿಮಳಿಸಿ ಬೀಳ್ವುದೇ ಧನ್ಯಂ ಎಂಬ ಆದರ್ಶ ಉಗ್ರಾಣರದಾಗಿತ್ತು ಎಂದು ಉದಾಹರಣೆ ಸಹಿತ ವಿವರಿಸಿದರು.

    ಎ.ಪಿ. ಸುಬ್ಬಯ್ಯನವರು ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರು ಅನುವಾದಿಸಿದ ದು:ಖಾರ್ತರು ಕೃತಿ ಇಂದಿಗೂ ಮಹತ್ವದ್ದಾಗಿದೆ. ಪುತ್ತೂರು ಕರ್ನಾಟಕ ಸಂಘದ ಮೊದಲ ಅಧ್ಯಕ್ಷರಾಗಿದ್ದ ಎ.ಪಿ ಸುಬ್ಬಯ್ಯನವರು ಕಾರಂತರ ಕೆಲಸಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಧಿಕಾರಕ್ಕಾಗಿ ಹಂಬಲಿಸದ ನಿಜ ಅರ್ಥದಲ್ಲಿ ಮೌಲ್ಯಭರಿತ ರಾಜಕಾರಣ ಅವರದಾಗಿತ್ತು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅವರಿಗೆ ಪ್ರೌಢಿಮೆ ಇರುವುದರಿಂದ ಅನುವಾದ ಕಲೆ ಅವರಿಗೆ ಸಿದ್ದಿಸಿತ್ತು ಎಂದು ಡಾ. ಎ.ಪಿ. ರಾಧಾಕೃಷ್ಣ ಹೇಳಿದರು. ಅಜ್ಜನ ಬಗೆಗೆ ಮೊಮ್ಮಗ ಪ್ರಬಂಧವನ್ನು ಮಂಡಿಸಿದ್ದು ಹಲವರ ಗಮನ ಸೆಳೆತು.

    ಕಾಡು ಸೃಜನಶೀಲತೆಯ ಆಗರ. ಮನುಷ್ಯನ ಬದುಕು ಪ್ರಕೃತಿಯ ಒಡಲಿನಲ್ಲಿ ಅರಳಬೇಕು ಎಂದು ಮಾತಿಗೆ ತೊಡಗಿದ ಧನಂಜಯ ಕುಂಬ್ಳೆ ಜತ್ತಪ್ಪ ರೈಯವರ ಸಾಹಿತ್ಯದಲ್ಲಿ ಕಾಡಿನ ಹಸಿರಿದೆ. ಮನುಷ್ಯನ ಉಸಿರಿದೆ. ಅವರು ಬರೆದ ಬೇಟೆಯ ಸಾಹಿತ್ಯ ಅನನ್ಯವಾದುದು. ಕನ್ನಡಲ್ಲಿ ಬೇಟೆ ಸಾಹಿತ್ಯಕ್ಕೆ ಕೆದಂಬಾಡಿಯೇ ಸಾಮ್ರಾಟ. ಹಾಗೆಯೇ ಕೆದಂಬಾಡಿಯವರು ತುಳುವಿಗಾಗಿ ಮಾಡಿದ ಕೆಲಸ ಸರಿಯಾಗಿ ಗುರುತಿಸಲ್ಪಟ್ಟಿಲ್ಲ. ಅವರು ತುಳುವಿಗೆ ಅನುವಾದಿಸಿದ ಕೃತಿಗಳು ಮೂಲಕ್ಕಿಂತ ಭಿನ್ನವಾಗಿ ತುಳು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ತೆರೆದುಕೊಳ್ಳುತ್ತವೆ. ಕೆದಂಬಾಡಿಯವರ ಕೃತಿಗಳಲ್ಲಿ ತುಳುವಿನ ಸಾಂಸ್ಕೃತಿಕ ಮೌಲ್ಯಗಳನ್ನು ಆವರಿಸಿಕೊಂಡಿವೆ. ತುಳುಭೀಷ್ಮನ ಕೃತಿಗಳು ಮತ್ತೊಮ್ಮೆ ಎಲ್ಲರಿಗೂ ಸಿಗುವಂತಾಗಲಿ ಎಂದು ಆಶಿಸಿದರು.

    ಶಿವರಾಮ ಕಾರಂತರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಪ್ರೊ. ಬಿ. ಲೀಲಾಭಟ್ಟರು ಗ್ರಂಥಸಂಪಾದನೆಯಲ್ಲಿ ಒಂದು ಮಾದರಿಯನ್ನು ನಿರ್ಮಿಸಿದ್ದಾರೆ. ಕರಡು ತಿದ್ದುವಲ್ಲಿ ಅವರ ತಾಳ್ಮೆ ಮೆಚ್ಚುವಂತದು. ಉಗ್ರಾಣ, ಎಂ.ಎನ್. ಕಾಮತ್ ಕೃತಿಗಳು ಇವರನ್ನು ಮತ್ತೊಮ್ಮೆ ಕನ್ನಡಿಗರಿಗೆ ಪರಿಚಯಿಸಿವೆ. ಅವರ ಕೃತಿಗಳಲ್ಲಿ ಮಾಹಿತಿಗಳು ಸಿಗುವಷ್ಟು ಚಿಂತನೆಗೆ ಪೂರಕವಾದ ಅಂಶಗಳು ದೊರೆಯುವುದಿಲ್ಲ ಎಂದು ಶ್ರೀಮತಿ ತುಳಸಿ ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಅಧ್ಯಕ್ಷತೆ ಪ್ರೊ. ರಾಜಮಣಿಯವರದು. ಇಂದು ವಿಚಾರಗೋಷ್ಟಿಯಲ್ಲಿ ಚರ್ಚೆಗೆ ಒಳಗಾದ ಹಿರಿಯ ವಿದ್ವಾಂಸರು ಇತಿಹಾಸಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಿ ನಮ್ಮ ಇತಿಹಾಸವನ್ನು ಮುರಿಯುವ ಕೆಲಸ ನಡೆಯುತ್ತಿದೆ. ಅದನ್ನು ಮರುರೂಪಿಸುವ ಕೆಲಸ ನಡೆಯಬೇಕು. ಇಂದು ಹೃದಯವನ್ನು ತಟ್ಟುವ ಸಾಹಿತ್ಯ ಅಗತ್ಯವಾಗಿದೆ. ಸಹಜವಾದ ಭಾಷೆಯಿಂದ ಸಾಮಾನ್ಯರನ್ನು ತಲುಪಲು ಸಾಧ್ಯ. ಒಂದು ಕಾಲದಲ್ಲಿ ನಂಬಿದ ಮೌಲ್ಯಗಳು ಇಂದು ಮರೆವಿನ ಅಂಚಿಗೆ ಹೋಗುತ್ತಿವೆ. ಸಾಹಿತ್ಯ ಮತ್ತು ಸಂಸ್ಕೃತಿಪರ ಚಟುವಟಿಕೆಯಿಂದ ಇವುಗಳನ್ನು ಉಳಿಸಲು ಸಾಧ್ಯ ಎಂದು ರಾಜಮಣಿಯವರು ಹೇಳಿದರು.

    ವಿಚಾರಗೋಷ್ಟಿಯ ಕೊನೆಯಲ್ಲಿ ಡಾ. ಶ್ರೀಧರ ಎಚ್. ಜಿ. ವಂದಿಸಿದರು. ಬಾಲವನ ಸಮಿತಿಯ ವತಿಯಿಂದ ಎಲ್ಲರಿಗೂ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿವೇಕಾನಂದ ಕಾಲೇಜು, ಫಿಲೋಮಿನಾ ಕಾಲೇಜು, ಬೆಟ್ಟಂಪಾಡಿ ಸರ್ಕಾರಿ ಪದವಿ ಕಾಲೇಜು ಮತ್ತು ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಿಂದ ಬಂದ ೧೭೫ ಮಂದಿ ವಿದ್ಯಾರ್ಥಿಗಳು ವಿಚಾರಗೋಷ್ಟಿಯಲ್ಲಿ ಭಾಗವಹಿಸಿದ್ದರು.
    Read more...

    Sunday, March 14, 2010

    1

    ನೆನಪಿನಂಗಳ - ಶಾಲೆಯ ಮೊದಲ ದಿನ

  • Sunday, March 14, 2010
  • ಡಾ.ಶ್ರೀಧರ ಎಚ್.ಜಿ.
  • ನನಗಾಗ ಆರು ವರ್ಷ. ನಮ್ಮ ತಂದೆ ನನ್ನನ್ನು ಶಾಲೆಗೆ ಸೇರಿಸುವುದರ ಬಗೆಗೆ ಚಿಂತಿತರಾಗಿದ್ದರು. ಮನೆಂದ ಪ್ರಾಥಮಿಕ ಶಾಲೆಗೆ ನಡೆದುಕೊಂಡು ಹೋಗುವುದು ದೂರ. ಅದೂ ಟಾರು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು. ವಾಹನಗಳ ಸಂಚಾರವಿರುವ ರಸ್ತೆ. ಮಳೆಗಾಲದಲ್ಲಿ ಇನ್ನಷ್ಟು ಕಷ್ಟ. ಹೀಗಾಗಿ ಸಾಕಷ್ಟು ಯೋಚಿಸಿ ನನ್ನನ್ನು ಸಾಲೆಕೊಪ್ಪದಲ್ಲಿ ಶಾಲೆಗೆ ಸೇರಿಸಿದರು. ಇದು ನನ್ನ ತಂದೆಯ ಮೂಲಮನೆ. ಇಲ್ಲಿ ನನ್ನ ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು ಅವರ ಮಕ್ಕಳು ಇದ್ದರು. ಕೂಡು ಕುಟುಂಬ. ತುಂಬಿದ ಸಂಸಾರ. ಶಾಲೆ ಆರಂಭವಾಗುವ ಮೊದಲ ದಿನ ಸಂಜೆ ನನ್ನನ್ನು ತಂದೆ ಕರೆದುಕೊಂಡು ಸಾಲೆಕೊಪ್ಪಕ್ಕೆ ಹೋದರು. ನನಗೆ ಮಾತ್ರ ಅಪ್ಪ, ಅಮ್ಮನನ್ನು ಬಿಟ್ಟು ಹೋಗುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ. ಮರುದಿನ ಬೆಳಿಗ್ಗೆ ಅಜ್ಜಿ ದೊಡ್ಡವರಿಗೆಲ್ಲ ತಿಂಡಿ ಕೊಟ್ಟರು. ನಮ್ಮಂತಹ ಮಕ್ಕಳಿಗೆ ಬೆಳ್ತಿಗೆ ಅಕ್ಕಿಯ ಗಂಜಿ ಊಟ ! ಮನೆಯಲ್ಲಿ ತಿಂಡಿ ತಿಂದು ಅಭ್ಯಾಸವಿದ್ದ ನನಗೆ ಗಂಜಿ ಊಟ ಸ್ವಲ್ಪವೂ ಇಷ್ಟವಾಗಲಿಲ್ಲ. ಇದು ಹೀಗೇ ಆದರೆ ಹೇಗೆಂಬ ಚಿಂತೆ ಕಾಡತೊಡಗಿತು.
    ಅದು ಜೂನ್ ತಿಂಗಳು. ಮಳೆಗಾಲದ ಸಮಯ. ಅದೂ ಮಲೆನಾಡಿನ ಮಳೆ. ಹಿಡಿದರೆ ಬಿಡುವ ಪ್ರಶ್ನೆ ಇರಲಿಲ್ಲ. ಮುಂಜಾನೆಂದಲೇ ಮಳೆ ಆರಂಭವಾಗಿತ್ತು. ೯.೩೦ರ ಹೊತ್ತಿಗೆ ತಂದೆ ನನ್ನನ್ನು ಮನೆಯ ಸಮೀಪದಲ್ಲಿಯೇ ಇದ್ದ ಶಾಲೆಗೆ ಕರೆದುಕೊಂಡು ಹೋದರು. ಪ್ರವೇಶಾತಿಯ ಪ್ರಕ್ರಿಯೆಗಳನ್ನು ಮುಗಿಸಿ ಶನಿವಾರ ಬರುತ್ತೇನೆ ಎಂದು ತಂದೆ ಮರೆಯಾದರು. ನಾನು ಶಾಲೆಯ ಕಟ್ಟೆಯ ಮೇಲೆ ನಿಂತು ಅವರು ನನಗೆ ಬೆನ್ನುಹಾಕಿ ಹೋಗುವುದನ್ನು ನೋಡುತ್ತಾ ನಿಂತಿದ್ದೆ. ಕಣ್ಣಂಚಿನಲ್ಲಿ ನೀರು ಧಾರಾಕಾರವಾಗಿ ಇಳಿಯುತ್ತಿತ್ತು.
    ತಂದೆ ಮರೆಯಾಗುತ್ತಿದ್ದಂತೆ ಅಧ್ಯಾಪಕರು ಬಂದು ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಹಲಗೆ ಮಣೆಯ ಮೇಲೆ ಕೂರಿಸಿದರು. ಒಂದರಿಂದ ನಾಲ್ಕನೆಯ ತರಗತಿಯವರೆಗೆ ಸುಮಾರು ಇಪ್ಪತ್ತು ಮಕ್ಕಳಿದ್ದೆವು. ಒಬ್ಬ ಅಧ್ಯಾಪಕರಿದ್ದರು. ಬರೆಯಲು ತಂದ ಸ್ಲೇಟಿನ ಮೇಲೆ ಅಕ್ಷರವನ್ನು ಬರೆದು ತಿದ್ದಲು ಹೇಳಿದರು. ನಾನು ನನಗೆ ಕಂಡಹಾಗೆ ತಿದ್ದಿದೆ. ಮಧ್ಯಾಹ್ನ ಊಟಕ್ಕೂ ಹೋಗಿಬಂದೆ. ಮಧ್ಯಾಹ್ನದ ನಂತರ ನನಗೇಕೋ ಈ ವ್ಯವಸ್ಥೆ ಸರಿಹೊಂದುವುದಿಲ್ಲ ಎಂಬ ಭಾವನೆ ಬರತೊಡಗಿತು. ಅನಾಥ ಪ್ರಜ್ಞೆ, ಏಕಾಕಿತನ ಮನಸ್ಸನ್ನು ಆವರಿಸತೊಡಗಿತು. ಸಂಜೆ ಶಾಲೆ ಬಿಡುವ ಹೊತ್ತಿಗೆ ಈ ಭಾವನೆ ತೀವ್ರ ಸ್ವರೂಪವನ್ನು ಪಡೆದುಕೊಂಡು ಇಲ್ಲಿಂದ ಹೊರಟು ಬಿಡಬೇಕು ಎಂಬ ತೀರ್ಮಾನಕ್ಕೆ ಬಂದೆ. ಶಾಲೆ ಬಿಡುತ್ತಿದ್ದಂತೆ ಅಜ್ಜನ ಮನೆಗೆ ಹೋಗಿ ಸ್ಲೇಟನ್ನು ಒಂದು ಮೂಲೆಯಲ್ಲಿಟ್ಟೆ. ಅಜ್ಜಿ ತಿನ್ನಲು ಬೆಳಿಗ್ಗೆ ಮಾಡಿಟ್ಟಿದ್ದ ದೋಸೆಯನ್ನು ಕೊಟ್ಟರು. ತಿಂಡಿ ತಿಂದು ಹೊರಗೆ ಬಂದವನೇ ಮತ್ತೊಮ್ಮೆ ಯೋಚಿಸಿದೆ. ಅಜ್ಜನ ಮನೆಯಿಂದ ನಮ್ಮ ಮನೆರುವ ಸ್ಥಳ ಮುಂಡಿಗೆಹಳ್ಳಕ್ಕೆ ಸುಮಾರು ಮೂರು ಮೈಲಿ ದೂರ. ನಡೆದುಕೊಂಡು ಹೋಗಲು ಮುಕ್ಕಾಲು ಘಂಟೆಂದ ಒಂದು ಘಂಟೆ ಬೇಕು. ನಡುವೆ ಎರಡು ಹೊಳೆ. ನಿರ್ಜನ ಪ್ರದೇಶ. ಒಬ್ಬನೇ ಹೋಗಬಹುದೆಂದು ತೀರ್ಮಾನಿಸಿ ನನ್ನ ಕೊಡೆ ಹಿಡಿದುಕೊಂಡು ಯಾರಿಗೂ ಕಾಣದಂತೆ ಮನೆ ಬಿಟ್ಟೆ.
    ಸಾಲೆಕೊಪ್ಪ ಊರು ಕಳೆಯುತ್ತಿದ್ದಂತೆ ಮೊದಲ ಹೊಳೆ ಸಿಗುತ್ತದೆ. ಇದನ್ನು ದಾಟಲು ಆಗ ಸೇತುವೆ ಇರಲಿಲ್ಲ. (ಈಗ ಸೇತುವೆಯಿದೆ) ಹೊಳೆಯ ಬುಡಕ್ಕೆ ಬಂದು ನೋಡಿದರೆ ಸಾಕಷ್ಟು ನೀರು ತುಂಬಿ ಹರಿಯುತ್ತಿತ್ತು. ನನಗೆ ಅದನ್ನು ನೋಡಿ ನಿಜಕ್ಕೂ ಭಯವಾಯಿತು. ಸ್ವಲ್ಪದೂರ ಹೊಳೆಯಲ್ಲಿ ನಿಧಾನವಾಗಿ ಹೋದೆ. ಹೊಳೆಯ ನಡುವೆ ಬಂದಾಗ ಸೆಳವು ತೀವ್ರವಾಗಿತ್ತು. ಕಾಲಕೆಳಗಿನ ಮರಳು ಬಿರುಸಿನಿಂದ ನೀರಿನೊಡನೆ ಕೊಚ್ಚಿಹೋಗುತ್ತಿತ್ತು. ನಾನು ಹೊಳೆಯಲ್ಲಿ ತೇಲಿ ಹೋಗುತ್ತೇನೆ ಎನಿಸಿತು. ಆದರೂ ಹಿಂದಕ್ಕೆ ಮರಳುವ ಆಲೋಚನೆ ಬರಲೇ ಇಲ್ಲ. ಏನಾದರಾಗಲಿ ಎಂದು ನಿಧಾನವಾಗಿ ಸಾವರಿಸಿಕೊಳ್ಳುತ್ತ ಒಂದೊಂದೇ ಹೆಜ್ಜೆಯನ್ನಿಟ್ಟು ಮುಂದುವರಿದೆ. ಆತಂಕಗಳ ನಡುವೆ ಮೊದಲ ಕಂಟಕ ಮುಗಿದಿತ್ತು. ನಾನು ಸಾಲೆಕೊಪ್ಪದ ಹೊಳೆಯನ್ನು ದಾಟಿದ್ದೆ.
    ಈಗ ಮತ್ತೊಮ್ಮೆ ಆಲೋಚನೆಗಿಟ್ಟುಕೊಂಡಿತು. ಮುಂದೆ ಸಿಗುವ ಹೊಳೆ ಇದಕ್ಕಿಂತ ದೊಡ್ಡದು. ನೀರೂ ಹೆಚ್ಚಿರುತ್ತದೆ ಎಂಬ ಆಲೋಚನೆ ಬಂತು. ತಕ್ಷಣ ನನ್ನ ದಾರಿಯನ್ನು ಬದಲಾಸಿದೆ. ಮೊದಲಿನ ಯೋಜನೆಯ ಪ್ರಕಾರ ಪುರ ಎಂಬ ಊರಿನ ಮೂಲಕ ನಾನು ಮುಂಡಿಗೆಹಳ್ಳದ ಹೊಳೆಯನ್ನು ದಾಟಿ ಮನೆ ಸೇರಬೇಕಾಗಿತ್ತು. ಆದರೆ ಮುಂಡಿಗೆ ಹಳ್ಳದ ಹೊಳೆಗೆ ಹೆದರಿ ದಾರಿಯನ್ನು ಬದಲಾಸಿದೆ. ಇದು ಸುತ್ತುಬಳಸಿನ ದಾರಿ. ಸಮಯವೂ ಹೆಚ್ಚು ಬೇಕು. ಆದರೆ ಧೈರ್ಯಮಾಡಿ ಹೊಸದಾರಿಯನ್ನು ಹಿಡಿದೆ. ನನ್ನ ಜೊತೆಗೆ ಇದ್ದದ್ದು ಒಂದು ಕೊಡೆ ಮಾತ್ರ.
    ಸಂಜೆಯಾಗತೊಡಗಿತ್ತು. ಮಳೆಗಾಲವಾದ್ದರಿಂದ ಕತ್ತಲಾಗುವುದು ತುಸು ಬೇಗ. ಹೀಗಾಗಿ ನಡೆಯುವುದನ್ನು ಬಿಟ್ಟು ಅಷ್ಟಷ್ಟು ದೂರ ಓಡತೊಡಗಿದೆ. ಗಾಡಿಗೆರೆ, ಕಲ್ಮಕ್ಕಿಯನ್ನು ದಾಟಿ ಹುಳೆಗಾರು ದೇವಸ್ಥಾನದ ಹತ್ತಿರ ಬರುವಾಗ ಅಲ್ಲಿ ನನ್ನ ತಾಯಿಯ ಮನೆಯ ಪಕ್ಕದ ರಾಮಣ್ಣ ಮತ್ತು ಇತರರು ವಾಲಿಬಾಲ್ ಆಡುತ್ತಿದ್ದರು. ಅವರಿಗೆ ಕಾಣಬಾರದೆಂದು ಕೊಡೆಯನ್ನು ಬಿಡಿಸಿ ಅವರಿಗೆ ಮುಖ ಕಾಣದಂತೆ ಮಾಡಿಕೊಂಡು ದೇವಸ್ಥಾನದ ಸಮೀಪ ಎಡಕ್ಕೆ ತಿರುಗಿ ಕಾಲುದಾರಿಯನ್ನು ಹಿಡಿದೆ. ನಿರ್ಜನ ಪ್ರದೇಶ. ಕಾಡುಬೇರೆ. ಇಲ್ಲಿನ ಕಾಡು ಕಳೆಯುವವರೆಗೆ ಓಡಿದೆ. ಕತ್ತಲಾಗುವ ಹೊತ್ತಿಗೆ ಮನೆ ಸೇರಿದೆ. ನನ್ನನ್ನು ನೋಡಿ ಅಮ್ಮನಿಗೆ ಆಶ್ಚರ್ಯ ಮತ್ತು ಗಾಬರಿ ! ಈ ಮಳೆಯಲ್ಲಿ ಹೇಗೆ ಬಂದೆ ಎಂದು ಕೇಳಿದರು. ತಂದೆ ಹೊರಗೆ ಹೋಗಿದ್ದವರು ಮನೆಗೆ ಬಂದರು. ನನ್ನನ್ನು ನೋಡಿ ಅವರಿಗೂ ಆಶ್ಚರ್ಯ. ಇವನು ಹೊಳೆ ದಾಟಿ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರದು. ಮನೆಯಲ್ಲಿ ಹೇಳಿ ಬಂದಿದ್ದೀಯ ಎಂದು ಕೇಳಿದರು. ನಾನು ಮಾತನಾಡಲಿಲ್ಲ. ನಕಾರಾತ್ಮಕವಾಗಿ ತಲೆಯಾಡಿಸಿದೆ. ಇದನ್ನು ನೋಡಿ ಅವರಿಗೂ ಕಳವಳ ಆರಂಭವಾಯಿತು. ಬೆಳಿಗ್ಗೆಯೇ ಎದ್ದು ಸಾಲೆಕೊಪ್ಪಕ್ಕೆ ಹೋಗಿ ಹೇಳಿ ಬರಬೇಕು ಎಂದು ನಿರ್ಧರಿಸಿದರು. ಈಗಿನ ಹಾಗೆ ಸಂಪರ್ಕಿಸುವುದಕ್ಕೆ ದೂರವಾಣಿಗಳು ಇಲ್ಲದ ಕಾಲವದು. ರಾತ್ರಿ ಊಟವಾಗುವ ಹೊತ್ತಿಗೆ ಚಿಕ್ಕಪ್ಪ ಸಾಲೆಕೊಪ್ಪದಿಂದ ನನ್ನನ್ನು ಹುಡುಕಿಕೊಂಡು ಬಂದರು. ಎಲ್ಲರೂ ಒಟ್ಟು ಸೇರಿ ನನ್ನನ್ನು ಗದರಿದರು. ನಾನು ಅಳುತ್ತ ನಿಂತಿದ್ದೆ. ಚಿಕ್ಕಪ್ಪ ರಾತ್ರಿ ಉಳಿದುಕೊಂಡು ಬೆಳಿಗ್ಗೆ ಹಿಂದಿರುಗಿ ಹೋದರು.
    ಇದಾಗಿ ಒಂದು ವಾರದ ನಂತರ ನನ್ನನ್ನು ಮನೆಯಿಂದ ಒಂದೂವರೆ ಮೈಲಿ ದೂರದಲ್ಲಿದ್ದ ಆಲಳ್ಳಿ ಶಾಲೆಗೆ ಸೇರಿಸಿದರು. ಇದು ಬಟಾಬಯಲಿನಲ್ಲಿ ಇದ್ದ ಶಾಲೆ. ಮಧ್ಯಾಹ್ನಕ್ಕೆ ತಿಂಡಿ ತೆಗೆದುಕೊಂಡು ಹೋಗುತ್ತಿದ್ದೆ. ಮಳೆಗಾಲದಲ್ಲಿ ನೀರು ಕಡಿಮೆ ಇದ್ದರೆ ಮನೆಯ ಸಮೀಪದಲ್ಲಿ ಹರಿಯುತ್ತಿದ್ದ ಮುಂಡಿಗೆ ಹಳ್ಳದ ಹೊಳೆಯನ್ನು ಅಪ್ಪ ದಾಟಿಸುತ್ತಿದ್ದರು. ಆಲಳ್ಳಿ ಗುಡ್ಡದಲ್ಲಿ ಕಾಲ್ದಾರಿಯಲ್ಲಿ ನುಸುಳಿ ಶಾಲೆ ಸೇರುತ್ತಿದ್ದೆ. ಮಾರ್ಗದಲ್ಲಿ ಬೇಕಾದಷ್ಟು ಹೊಳೆದಾಸವಾಳ ಹಣ್ಣು ತಿನ್ನಲು ಸಿಗುತ್ತಿತ್ತು. ಹೊಳೆ ತುಂಬಿದ್ದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಇಲ್ಲಿ ನನಗೆ ಈಶ್ವರನಾಯ್ಕ ಎಂಬ ಅಧ್ಯಾಪಕರಿದ್ದರು. ಇದು ಏಕೋಪಾಧ್ಯಾಯ ಶಾಲೆಯಾದ್ದರಿಂದ ಗುರುಗಳು ಬಂದ ನಂತರ ಬಾಗಿಲು ತೆರೆಯುತ್ತಿತ್ತು. ತರಗತಿಯ ಕಸ ಹೊಡೆಯುವುದು, ಬೆಲ್ ಹೊಡೆಯುವುದು ನೀರು ತಂದಿಡುವುದು ಮುಂತಾದ ಕೆಲಸವನ್ನು ನಾವೇ ಮಾಡಬೇಕಾಗಿತ್ತು. ಆಲಳ್ಳಿಯ ಈ ಶಾಲೆಯಲ್ಲಿ ನಾನು ಎರಡು ವರ್ಷ ಕಲಿತೆ. ಆದರೂ ಇದರಲ್ಲಿ ಒಂದು ಸಂತೋಷವಿತ್ತು. ಅಪ್ಪ, ಅಮ್ಮನ ಸಾಮೀಪ್ಯದ ಸುಖವಿತ್ತು. ಇಲ್ಲಿಂದ ಮುಂದೆ ಶಾಲೆ ನನಗೆ ಯಾವಾಗಲೂ ಬೇಸರ ತರಿಸಿದ್ದಿಲ್ಲ.
    Read more...

    Saturday, February 27, 2010

    0

    ಕನ್ನಡಕ್ಕೆ ತಂತ್ರಜ್ಞಾನ ವಿರೋಧವೂ ಅಲ್ಲ; ಮಾರಕವೂ ಅಲ್ಲ - ಡಾ. ಪಿ.ವಿ. ನಾರಾಯಣ

  • Saturday, February 27, 2010
  • ಡಾ.ಶ್ರೀಧರ ಎಚ್.ಜಿ.
  • ಫೆಬ್ರವರಿ ೨೭ : ಪ್ರಾಚೀನ ಕಾಲದಿಂದಲೂ ಅನ್ಯಭಾಷೆಯ ಆಕ್ರಮಣ, ದೌರ್ಜನ್ಯಗಳನ್ನು ಮೀರಿ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳೆದುಬಂದಿದೆ. ಜನಸಾಮಾನ್ಯರ ಸಂವಹನ ಮಾಧ್ಯಮವಾಗಿ ಉಳಿದು ಬಂದಿದೆ. ಸಿದ್ದಮಾದರಿಗಳನ್ನು ಒಡೆದು, ಪರಂಪರೆಯ ಸತ್ವವನ್ನು ಹೀರಿ ಕನ್ನಡತನ ಶತಮಾನಗಳಿಂದ ಉಳಿದು ಬಂದಿದೆ. ಹೀಗಾಗಿ ಕನ್ನಡಕ್ಕೆ ತಂತ್ರಜ್ಞಾನ ವಿರೋಧವೂ ಅಲ್ಲ; ಮಾರಕವೂ ಅಲ್ಲ. ತಂತ್ರಜ್ಞಾನವನ್ನು ಪಳಗಿಸುವ ಮೂಲಕ ಕನ್ನಡ ಬೆಳೆಯಬೇಕು. ಹೀಗಾಗಿ ಐ.ಟಿ. ಯುಗದಲ್ಲಿಯೂ ಕನ್ನಡಕ್ಕೆ ಯಾವುದೇ ತೊಂದರೆಯಾಗದು. ಹಳೆಯದನ್ನು ಉಳಿಸಿಕೊಂಡು ಹೊಸದನ್ನು ಕಟ್ಟುವ ಸವಾಲು ನಮ್ಮ ಮುಂದಿದೆ ಎಂದು ಡಾ. ಕೆ.ವಿ. ನಾರಾಯಣ ಹೇಳಿದರು.
    ಅವರು ಕರ್ನಾಟಕ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಒಂಬತ್ತು ದಿನಗಳ ಸಾಹಿತ್ಯ ಕಲಾಕುಶಲೋಪರಿ ಸಂಸ್ಕೃತಿ ಸಲ್ಲಾಪ ೨೦೧೦ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಕಲಿಕೆಗೆ ಇಂದಿನ ಶೈಕ್ಷಣಿಕ ವ್ಯವಸ್ಥೆ ಕಡಿವಾಣ ಹಾಕುತ್ತಿದೆ. ಅಭಿವೃದ್ಧಿ ಎಂಬುದು ಭಾಷೆ ಮತ್ತು ಸಂಸ್ಕೃತಿಯಿಂದ ಹೊರತಾಗಿಲ್ಲ. ಭಾಷೆಯ ವಿಶಯದಲ್ಲಿ ಮಿಶ್ರಸಂಸ್ಕೃತಿಯುಳ್ಳ ತುಳುನಾಡಿನಲ್ಲಿ ಕನ್ನಡದ ಕೆಲಸ ಸಾಕಷ್ಟು ಆಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸುರೇಂದ್ರರಾವ್ ಹೇಳಿದರು.
    ವಿವೇಕಾನಂದ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ. ಆರ್. ವೇದವ್ಯಾಸ ಶುಭಾಶಯದ ಮಾತುಗಳನ್ನು ಹೇಳೆದರು.
    ಕಾರ್ಯಕ್ರಮದ ಆರಂಭದಲ್ಲಿ ಪಾವನಗಂಗಾ ಪ್ರಾರ್ಥಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ವಂದಿಸಿದರು. ಡಾ. ಶ್ರೀಧರ ಎಚ್. ಜಿ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
    Read more...
    0

    ಹೊಸಬಗೆಯ ಸವಾಲುಗಳಿಗೆ ವಿದ್ಯಾರ್ಥಿಗಳು ಸಜ್ಜಾಗಬೇಕು- ಪ್ರೊ.ಎಂ.ಎನ್. ಚೆಟ್ಟಿಯಾರ್

  • ಡಾ.ಶ್ರೀಧರ ಎಚ್.ಜಿ.
  • ಫೆಬ್ರವರಿ ೨೧ : ಇಂದಿನದು ಸ್ಪರ್ಧಾತ್ಮಕ ಯುಗ. ಸಾಂಪ್ರದಾಕ ಪದವಿಯೊಂದಿಗೆ ವಿಷಯಕ್ಕೆ ಪೂರಕವಾದ ಹೆಚ್ಚುವರಿ ಮಾಹಿತಿಯನ್ನು ಇಂದಿನ ವಿದ್ಯಾರ್ಥಿಗಳು ಪಡೆಯುವ ಅಗತ್ಯವಿದೆ. ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ತರಬೇತಿಯ ಅಗತ್ಯವಿದೆ. ಹೊಸ ಬಗೆಯ ಸವಾಲುಗಳಿಗೆ ಇಂದಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಎಲ್ಲರ ಜವಾಬ್ದಾರಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಎನ್. ಚೆಟ್ಟಿಯಾರ್ ಹೇಳಿದರು.

    ಅವರು ವಿವೇಕಾನಂದ ಕಾಲೇಜಿನ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯು.ಜಿ.ಸಿ. ನೆಟ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಅನ್ಯಶಿಸ್ತುಗಳ ಅರಿವು, ಶೈಕ್ಷಣಿಕ ಬರವಣಿಗೆಯಲ್ಲಿನ ಸಾಂದ್ರ ಅನುಭವ, ವಿಭಿನ್ನ ರೀತಿಯ ಬರವಣಿಗೆಯ ಶೈಲಿ ವಿದ್ಯಾರ್ಥಿಗಳನ್ನು ಯಶಸ್ಸಿನ ಕಡೆಗೆ ಮುನ್ನಡೆಸಬಲ್ಲದು ಎಂದು ತರಬೇತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ಡಾ. ಕಲ್ಯಾಣಿ ವಲ್ಲತ್ಸ್, ತಿರುವನಂತಪುರ ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಎ.ವಿ.ನಾರಾಯಣ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ. ಬಾಲಕೃಷ್ಣ ನಾಯರ್ ಉಪಸ್ಥಿತರಿದ್ದರು.

    ಕಾರ್ಯಕ್ರಮದ ಆರಂಭದಲ್ಲಿ ಡಾ. ಎಚ್. ಮಾಧವ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಪ್ನ ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು. ವಲ್ಲತ್ಸ್ ಟೋಟಲ್ ಇಂಗ್ಲಿಷ್ ಸಲ್ಯೂಶನ್ಸ್ ತಿರುವನಂತಪುರ ಕಾರ್ಯಾಗಾರವನ್ನು ನಡೆಸಿಕೊಟ್ಟರು.
    Read more...

    Thursday, February 18, 2010

    0

    ಡಾ.ಯು.ಪಿ.ಉಪಾಧ್ಯಾಯರಿಗೆ ಶಂಕರ ಸಾಹಿತ್ಯ ಪ್ರಶಸ್ತಿ

  • Thursday, February 18, 2010
  • ಡಾ.ಶ್ರೀಧರ ಎಚ್.ಜಿ.
  • ಸಿದ್ದಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ, ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಕೊಡಮಾಡುವ ಶಂಕರ ಸಾಹಿತ್ಯ ಪ್ರಶಸ್ತಿಗೆ ಸಂಶೋಧಕ, ಭಾಷಾ ಶಾಸ್ತ್ರಜ್ಞ ಡಾ.ಯು.ಪಿ.ಉಪಾಧ್ಯಾಯ ಆಯ್ಕೆಯಾಗಿದ್ದಾರೆ. ಮಾ.06ರಂದು ಅಪರಾಹ್ನ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ರಾಮ ಭಟ್ ವಹಿಸಲಿದ್ದಾರೆ. ಹಿರಿಯಡ್ಕ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ, ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣುಭಟ್ಟ ನುಡಿಗೌರವ ಸಲ್ಲಿಸಲಿದ್ದಾರೆ.
    ಡಾ.ಪದ್ಮನಾಭ ಉಪಾಧ್ಯಾಯರು ೧೯೩೨ರಲ್ಲಿ ಜನಿಸಿದರು. ತಂದೆ ಸೀತಾರಾಮ ಉಪಧ್ಯಾಯ, ತಾಯಿ ಶ್ರೀಮತಿ ಜಲಜಾಕ್ಷಿ ಅಮ್ಮ. ಸಂಸ್ಕೃತ ವೈದಿಕ ವಿದ್ವಾಂಸರ ಮನೆತನ ಇವರದು. ೧೯೫೩ರಲ್ಲಿ ಮದ್ರಾಸ್ ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆ ಹೊಂದಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ವ್ಯಾಸಂಗ ಮಾಡಿದರು. ೧೯೫೫ರಲ್ಲಿ ಮದರಾಸಿನ ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಬಿ.ಎ. ಆನರ್ಸ್ ಮುಗಿಸಿ ಎಂ.ಎ. ಪದವಿಯನ್ನು ಪಡೆದರು. ಖಾಸಗಿಯಾಗಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದರು. ೧೯೫೯ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸಂಸ್ಕೃತ -ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು.
    ಇಲ್ಲಿಂದ ಮುಂದೆ ಅವರು ಭಾಷಾವಿಜ್ಞಾನ, ಬುಡಕಟ್ಟು ಭಾಷಾಅಧ್ಯಯನ, ಕುರುಬ ಎಂಬ ಹೊಸ ಭಾಷೆಯ ಶೋಧನೆ ನಡೆಸಿದರು. ಈ ನಡುವೆ ಸ್ವಲ್ಪ ಸಮಯ ವೈಲಿನ್ ಅಭ್ಯಾಸವನ್ನೂ ಮಾಡಿದ್ದಿದೆ. ಕನ್ನಡ ಉಪಭಾಷೆಗಳ ತೌಲನಿಕ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಉಪಾಧ್ಯಾಯರು ೧೯೬೯ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ದಕ್ಷಿಣ ಭಾರತ ಭಾಷಾಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದ ಡಕಾರ್ ವಿಶ್ವವಿದ್ಯಾಲಯದಲ್ಲಿ ಇಂಡೋ ಆಫ್ರಿಕನ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ಇವರದು. ಲಂಡನ್, ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿ ಆರು ತಿಂಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇದರೊಂದಿಗೆ ಸಿದ್ಧಸಮಾದಿ ಯೋಗ ಶಿಕ್ಷಕನಾಗಿ ೧೫೦ ಯೋಗ ಶಿಕ್ಷಣ ಶಿಬಿರಗಳನ್ನು ನಿರ್ವಹಿಸಿದ ಹಿರಿಮೆ ಇವರದು.
    ಉಡುಪಿ ಜಿಲ್ಲೆಯ ಕಾಪು್ವಿನ ಸಮೀಪದವರಾದ ಡಾ.ಉಳಿಯೂರು ಪದ್ಮನಾಭ ಉಪಾಧ್ಯಾಯ ಸಂಸ್ಕೃತ, ಕನ್ನಡ, ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಗಳೊಂದಿಗೆ ಭಾಷಾಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ ಪಡೆದವರು. ಅಲ್ಲದೆ ತುಳು, ಇಂಗ್ಲಿಷ್, ಆಫ್ರಿಕನ್, ಫ್ರೆಂಚ್ ಮೊದಲಾದ ಭಾಷೆಗಳಲ್ಲೂ ನುರಿತವರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ವಿದ್ವತ್ಪೂರ್ಣ ಕೃತಿಗಳನ್ನು ಪ್ರಕಟಿಸಿದ್ದಾರೆ. ೧೮ ವರ್ಷಗಳ ಸತತ ಪರಿಶ್ರಮದೊಂದಿಗೆ ೬ ಸಂಪುಟಗಳ ವಿಶ್ವಕೋಶ ಮಾದರಿಯ ತುಳು ನಿಘಂಟು ಸಂಪಾದಿಸಿದ್ದು ಅನರ್ಘ್ಯ ಸಾಧನೆ.
    ಅನೇಕ ಭಾಷಾ ಬೋಧನಾ ಮಾಲಿಕೆಗಳನ್ನು, ಜಾನಪದ ಸಂಬಂಧೀ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಹಲವೆಡೆ ಅವರ ವೈಚಾರಿಕ ಲೇಖನಗಳು ಪ್ರಕಟವಾಗಿವೆ. ಸೇಡಿಯಾಪು ಪ್ರಶಸ್ತಿ, ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಭಾ ಜೋಶಿ ಪ್ರಶಸ್ತಿ, ತಿರುವನಂತಪುರದ ಗುಂಡರ್ಟ್ ಪ್ರಶಸ್ತಿ, ತುಳುಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕಿಟ್ಟೆಲ್ ಪ್ರಶಸ್ತಿ, ಮೊದಲಾದ ಹತ್ತುಹಲವು ಹಿರಿಮೆಗಳನ್ನು ಮುಡಿಗೇರಿಸಿಕೊಂಡ ಡಾ.ಉಪಾಧ್ಯಾಯರನ್ನು ಇದೀಗ ಪ್ರತ್ಠಿತ ಶಂಕರ ಸಾಹಿತ್ಯ ಪ್ರಶಸ್ತಿಯೂ ಅರಸಿಕೊಂಡು ಬಂದಿದೆ.
    ಡಾ. ಉಪಾಧ್ಯಾಯರು ಹಲವರಿಗೆ ಪಿಎಚ್.ಡಿ ಪದವಿಗಾಗಿ ಮಾರ್ಗದರ್ಶನ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಪ್ರಭಾಕರ ಜೋಶಿ, ರಾಘವ ನಂಬಿಯಾರ್, ಎಸ್.ಡಿ. ಶೆಟ್ಟಿ, ಬಿ. ಜನಾರ್ದನ ಭಟ್ ಮೊದಲಾದವರು ಪಿಎಚ್.ಡಿ ಪದವಿಯನ್ನು ಗಳಿಸಿದ್ದಾರೆ. ಅಲ್ಲದೆ ಹಲವರು ವಿವಿಧ ವಿಷಯಗಳಿಗೆ ಇವರಿಂದ ಸಲಹೆ, ಸೂಚನೆಗಳನ್ನು ಪಡೆದು ಉಪಕೃತರಾಗಿದ್ದಾರೆ. ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು 06.೦3.2010ರಂದು ನಡೆಯಲಿದೆ.
    Read more...

    Saturday, February 6, 2010

    0

    ಕವನ : ನನ್ನಾಕೆಯ ಮನಸು

  • Saturday, February 6, 2010
  • ಡಾ.ಶ್ರೀಧರ ಎಚ್.ಜಿ.
  • ನನ್ನಾಕೆಯ ಮನಸು
    ಹೂತೋಟದ ಹಾಗೆ
    ನನ್ನಾಕೆಯ ಮಾತು
    ಮೊಗ್ಗರಳಿದ ಹಾಗೆ
    ಬಣ್ಣಬಣ್ಣದ ಹೂವು
    ಬಣ್ಣದ ಕೊಡೆ ಹಿಡಿದು
    ಮುದಗೊಳಿಸುವ ಹಾಗೆ
    ನನ್ನಾಕೆಯ ಮನಸು
    ತಂಗಾಳಿಗೆ ತಲೆದೂಗಿ
    ಪರಿಮಳವನು ಹರಡಿ
    ನಕ್ಕ ಮಲ್ಲಿಗೆಯ ಹಾಗೆ
    ನನ್ನಾಕೆಯ ಮನಸು
    ಹಸಿರಲ್ಲಿದೆ ಬದುಕು
    ಹಸಿರಿಲ್ಲದೆ ಕೊರಗು
    ಗಿಡವೆಂದರೆ ಮುಗ್ದತೆಯೆ
    ಮೈವೆತ್ತ ಮಕ್ಕಳ ಹಾಗೆ
    Read more...
    0

    ಶಬ್ದವಿಹಾರ :

  • ಡಾ.ಶ್ರೀಧರ ಎಚ್.ಜಿ.
  • ಅಳ್ಳಟ್ಟೆ : ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಕಾಣುವ ಒಂದು ಸಾಮಾನ್ಯ ದೃಶ್ಯ ಆಲೆಮನೆ. ಇಂದು ಅವುಗಳನ್ನು ನೋಡುವುದು ಅಪರೂಪವಾಗುತ್ತಿದೆ. ಆಲೆಕಣೆಗೆ ಕಬ್ಬನ್ನು ಕೊಟ್ಟು ರಸವನ್ನು ತೆಗೆದ ನಂತರ ಉಳಿಯುವ ಕಬ್ಬಿನ ಸಿಪ್ಪೆಯನ್ನು ಅಳ್ಳಟ್ಟೆ ಎಂದು ಕರೆಯುತ್ತಾರೆ.
    Read more...

    Subscribe