Sunday, February 2, 2014

0


ದಿನಾಂಕ 1.2.2014ರಂದು ಕನ್ನಡ ಸಂಘದ   ಆಶ್ರಯದಲ್ಲಿ ಕೀರ್ತಿನಾಥ ಕುರ್ತಕೋಟಿಯವರ ಬಗೆಗೆ ಡಾ. ಜಿ.ಬಿ. ಹರೀಶ್ ಉಪನ್ಯಾಸ ನೀಡಿದರು. ಕುರ್ತಕೋಟಿಯವರ ವಿಮರ್ಶೆಯ  ಒಳನೋಟಗಳನ್ನು ತಮ್ಮ ಮಾತುಗಳಲ್ಲಿ ಗುರುತಿಸಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ   ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು. ಗೀತಾಕುಮಾರಿ ಮತ್ತು ರತ್ನಾವತಿ ಕಾರ್ಯಕ್ರಮ ನಿರೂಪಿಸಿದರು. ಮೇಘ ಕುಕ್ಕುಜೆ ಪ್ರಾರ್ಥನೆ ಮಾಡಿದರು.
Read more...

Tuesday, August 28, 2012

0

ಸಿರಿವಂತೆ ಶಾಲೆಯ ನೆನಪುಗಳು

  • Tuesday, August 28, 2012
  • ಡಾ.ಶ್ರೀಧರ ಎಚ್.ಜಿ.


  • ಶಾಲೆಗೆ ನಡೆದುಕೊಂಡು ಹೋಗುವಾಗ ನಮಗೆಲ್ಲ ಒಂದು ಭಯವಿತ್ತು. ೧೯೭೦ರ ಕಾಲದಲ್ಲಿ ಲಿಂಗನಮಕ್ಕಿ, ಜೋಗ, ಕಾರ್ಗಲ್ ಪ್ರದೇಶದಲ್ಲಿ ಡ್ಯಾಂ ಕಟ್ಟುವ ಕೆಲಸಗಳು ನಡೆಯುತ್ತಿದ್ದವು. ನಾವು ಶಾಲೆಗೆ ಹೋಗುವಾಗ ಕೆಲಸಗಳಿಗೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು ಎದುರಾಗುತ್ತಿದ್ದವು. ಇಂತಹ ಲಾರಿಗಳನ್ನು ದೂರದಲ್ಲಿ ಕಾಣುವುದು ಬಿಡಿ, ಅವು ಬರುತ್ತಿರುವ ಶಬ್ದ ಕೇಳಿದರೂ ಸಾಕು, ನಾವು ಭಯಗೊಳ್ಳುತ್ತಿದ್ದೆವು. ರಸ್ತೆಯನ್ನು ಬಿಟ್ಟು, ದೊಡ್ಡ ಮರದ ಸಂದಿಯಲ್ಲಿ, ಮಟ್ಟಿಯ ಮರೆಯಲ್ಲಿ ಅಡಗುತ್ತಿದ್ದೆವು. ನಮ್ಮ ಭಯಕ್ಕೆ ಕಾರಣ ಖಚಿತವಾಗಿ ನಮಗೂ ಗೊತ್ತಿರಲಿಲ್ಲ. ನಮ್ಮ ಹಿರಿಯರು ತಮ್ಮಲ್ಲಿಯೇ ಮಾತನಾಡಿಕೊಳ್ಳುವಾಗ ಹೇಳಿದ ಒಂದು ಮಾತು ನಮ್ಮ ಭಯಕ್ಕೆ ಕಾರಣವಾಗಿತ್ತು. ಲಿಂಗನಮಕ್ಕಿಯಲ್ಲಿ ಬೃಹತ್ತಾದ ಡ್ಯಾಂ ಕಟ್ಟುತ್ತಿದ್ದಾರೆ. ಎಷ್ಟು ಕಟ್ಟಿದರೂ ಅದು ನಿಲ್ಲುತ್ತಿಲ್ಲ. ಅದಕ್ಕೆ ಮಕ್ಕಳ ಬಲಿ ಬೇಕಂತೆ. ಅದಕ್ಕೆ ಈಗ ಬಲಿ ನೀಡಲು ಮಕ್ಕಳನ್ನು ಹುಡುಕುತ್ತಿದ್ದಾರೆ. ಎದುರಿಗೆ ಮಕ್ಕಳು ಸಿಕ್ಕಿದರೆ ಬಲಿ ನೀಡಲು ಹಿಡಿದುಕೊಂಡು ಹೋಗುತ್ತಾರೆ ಎಂಬ ಮಾತು ನಮ್ಮ ತಲ್ಲಣಕ್ಕೆ ಕಾರಣವಾಗಿತ್ತು. ಇದು ನಿಜವೋ ಸುಳ್ಳೋ ಎಂದು ವಿವೇಚಿಸುವಷ್ಟು ನಮ್ಮಲ್ಲಿ ವಿವೇಕವಿರಲಿಲ್ಲ. ನಮ್ಮನ್ನು ರೇಗಿಸುವುದಕ್ಕೆ ಹೀಗೆ ಹೇಳಿದ್ದಾಗಿರಲೂ ಬಹುದು. ಗಾಳಿಮಾತಿನಿಂದ ನಾವಂತೂ ಹೆದರಿ ಕಂಗಾಲಾಗಿದ್ದೆವು. ಮೈಯೆಲ್ಲ ಕಿವಿಯಾಗಿ ಮಾರ್ಗದಲ್ಲಿಮ ಹೋಗುತ್ತಿದ್ದವು.
    ಮುಂಜಾನೆ ಒಂಬತ್ತೂವರೆಗೆಲ್ಲ ನಾವು ಶಾಲೆಗೆ ತಲುಪುತ್ತಿದ್ದೆವು. ಶಾಲೆಯ ಕೀಲಿಕೈ ಒಂದು ಮನೆಯಲ್ಲಿರುತ್ತಿತ್ತು. ಅದನ್ನು ತಂದು ಬೀಗ ತೆಗೆದು, ಕಸಹೊಡೆದು, ಕುಡಿಯಲು ನೀರು ತಂದಿಟ್ಟು ವ್ಯವಸ್ಥೆಗೊಳಿಸುತ್ತಿದ್ದೆವು. ಹೊತ್ತಿಗೆ ಮಹೇಶ ಬಸ್ಸು ಬರುತ್ತಿತ್ತು. ಶ್ರೀ ಬಿ.ಎನ್. ರಾಮಚಂದ್ರ ಆಗ ನಮ್ಮ ಮುಖೋಪಾಧ್ಯಾಯರು. ಸುಶೀಲಮ್ಮ, ರಾಧಾಬಾಯಿ ಮತ್ತು ಗುಡಿಗಾರ್ ಮೇಸ್ಟ್ರು ಇತರ ಅಧ್ಯಾಪಕರು.
    ವಯೋಮಾನದಲ್ಲಿ ಗುಡಿಗಾರ್ ಮೇಸ್ಟ್ರು ಇತರರಿಗಿಂತ ಹಿರಿಯರು. ಅತ್ಯಂತ ಸಾತ್ವಿಕ ವ್ಯಕ್ತಿ. ಮೂಲಂಗಿ ಪ್ಯಾಂಟು, ಗಿಡ್ಡತೋಳಿನ ಅಂಗಿ, ಕೈಯ್ಯಲ್ಲಿ ಒಂದು ಚಿಕ್ಕ ಬ್ಯಾಗು, ದಪ್ಪ ಗಾಜಿನ ಕನ್ನಡಕ ಅವರ ವೇಷಭೂಷಣ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಮಾತನಾಡಿಸುತ್ತಿದ್ದರು. ನಮಗೆ ಅವರಲ್ಲಿ ವಿಶೇಷವಾದ ಸಲಿಗೆ. ಅವರಿಗೆ ನಮ್ಮಲ್ಲಿ ಪ್ರೀತಿ.
    ಸುಶೀಲಮ್ಮ ಮತ್ತು ರಾಧಾಬಾಯಿ ಟೀಚರ್ ಎಂದರೆ ನನಗೆ ವಿಶೇಷವಾದ ಗೌರವವಿತ್ತು. ಅವರು ಅರ್ಥವಾಗದ ಪಾಠವನ್ನು ಕೇಳಿದರೆ ಪ್ರೀತಿಯಿಂದ ಕಲಿಸುತ್ತಿದ್ದರು.
    ಬಿ.ಎನ್. ರಾಮಚಂದ್ರರಿಗೆ ವಿದ್ಯಾರ್ಥಿಗಳ ಬಗೆಗೆ ವಿಶೇಷವಾದ ಕಾಳಜಿಯಿತ್ತು. ಕಾಲಕ್ಕೆ ಅವರಿಗೆ ಮದುವೆಯಾಗಿರಲಿಲ್ಲ. ತಾರುಣ್ಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ನನ್ನ ಬಗೆಗೆ ಅವರಿಗೆ ವಿಶೇಷವಾದ ಮಮತೆಯಿತ್ತು. ಶಾಲೆಗೆ ಯಾರಾದರೂ ಅತಿಥಿಗಳು ಬಂದರೆ ಹತ್ತಿರದ ಕ್ಯಾಂಟಿನ್ನಿಂದ ಚಹ ಮತ್ತು ತಿಂಡಿಯನ್ನು ತರಲು ನನ್ನನ್ನು ಕಳಿಸುತ್ತಿದ್ದರು. ಉಳಿದವರ ಎದುರಿನಲ್ಲಿ ನನಗಿದು ಹೆಮ್ಮೆಯ ವಿಷಯ. 
    ನಾನಾಗ ಆರನೆಯ ತರಗತಿಗೆ ಬಂದು ಸೇರಿದ್ದೆ. ಕೆಲವೇ ದಿನಗಳಾಗಿದ್ದವು. ಆಫೀಸ್ ಕೊಠಡಿಯ ಪಕ್ಕದಲ್ಲಿ ಏಳನೆಯ ತರಗತಿ. ಅದರ ಪಕ್ಕದಲ್ಲಿ ನಮ್ಮ ಕೊಠಟಿ. ಒಂದು ದಿನ ಮಧ್ಯಾಹ್ನ ಹೆಡ್ಮಾಸ್ಟರ್ ಶ್ರೀಯುತ ಬಿ. ಎನ್. ರಾಮಚಂದ್ರ ಅವರು ನನ್ನನ್ನು ಏಳನೆಯ ತರಗತಿಗೆ ಕರೆದರು. ಅಲ್ಲಿನ ವಿದ್ಯಾರ್ಥಿಗಳೆಲ್ಲರೂ ನಿಂತಿದ್ದರು. ರಾಮಚಂದ್ರ ಬೋರ್ಡಿನಲ್ಲಿ ಬರೆದ ಲೆಕ್ಕವನ್ನು ಮಾಡಲು ನನಗೆ ಹೇಳಿದರು. ನಾನು ಶ್ರದ್ಧೆಯಿಂದ ಲೆಕ್ಕವನ್ನು ಮಾಡಿದೆ. ಅನಂತರ ಎಲ್ಲರ ಎದುರಿನಲ್ಲಿ ನನ್ನನ್ನು ಹೊಗಳಿದರು. ಮಾತ್ರವಲ್ಲ, ಎಲ್ಲರಿಗೂ ಮೂಗು ಹಿಡಿದು ಕೆನ್ನೆಗೆ ಹೊಡೆಯಲು ಹೇಳಿದರು. ಆಗ ಮಾತ್ರ ನನಗೆ ಭಯ ಆರಂಭವಾಯಿತು. ನಾನು ಮೊದಲಿನಿಂದಲೂ ಹುಡುಗಿಯರನ್ನು ಆದಷ್ಟು ದೂರ ಇಟ್ಟವನು. ಈಗ ಅವರ ಮೂಗು ಹಿಡಿದು ಹೊಡೆಯ ಬೇಕೆಂದರೆ ಮನಸ್ಸಿನಲ್ಲಿ ಏನೋ ಒಂದು ರೀತಿಯ ಅಳುಕು. ಅಧ್ಯಾಪಕರ ಆಜ್ಞೆಯನ್ನು ಮೀರುವ ಧೈರ್ಯವಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಮೆಲ್ಲನೆ ಅವರ ಕೆನ್ನೆಗಳಿಗೆ ಹೊಡೆದ ಶಾಸ್ತ್ರ ಮಾಡಿದೆ. ಒಮ್ಮೆ ಕಂಟಕದಿಂದ ಪಾರಾದರೆ ಸಾಕು ಎನಿಸಿತ್ತು.

    ಶಿವಮೊಗ್ಗ ಜಿಲ್ಲೆಯ ಸಾಗರ ನಮ್ಮ ತಾಲೂಕು ಕೇಂದ್ರ. ೧೯೭೫ - ೭೬ನೆಯ ಇಸವಿಯ ಕಾಲಕ್ಕೆ ಸಾಗರದಲ್ಲಿ ಮೂರು ಸಿನಿಮಾ ಟಾಕೀಸುಗಳಿದ್ದವು. ಶ್ರೀ ಟಾಕೀಸು, ಸಾಗರ ಟಾಕೀಸು ಮತ್ತು ಕೃಷ್ಣಾ ಟಾಕೀಸು. ಹೊಸ ಸಿನಿಮಾ ಬಂದರೆ ಕಾರಿನಲ್ಲಿ ಬಂದು ಕರಪತ್ರಗಳನ್ನು ಹಂಚಿ ಹೋಗುತ್ತಿದ್ದರು. ಕಾರಿನಲ್ಲಿ ಹೋಗುವಾಗ ಅವರು ಕರಪತ್ರಗಳನ್ನು ಬಿಸಾಡಿದರೆ ಅವರು ಗಾಳಿಯಲ್ಲಿ ತೇಲಾಡುತ್ತಾ ಕೆಳಗಿಳಿಯುತ್ತಿದ್ದವು. ನಾವು ಅವುಗಳನ್ನು ನೆಲಕ್ಕೆ ಮುಟ್ಟುವ ಮೊದಲೇ ಹಿಡಿದು ಓದಲು ತೊಡಗುತ್ತಿದ್ದೆವು. ಇಂತಹ ಸಮಯದಲ್ಲಿಯೇ ರಾಜ್ಕುಮಾರ್ ಅಭಿನಯದ ಮಯೂರ ಸಿನಿಮಾ ಶ್ರೀ ಟಾಕೀಸಿಗೆ ಬಂತು. ಹಳ್ಳಿಯಲ್ಲಿದ್ದವರೆಲ್ಲರೂ ಹೋಗಿ ಸಿನಿಮಾ ನೋಡಿ ಬಂದರು. ಬಂದವರು ಸುಮ್ಮನೆ ಇರುತ್ತಿರಲಿಲ್ಲ. ಸಂಭ್ರಮದಿಂದ ಅದರ ಕಥೆ ಹೇಳುತ್ತಿದ್ದರು. ನನಗೆ ಸಿನಿಮಾ ಎಂದರೇನು ಎಂಬುದರ ಬಗೆಗೆ ಏನೂ ಗೊತ್ತಿರಲಿಲ್ಲ. ಇಂತಹ ಸಮಯದಲ್ಲಿ ಮಯೂರ ಸಿನಿಮಾ ನೋಡುವ ಅವಕಾಶ ನನಗೆ ತನಾಗಿ ಒದಗಿ ಬಂತು !.
    Read more...

    Saturday, December 31, 2011

    0

    ಸಿರಿವಂತೆ ಶಾಲೆಗೆ ಭೇಟಿ

  • Saturday, December 31, 2011
  • ಡಾ.ಶ್ರೀಧರ ಎಚ್.ಜಿ.

  • ೨೦೧೦ರ ನವಂಬರ್ ಡಿಸೆಂಬರ್ ವೇಳೆಗೆ ಒಮ್ಮೆ ಊರಿಗೆ ಹೋಗಿದ್ದೆ. ಹೀಗೇ ಕುಳಿತವನಿಗೆ ನಾನು ಕಲಿತ ಶಾಲೆಗೆ ಒಮ್ಮೆ ಹೋಗಿ ಬರಬೇಕೆಂದು ಅನಿಸಿತು. ನನ್ನ ತಮ್ಮನ ಮಗ ಚೇತನ್ ಕರೆದುಕೊಂಡು ಸುಮಾರು ೧೧ ಗಂಟೆಯ ಹೊತ್ತಿಗೆ ಶಾಲೆಗೆ ಹೋದೆ. ಮಕ್ಕಳೆಲ್ಲ ಕಲೆಕೆಯಲ್ಲಿ ತೊಡಗಿದ್ದರು. ನಾನು ನೇರವಾಗಿ ಮುಖ್ಯೋಪಾಧ್ಯಾಯರ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ನಾನು ಬಂದಿರುವುದನ್ನು ಗಮನಿಸಿದ ಟೀಚರ್ ಒಬ್ಬರು ಅದೇ ಹೊತ್ತಿಗೆ ಅಲ್ಲಿಗೆ ಬಂದರು. ನಾನು ನನ್ನ ಪರಿಚಯವನ್ನು ಮಾಡಿಕೊಂಡೆ. ಸುದೈವಕ್ಕೆ ಅವರೇ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರ ಹೆಸರು ಅನಿತಾ ಕಾನಡೆ. ಉತ್ತರ ಕನ್ನಡ ಮೂಲದವರು. ನನ್ನನ್ನು ಕೂರಿಸಿ ಮಾತನಾಡಿದರು. ನನ್ನನ್ನು ಶಾಲೆಯ ಕೊಠಡಿಗಳನ್ನು ತೋರಿಸಲು ಕರೆದುಕೊಂಡು ಹೋದರು.

    ನಾನು ಏಳನೆಯ ತರಗತಿ ಓದಿದ ಕೊಠಡಿಯನ್ನು ಪ್ರವೇಶಿಸಿದಾಕ್ಷಣ ತುಸು ಭಾವುಕನಾದೆ. ಅದೇ ಕೊಠಡಿಯಲ್ಲಿ ಈಗಲೂ ಏಳನೆಯ ತರಗತಿ ನಡೆಯುತ್ತಿತ್ತು. ನಾವು ಕೊಠಡಿಯನ್ನು ಪ್ರವೇಶಿಸುತ್ತಿದ್ದಂತೆ ಮಕ್ಕಳೆಲ್ಲ ಎದ್ದು ನಿಂತು ಗುಡ್ ಮಾರ್ನಿಂಗ್ ಸಾರ್ ಎಂದು ರಾಗಬದ್ಧವಾಗಿ ಹೇಳಿದರು. ನಾವೂ ಸಹ ಆ ವಯಸ್ಸಿನಲ್ಲಿ ಹಾಗೇ ಮಾಡಿರುವುದು ನೆನಪಾಯಿತು. ಒಂದಷ್ಟು ಹಳೆಯ ನೆನಪುಗಳು ನುಗ್ಗಿಬಂದವು. ಚಪ್ಪಲಿ ಇಲ್ಲದೆ ಶಾಲೆಗೆ ನಡೆದುಕೊಂಡು ಬರುತ್ತಿದ್ದ ಆ ದಿನಗಳು ನೆನಪಾದವು. ಗೆಳೆಯರು ಮತ್ತು ಪಾಠಮಾಡಿದ ಅಧ್ಯಾಪಕರ ಮುಖಗಳು ಸುಳಿದುಹೋದವು. ಕಣ್ಣಿನಲ್ಲಿ ನನಗೆ ಅರಿವಿಲ್ಲದೆ ಹನಿಗಳು ಮಡುಗಟ್ಟಿದವು. ಅನಂತರ ಮತ್ತೊಮ್ಮೆ ಮುಖ್ಯೋಪಾಧ್ಯಾಯರ ಎದುರು ಕುಳಿತೆ. ಕಾಫಿ ತರಿಸಿಕೊಡುವುದಾಗಿ ಹೇಳಿ ಉಪಚರಿಸಿದರು. ನನಗೆ ಕಾಫಿಯನ್ನು ಎಲ್ಲಿಂದ ತರಬೇಕೆಂದು ಗೊತ್ತಿತ್ತು. ಅವರ ಬಿನ್ನಹವನ್ನು ನಯವಾಗಿ ತಿರಸ್ಕರಿಸಿದೆ.

    ವಾಸ್ತವವಾಗಿ ಈ ಶಾಲೆ ಸಾಕಷ್ಟು ಹಳೆಯದು. ೧.೧೧.೧೯೨೨ರಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆರಂಭವಾಗಿತ್ತು. ನಾವು ಓದುವ ಕಾಲಕ್ಕೆ ಸಿರಿವಂತೆ ಮುಖ್ಯರಸ್ತೆಯ ಪಕ್ಕದಲ್ಲಿ ೧೯೨೨ರ ಕಾಲದಲ್ಲಿ ಕಟ್ಟಿದ ಹಳೆಯ ಕಲ್ಲಿನ ಕಟ್ಟಡವಿತ್ತು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅದನ್ನು ಉರುಳಿಸಿದರು. ಅನಂತರ ೨೦.೧೧.೧೯೫೮ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆರಂಭವಾಗಿತ್ತು. ನನ್ನ ಅಮ್ಮ ಸರೋಜ, ನಾನು, ತಮ್ಮ ಪ್ರಭಾಕರ ಮತ್ತು ತಂಗಿ ಸುಜಾತ ಇದೇ ಶಾಲೆಯಲ್ಲಿ ಓದಿದ್ದೇವೆ. ಹೀಗಾಗಿ ಈ ಶಾಲೆಗೆ ಏನಾದರೂ ನೀಡಬೇಕೆಂದು ಮನಸ್ಸಿನಲ್ಲಿ ಆಲೋಚನೆ ಬಂತು. ಶ್ರೀಮತಿ ಅನಿತ ಕಾನಡೆಯವರನ್ನು ಈ ಬಗೆಗೆ ಕೇಳಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ವಸ್ತುಗಳು ಏನಾದರೂ ಅಗತ್ಯವಿದ್ದರೆ ಹೇಳಿ ತಂದುಕೊಡುತ್ತೇನೆ ಎಂದೆ. ಅವರು ತಮ್ಮ ಸಹೋದ್ಯೋಗಿಗಳಲ್ಲಿ ಸಮಾಲೋಚನೆ ಮಾಡಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಮಾಡಲು ತಟ್ಟೆಯ ಅಗತ್ಯವಿದೆ. ತಂದುಕೊಟ್ಟರೆ ಉಪಕಾರವಾಗುತ್ತದೆ ಎಂದರು. ಸರಿ, ಮುಂದಿನ ಸಲ ಊರಿಗೆ ಬರುವಾಗ ತಂದು ಕೊಡುತ್ತೇನೆ ಎಂದು ಭರವಸೆ ನೀಡಿ ಮರಳಿದೆ.

    ಮೇ ೨೦೧೧ರಲ್ಲಿ ಊರಿಗೆ ಹೋಗುವಾಗ ಮರೆಯದೆ ೧೫೦ ಊಟದ ತಟ್ಟೆಗಳನ್ನು ಖರೀದಿಸಿ ತೆಗೆದುಕೊಂಡು ಹೋದೆ. ನಾನು ಹೋದ ಸಮಯದಲ್ಲಿ ಶಾಲೆಗೆ ರಜೆಯಿತ್ತು. ಶಾಲೆ ಆರಂಭವಾಗುವವರೆಗೆ ಇರಲು ನನಗೆ ಬಿಡುವಿರಲಿಲ್ಲ. ಹೀಗಾಗಿ ಶ್ರೀಮತಿ ಅನಿತಾ ಕಾನಡೆಯವರಿಗೆ ನನ್ನ ಸಂದಿಗ್ಧತೆಯನ್ನು ಹೇಳಿದಾಗ ಅವರು ಶಾಲೆಗೆ ಬರುವುದಾಗಿ ಹೇಳಿದರು. ಅದರಂತೆ ೧೨.೫.೨೦೧೧ರಂದು ನಾನು, ಪತ್ನಿ ಸವಿತಾ ಮತ್ತು ತಮ್ಮ ಪ್ರಭಾಕರ ಶಾಲೆಗೆ ಹೋದೆವು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸತ್ಯಮೂರ್ತಿಯವರು ಬಂದಿದ್ದರು. ಅವರಿಗೆ ನಾವು ತೆಗೆದುಕೊಂಡು ಹೋಗಿದ್ದ ತಟ್ಟೆಗಳನ್ನು ಹಸ್ತಾಂತರಿಸಿ ಬಂದೆವು. ನನಗೆ ಆ ಕ್ಷಣಕ್ಕೆ ಧನ್ಯತೆ ಮೂಡಿತು. ಮನಸ್ಸಿಗೆ ನಿರಾಳವೆನಿಸಿತು.

    Read more...
    0

    ಸಿರಿವಂತೆ ಶಾಲೆ

  • ಡಾ.ಶ್ರೀಧರ ಎಚ್.ಜಿ.
  • ನಮ್ಮ ಮನೆಯಿಂದ ಸಿರಿವಂತೆ ಶಾಲೆಗೆ ನಡೆದುಕೊಂಡು ಹೋಗಲು ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ‍್ ದೂರವಿತ್ತು. ಹೀಗಾಗಿ ನಾವು ಮುಂಜಾನೆ ಎಂಟೂವರೆಗೆಲ್ಲ ಮನೆಬಿಡುತ್ತಿದ್ದೆವು. ಮುಂಡಿಗೆಹಳ್ಳದ ಸೇತುವೆ ಸಮೀಪ ನಮ್ಮ ತಂಡದ ಸದಸ್ಯರೆಲ್ಲರೂ ಒಟ್ಟುಸೇರುತ್ತಿದ್ದೆವು.

    ಶಾಲೆಗೆ ನಡೆದುಕೊಂಡು ಹೋಗುವಾಗ ನಮಗೆಲ್ಲ ಒಂದು ಭಯವಿತ್ತು. ೧೯೭೦ರ ಕಾಲದಲ್ಲಿ ಲಿಂಗನಮಕ್ಕಿ, ಜೋಗ, ಕಾರ್ಗಲ್ ಪ್ರದೇಶದಲ್ಲಿ ಶರಾವತಿ ನದಿಗೆ ಡ್ಯಾಂ ಕಟ್ಟುವ ಕೆಲಸಗಳು ಭರದಿಂದ ನಡೆಯುತ್ತಿದ್ದವು. ನಾವು ಶಾಲೆಗೆ ಹೋಗುವಾಗ ಈ ಕೆಲಸಗಳಿಗೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳು ಎದುರಾಗುತ್ತಿದ್ದವು. ಇಂತಹ ಲಾರಿಗಳು ದೂರದಲ್ಲಿ ಕಾಣುವುದು ಬಿಡಿ, ಅವು ಬರುತ್ತಿರುವ ಶಬ್ದ ಕೇಳಿದರೂ ಸಾಕು, ನಾವು ಭಯಗೊಳ್ಳುತ್ತಿದ್ದೆವು. ರಸ್ತೆಯನ್ನು ಬಿಟ್ಟು, ದೊಡ್ಡ ಮರದ ಸಂದಿಯಲ್ಲಿ, ಪೊದೆಯ ಮರೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದೆವು. ಈ ಬಗೆಯ ಭಯಕ್ಕೆ ಕಾರಣ ನಮಗೂ ಸರಿಯಾಗಿ ಗೊತ್ತಿರಲಿಲ್ಲ. ನಮ್ಮ ಹಿರಿಯರು ತಮ್ಮಲ್ಲಿಯೇ ಮಾತನಾಡಿಕೊಳ್ಳುವಾಗ ಹೇಳಿದ ಒಂದು ಮಾತು ನಮ್ಮ ಕಿವಿಯ ಮೇಲೆ ಬಿದ್ದು ನಮ್ಮನ್ನು ಕಂಗಾಲು ಮಾಡಿತ್ತು. “ ಲಿಂಗನಮಕ್ಕಿಯಲ್ಲಿ ಬೃಹತ್ತಾದ ಡ್ಯಾಂ ಕಟ್ಟುತ್ತಿದ್ದಾರೆ. ಎಷ್ಟು ಕಟ್ಟಿದರೂ ಅದು ನಿಲ್ಲುತ್ತಿಲ್ಲ. ಅದಕ್ಕೆ ಮಕ್ಕಳ ಬಲಿ ಬೇಕಂತೆ. ಅದಕ್ಕೆ ಈಗ ಬಲಿ ನೀಡಲು ಮಕ್ಕಳನ್ನು ಹುಡುಕುತ್ತಿದ್ದಾರೆ. ಡದುರಿಗೆ ಮಕ್ಕಳು ಸಿಕ್ಕಿದರೆ ಬಲಿ ನೀಡಲು ಹಿಡಿದುಕೊಂಡು ಹೋಗುತ್ತಾರೆ”. ಎಂಬ ಮಾತು ನಮ್ಮ ತಲ್ಲಣಕ್ಕೆ ಕಾರಣವಾಗಿತ್ತು. ಇದು ನಿಜವೋ ಸುಳ್ಳೋ ಎಂದು ವಿವೇಚಿಸುವಷ್ಟು ನಮ್ಮಲ್ಲಿ ವಿವೇಕವಿರಲಿಲ್ಲ. ನಮ್ಮನ್ನು ರೇಗಿಸುವುದಕ್ಕೆ ಹೀಗೆ ಹೇಳಿದ್ದಿರಲೂ ಬಹುದು. ಈ ಗಾಳಿಮಾತಿನಿಂದ ನಾವಂತೂ ಹೆದರಿಹೋಗಿದ್ದೆವು. ಮೈಯೆಲ್ಲ ಕಿವಿಯಾಗಿ ಮಾರ್ಗದಲ್ಲಿ ಹೋಗುತ್ತಿದ್ದೆವು.

    ಮುಂಜಾನೆ ಒಂಬತ್ತೂವರೆಗೆಲ್ಲ ನಾವು ಶಾಲೆಗೆ ತಲುಪುತ್ತಿದ್ದೆವು. ಶಾಲೆಯ ಕೀಲಿಕೈ ಒಂದು ಮನೆಯಲ್ಲಿರುತ್ತಿತ್ತು. ಅದನ್ನು ತಂದು ಬೀಗ ತೆಗೆದು, ಕಸಹೊಡೆದು, ಕುಡಿಯಲು ನೀತು ತಂದಿಟ್ಟು ವ್ಯವಸ್ಥೆಗೊಳಿಸುತ್ತಿದ್ದೆವು. ಈ ಹೊತ್ತಿಗೆ ಸಾಗರದಿಂದ ಮಹೇಶ ಬಸ್ಸು ಬರುತ್ತಿತ್ತು. ಶ್ರೀ ಬಿ.ಎನ್. ರಾಮಚಂದ್ರ ಆಗ ನಮ್ಮ ಮುಖ್ಯೋಪಾಧ್ಯಾಯರು. ಸುಶೀಲಮ್ಮ, ರಾಧಾಬಾಯಿ ಮತ್ತು ಗುಡಿಗಾರ‍್ ಮೇಸ್ಟ್ರು ಇತರ ಅಧ್ಯಾಪಕರು. ಇವರಲ್ಲಿ ಗುಡಿಗಾರ‍್ ಮೇಸ್ಟ್ರು ವಯೋಮಾನದಲ್ಲಿ ಇತರರಿಗಿಂತ ಹಿರಿಯರು. ಅತ್ಯಂತ ಸಾತ್ವಿಕ ವ್ಯಕ್ತಿ. ಕೈಯ್ಯಲ್ಲಿ ಚರ್ಮದ ಒಂದು ಚಿಕ್ಕ ಬ್ಯಾಗು, ದಪ್ಪ ಗಾಜಿನ ಕನ್ನಡಕ, ಮೂಲಂಗಿ ಪ್ಯಾಂಟು, ಅರ್ಧತೋಳಿನ ಅಂಗಿ ಅವರ ವೇಷಭೂಷಣ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಮಾತನಾಡಿಸುತ್ತಿದ್ದರು. ನಮಗೆ ಅವರಲ್ಲಿ ವಿಶೇಷವಾದ ಸಲಿಗೆ. ಅವರಿಗೆ ನಮ್ಮಲ್ಲಿ ಪ್ರೀತಿ.

    ಬಿ.ಎನ್. ರಾಮಚಂದ್ರರಿಗೆ ವಿದ್ಯಾರ್ಥಿಗಳ ಬಗೆಗೆ ವಿಶೇಷವಾದ ಕಾಳಜಿಯಿತ್ತು. ಆ ಕಾಲಕ್ಕೆ ಅವರಿಗೆ ಮದುವೆಯಾಗಿರಲಿಲ್ಲ. ತಾರುಣ್ಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಶಾಲೆಗೆ ಅಥಿತಿಗಳು ಬಂದರೆ ಟೀ ತರುವುದು, ಕೆಲವೊಮ್ಮೆ ಬೆಲ್ ಹೊಡೆಯುವುದಕ್ಕೆ ಅವರು ನನ್ನನ್ನು ಕರೆಯುತ್ತಿದ್ದರು. ನನಗಿದು ಒಂದು ಗೌರವದ ಸಂಗತಿಯಾಗಿತ್ತು.

    ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರತೀವರ್ಷ ಆಗುತ್ತಿರಲಿಲ್ಲ. ನಾನು ಏಳನೆಯ ತರಗತಿಯಲ್ಲಿರುವಾಗ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಗುಡಿಗಾರ‍್ ಮೇಸ್ಟ್ರು ನಮ್ಮಿಂದ ಕುವೆಂಪು ಅವರ ಬಾಲಗೋಪಾಲ ನಾಟಕವನ್ನು ಮಾಡಿಸಿದ್ದರು. ನಾನು ಅದರಲ್ಲಿ ಗುರುವಿನ ಪಾತ್ರವನ್ನು ಮಾಡಿದ್ದೆ. ಅದೇ ದಿನ ಇನ್ನೊಂದು ಹಾಸ್ಯನಾಟಕವಿತ್ತು. ಅದರಲ್ಲಿ ನಾನು ಶಾಲೆಯ ಅಧ್ಯಾಪಕನ ಮಾಡಿದ್ದೆ. ಅದರಲ್ಲಿ ಒಂದು ಸಂಭಾಷಣೆ ಹೀಗಿದೆ.

    ಅಧ್ಯಾಪಕ ತರಗತಿಗೆ ಬಂದು ಹಾಜರಿ ಕರೆದ ನಂತರ ವಿದ್ಯಾರ್ಥಿಗಳಿಗೆ ಲಿಂಗದಲ್ಲಿ ಎಷ್ಟುವಿಧ? ಎಂದು ಒಂದು ಪ್ರಶ್ನೆ ಕೇಳುತ್ತಾನೆ. ಇದಕ್ಕೆ ಸರಿಯಾದ ಉತ್ತರ ಬರುವುದಿಲ್ಲ. ಆಗ ಲಿಂಗ ಎಂಬ ತುಸು ಕಿಲಾಡಿ ಹುಡುಗನೊಬ್ಬ ಮಹಾಲಿಂಗ ಮತ್ತು ಶಿವಲಿಂಗ ಎಂದು ಎರಡು ವಿಧ ಸಾರ‍್ ಎಂದು ಉತ್ತರಿಸಿದ. ಇದನ್ನು ಕೇಳಿ ಎಲ್ಲ ಹುಡುಗರು ಹೋ ಎಂದು ಕಿರುಚುವರು.

    ನಾನು ಹೇಳುವಂತಹ ಕ್ರೀಡಾಪಟುವೇನೂ ಆಗಿರಲಿಲ್ಲ. ಶಾಲೆಯ ಕಬಡ್ಡಿ ಮತ್ತು ಕೊ ಕ್ಕೊ ತಂಡದ ಸದಸ್ಯನಾಗಿದ್ದೆ. ತಾಲೂಕು ಮಟ್ಟದ ಕೊ ಕ್ಕೊಪಂದ್ಯ ನಮ್ಮ ಶಾಲೆಯಲ್ಲಿ ನಡೆದಿತ್ತು. ನಾವು ಸೆಮಿಫೈನಲ್ವರೆಗೆ ಹೋಗಿ ಸೋತೆವು ಎಂದು ನೆನಪು. ಹಾಗೆಯೇ ಸಾಗರದ ಜೂನಿಯರ‍್ ಕಾಲೇಜು ಮೈದಾನದಲ್ಲಿ ಕಬಡ್ಡಿ ಪಂದ್ಯ ನಡೆದಿತ್ತು. ನಾವು ನಾಲ್ಕನೆಯ ಸುತ್ತಿನಲ್ಲಿ ಸೋತಿದ್ದೆವು.

    ಸಾಗರದಲ್ಲಿ ನಡೆದ ಈ ಕಬಡ್ಡಿ ಪಂದ್ಯದಲ್ಲಿ ನಮ್ಮ ಆಟವು ಮಧ್ಯಾಹ್ನದ ಒಳಗೆ ಮುಕ್ತಾಯವಾಗಿತ್ತು. ಈ ಹೊತ್ತಿಗೆ ಸಾಗರದ ಶ್ರೀ ಟಾಕೀಸಿನಲ್ಲಿ ಮಯೂರ ಸಿನಿಮಾ ನಡೆಯುತ್ತಿತ್ತು. ಹಳ್ಳಿಯಲ್ಲಿ ಯಾರ ಬಾಯಲ್ಲಿ ನೋಡಿದರೂ ಮಯೂರ ಸಿನಿಮಾದ ಸುದ್ದಿ. ಹೀಗಾಗಿ ನನಗೂ ಅದನ್ನು ನೋಡಬೇಕೆಂದು ಆಸೆಯಾಗಿತ್ತು. ಇದಕ್ಕೆ ಸರಿಯಾಗಿ ನಮ್ಮ ಆಟವೂ ಮುಗಿದಿತ್ತು. ಹೀಗಾಗಿ ಮ್ಯಾಟಿನಿ ಶೋಗೆ ಹೋದ ನೆನಪಿದೆ. ಇದೇ ಸಿನಿಮಾಕ್ಕೆ ನನ್ನ ಚಿಕ್ಕಮ್ಮ ಕುಸುಮ ಮತ್ತು ಚಿಕ್ಕಪ್ಪ ಶ್ರೀಪಾದ ರಾವ್ ಬಂದಿದ್ದರು. ನನ್ನ ಟಿಕೇಟನ್ನು ಅವರೇ ತೆಗೆದುಕೊಟ್ಟರು. ಇದು ನಾನು ನೋಡಿದ ಮೊದಲ ಸಿನಿಮಾವೂ ಆಗಿತ್ತು. ಅತ್ಯಂತ ಸಂಭ್ರಮದಿಂದ ಕುಳಿತು ಈ ಸಿನಿಮಾವನ್ನು ನೋಡಿದ್ದೆ. ತೆರೆಯ ಮೇಲೆ ಚಿತ್ರಗಳು ಹೇಗೆ ಮೂಡಿಬರುತ್ತಿವೆ ಎಂಬುದು ಒಗಟಾಗಿಯೇ ಉಳಿದಿತ್ತು. ತುಂಬಾದಿನಗಳವರೆಗೆ ಈ ಸಿನಿಮಾದ ಸುದ್ದಿಯನ್ನು ಹೇಳಿ ಸಂತೋಷಪಟ್ಟಿದ್ದೆ.

    Read more...

    Subscribe