Sunday, August 22, 2010

7

ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ ?

  • Sunday, August 22, 2010
  • ಡಾ.ಶ್ರೀಧರ ಎಚ್.ಜಿ.
  • ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದವನಿಗೆ ಅಲ್ಲಿನ ಏಕಾಂತದಲ್ಲಿ ಚಿತ್ರ ವಿಚಿತ್ರ ಆಲೋಚನೆಗಳು ನೆನಪುಗಳು ಬರುತ್ತಿದ್ದವು. ಇಂತಹ ಒಂದು ಸಂದರ್ಭದಲ್ಲಿ ಪಕ್ಕನೆ ನಡೆದ ಈ ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ ಎಂಬ ಯೋಚನೆ ನನ್ನ ಮನಸ್ಸಿನಲ್ಲಿ ಹೊಳೆದು ಹೋತು. ತುಸು ಹೊತ್ತಿನ ನಂತರ ಈ ಭಾವನೆ ಮತ್ತಷ್ಟು ಗಾಢವಾಗಿ ಕಾಡತೊಡಗಿತು. ಇದಕ್ಕೆ ಕಾರಣವೂ ಇಲ್ಲದಿಲ್ಲ!.

    ಇಲ್ಲಿನ ನೆಹರು ನಗರದಲ್ಲಿ ನಾರಾಯಣ ಕಂಗಿಲ ಎಂಬ ಸ್ನೇಹಿತರಿದ್ದಾರೆ. ಅವರು ಬ್ಯಾಂಕಿನ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿಯನ್ನು ಪಡೆದವರು. ಸಾಹಿತ್ಯದಲ್ಲಿ ಅಭಿರುಚಿಯುಳ್ಳವರು. ಸ್ವತ: ಕಥೆ, ಕವನ, ನಾಟಕಗಳನ್ನು ಬರೆದವು. ಕೆ.ವಿ. ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಸುಬ್ರಾಯ ಚೊಕ್ಕಾಡಿ ಮೊದಲಾದವರೊಂದಿಗೆ ನವ್ಯೋತ್ತರದ ಕಾಲದಲ್ಲಿ ಸಾಕಷ್ಟು ಕೆಲಸ ಮಾಡಿದವರು. ಅವರೊಮ್ಮೆ ಮಾತನಾಡುತ್ತಾ ನಾಡಿ ಭವಿಷ್ಯದ ಬಗೆಬಗೆ ನನ್ನೊಂದಿಗೆ ಹೇಳಿದ್ದರು. ಅವರಿಗೆ ಅದರಲ್ಲಿ ತಕ್ಕಮಟ್ಟಿಗೆ ನಂಬಿಕೆತ್ತು. ಆದರೆ ನನಗೆ ಅದರ ತಲೆ ಬುಡ ಅರ್ಥವಾಗಿರಲಿಲ್ಲ. ಹೀಗಾಗಿ ಇನ್ನೊಮ್ಮೆ ನಾಡಿ ಭವಿಷ್ಯವನ್ನು ಕೇಳಲು ಹೋಗುವಾಗ ನಾನೂ ಬರುವುದಾಗಿ ತಿಳಿಸಿದೆ. ಸ್ವಲ್ಪ ದಿನದಲ್ಲಿಯೇ ಅವರೊಂದಿಗೆ ಹೋಗುವ ಅವಕಾಶವೂ ಒದಗಿಬಂತು. ಮಂಗಳೂರಿನ ಯಾವುದೋ ಮೂಲೆಯಲ್ಲಿ ನಾಡಿಭವಿಷ್ಯವನ್ನು ಹೇಳುವ ವ್ಯಕ್ತಿಯನ್ನು ಅವರು ಶೋಧಿಸಿದ್ದರು. ಆತನ ಹೆಸರು ಮಹೇಂದ್ರಸ್ವಾಮಿ ಎಂದು ನನ್ನ ನೆನಪು. ಮೂಲತ: ತಮಿಳು ನಾಡಿನ ವ್ಯಕ್ತಿ. ನಾವು ಆತನಲ್ಲಿಗೆ ತಲುಪುವಾಗ ಸುಮಾರು ಹನ್ನೊಂದು ಗಂಟೆಯಾಗಿತ್ತು. ನಮ್ಮನ್ನು ಒಂದು ಕೊಠಡಿಯಲ್ಲಿ ಕುಳ್ಳಿರಿಸಿದ. ಹತ್ತಾರು ದೈವಗಳ ಫೋಟೋಗಳು ಅಲ್ಲಿದ್ದವು. ತುಸು ಹೊತ್ತಿನಲ್ಲಿ ಬಂದ ಆತ ತಮಿಳಿನಲ್ಲಿ ಪ್ರಾರ್ಥನೆ ಮಾಡಿದ. ಅನಂತರ ನೇರವಾಗಿ ಒಳಗೆ ಹೋಗಿ ತಾಳೆಗರಿ ಪ್ರತಿಯೊಂದನ್ನು ತಂದು ಹರಡಿಕೊಂಡು ಕುಳಿತ. ಈ ಜ್ಯೋತಿಷ್ಯವನ್ನು ಅಗಸ್ತ್ಯರು ಬರೆದಿರುವರೆಂದು, ನಮ್ಮ ಹುಟ್ಟು ಎಂಬುದು ನೂರಾರು ವರ್ಷಗಳ ಹಿಂದೆಯೇ ನಿರ್ಧಾರಿತವಾದ ಸಂಗತಿ ಎಂದು ಆರಂಭದಲ್ಲಿ ಹೇಳಿದ. ತಾಳೆಯೋಲೆಯಲ್ಲಿ ಬರೆದಿರುವುದನ್ನು ಹೇಳುವುದಾಗಿ ಆತ ಆರಂಭಿಸಿದ.
    ನಾನು ಆತನಿಗೆ ನನ್ನ ಯಾವುದೇ ವಿವರವನ್ನು ಹೇಳಿರಲಿಲ್ಲ. ಆತನೇ ಒಂದೊಂದಾಗಿ ಹೇಳಲಾರಂಭಿಸಿದ. ಇಡಿಯಾಗಿ ನಮ್ಮ ಮಾತುಕತೆ ಪ್ರಶ್ನೋತ್ತರದ ಮಾದರಿಯಲ್ಲಿತ್ತು.

    ಆರಂಭದಲ್ಲಿ ನನ್ನ ಒಂದು ತಾಳೆಗರಿಯನ್ನು ಮಗುಚಿ ನನ್ನ ಹೆಸರನ್ನು ಹೇಳತೊಡಗಿದ. ಆರಂಭದಲ್ಲಿ ಹೇಳಿದ ನಾಲ್ಕಾರು ಹೆಸರುಗಳು ಹೊಂದಿಕೆಯಾಗಲಿಲ್ಲ. ಆತ ಓಲೆಗರಿಯನ್ನು ನೋಡಿ ಹೇಳುವ ವಿವರಗಳು ಪೂರ್ಣವಾಗಿ ಹೊಂದಿಕೆಯಾಗಬೇಕು. ಇಲ್ಲವಾದರೆ ಮುಂದಿನ ಓಲೆಗೆ ಹೋಗುತ್ತಿದ್ದ. ಕೆಲವಕ್ಕೆ ನನ್ನ ಹೆಸರು ಹೊಂದಿಕೆಯಾದರೆ ತಂದೆ, ತಾಯಿ, ಹೆಂಡತಿ, ತಮ್ಮ, ತಂಗಿ ಇತ್ಯಾದಿ ನನ್ನ ಕುಟುಂಬದ ವಿವರಗಳು ಹೊಂದಿಕೆಯಾಗುತ್ತಿರಲಿಲ್ಲ. ಹೀಗೆ ಸುಮಾರು ಅರ್ಧಮುಕ್ಕಾಲು ಗಂಟೆ ಕಳೆಯಿತು. ಕೊನೆಗೊಮ್ಮೆ ಆತ ಹೇಳುವ ಎಲ್ಲಾ ವಿವರಗಳು ನನ್ನ ಪ್ರವರದೊಂದಿಗೆ ಹೊಂದಿಕೆಯಾಗುವ ಓಲೆಯೊಂದು ಬಂತು !

    ಸುಮಾರು ನಾಲ್ಕೈದು ವರ್ಷದ ಹಿಂದೆ ನಾನು ಈ ಜ್ಯೋತಿಷ್ಯವನ್ನು ಕೇಳಲು ಹೋಗಿದ್ದು. ನಾನು ಸದ್ಯದಲ್ಲಿಯೇ ಹೊಸ ಮಾದರಿಯ ಹೊಸ ವಾಹನವನ್ನು ಖರೀದಿಸುವುದಾಗಿ ಹೇಳಿದ. ಅದಾಗಿ ತುಸು ಹೊತ್ತು ಆಲೋಚಿಸಿ ೪೬ನೆಯ ವಯಸ್ಸಿಗೆ ವಾಹನ ಅಪಘಾತವಾಗುತ್ತದೆ ಎಂದು ಸೂಚಿಸಿದ. ಇದರೊಂದಿಗೆ ಒಂದಿಷ್ಟು ಬೇರೆ ಸಂಗತಿಗಳನ್ನು ಹೇಳಿದ. ಆತ ಹೇಳಿದ ಮಾಹಿತಿಗಳು ನನ್ನನ್ನು ಗಲಿಬಿಲಿಗೊಳಿಸಿದವು. ಮಾತ್ರವಲ್ಲ ಆತ ಹೇಳಿದ ಸಂಗತಿಯನ್ನು ತಮಿಳಿನಲ್ಲಿ ಬರೆದು ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಡುವುದಾಗಿಯೂ ಹೇಳಿದ. ಇದೆಲ್ಲ ಆಗುವ ಹೋಗುವ ಕತೆಯಲ್ಲವೆಂದು ಮನಸ್ಸಿನಲ್ಲಿಯೇ ಅಂದುಕೊಂಡು ಬಂದೆ. ಹದಿನೈದು ದಿನಕ್ಕೆ ಒಂದು ನೋಟ್ ಬುಕ್ ಅಂಚೆಯಲ್ಲಿ ಬಂತು! ಅದರಲ್ಲಿ ತಮಿಳು ಮತ್ತು ಕನ್ನಡದಲ್ಲಿ ಬರೆದಿದ್ದ ಜ್ಯೋತಿಷ್ಯದ ಮಾಹಿತಿಗಳಿದ್ದವು. ಅನಂತರ ಈ ಸಂಗತಿಯನ್ನು ಅಲ್ಲಿಗೇ ಮರೆತುಬಿಟ್ಟೆ. ಇದಾಗಿ ಸ್ವಲ್ಪ ಸಮಯಕ್ಕೆ ಅದೇ ಆಗ ತಾನೆ ಮಾರುಕಟ್ಟೆಗೆ ಬಂದಿದ್ದ ಹೀರೋಹೊಂಡದವರ ಪ್ಲೆಜರ್ ವಾಹನವನ್ನು ಖರೀದಿ ಮಾಡಿದೆ. ಸತತವಾಗಿ ೪ ವರ್ಷ ಇದರಲ್ಲಿ ಓಡಾಡಿದೆ. ಒಂದೇ ಒಂದು ಸಣ್ಣ ಅಪಘಾತವಾಗಲಿಲ್ಲ. ವಾಹವನೂ ಹೊಸದೆಂಬಂತಿತ್ತು. ಮೊನ್ನೆ ಜೂನ್ ೧೨ಕ್ಕೆ ನನ್ನ ವಾಹನಕ್ಕೆ ೪ ವರ್ಷ ತುಂಬುವ ಸಂಭ್ರಮವಿತ್ತು. ಆದರೆ ಅದಾಗಲೇ ಇಲ್ಲ. . . .
    ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದವನಿಗೆ ಒಮ್ಮೆಲೆ ನಾಡಿಜ್ಯೋತಿಷ್ಯದ ನೆನಪಾಯಿತು. ವಿವರಗಳು ನೆನಪಾಗಲಿಲ್ಲ. ಮನೆಗೆ ದೂರವಾಣಿಯಲ್ಲಿ ಸಂಪರ್ಕಿಸಿ ಆತ ಕಳಿಸಿದ ನೋಟ್ ಪುಸ್ತಕವನ್ನು ಹುಡುಕಲು ಮಗ ಚಂದನ್‌ಗೆ ಹೇಳಿದೆ. ಆದರೆ ಆತ ಆಗಲೇ ಅದನ್ನು ಹುಡುಕಿ ಓದಿ ನೋಡಿದ್ದ. ೪೬ನೆಯ ವರ್ಷಕ್ಕೆ ವಾಹನ ಅಪಘಾತವಾಗುತ್ತದೆ ಎಂದು ಬರೆದಿದ್ದ! ನನಗೆ ಇದನ್ನು ಕೇಳಿ ಆಶ್ಚರ್ಯ ಮತ್ತು ವಿಸ್ಮಯ! ಇದನ್ನು ನಂಬುವುದೋ ಬಿಡುವುದೋ ಎಂಬ ಗೊಂದಲದ ನಡುವೆ ಇದೆಲ್ಲವೂ ಪೂರ್ವ ನಿಯೋಜಿತ ವಿಧಿ ಲಿಖಿತವೇ ಎಂಬ ಪ್ರಶ್ನೆ ಥಟ್ಟನೆ ಮನಸ್ಸಿಗೆ ಬಂತು.

    ಇದಕ್ಕೆ ಪೂರಕವಾಗಿ ಇನ್ನೊಂದು ಅಂಶ ನಿಧಾನವಾಗಿ ಆಕಾರ ಪಡೆಯತೊಡಗಿತು. ಈ ಅವಧಿಯಲ್ಲಿ ನಾನು ಕಾಲನ್ನು ನೇರವಾಗಿ ಇಟ್ಟುಕೊಳ್ಳಬೇಕಾಗಿತ್ತು ; ಬಗ್ಗಿಸುವಂತಿರಲಿಲ್ಲ. ಶೌಚಾಲಯದ ವ್ಯವಸ್ಥೆಗೆ ಇದರಿಂದ ತುಂಬಾ ತೊಂದರೆಯಾಗುತ್ತಿತ್ತು. ಬೀಳುವುದಕ್ಕೆ ಮುಂಚಿತವಾಗಿ ನಾಲ್ಕಾರು ತಿಂಗಳ ಹಿಂದೆ ಹೊಸದಾಗಿ ಆಂಗ್ಲೋ ಇಂಡಿಯನ್ ಕಮೋಡು ಇರುವ ಕೊಠಡಿಯೊಂದನ್ನು ಕಟ್ಟಿಸಿದ್ದೆ. ಇದು ಸಕಾಲದಲ್ಲಿ ಉಪಯೋಗಕ್ಕೆ ಬಂರುವಂತಾಯಿತು !

    ಮೇ ೧೩ ರಂದು ನಾನು ಈ ಸಲ ಊರಿಗೆ ಹೋಗಿದ್ದು. ಇದಕ್ಕೆ ಒಂದೆರಡು ದಿನ ಮುಂಚಿತವಾಗಿ ನಮ್ಮ ಮನೆಯ ಟಿ.ವಿ. ಹಾಲಿಗೆ ಬರೆಯಲೆಂದು ಟ್ರಾಲಿಯಂತಿರುವ ಒಂದು ಟೇಬಲ್ ತಂದು ಕಿಟಕಿಯ ಪಕ್ಕದಲ್ಲಿ ಹಾಕಿದ್ದೆ. ಇದು ಒಂದೆರಡು ವರ್ಷಗಳಿಂದ ಒಳಗಿನ ಕೊಠಡಿಯಲ್ಲಿತ್ತು. ಮತ್ತು ಇದರ ಮೇಲೆ ಹೋಂ ಥಿಯೇಟರ್‌ನ ಪರಿಕರಗಳಿದ್ದವು. ಇದನ್ನೆಲ್ಲ ಖಾಲಿ ಮಾಡಿ ಟಿ.ವಿ ಸ್ಟ್ಯಾಂಡ್‌ನಲ್ಲಿ ಹೊಂದಿಸಿದ್ದೆ. ಇದಕ್ಕಾಗಿ ಸುಮಾರು ಅರ್ಧ ದಿನ ಹಿಡಿದಿತ್ತು. ಈಗ ಇದು ನನಗೆ ಓದಿ ಬರೆಯಲು ಅನುಕೂಲವಾಗುವಂತಿತ್ತು.

    ವಾಸ್ತವವಾಗಿ ನನಗೆ ಮೇ ೨೬ರಂದು ದುರ್ಗಾಪ್ರವೀಣನ ಮದುವೆ ಇರುವುದು ಮರೆತು ಹೋಗಿತ್ತು. ಅಂದು ಮುಂಜಾನೆ ಕಾಲೇಜಿಗೆ ಹೋದಾಗ ಸ್ನೇಹಿತರು ಈ ವಿಷಯವನ್ನು ನೆನಪು ಮಾಡದಿದ್ದರೆ ನಾನು ಹೋಗುತ್ತಿರಲಿಲ್ಲ. ವಿಧಿಲಿಖಿತ ನಿಶ್ಚಯವಾಗಿದ್ದರಿಂದ ಮರೆತ ಸಂಗತಿಯನ್ನು ಸರಿಯಾಗಿ ನೆನಪಿಸಿದರು. ಮನೆಯಿಂದ ಹೊರಡುವ ಮೊದಲು ಸಂಜೆ ರಿಸೆಪ್ಸನ್‌ಗೆ ಹೋಗುವುದೆಂದು ಒಮ್ಮೆ ಆಲೋಚಿಸಿದೆ. ಆದರೆ ಮಳೆಯ ದಿನವಾದ್ದರಿಂದ ಹಗಲೇ ಹೋಗಿಬರುವುದೆಂದು ನಿರ್ಧರಿಸಿ ಹೊರಟೆ. ಈಗ ಆಲೋಚಿಸಿದರೆ ಪ್ರತಿಯೊಂದು ಅಂಶವೂ ನನಗೆ ಅಪಘಾತವಾಗುವುದರ ಕಡೆಗೆ ಬೆರಳು ತೋರಿಸುತ್ತದೆ.
    ಹೀಗಾಗಿ ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತದಂತೆ ಕಾಣುತ್ತದೆ !.

    ಮುಂದಿನ ಭಾಗ ...... ಮನೆಗೆ ಬರುವ ಸಂಭ್ರಮ ....
    Read more...
    0

    ಆಸ್ಪತ್ರೆಯ ದಿನಚರಿ

  • ಡಾ.ಶ್ರೀಧರ ಎಚ್.ಜಿ.
  • ನನ್ನ ನೆನಪಿನಂತೆ ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರಿನಲ್ಲಿ ಆರಂಭವಾಗಿ ಸುಮಾರು ಹನ್ನೆರಡು ವರ್ಷವಾಗಿರಬೇಕು. ಪೇಟೆಗೆ ತುಂಬಾ ಹತ್ತಿರವಾಗಿದ್ದರೂ ಹಸಿರಿನ ನಡುವೆ ಇದೆ. ಹಿತಕರವಾದ ವಾತಾವರಣ. ಬಂದು ಹೋಗುವ ವಾಹನದ ಸದ್ದನ್ನು ಹೊರತುಪಡಿಸಿದರೆ ಮೌನವೇ ಅಲ್ಲಿನ ಮಾತು. ಇಲ್ಲಿನ ವ್ಯವಸ್ಥೆ ಮತ್ತು ಸೇವೆಯ ಬಗೆಗೆ ಒಂದೆರಡು ಮಾತುಗಳನ್ನು ಹೇಳದಿದ್ದರೆ ಲೋಪವಾಗುತ್ತದೆ.

    ಆಸ್ಪತ್ರೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಡಾ. ರಾಜೇಶ್ವರಿ ಪಡಿವಾಳ್ ಸ್ವತ: ವೈದ್ಯರು. ಅವರಿಗೆ ರೋಗಿಗಳ ಮನೋಧರ್ಮದ ಅರಿವಿದೆ. ಪ್ರತಿದಿನ ಮುಂಜಾನೆ ಸುಮಾರು ೬.೩೦ ರಿಂದ ೭ ಗಂಟೆಯ ನಡುವೆ ಅವರು ಬಹುತೇಕ ಎಲ್ಲಾ ಕೊಠಡಿಗಳಿಗೂ ಭೇಟಿ ನೀಡಿ ರೋಗಿಗಳ ಕುಶಲವನ್ನು ವಿಚಾರಿಸುವುದು ನನ್ನ ಗಮನ ಸೆಳೆಯಿತು. ಸೌಲಭ್ಯದ ದೃಷ್ಟಿಯಿಂದ ನಮ್ಮ ಅಗತ್ಯಗಳನ್ನು ಅವರಿಗೆ ತಿಳಿಸಲು ಇದರಿಂದ ಸಹಾಯಕ. ನನ್ನ ಕೊಠಡಿಯಲ್ಲಿ ಒಂದು ಟ್ಯೂಬ್ ಲೈಟ್ ಇತ್ತು. ಅದರೊಂದಿಗೆ ಇರುವ ಇನ್ನೊಂದು ಡಿಮ್ ಲೈಟ್‌ನ ಬಲ್ಪ್ ಇರಲಿಲ್ಲ. ಶೌಚಾಲಯದಲ್ಲಿಯೂ ಇದೇ ಸ್ಥಿತಿ. ಸಹಜವಾದ ಬೆಳಕಿಲ್ಲ. ಬಲ್ಪ್ ಇರಲಿಲ್ಲ. ನಾನು ಆಸ್ಪತ್ರೆಗೆ ಸೇರಿದ ದಿನ ಇದನ್ನು ಗಮನಿಸಿ ನನ್ನ ಕೊಠಡಿಗೆ ಬರುವ ನರ್ಸ್‌ರಲ್ಲಿ ಹೇಳಿದೆ. ನಾನು ಹೇಳಿದ್ದು ಮಾತ್ರ. ರಾತ್ರಿ ಸಂಜೆ ೭ ಗಂಟೆಯಾದರೂ ವ್ಯವಸ್ಥೆಯಾಗಲಿಲ್ಲ. ಇಂತಹ ಹೊತ್ತಿನಲ್ಲಿ ಡಾ. ರಾಜೇಶ್ವರಿಯವರು ನನ್ನ ಕೊಠಡಿಗೆ ಬಂದರು. ಮೂಲಭೂತ ಸೌಲಭ್ಯದಲ್ಲಿನ ಈ ಅವ್ಯವಸ್ಥೆಯನ್ನು ಅವರ ಗಮನಕ್ಕೆ ತಂದೆ. ತಕ್ಷಣ ಪ್ರತಿಕ್ರಿಸಿದ ಅವರು ೧೦ ನಿಮಿಷದಲ್ಲಿ ವ್ಯವಸ್ಥೆ ಮಾಡಿದರು. ಆದರೆ ನನಗೊಂದು ಕುತೂಹಲವಿತ್ತು. ಎರಡೂ ಕಡೆ ಹಾಳಾದ ಬಲ್ಪುಗಳಿರಲಿಲ್ಲ. ! ಹೀಗಾಗಿ ಬಲ್ಪ್ ಹಾಕಲು ಬಂದ ವ್ಯಕ್ತಿಯಲ್ಲಿ ಈ ಬಗೆಗೆ ವಿಚಾರಿಸಿದೆ. ಆತ ನೀಡಿದ ಉತ್ತರ, 'ಹೀಗೂ ಉಂಟೆ' ಎಂದು ನನ್ನಲ್ಲಿ ಆಶ್ಚರ್ಯ ಮೂಡಿಸಿತು.

    "ನೀವು ಹೇಳುವುದು ಸರಿ ಸಾರ್. ಹಳೆಯ ಬಲ್ಪ್ ಇರಬೇಕಿತ್ತು. ಆದರೆ ಇಲ್ಲ. ಏನು ಮಾಡುವುದು ಹೇಳಿ. ಆಸ್ಪತ್ರೆಗೆ ಬಂದವರು ಹೋಗುವಾಗ ಇಲ್ಲಿನ ನೆನಪಿಗೆ ಇರಲಿ ಎಂದು ಬಲ್ಪ್‌ನ್ನು ಹಿಡಿದುಕೊಂಡು ಹೋಗುತ್ತಾರೆ.! ನಾವಾದರೂ ರೋಗಿಗಳು ಹೋಗುವಾಗ ಎಷ್ಟೂಂತ ನೋಡುವುದು. ಬರುವ ರೋಗಿಗಳು ಪ್ರಾಮಾಣಿಕರಾಗಿರಬೇಕಲ್ವಾ ?" ಎಂದು ನನ್ನನ್ನೆ ಪ್ರಶ್ನಿಸಿದ. ಹೌದಲ್ಲ, ಹೋಗುವವರೆಲ್ಲ ಹೀಗೆ ಮಾಡಿದರೆ ಅವರಾದರೂ ಏನು ಮಾಡಲು ಸಾಧ್ಯ? ಎಂದು ಅನಿಸಿತು. ವಸತಿ ಗೃಹಗಳಲ್ಲಿ ಮಾಡಿದ ಹಾಗೆ ರೋಗಿಗಳು ಕೊಠಡಿಯನ್ನು ಖಾಲಿ ಮಾಡುವಾಗ ಪರಿಶೀಲಿಸಿದರೆ ಈ ಬಗೆಯ ಅಧ್ವಾನಗಳನ್ನು ತಪ್ಪಿಸಬಹುದೆನಿಸಿತು. ಬಲ್ಪ್ ಹಾಕಲು ಬಂದ ವ್ಯಕ್ತಿ ಒಂದು ಸ್ಟೂಲನ್ನು ತಂದಿದ್ದ. ಹೋಗುವಾಗ ನನ್ನ ಕೊಠಡಿಯಲ್ಲಿಯೇ ಬಿಟ್ಟು ಹೋದ. ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾಲಿಟ್ಟುಕೊಳ್ಳಲು ಇದು ಅನುಕೂಲಕರವಾಗಿತ್ತು. ಈ ಬಗೆಗೆ ಯಾರಿಂದಲೂ ಆಕ್ಷೇಪಗಳು ಬಂದಿಲ್ಲವೆಂಬುದು ಗಮನಾರ್ಹ.
    ಆಸ್ಪತ್ರೆಯಲ್ಲಿ ಇರುವಷ್ಟು ದಿನ ನಾನು ಮುಂಜಾನೆ ೬ ಗಂಟೆಯ ಹೊತ್ತಿಗೆ ಎದ್ದು ಮುಖತೊಳೆದಿರುತ್ತಿದ್ದೆ. ಸರಿಯಾಗಿ ೬.೩೦ರ ಹೊತ್ತಿಗೆ ಬಿ.ಪಿ. ತಪಾಸಣೆಗೆ ಇಬ್ಬರು ಸೋದರಿಯರು ಬರುತ್ತಿದ್ದರು. ಇವರು ಬಂದು ಹೋಗಿ ೫ ರಿಂದ ೧೦ ನಿಮಿಷದಲ್ಲಿ ಇಂಜಕ್ಷನ್ ಕೊಡುವವರು ಬರುತ್ತಿದ್ದರು. ನನಗೆ ಎರಡು ನಮೂನೆಯ ಇಂಜಕ್ಷನ್ ಕೊಡುತ್ತಿದ್ದರು. ಅದರಲ್ಲಿ ಒಂದು ವಿಪರೀತ ನೋವು ಕೊಡುತ್ತಿತ್ತು. ಮತ್ತೊಂದರಲ್ಲಿ ಅಷ್ಟಾಗಿ ನೋವಾಗುತ್ತಿರಲಿಲ್ಲ. ಅದು ಇಂಜಕ್ಷನ್ ಕೊಡುವವರ ಸಮಸ್ಯೆಯಲ್ಲ. ಇಂಜಕ್ಷನ್‌ನ ಮಹಿಮೆ ಹಾಗಿತ್ತು. ಹೀಗಾಗಿ ನಾನು ಅವರಲ್ಲಿ ಸ್ವಲ್ಪ ನಿಧಾನವಾಗಿ ಕೊಡಿ. ಅರ್ಧ ಕೊಟ್ಟಾದ ಮೇಲೆ ತುಸು ನಿಲ್ಲಿಸಿ ಕೊಡಲು ಹೇಳುತ್ತಿದ್ದೆ. ನನ್ನ ಮಾತುಗಳನ್ನು ಅವರು ಪಾಲಿಸುತ್ತಿದ್ದರು. ಇಂಜಕ್ಷನ್ ಕೊಡುವಾಗ ನನ್ನ ಅಧ್ಯಾಪಕನ ಬುದ್ದಿ ಜಾಗೃತವಾಗುತ್ತಿತ್ತು. ಆ ಸೋದರಿಯರ ಶಿಕ್ಷಣ, ಊರು, ಮನೆ, ಈ ವೃತ್ತಿಯ ಅನುಭವ - ಹೀಗೆ ನಾನು ಅವರನ್ನು ಮಾತನಾಡಿಸುತ್ತಿದ್ದೆ. ನನ್ನ ಕೊಠಡಿಗೆ ಬಂದವರೆಲ್ಲರೂ ಬೇರೆ ಬೇರೆ ನರ್ಸಿಂಗ್ ಕಾಲೇಜುಗಳಲ್ಲಿ ತರಬೇತಿಯನ್ನು ಪಡೆದವರು. ಅವರ ತಂಡದಲ್ಲಿ ಒಬ್ಬ ಸೋದರನಿರುವುದು ನನ್ನ ಕುತೂಹಲಕ್ಕೆ ಕಾರಣವಾಗಿತ್ತು. ಇಂಜಕ್ಷನ್ ಕೊಟ್ಟ ನಂತರ ತೆಗೆದುಕೊಳ್ಳ ಬೇಕಾದ ಮಾತ್ರೆಯನ್ನು ಕ್ರಮವತ್ತಾಗಿ ಇಟ್ಟು ಹೋಗುತ್ತಿದ್ದರು.

    ಮೊದಲ ದಿನ ಎಡಗೈಗೆ ಇಂಜಕ್ಷನ್ ಕೊಡಲೆಂದು ಹಾಕಿದ ಕ್ಯಾನಲ್, ಮೂರು ದಿನವಾಗುವಾಗ ವಿಪರೀತ ನೋವು ನೀಡಲು ಆರಂಭಿಸಿತು. ಹೀಗಾಗಿ ಅದನ್ನು ತೆಗೆದು ಇನ್ನೊಂದು ಕೈಗೆ ಹಾಕುವುದಾಗಿ ಹೇಳಿದರು. ಆಗ ನನಗನ್ನಿಸಿತು. "ಒಂದು ಕೈ ಈಗಾಗಲೇ ಹಾಕಿದ ಕ್ಯಾನಲ್‌ನಿಂದ ಸಾಕಷ್ಟು ತೊಂದರೆಗೆ ಒಳಗಾಗಿದೆ. ಇನ್ನೊಂದು ಕೈಗೆ ಹಾಕಿದರೆ ಅದೂ ಸಹ ನೋವಿನಿಂದ ನಿರುಪಯುಕ್ತವಾದೀತು ಎಂಬ ಆಲೋಚನೆ ಬಂದು ಅದೇ ಕೈನಲ್ಲಿ ಇನ್ನೊಂದು ಬದಿಗೆ ಹಾಕಲು ಸೂಚಿಸಿದೆ. ಇದರಿಂದಾಗಿ ನನ್ನ ಇನ್ನೊಂದು ಕೈನಲ್ಲಿ ನನ್ನ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಆಗುತ್ತದಲ್ವ ?" ಎಂದೆ. ಬಂದವರಿಗೆ ಈ ಬಗೆಯ ಪ್ರಶ್ನೆ ಹೊಸದಾಗಿತ್ತು. ಅವರು ತುಸು ಯೋಚಿಸಿದರು. ಅನಂತರ ಅವರಿಗೂ ನನ್ನ ಸಲಹೆ ಹೌದೆನಿಸಿ ಅದೇ ರೀತಿ ಮಾಡಿದರು. ಅದರಲ್ಲಿಯೂ ಕೊನೆಯ ದಿನ ನನ್ನ ಕ್ಯಾನಲ್ ತೆಗೆಯುವಾಗ ಅದಕ್ಕೆ ನೀರನ್ನು ಹಚ್ಚಿ ನನಗೆ ನೋವಾಗದ ಹಾಗೆ ನಿಧಾನವಾಗಿ ಬಿಡಿಸಿದರು. ಇಲ್ಲಿನ ಸಿಸ್ಟರ್‌ಗಳೆಲ್ಲರೂ (ಸೋದರಿಯರು) ಅತ್ಯಂತ ತಾಳ್ಮೆಯಿಂದ, ಸಮಾಧಾನ ಚಿತ್ತದಿಂದ ನನ್ನಲ್ಲಿ ವ್ಯವಹರಿಸಿದ್ದು ಅತ್ಯಂತ ಸಂತೋಷವನ್ನು ನೀಡಿದ ಸಂಗತಿ. ಇದನ್ನು ಹೇಳುವುದಕ್ಕೆ ಕಾರಣ, ಕೆಲವೆಡೆ ಸಿಸ್ಟ್‌ರ್‌ಗಳು ಅತ್ಯಂತ ಕೆಟ್ಟದಾಗಿ ವರ್ತಿಸಿರುವುದನ್ನು ನಾನು ನೋಡಿದ್ದೇನೆ.

    ನನಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ನನ್ನಲ್ಲಿ ವಿಶ್ವಾಸ ತೋರಿಸಿದ್ದನ್ನು ಈಗಾಗಲೇ ಹೇಳಿದ್ದೇನೆ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಲ್ಲಿ ಒಬ್ಬರಾದ ಡಾ. ಪ್ರದೀಪರು ವಿದೇಶಕ್ಕೆ ಹೋಗಿದ್ದರು. ಆ ದಿನಗಳಲ್ಲಿ ಪ್ರತಿ ದಿನ ಡಾ. ಸುರೇಶ್ ಪುತ್ತೂರಾಯರು ಬಂದು ಪರಿಶೀಲಿಸಿ ಸೂಕ್ತ ಔಷಧಗಳನ್ನು ನೀಡುತ್ತಿದ್ದರು. ಅದೇ ರೀತಿ ಡಾ. ಅರವಿಂದರು ಬೇರೆ ಊರಿನವರಾದರೂ ಎರಡು ದಿನಕ್ಕೊಮ್ಮೆ ಬಂದು ನನ್ನ ಗಾಯದ ಸ್ಥಿತಿಯನ್ನು ಪರಿಶೀಲಿಸುತ್ತಿದ್ದರು. ಒಂದು ದಿನವಂತೂ ರಾತ್ರಿ ಸುಮಾರು ೧೦ ಗಂಟೆಯ ಸುಮಾರಿಗೆ ಬಂದು ಪರಿಶೀಲನೆ ನಡೆಸಿದ್ದು, ಅವರಲ್ಲಿದ್ದ ನನ್ನ ಗೌರವವನ್ನು ಇಮ್ಮಡಿಗೊಳಿಸಿದೆ.

    ಮುಂಜಾನೆ ಸೋದರಿಯರು ಇಂಜಕ್ಷನ್ ಕೊಟ್ಟು ಹೋದ ಕೆಲವೇ ಕ್ಷಣದಲ್ಲಿ ಕಸ ಗುಡಿಸಿ ಶುಚಿಗೊಳಿಸಲು ಬರುತ್ತಿದ್ದರು. ಇಲ್ಲಿಗೆ ಮುಂಜಾನೆಯ ಒಂದು ಹಂತ ಮುಗಿಯುತ್ತಿತ್ತು. ಮಧ್ಯಾಹ್ನ ಮತ್ತು ಸಂಜೆ ಇದರ ಪುನರಾವರ್ತನೆ. ಆದರೆ ಕ್ಯಾಂಟಿನ್‌ನ ಊಟ ಮತ್ತು ಉಪಾಹಾರ ಮಾತ್ರ ನನಗೆ ಸಮಾಧಾನ ನೀಡಲಿಲ್ಲ. ಅನಿವಾರ್ಯತೆಗೆ ಆಗಬಹುದಷ್ಟೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ಬಗೆಗೆ ಮರುಚಿಂತನೆ ಮಾಡುವುದು ಒಳಿತು. ಅಲ್ಲಿರುವ ರೋಗಿಗಳಲ್ಲದೆ ಸಿಸ್ಟರ್ ಗಳು ಇದನ್ನೇ ಅವಲಂಬಿಸಿರುವುದರಿಂದ ಇದರ ಗುಣಮಟ್ಟವನ್ನು ಹೆಚ್ಚಿಸುವುದರ ಕಡೆಗೆ ಯೋಚಿಸಬೇಕು.

    ಯಥಾಪ್ರಕಾರ ಆ ದಿನಗಳಲ್ಲಿ ಕರೆಂಟಿನ ಕಣ್ಣಾಮುಚ್ಚಾಲೆ ಸಾಕಷ್ಟಿತ್ತು. ಆದರೆ ಕರೆಂಟು ಹೋದ ಒಂದೆರಡು ನಿಮಿಷದಲ್ಲಿ ಜನರೇಟರ್ ಹಾಕುತ್ತಿದ್ದರು. ಹೆಲೆಕಾಪ್ಟರ್ ಹೋದ ಹಾಗೆ ಅದರ ಶಬ್ಬ ನನ್ನ ಕೊಠಡಿಗೆ ಕೇಳುತ್ತಿತ್ತು. ಈಗ ಬರುತ್ತದೆ. . . . ಈಗ ಬರುತ್ತದೆ . . . ಎಂದು ಕಾಯುತ್ತಿರಲಿಲ್ಲ. ನನಗೆ ಆಪರೇಶನ್ ಮಾಡುವಾಗಲೂ ಜನರೇಟರ್ ಹಾಕಿದ್ದರು. ಕರೆಂಟನ್ನು ನಂಬಿ ಯಾವುದೇ ಆಪರೇಶನ್ ಮಾಡಲು ಹೊರಟರೆ ರೋಗಿಯ ಪರಿಸ್ಥಿತಿ ಹೇಳಲಾಗದು. ಪರ್ಯಾಯ ವ್ಯವಸ್ಥೆಯನ್ನು ಇಟ್ಟುಕೊಳ್ಳದಿದ್ದರೆ ಆಸ್ಪತ್ರೆಯಲ್ಲಿ ಎಲ್ಲವೂ ಅಯೋಮಯವಾದೀತು.

    ನಾನು ಆಸ್ಪತ್ರೆಯಲ್ಲಿ ಇದ್ದ ದಿನಗಳಲ್ಲಿ ನನ್ನ ಅನೇಕ ವಿದ್ಯಾರ್ಥಿಗಳು, ಉಪನ್ಯಾಸಕ ಮಿತ್ರರು, ಗೆಳೆಯರು ಬಂದು ನಾನು ಬಿದ್ದ ಕಥೆಯನ್ನು ಸಮಾಧಾನ ಚಿತ್ತದಿಂದ ಕೇಳಿದ್ದಾರೆ. ಬಂದವರೆಲ್ಲ 'ಇದು ಹೇಗಾಯ್ತು' ಎಂದು ಕೇಳುವುದು, ನಾನು ಬೇಸರವಿಲ್ಲದೆ ಹೇಳಿದ್ದನ್ನೆ ಹೇಳುವುದು ನಡೆದಿತ್ತು. ಬಂದವರಿಗೆ ನನ್ನ ಕಥೆ ಹೊಸದು. ಹೀಗಾಗಿ ಅತ್ಯಂತ ಆಸಕ್ತಿಂದ ಕೇಳುತ್ತಿದ್ದರು. ಅದೊಂದು ದಿನ ಸಾಮಾನ್ಯವಾಗಿ ಅಪಘಾತಕ್ಕೆ ಕಾರಣವಾಗುವ ಅಂಶಗಳ ಕಡೆಗೆ ಯೋಚಿಸತೊಡಗಿದೆ. ಆಸ್ಪತ್ರೆಯ ಏಕಾಂತದಲ್ಲಿ ನನ್ನ ಮನಸ್ಸು ಹುಚ್ಚು ಕುದುರೆಯಂತೆ ಓಡುತ್ತಿತ್ತು. ನೂರಾರು ಯೋಚನೆಗಳು, ನೆನಪುಗಳು ಕಾಡುತ್ತಿದ್ದವು.

    ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಸುವ ಶೋಕಿ ಕೆಲವರದು. ಅದರಲ್ಲಿಯೂ ತರುಣರಿಗೆ ಈ ಬಗೆಯ ಚಪಲ ಹೆಚ್ಚು. ಇದರ ಪರಿಣಾಮವಾಗಿ ಬದಿಯಲ್ಲಿ ಹೋಗುವ ಪಾದಚಾರಿಗಳೋ, ಜಾಗರೂಕತೆಯಲ್ಲಿ ಹೋಗುವ ವಾಹನ ಚಾಲಕರು ಬಲಿಪಶುವಾಗುವರು. ನನ್ನ ಅಪಘಾತದಲ್ಲಿ ಆದದ್ದೂ ಇದೇ. ಹಿಂದಿನಿಂದ ಬಂದ ಕಾರಿನ ಮಿತಿ ಮೀರಿದ ವೇಗ. ಇದರೊಂದಿಗೆ ತಿರುವು. ಚಾಲಕರಿಗೆ ನಿಯಂತ್ರಣ ತಪ್ಪಲು ಈ ಅಂಶ ಧಾರಾಳವಾಗಿ ಸಾಕು. ಇದರೊಂದಿಗೆ ಪರಮಾತ್ಮ ಒಳಗೆ ಸೇರಿದರೆ ಮುಗಿದೇ ಹೋತು. ಮತ್ತೆಲ್ಲ ಅವನಾಡಿಸಿದಂಗೆ ಅಲ್ಲವೇ ?

    ಮತ್ತೆ ಕೆಲವರದು ಇನ್ನೊಬ್ಬರನ್ನು ಹಳ್ಳಕ್ಕೆ ತಳ್ಳಿ ಹೋಗುವ ಪ್ರವೃತ್ತಿ. ಶೀಘ್ರವಾಗಿ ನಿಗದಿತ ಸ್ಥಳವನ್ನು ಸೇರಬೇಕೆಂಬ ಅವಸರದಲ್ಲಿ ಸಹವರ್ತಿ ವಾಹನ ಚಾಲಕರನ್ನು ನಿರ್ಲಕ್ಷಿಸಿ ಮುನ್ನುಗ್ಗುವ ಆತುರ. ಇದರೊಂದಿಗೆ ರಾತ್ರಿಯಾದರೆ ದೊಡ್ಡ ವಾಹನದವರು ಲೈಟ್‌ನ್ನು ಡಿಮ್ ಮಾಡದಿರುವುದು. ಇದರಿಂದ ಕಣ್ಣು ಮಂಜಾಗುವುದು. ಎದುರಿಗೆ ಏನಿದೆ ಎಂದು ಕಾಣದೆ ಬೀಳುವ ಸಾಧ್ಯತೆ ಹೆಚ್ಚು. ಒಂದು ವಾಹನವನ್ನು ಹಿಂದಿಕ್ಕಿ ಮುಂದೆ ಸಾಗುವಾಗ ಎದುರಿನಿಂದ ವಾಹನ ಬರುತ್ತಿರುವುದು ಕಾಣುತ್ತಿದ್ದರು ಸಂದಿಯಲ್ಲಿ ನುಗ್ಗಿಸುವುದು.

    ಹದಗೆಟ್ಟ ರಸ್ತೆಗಳು ಇನ್ನೊಂದು ಕಾರಣ. ರಿಪೇರಿಯಾಗದೆ ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸುರಕ್ಷಿತವಾಗಿ ಹೋಗುವುದೇ ಒಂದು ಸವಾಲು. ಆದರೆ ನಾನು ಬಿದ್ದ ಮಿತ್ತೂರಿನಲ್ಲಿ ರಸ್ತೆ ಚೆನ್ನಾಗಿತ್ತು. ಆದರೆ ರಸ್ತೆ ಚೆನ್ನಾಗಿದ್ದರೆ ವಾಹನವನ್ನು ಮತ್ತಷ್ಟು ವೇಗವಾಗಿ ಓಡಿಸಲು ಮನಸ್ಸು ಹಾತೊರೆಯುವುದು. ಇದರೊಂದಿಗೆ ಲೋಕೋಪಯೋಗಿ ಇಲಾಖೆಯ ಪುಕ್ಕಟೆ ಕೊಡುಗೆಯನ್ನೂ ಇದರೊಂದಿಗೆ ಸೇರಿಸಬೇಕು. ರಸ್ತೆ ಹಾಳಾದ ತಕ್ಷಣ ಡಾಮರು ಹಾಕುವುದು ಸರಿ. ಹೀಗೆ ನಿರಂತರವಾಗಿ ಡಾಮರು ಹಾಕುವುದರಿಂದ ರಸ್ತೆ ಮತ್ತು ನೆಲದ ನಡುವೆ ಅಂತರ ಹೆಚ್ಚಾಗುತ್ತದೆ. ಇದು ದ್ವಿಚಕ್ರ ಸವಾರರಿಗೆ ಮೃತ್ಯು ಸ್ವರೂಪಿ. ನಾನು ಬಿದ್ದ ಸ್ಥಳದಲ್ಲಿ ರಸ್ತೆ ಮತ್ತು ಮಣ್ಣಿನ ನೆಲದ ನಡುವೆ ಸುಮಾರು ಒಂದು ಅಡಿಯಷ್ಟು ಅಂತರವಿತ್ತು. ಇಳಿಸುವಾಗ ಆಯತಪ್ಪಿ ಬೀಳಲು ಈ ಅಂತರ ಧಾರಾಳ ಸಾಕು. ಹೀಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರತೀ ಸಲ ಅಪಘಾತವಾದಾಗ ಇವುಗಳಲ್ಲಿ ಒಂದಾದರೂ ಕಾರಣ ಹೊಂದಿಕೆಯಾಗುತ್ತದೆ. ವಿಮಾನಗಳಲ್ಲಿ ಇರುವಂತೆ ನಾಲ್ಕುಚಕ್ರದ ವಾಹನಗಳಿಗೂ ಬ್ಲಾಕ್ ಬಾಕ್ಸ್ ಅಳವಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಯಾವುದನ್ನೂ ಅಳವಡಿಸಿದರೇನು? ವಾಹನಚಲಾಸುವ ವ್ಯಕ್ತಿಗೆ ಇನ್ನೊಬ್ಬರ ಬಗೆಗೆ, ಅದಕ್ಕಿಂತ ಹೆಚ್ಚಾಗಿ ತನ್ನ ಬಗೆಗೆ, ತನ್ನನ್ನು ನಂಬಿ ಬದುಕುತ್ತಿರುವ ಕುಟುಂಬದ ಬಗೆಗೆ ಒಳಮನಸ್ಸಿನಲ್ಲಿ ತುಡಿತವಿರಬೇಕು. ಆಗ ಮಾತ್ರ ವೇಗಕ್ಕೊಂದು ಮಿತಿ ಬರಲು ಸಾಧ್ಯವಾಗಬಹುದು.

    ಮೇ ೩೦ ರಂದು ಎಕ್ಸ್‌ರೇ ತೆಗೆದು ಕಾಲನ್ನು ಪರಿಶೀಲಿಸಿದ ಡಾ. ಅರವಿಂದರು ಎಲ್ಲವೂ ಸರಿಯಾಗಿದೆ ಎಂದು ಸೂಚಿಸಿದರು. ಅಲ್ಲದೆ ಕಾಲಿನಲ್ಲಿ ಸ್ಕ್ರೂ ಇರುವುದನ್ನು ತೋರಿಸಿ ಅದನ್ನು ಹಾಕಿದ ವಿಧಾನವನ್ನು ವಿವರಿಸಿದರು.

    ದಿನಾಂಕ ೧.೬.೨೦೧೦ರಂದು ನನ್ನ ಕಾಲನ್ನು ಡಾ. ಅರವಿಂದರು ಮತ್ತೊಮ್ಮೆ ಪರಿಶೀಲಿಸಿದರು. ನಾನು ಅಡಿ ಮುಖವಾಗಿ ಮಲಗಿದ್ದೆ. ಶಸ್ತ್ರಕ್ರಿಯೆ ಆದ ಜಾಗದಲ್ಲಿ ಉರಿಯುತ್ತಿತ್ತು. ಗಾಯವನ್ನು ಶುಚಿಗೊಳಿಸುತ್ತಿದ್ದೇವೆ ಎಂದರು. ನಿಜವಾಗಿ ಹೊಲಿಗೆ ಬಿಚ್ಚಿದ್ದರಿಂದ ಉರಿಯುತ್ತಿತ್ತೆಂದು ವೈದ್ಯರು ಕೊನೆಯಲ್ಲಿ ಹೇಳಿದ ಮೇಲೆ ಗೊತ್ತಾಯಿತು. ಅಲ್ಲದೆ ಮರುದಿನ ಮನೆಗೆ ಹೋಗಬಹುದೆಂಬ ಶುಭವಾರ್ತೆಯನ್ನು ಅವರು ಹೇಳಿದರು. ನನಗೆ ಅವತ್ತೇ ರಾತ್ರಿ ಹೊರಡುವಷ್ಟು ಉತ್ಸಾಹ ಬಂದಿತ್ತು. ಆದರೆ ಆಗಲೇ ಕತ್ತಲಾದ್ದರಿಂದ ಮರುದಿನ ಹೋಗಲು ಸೂಚಿಸಿದರು.

    ಮುಂದಿನ ಭಾಗದಲ್ಲಿ ನಿರೀಕ್ಷಿಸಿ . . . ಅಪಘಾತ ಪೂರ್ವನಿರ್ಧಾರಿತ ವಿಧಿ ಲಿಖಿತವೇ . . .
    Read more...

    Sunday, August 8, 2010

    2

    ಆಪರೇಶನ್ ಆದ ಮೊದಲ ರಾತ್ರಿ !

  • Sunday, August 8, 2010
  • ಡಾ.ಶ್ರೀಧರ ಎಚ್.ಜಿ.
  • ನನ್ನನ್ನು ಕೊಠಡಿಗೆ ತಂದು ಮಲಗಿಸಿದರು. ಅನಸ್ತೇಶಿಯಾದ ಪ್ರಭಾವ ಇರುವುದರಿಂದ ಕಾಲುಗಳು ನನ್ನ ಸ್ವಾಧೀನದಲ್ಲಿರಲಿಲ್ಲ. ವಿಪರೀತ ಭಾರ. ಕಬ್ಬಿಣದ ತೊಲೆಗಳಂತಿದ್ದವು. ೮ ಗಂಟೆಯ ನಂತರ ಸ್ವಲ್ಪ ನೀರು ಕುಡಿಯಿರಿ. ವಾಂತಿ ಆಗದಿದ್ದರೆ ಆಹಾರ ಸೇವಿಸಬಹುದು ಎಂದು ಸಿಸ್ಟರ್ ಹೇಳಿದರು. ಆಗಿನ್ನೂ ೬.೩೦ರ ಸಮಯ. ಇನ್ನೂ ಒಂದೂವರೆ ಗಂಟೆ ನೀರು ಕುಡಿಯದೆ ಇರಬೇಕಲ್ಲ ಎಂದು ತಳಮಳವಾಯಿತು. ವಿಪರೀತ ಬಾಯಾರಿಕೆ. ಸುಮಾರು ೭.೩೦ರ ಹೊತ್ತಿಗೆ ಒಂದು ಗುಟುಕು ನೀರನ್ನು ಧೈರ್ಯ ಮಾಡಿ ಕುಡಿದೆ. ದೇವರ ದಯೆ, ವಾಂತಿಯಾಗಲಿಲ್ಲ. ೮.೩೦ರ ಹೊತ್ತಿಗೆ ಮನೆಯಿಂದ ತಂದ ಗಂಜಿಯನ್ನು ಉಂಡು ಮಾತ್ರೆ ತಿಂದು ಮಲಗಿದೆ.

    ಹತ್ತು ಗಂಟೆಯ ಸಮಯ. ಅನಸ್ತೇಶಿಯಾದ ಪ್ರಭಾವ ಕಡಿಮೆಯಾಗತೊಡಗಿತು. ಕಾಲು ತನ್ನ ಇರುವಿಕೆಯನ್ನು ತೋರಿಸತೊಡಗಿತು. ಆಪರೇಶನ್ ಮಾಡಿದ ಜಾಗದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿತು. ೧೦.೩೦ರ ಹೊತ್ತಿಗೆ ಅಸಾಧ್ಯ ನೋವು ಕಾಣಿಸಿಕೊಂಡಿತು. ೧೧ರ ವೇಳೆಗೆ ಮೈ ನೋವಿನ ಹೊಡೆತಕ್ಕೆ ತತ್ತರಿಸಿ ನಡುಗತೊಡಗಿತು. ಜ್ವರವೂ ಆರಂಭವಾತು. ನಾನು ಕೈಗೆಟುಕುವಂತಿದ್ದ ಬೆಲ್ ಒತ್ತಿದೆ. ಒಂದೆರಡು ನಿಮಿಷದಲ್ಲಿ ಬಂದ ಸಿಸ್ಟರ್ ನನಗೆ ನೋವಿನ ಉಪಶಮನಕ್ಕೆ ಒಂದು ಇಂಜಕ್ಷನ್ ಕೊಟ್ಟು, ಜ್ವರಕ್ಕೆ ಮಾತ್ರೆಯನ್ನು ಕೊಟ್ಟು ಹಿಂದಿರುಗಿದರು. ಇದರ ಪರಿಣಾಮವಾಗಿ ಅರ್ಧ ಗಂಟೆಯಲ್ಲಿ ಎಲ್ಲವೂ ಹತೋಟಿಗೆ ಬಂತು ನಿಧಾನವಾಗಿ ನಿದ್ರೆ ಆವರಿಸಿತು.

    ರಾತ್ರಿ ಸುಮಾರು ಒಂದು ಗಂಟೆಗೆ ಎಚ್ಚರವಾತು. ಅಂದು ರಾತ್ರಿ ನನ್ನೊಂದಿಗೆ ಭಾವ ಇದ್ದರು. ನನಗೆ ಎದ್ದು ಹೋಗುವುದು ತುಸು ತ್ರಾಸದಾಯಕವಾಗಿತ್ತು. ಅನಸ್ತೇಶಿಯಾದ ಪ್ರಭಾವದಿಂದ ಶರೀರವೂ ಹಿಡಿತಕ್ಕೆ ಬಂದಿರಲಿಲ್ಲ. ಹೀಗಾಗಿ ಮೂತ್ರ ಬಂದರೆ ಇರಲಿ ಎಂದು ಆಸ್ಪತ್ರೆಯವರು ಕೊಡುವ ಸಾಮಗಿಯನ್ನು ಕೈಯ್ಯಳತೆಯಲ್ಲಿ ಇಟ್ಟುಕೊಂಡು ಮಲಗಿದ್ದೆ. ಹೊಟ್ಟೆಯಲ್ಲಿ ವಿಚಿತ್ರವಾದ ನೋವಿನ ಅನುಭವ.! ಏನಿರಬಹುದೆಂದು ಸ್ವಲ್ಪ ಹೊತ್ತು ಚಿಂತಿಸಿದೆ. ಹಸಿವಲ್ಲ. ಹಾಗೆ ನೋಡಿದರೆ ಹೊಟ್ಟೆ ನೋವೂ ಅಲ್ಲ. ಮೂತ್ರದ ಒತ್ತಡ ! ಸರಿ, ಅಲ್ಲಿಯೇ ಇತ್ತಲ್ಲ ಸಾಮಗ್ರಿ. ಮೆಲ್ಲನೆ ಎದ್ದೆ. ಅದನ್ನಿಟ್ಟುಕೊಂಡು ಕುಳಿತೆ. ಮೂತ್ರ ಬರುವುದಿಲ್ಲ. ಹೊಟ್ಟೆ ನೋವು ಕಡಿಮೆಯಾಗುವುದೂ ಇಲ್ಲ. ಸರಿ, ಎದ್ದು ಶೌಚಾಲಯಕ್ಕೆ ಹೋಗೋಣವೆಂದು ಮೆಲ್ಲನೆ ನಿಂತೆ. ಗಾಳಿ ಬೀಸುವಾಗ ಹಿಡಿತಕ್ಕೆ ಸಿಕ್ಕದೆ ದೋಣಿ ಅಲ್ಲಾಡಿದಂತೆ ದೇಹ ಓಲಾಡಿತು. ಶೌಚಾಲಯಕ್ಕೆ ಹೋಗುವುದು ಸುರಕ್ಷಿತವಲ್ಲ ಎಂದು ಹಾಗೇ ಕುಳಿತೆ. ಕ್ಷಣದಿಂದ ಕ್ಷಣಕ್ಕೆ ನೋವು ಹೆಚ್ಚತೊಡಗಿತು. ಭಾವನನ್ನು ಎಬ್ಬಿಸಿ ನನ್ನನ್ನು ಶೌಚಾಲಯಕ್ಕೆ ಬಿಡಲು ಹೇಳಿದೆ. ಕಮೋಡಿನ ಮೇಲೆ ಸುರಕ್ಷಿತವಾಗಿ ಕುಳಿತೆ. ಹಾಗೇ ಸುಮಾರು ಕಾಲು ಗಂಟೆಯಾಗಿರಬಹುದು. ಸ್ವಲ್ಪ ಮೂತ್ರ ವಿಸರ್ಜನೆ ಮಾಡಿ ಮೆಲ್ಲನೆ ಬಂದು ಮಲಗಿದೆ.

    ಕಾಲಿನಲ್ಲಿ ಸೆಳೆತವಿತ್ತು. ನಿದ್ರೆ ಬರುವ ಛಾನ್ಸೇ ಇರಲಿಲ್ಲ. ಹೀಗಾಗಲು ಕಾರಣವೇನು ಎಂದು ಯೋಚನೆಗೆ ತೊಡಗಿದೆ. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದವನಿಗೆ ಮತ್ತೇನು ಕೆಲಸ. ನಿಧಾನವಾಗಿ ನನಗೇ ಅರ್ಧರಾತ್ರಿಯಲ್ಲಿ ಜ್ಞಾನೋದಯವಾತು ! ಇದೆಲ್ಲ ಅನಸ್ತೇಶಿಯಾದ ಪ್ರಭಾವ ! ನನಗೆ ಸೊಂಟದ ಕೆಳಗೆ ಕ್ರಿಯಾಶೀಲವಾಗುವಂತೆ ಅನಸ್ತೇಶಿಯಾ ಕೊಟ್ಟ್ಟಿದ್ದರು. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ 'ಲೋಕಲ್ ಅನಸ್ತೇಶಿಯಾ' ಎಂದು ಹೆಸರು. ಹೀಗಾಗಿ ದೇಹದ ಮೇಲ್ಬಾಗದಲ್ಲಿ ನಾನು ಸಂಪೂರ್ಣ ಸರಿಯಾಗಿದ್ದೆ. ದೇಹದ ಕೆಳಭಾಗ ಅದರ ಪ್ರಭಾವಲಯ. ಕಾಲನ್ನು ಮೆಲ್ಲನೆ ಎತ್ತಿ ನೋಡಿದೆ. ಸಂಶಯವೇ ಇಲ್ಲ. ಕಾಲು ಇನ್ನೂ ಭಾರವಾಗಿತ್ತು. ಹೀಗಾಗಿ ಆ ಭಾಗ ನನ್ನ ಹಿಡಿತಕ್ಕೆ ಇನ್ನೂ ಬಂದಿಲ್ಲ ಎಂಬುದು ಖಚಿತವಾಯ್ತು. ಬೆಳಗಾಗುವಾಗ ಸಣ್ಣದಾಗಿ ತಲೆನೋವುತ್ತು. ಮುಂಜಾನೆ ಬಂದ ಡಾ. ಪುತ್ತೂರಾಯರು "ಇದು ಅನಸ್ತೇಶಿಯಾದ ಪ್ರಭಾವ. ಇನ್ನೊಂದೆರಡು ದಿನವಿರುತ್ತದೆ. ತಲೆ ದಿಂಬನ್ನು ತೆಗೆದು ಮಲಗಿ ಬೇಗ ಸರಿಯಾಗುತ್ತದೆ" ಎಂದು ಸೂಚಿಸಿದರು.

    ಆಸ್ಪತ್ರೆಯಲ್ಲಿ ನನಗೆ ಸಿಕ್ಕಿದ ಕೊಠಡಿ ಸಂಖ್ಯೆ ೧೧೦. ನಾನು ಬಾಗಿಲಿಗೆ ಬೆನ್ನು ಹಾಕಿ ಮಲಗಿದರೆ ಕಿಟಕಿಯ ಮೂಲಕ ಹೊರಗಿನ ದೃಶ್ಯ ಕಾಣುತ್ತಿತ್ತು. ಎದುರಿಗೆ ಹಸಿರಿನಿಂದ ಕಂಗೊಳಿಸುತ್ತಿದ್ದ ಅಡಿಕೆ ತೋಟ, ಗಾಳಿ ಬೀಸಿದಾಗ ತೊನೆಯುವ ತೆಂಗಿನ ಮರಗಳು, ಹಾಗೆಯೇ ಆಸ್ಪತೆಗೆ ಬಂದು ಹೋಗುವ ವಾಹನಗಳು ಕಾಣುತ್ತಿದ್ದವು. ಮುಂಜಾನೆ ಎದ್ದ ತಕ್ಷಣ ಹಸಿರನ್ನು ನೋಡುತ್ತಾ ಒಂದಷ್ಟು ಹೊತ್ತು ಮಲಗುತ್ತಿದ್ದೆ. ದಕ್ಷಿಣ ಕನ್ನಡದಲ್ಲಿ ಸುರಿಯುವ ಮಳೆಯ ಸೊಬಗನ್ನು ಎಷ್ಟೋ ದಿನಗಳ ನಂತರ ಸರಿಯಾಗಿ ನೋಡಿದೆ.

    ಕೊಠಡಿಯ ಬಾಗಿಲಿಗೆ ಮುಖ ಹಾಕಿ ಮಲಗಿದರೆ ಕಾರಿಡಾರ್‌ನಲ್ಲಿ ಹೋಗಿಬರುವವರು ಕಾಣುತ್ತಿದ್ದರು. ನನ್ನ ಎದುರಿನ ಕೊಠಡಿಯಲ್ಲಿ ಒಬ್ಬರು ತುಸು ವಯಸ್ಸಾದ ಒಬ್ಬರು ಮಹಿಳೆ ಇದ್ದರು. ಅವರನ್ನು ನೋಡುವುದಕ್ಕೆ ವಿಪರೀತ ಜನ ಬರುತ್ತಿದ್ದರು. ಜನಕ್ಕಿಂತ ಹೆಚ್ಚಾಗಿ ಅವರು ಬರುವಾಗ ಮಾಡುತ್ತಿದ್ದ ಗದ್ದಲ, ಹಾಗೆಯೇ ಅವರೊಂದಿಗೆ ಬಂದ ಮಕ್ಕಳು ಮಾಡುತ್ತಿದ್ದ ಗಲಾಟೆ ಕಿರಿಕಿರಿಯಾಗುತ್ತಿತ್ತು. ಇದೇ ರೀತಿ ೧೧೦ರ ಕೊಠಡಿಯ ಕಿಟಕಿಯ ಹೊರಗೆ ಪೋರ್ಟಿಕೋದ ಹಾಗೆ ಒಂದಷ್ಟು ಖಾಲಿ ಜಾಗವಿದೆ. ಸಂಜೆಯ ಹೊತ್ತು ರೋಗಿಗಳಿಗೆ ಖುರ್ಚಿಹಾಕಿ ಕುಳಿತುಕೊಳ್ಳಲು ಹೇಳಿ ಮಾಡಿಸಿದ ಜಾಗ. ಅಲ್ಲಿ ಯಾರೂ ಕುಳಿತುಕೊಳ್ಳುತ್ತಿರಲಿಲ್ಲ ಎಂಬುದು ಬೇರೆ ಮಾತು. ಆದರೆ ೧೦೯ರ ಕೊಠಡಿಂದ ಅಲ್ಲಿಗೆ ಬರಲು ಬಾಗಿಲಿತ್ತು. ಪಕ್ಕದ ಕೊಠಡಿಗೆ ಬಂದವರು ಅಲ್ಲಿ ನಿಂತು ದೊಡ್ಡದಾಗಿ ಮೊಬೈಲ್‌ನಲ್ಲಿ ಮಾತನಾಡುವ ಕ್ರಮವಿತ್ತು. ಇದು ರಾತ್ರಿಯೂ ತುಂಬಾ ಹೊತ್ತಿನವರೆಗೆ ನಡೆಯುತ್ತಿತ್ತು. ಹೀಗಾಗಿ ನನಗೆ ಬೇಕೆನಿಸಿದಾಗ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಯೋಚನೆಯ ಲಹರಿ ತುಂಡಾಗುತ್ತಿತ್ತು.

    ಹೀಗಾಗಿ ಆಸ್ಪತ್ರೆಗೆ ರೋಗಿಗಳನ್ನು ನೋಡಲು ಬರುವ ಸಂದರ್ಶಕರು ಇನ್ನೊಬ್ಬರಿಗೆ ತೊಂದರೆಯಾಗದಂತೆ ವರ್ತಿಸುವುದನ್ನು ಮೊದಲು ಕಲಿಯಬೇಕು. ಸಂದರ್ಶಕರು ತುಂಬಾ ಮಾಡನಾಡುತ್ತಿದ್ದರೆ ಆಸ್ಪತ್ರೆಯ ಸಿಬ್ಬಂದಿಗಳು ಅಂತವರಿಗೆ ಸೌಜನ್ಯಯುತವಾಗಿ ಹೇಳುವುದು ಒಳ್ಳೆಯದು. ಕೊಠಡಿಯ ಒಳಗೆ ಮಾತನಾಡಿದರೆ ಪಕ್ಕದವರಿಗೆ ತೊಂದರೆಯಾಗುವುದಿಲ್ಲ ಎಂಬ ಪ್ರಾಥ"ಕ ಜ್ಞಾನ ಇಲ್ಲದವರಿಗೆ ಏನು ಮಾಡುವುದು? ಕೆಲವೊಮ್ಮೆ ಸಿಬ್ಬಂದಿಗಳಿಗೂ ಧರ್ಮ ಸಂಕಟವಾಗುತ್ತಿತ್ತು. ಇದು ನನ್ನ ಗಮನಕ್ಕೂ ಬಂದಿದೆ.

    ಮುಂದಿನ ಭಾಗ ಆಸ್ಪತ್ರೆಯ ದಿನಚರಿ . . .
    Read more...

    Sunday, August 1, 2010

    1

    ಆಪರೇಷನ್ ಥಿಯೇಟರ್ ಎಂಬ ಜೀವಲೋಕ . . . .

  • Sunday, August 1, 2010
  • ಡಾ.ಶ್ರೀಧರ ಎಚ್.ಜಿ.
  • ನಾನು ನೋಡುತ್ತಿದ್ದೆ. ಮೊದಲ ಮಹಾದ್ವಾರವನ್ನು ದಾಟಿದಾಕ್ಷಣ ನಮ್ಮ ಟ್ರಾಲಿ ನಿಂತಿತು. ಒಂದೈದು ನಿಮಿಷದಲ್ಲಿ ಬಂದ ಪುರುಷನೊಬ್ಬ ಆಪರೇಶನ್ ಮಾಡುವ ಕಾಲನ್ನು ಚೊಕ್ಕಟವಾಗಿ ಸರಸರನೆ ಶೇವಿಂಗ್ ಮಾಡಿದ. ಈ ಪ್ರಕ್ರಿಯೆಗೆ ಅಲ್ಲಿದ್ದ ಇಬ್ಬರು ಸಿಸ್ಟರ್‌ಗಳು ಸಹಕರಿಸುತ್ತಿದ್ದರು. ಇಲ್ಲಿ ಫ್ಯಾನಿನ ವ್ಯವಸ್ಥೆ ಇರಲಿಲ್ಲ. ಸಹಜವಾದ ಗಾಳಿ ಬರಲು ಅವಕಾಶವಿರಲಿಲ್ಲ. ಈ ಹೊತ್ತಿಗೆ ನನಗೆ ಸೆಖೆಯಾಗಿ ಬೆವರತೊಡಗಿತ್ತು. ಅನಂತರ ಅದೇ ಕಾಲಿಗೆ ಸ್ನಾನ ಮಾಡಿಸಿದರು. ಅಲ್ಲಿದ್ದ ಮೂವರೂ ಮಲೆಯಾಳಂ ಮಾತೃಭಾಷೆಯವರು. ನನ್ನಲ್ಲಿ ಮಾತನಾಡುವಾಗ ಅವರದು ಮಲೆಯಾಳಿ ಕನ್ನಡ. ಒಬ್ಬರು ಸಿಸ್ಟರ್ ನನ್ನಲ್ಲಿ ಕೇಳಿದರು: (ಇವರ ಹೆಸರು ಜಿನ್ಸಿ ಎಂದು ಮತ್ತೊಮ್ಮೆ ಹೋದಾಗ ಗೊತ್ತಾಯಿತು)

    "ನೀವು ಬ್ರಾಹ್ಮಿನ್ ಅಲ್ಲೆ ?".

    ಆಪರೇಶನ್‌ಗೆಂದು ಬಂದವರು ಯಾರಾದರೆ ಇವರಿಗೇನು ಎಂದು ಯೋಚಿಸುತ್ತಾ 'ಹೌದು' ಎಂದೆ. ಮರುಕ್ಷಣವೆ ಅವರದು ಇನ್ನೊಂದು ಪ್ರಶ್ನೆ.
    'ನಿಮ್ಮ ಬಳ್ಳಿ ಎಲ್ಲಿ ?'
    ಆಪರೇಶನ್‌ಗೆಂದು ಬರುವಾಗ ನನಗೆ ಬಳ್ಳಿ ತರಬೇಕೆಂದು ಗೊತ್ತಿರಲಿಲ್ಲ. ನನ್ನ ಭಾಷೆಯಲ್ಲಿ ಬಳ್ಳಿ ಎಂದರೆ ಹಗ್ಗವೆಂದು ಅರ್ಥ. ಆದರೂ ನನಗೆ ಸಣ್ಣ ಗುಮಾನಿ ಬಂತು. ಇವರು ಹಗ್ಗದ ಬಗೆಗೆ ಕೇಳುತ್ತಿಲ್ಲವೆಂದು ಅನಿಸಿತು. ಆದರೆ ಇವರು ಯಾವುದರ ಬಗೆಗೆ ಕೇಳುತ್ತಿದ್ದಾರೆಂದು ನನಗೆ ಪಕ್ಕನೆ ಹೊಳೆಯಲಿಲ್ಲ. ಅರ್ಥವಾಗದವನಂತೆ ಅವರ ಮುಖವನ್ನೇ ನೋಡಿದೆ. ಆಕೆಯಿಂದ ಮತ್ತೊಮ್ಮೆ ಅದೇ ಪ್ರಶ್ನೆ.
    'ಅದೇ ನಿಮ್ಮ ಬಳ್ಳಿ ಎಲ್ಲಿ ?'
    ಆಗ ನನಗೆ ಜ್ಞಾನೋದಯವಾಗಿ ನಗುಬಂತು. ಅವರು ನನ್ನ ಜನಿವಾರದ ಬಗೆಗೆ ಅತ್ಯಂತ ಕಾಳಜಿಂದ ಪ್ರಶ್ನಿಸುತ್ತಿದ್ದರು. ರೂಮಿನಲ್ಲಿ ಚೀಲದಲ್ಲಿ ಇಟ್ಟು ಬಂದಿದ್ದೇನೆ ಎಂದೆ. 'ಹಾಗಾ' ಎಂದು ಸುಮ್ಮನಾದರು. ೧೯೯೬ ಡಿಸೆಂಬರ್ ೨೧ ರಂದು ನನ್ನ ಮದುವೆಯ ದಿನ ಪತ್ನಿಯ ಮನೆಯವರು ನನಗೆ ಒಂದು ಉಂಗುರ ಮತ್ತು ಚೈನ್ ಸರವನ್ನು ಕೊಟ್ಟಿದ್ದರು. ಅಂದಿನಿಂದ ಇಂದಿನವರೆಗೆ ಅದನ್ನು ನಾನು ಮೈಮೇಲಿನಿಂದ ತೆಗೆದಿಟ್ಟಿರಲಿಲ್ಲ. ಈಗ ಮೊದಲ ಸಲ ಆಪರೇಶನ್‌ಗೆ ಹೊರಡುವ ಮೊದಲು ಅದನ್ನು ತೆಗೆದು ಸವಿತಳಿಗೆ ಕೊಟ್ಟುಬಂದಿದ್ದೆ.

    ನಾನು ಆ ಹೊತ್ತಿಗೆ ವಿಪರೀತ ಬೆವರ ತೊಡಗಿದ್ದೆ. ತಲೆಯ ಬದಿಂದ ಧಾರಾಕಾರವಾಗಿ ಬೆವರಿನ ನೀರು ಹರಿಯ ತೊಡಗಿತ್ತು. ನನ್ನ ಮಾನಸಿಕ ಸ್ಥಿತಿ ನಿಜಕ್ಕೂ ವಿಚಿತ್ರವಾಗಿತ್ತು. ಆಗ ಅಲ್ಲಿದ್ದ ಇನ್ನೊಬ್ಬರು ಸಿಸ್ಟರ್ 'ಸಾರ್‌ಗೆ ವಿಪರೀತ ಸೆಖೆ. ಅಲ್ಲಿಂದ ಕರೆದುಕೊಂಡು ಹೋಗುವ' (ಇವರ ಹೆಸರು ವಂದನಾ) ಎಂದು ಟ್ರಾಲಿಯನ್ನು ದೂಡಿಕೊಂಡು ಸೀದಾ ಆಪರೇಶನ್ ಕೊಠಡಿಗೆ ಕರೆದೊಯ್ದರು. ಅಲ್ಲಿ ಎ.ಸಿ. ಹಾಕಿದ್ದರಿಂದ ತುಸು ತಂಪಾತು. ಡಾಕ್ಟರ್ ಬರಲು ಇನ್ನೊಂದು ಐದು ನಿಮಿಷವಿತ್ತು. ಅವರು ತಮ್ಮ ಆಪರೇಶನ್ ಡ್ರೆಸ್ ತೊಟ್ಟುಕೊಂಡರು. ಇಲ್ಲಿಂದ ಮುಂದೆ ಯಾರ ಪರಿಚಯವೂ ಸಿಗುವುದಿಲ್ಲ. ಎಲ್ಲರೂ ಮೈಮೇಲೆ ಬೇರೆ ಡ್ರೆಸ್ ಹಾಕಿಕೊಳ್ಳುವುದರಿಂದ ಇವರೆಲ್ಲರೂ ನನಗೆ ಗಗನ ಯಾತ್ರಿಗಳಂತೆ ಕಾಣತೊಡಗಿದರು.

    'ವೈದ್ಯೋ ನಾರಾಯಣೋ ಹರಿ:' ಒಬ್ಬೊಬ್ಬರೆ ಬಂದರು. ಡಾ. ಜೋಶಿ ಅನಸ್ತೇಶಿಯಾ ಕೊಡಲು ತಯಾರಿ ನಡೆಸ ತೊಡಗಿದರು. ಮೊದಲು ನನ್ನನ್ನು ಮುರುಟಿಕೊಂಡು ಮಲಗಲು ಹೇಳಿದರು. ಅನಂತರ ಸೊಂಟದ ಕೆಳಗೆ ಪರಿಣಾಮ ಬೀರುವಂತೆ ಬೆನ್ನಿನ ಹಿಂಬದಿಯಲ್ಲಿ ಅನಸ್ತೇಶಿಯಾ ನೀಡಿದರು. ಇದು ಅತ್ಯಂತ ಸಣ್ಣ ಸೂಜಿ, ೨೭ನೆಯ ನಂಬರಿನದು ಎಂದು ಅನಂತರ ಅವರು ತಿಳಿಸಿದರು. ಅನಸ್ತೇಶೀಯಾ ಪರಿಣಾಮ ಬೀರತೊಡಗಿತು. ಕಾಲುಗಳು ತಮ್ಮ ಸ್ಪರ್ಶಜ್ಞಾನವನ್ನು ಕಳೆದುಕೊಂಡವು. ನನ್ನನ್ನು ಮುಖ ಅಡಿಯಾಗಿ ಮಲಗಿಸಿದರು. ಹಿಂದೆ ತಿರುಗಿ ನೋಡಿದರೂ ಕಾಣಬಾರದೆಂದು ನನ್ನ ಬೆನ್ನಿನ ಮೇಲೆ ಅಡ್ಡವಾಗಿ ಒಂದು ಪರದೆಯನ್ನು ಹಾಕಿದರು. ಡಾ. ಜೋಶಿ ನನ್ನ ಮುಖದ ಸ"ಪ ಬಂದು ನಿಂತರು. ಡಾ. ಅರವಿಂದ ಮತ್ತು ಡಾ. ಪ್ರದೀಪರು ಚಕಚಕನೆ ತಮ್ಮ ಕೆಲಸವನ್ನು ಆರಂಭಿಸಿದರು.

    ಡಾ. ಜೋಶಿ ನನಗೆ ಸುಮಾರು ೨೦ ವರ್ಷದ ಪರಿಚಯ. ಆಗ ಕಾಲೇಜಿಗೆ ಸಮೀಪವಾಗಿ ನೆಹರು ನಗರದಲ್ಲಿ ಅವರ ಕ್ಲಿನಿಕ್ ಬಿಟ್ಟರೆ ಬೇರೆ ವೈದ್ಯರು ಇರಲಿಲ್ಲ. ಮಾತ್ರವಲ್ಲ, ಅವರ ಮನೆ ಕಾಲೇಜಿಗೆ ಸಮೀಪದಲ್ಲಿ ಇತ್ತು. ಹಾಗಾಗಿ ರಾತ್ರಿ ಯಾರಿಗಾದರೂ ಅನಾರೋಗ್ಯವಾದರೆ ನಾನು ಸೀದಾ ಜೋಶಿಯವರ ಮನೆಗೆ ಹೊತ್ತುಗೊತ್ತು ಇಲ್ಲದೆ ಹೋಗುತ್ತಿದ್ದೆ. ಕೆಲವೊಮ್ಮೆ ಅವರೇ ಹಾಸ್ಟೆಲಿಗೆ ಬಂದು ಪರಿಶೀಲನೆ ನಡೆಸಿ ಔಷಧಕ್ಕಾಗಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಆ ದಿನಗಳಲ್ಲಿ ಈಗಿನ ಹಾಗೆ ಸಾರಿಗೆ ಸೌಲಭ್ಯವೂ ಇರಲಿಲ್ಲ. ಹೀಗಾಗಿ ಅವರು ವೈದ್ಯರಾಗಿ ಮಾಡಿದ ಸಹಾಯ, ಉಪಕಾರ ತುಂಬಾ ದೊಡ್ಡದು. ಈಗಲೂ ನನಗೆ ಅವರಲ್ಲಿ ಅಪಾರವಾದ ವಿಶ್ವಾಸ. ಈಗಲೂ ಔಷಧಿ ತರಲು ಹೋದರೆ ನನ್ನ ಚಟುವಟಿಕೆ, ಬರವಣಿಗೆಯ ಬಗೆಗೆ ಅವರು ವಿಚಾರಿಸುವುದಿದೆ. ನಾವು ಒಂದಷ್ಟು ಲೋಕಾಭಿರಾಮವಾಗಿ ಮಾತನಾಡಲು ಸಮಯವನ್ನು ಉಳಿಸಿಕೊಂಡಿದ್ದೇವೆ.

    ಪರದೆಯ ಹಿಂದೆ ಆಪರೇಶನ್ ಆರಂಭವಾಗಿತ್ತು. ಜೋಶಿಯವರು ಮಾತಿಗೆ ತೊಡಗಿದರು. ಇತ್ತೀಚೆಗೆ ನಾನು ಬರೆದ ಪುಸ್ತಕ, ಬರೆಯುತ್ತಿರುವ ಲೇಖನ, ಸಾಹಿತ್ಯ ಮತ್ತು ಸಂಸ್ಕೃತಿ ಪರ ಚಟುವಟಿಕೆಗಳ ಬಗೆಗೆ ನಮ್ಮ ಮಾತುಕತೆ ಸಾಗಿತ್ತು. ಇದರೆಡೆಯಲ್ಲಿ ಅವರ ಪತ್ನಿ ತುಳುವಿನಲ್ಲಿ ಬರೆದ ನಾಟಕಕ್ಕೆ ಪ್ರಶಸ್ತಿ ಬಂದ ಸಂಗತಿಯನ್ನು ಹೇಳಿದರು. ನನಗಿದು ಹೊಸ ಸುದ್ದಿ. ನಾನು ಈ ಬಗ್ಗೆ ಅವರಲ್ಲಿ ಮತ್ತಷ್ಟು ವಿವರಗಳನ್ನು ಕೇಳಿ ಪಡೆದೆ. ಕುಂದಾಪುರದ ಕಡೆ ದೇವಸ್ಥಾನಗಳಲ್ಲಿ ಇರುವ ಮರದ ಗೊಂಬೆಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಿರುವುದಾಗಿ ತಿಳಿಸಿದರು. ಲೀಲಾಭಟ್ಟರ ಕೃತಿಗಳಲ್ಲಿ ಇದರ ಬಗೆಗೆ ಒಂದಷ್ಟು ಓದಿದ್ದು ನೆನಪಾಯಿತು. ಇಷ್ಟಾಗುವಾಗ ಹಿಂಬದಿಯಿಂದ ಡ್ರಿಲ್ ಮಾಡುವ ಸದ್ದು ಕೇಳಿಸಿತು. 'ಸ್ಕ್ರೂ ಹಾಕಲು ಡ್ರಿಲ್ ಮಾಡುತ್ತಿರುವರೇ' ಎಂದು ಕೇಳಿದೆ. ನನ್ನ ಯೋಚನೆ ಸರಿಯಾಗಿತ್ತು. ಅವರು 'ಹೌದು' ಎಂದರು. ನಮ್ಮ ಮಾತುಕತೆ ಮತ್ತೆ ಮುಂದುವರಿತು. 'ಈಗ ಹೊಲಿಯುತ್ತಿದ್ದಾರೆ. ಇನ್ನೊಂದು ಐದು ನಿಮಿಷದಲ್ಲಿ ಮುಗಿಯುತ್ತದೆ' ಎಂದರು. ಡಾ. ಜೋಶಿಯವರಿಂದ ನನಗೆ ಆಪರೇಶನ್ ಬಗೆಗೆ ಕಮೆಂಟರಿ ರೂಪದಲ್ಲಿ ಮಾಹಿತಿ ಸಿಗುತ್ತಿತ್ತು. ಅವರು ಹೇಳಿದಂತೆ ಎಲ್ಲವೂ ಮುಗಿತು.

    ಆಪರೇಶನ್ ಮಾಡಿದ ಡಾ. ಅರವಿಂದರು ತಮ್ಮ ಮುಖದ ವೇಶವನ್ನು ಕಳಚಿ ನಿಮಗೆ ಯಕ್ಷಗಾನದಲ್ಲಿ ಆಸಕ್ತಿ ಇದೆಯೇ ಎಂದು ಕೇಳಿದರು. ಆಸಕ್ತಿ ಇದೆ. ಒಂದೆರಡು ಲೇಖನ ಬರೆದಿರುವೆ ಎಂದೆ. "ಲೇಖನ ಬರೆಯುವುದಕ್ಕಲ್ಲ, ಇನ್ನು ಮುಂದೆ ವೇಷ ಹಾಕಿ ಕುಣಿಯುವುದಿದ್ದರೂ ತೊಂದರೆಲ್ಲ. ಆಪರೇಷನ್ ಸರಿಯಾಗಿದೆ" ಎಂದು ನಗುತ್ತಾ ಹೇಳಿದರು. ಇದು ನನ್ನಲ್ಲಿ ಉತ್ಸಾಹ ಮೂಡಿಸಿತು. ಹೊಸದಾಗಿ ಆತ್ಮವಿಶ್ವಾಸವನ್ನು ಚಿಗುರಿಸಿತು. 'ಇನ್ನು ಆರುವಾರ ವಿಶ್ರಾಂತಿ' ಎಂದು ತಾಕೀತು ಮಾಡಿದರು. 'ಸರಿ' ಎಂದು ತಲೆಯಾಡಿಸಿದೆ.

    ಮುಂದಿನ ಭಾಗ -ಆಪರೇಶನ್ ಆದ ಮೊದಲ ರಾತ್ರಿ
    Read more...
    0

    ಮಹಾವೀರ ಮೆಡಿಕಲ್ ಸೆಂಟರ್ ಮತ್ತು ಕೊಠಡಿ ಸಂಖ್ಯೆ ೧೧೦ . . . .

  • ಡಾ.ಶ್ರೀಧರ ಎಚ್.ಜಿ.
  • ಇಲ್ಲಿಂದ ಮುಂದೆ ಒಂದು ವಾರ ಮಹಾವೀರ ಮೆಡಿಕಲ್ ಸೆಂಟರ್‌ನ ೧೧೦ ಸಂಖ್ಯೆಯ ಕೊಠಡಿ ನನ್ನ ಮನೆ!

    ಬೆಡ್ ಮೇಲೆ ಕಣ್ಣು ಮುಚ್ಚಿ ಮಲಗಿದವನು ಆದ ಘಟನೆಗಳನ್ನು ಮತ್ತೊಮ್ಮೆ ಜೋಡಿಸ ತೊಡಗಿದೆ. ಆಗ ಒಂದು ಸಂಗತಿ ನೆನಪಾತು !

    ಸಾಮಾನ್ಯವಾಗಿ ಮುಂಜಾನೆ ವಾಕಿಂಗ್ ಹೋಗಿ ಬಂದವನು ಸ್ನಾನ ಮಾಡಿ ಚಿಕ್ಕದಾಗಿ ಪೂಜೆ ಮಾಡುವುದು ನನ್ನ ಪದ್ಧತಿ. ೨೬ರ ಮುಂಜಾನೆ ಎಂದಿನಂತೆ ಪೂಜೆಗೆ ಕುಳಿತಿದ್ದೆ. ನಾನು ಪೂಜೆ ಮಾಡುವಾಗ ದೀಪ ಹಚ್ಚುವುದು ನನ್ನ ಪತ್ನಿಯ ಕ್ರಮ. ಅಂದು ಆಕೆ ದೀಪ ಬೆಳಗುತ್ತಿದ್ದಂತೆ ನಂದಿಹೋತು! 'ಎಂದೂ ಹೀಗಾಗಿರಲಿಲ್ಲ ಇದೇನಪ್ಪಾ' ಎಂದು ಮತ್ತೆ ನಾನೇ ದೀಪ ಬೆಳಗಿಸಿಕೊಂಡು ಪೂಜೆ ಮಾಡಿದೆ. ಇದು ಅಂದು ನಡೆಯಲಿರುವ ಘಟನೆಗೆ ಅಪಶಕುನದ ಪೂರ್ವ ಸೂಚನೆಯಾಗಿತ್ತೇ ? ಅಥವಾ ಕಾಕತಾಳೀಯವಾಗಿರಬಹುದೇ ಎಂಬ ಅನುಮಾನ ಕಾಡತೊಡಗಿತು.

    ಯಾವಾಗಲೂ ಹೆಲ್ಮೆಟ್ ಧರಿಸದವನು ಅಂದು ಮಗನಲ್ಲಿ ಅದನ್ನು ಕೇಳಿ ಹಾಕಿಕೊಂಡು ಹೋಗಿದ್ದೆ. ಇದನ್ನು ಹಾಕಿಕೊಳ್ಳದಿದ್ದರೆ ಮುಖದ ಎಡ ಭಾಗದಲ್ಲಿ ತೀವ್ರ ಸ್ವರೂಪದ ಗಾಯವಾಗುತ್ತಿತ್ತು ಎಂಬಲ್ಲಿ ಸಂಶಯವಿಲ್ಲ. ನಾನು ಬಿದ್ದಾಗ ಹೆಲ್ಮೆಟ್‌ನ ಗಲ್ಲದ ಎಡಭಾಗ ರಸ್ತೆಗೆ ತಾಗಿತ್ತು. ಆ ಭಾಗದಲ್ಲಿ ಹೆಲ್ಮೆಟ್‌ನಲ್ಲಿ ಸಾಕಷ್ಟು ಆಳವಾದ ಗೆರೆಗಳು ಬಿದ್ದಿದ್ದವು. ಅಂದರೆ ಆಗುವ ಅಪಘಾತ ತಪ್ಪುವುದಿಲ್ಲ. ಆದರೆ ಆಗುವ ಅನಾಹುತವನ್ನು ಕಡಿಮೆಗೊಳಿಸಲು, ಹೆಲ್ಮೆಟ್ ಧರಿಸಲು ಪ್ರೇರಣೆ ದೊರಕಿತು ಎಂಬ ಭಾವನೆ ನನ್ನದು.

    ನಾನು ಬಿದ್ದ ಸ್ಥಳಕ್ಕೆ ನಾಲ್ಕು ಮಾರು ದೂರದಲ್ಲಿ ಒಂದು ಮರದ ತುಂಬ ಹಳದಿಯ ಹೂಗಳು ಅರಳಿದ್ದವು. ಆ ದಿನ ಅದು ತುಂಬಾ ಸುಂದರವಾಗಿ ಕಾಣುತ್ತಿತ್ತು. ಮರವೇ ಹೂವಾಗಿ, ಅದು ಹೂಮರವಾಗಿ ನಿಂತಿತ್ತು. ಬಿದ್ದ ಅವಸರದಲ್ಲಿ ಅದನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದ್ದು ಈಗ ನೆನಪಿಗೆ ಬಂತು.

    'ಸರ್' ಎಂದು ಕರೆದಂತಾತು. ಕಣ್ಣು ತೆರೆದೆ. ಎದುರಿಗೆ ಇಬ್ಬರು ಸಿಸ್ಟರ್‌ಗಳು ನಿಂತಿದ್ದರು. 'ರಕ್ತ ಪರೀಕ್ಷೆಗೆ ರಕ್ತವನ್ನು ತೆಗೆಯಲು ಬಂದಿದ್ದೇವೆ' ಎಂದರು. ಇನ್ನೊಬ್ಬರು ಆಗಾಗ ಚುಚ್ಚುವುದನ್ನು ತಪ್ಪಿಸಲು ಎಡ ಕೈಗೆ ಕ್ಯಾನಲ್ ಅಳವಡಿಸಿದರು. ಅದರ ಮೂಲಕವೇ ರಕ್ತವನ್ನು ತೆಗೆದರು. ಇಲ್ಲಿಂದ ನನ್ನ ವೈದ್ಯಕೀಯ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ ಆರಂಭಗೊಂಡಿತು. ಇದಾಗಿ ಹತ್ತು ನಿಮಿಷದಲ್ಲಿ ಇಸಿಜಿ ಪರೀಕ್ಷೆಗೆಂದು ಮತ್ತಿಬ್ಬರು ಬಂದರು. ಅವರು ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಆರೇಳು ಕಡೆ ಬಿಲ್ಲೆಯಾಕಾರದ ವಸ್ತುವನ್ನು ಅಂಟಿಸಿ ಯಂತ್ರದಲ್ಲಿ ರೀಡಿಂಗ್ ನೋಡಲು ಹೋದರೆ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಿಂದಿರುಗಿ ಹೋಗಿ ಅದನ್ನೇ ರಿಪೇರಿ ಮಾಡಿಕೊಂಡು ಬಂದರೋ ಅಥವಾ ಬೇರೆ ಯಂತ್ರವನ್ನು ತಂದರೋ ಗೊತ್ತಿಲ್ಲ. ರೀಡಿಂಗ್ ತೆಗೆದುಕೊಂಡು ಹೋದರು.

    ಇಷ್ಟಾಗುವಾಗ ರಾತ್ರಿ ಆಸ್ಪತ್ರೆಯಲ್ಲಿ ನನ್ನೊಂದಿಗೆ ಯಾರು ಇರುವುದು ಎಂಬ ಸಮಸ್ಯೆ ಎದುರಾತು. ಇದಕ್ಕೆ ತಕ್ಷಣದ ಪರಿಹಾರವೆಂದು ಹಾಸ್ಟೆಲ್ ಮೆಸ್‌ನ ವಿನಯ ಭಟ್ಟರಿಗೆ ಸಂಪರ್ಕಿಸಿದೆ. ವಿನಯ ಭಟ್ಟರು ಆ ರಾತ್ರಿ ನನ್ನೊಂದಿಗಿದ್ದರು. ನನಗೂ ವಿನಯರಿಗೂ ದೀರ್ಘ ಕಾಲದ ಸ್ನೇಹ, ಸಂಬಂಧ. ನಾನು ಹಾಸ್ಟೆಲ್‌ನ ವಾರ್ಡನ್ ಆಗಿರುವಾಗಲೇ ಅವರು ಮೆಸ್‌ಗೆ ಬಂದು ಸೇರಿದ್ದರು. ಅಲ್ಲಿಂದ ಆರಂಭವಾದ ನಮ್ಮ ವಿಶ್ವಾಸ ಈಗಲೂ ಮುಂದುವರಿದಿದೆ. ರಾತ್ರಿ ಸುಮಾರು ೧೦.೩೦ರ ಹೊತ್ತಿಗೆ ಪರಿಶೀಲನೆಗೆಂದು ಬಂದ ಡಾ. ಪುತ್ತೂರಾಯರು 'ನಾಳೆ ಸಂಜೆ ೪.೩೦ಕ್ಕೆ ಶಸ್ತ್ರಚಿಕಿತ್ಸೆಗೆ ಸಮಯ ನಿಗದಿಯಾಗಿದೆ' ಎಂದು ತಿಳಿಸಿದರು. ಹಾಗೆಯೇ ಮುಂಜಾನೆ ೧೦ ಗಂಟೆಯ ನಂತರ ಯಾವುದೇ ರೀತಿಯ ಆಹಾರವನ್ನೂ ಸ್ವೀಕರಿಸಬಾರದೆಂಬ ಸೂಚನೆ ನೀಡಿದರು. ನನಗೆ ಆಗಾಗ ನೀರು ಕುಡಿಯುವ ಅಭ್ಯಾಸ. ಹೇಗಪ್ಪಾ ಇದರಿಂದ ಪಾರಾಗುವುದು ಎಂಬ ತಲೆಬಿಸಿ ಆರಂಭವಾತು. ದೊರಕಿದ ಮಾಹಿತಿಯನ್ನು ಕೂಡಲೇ ಮನೆಗೆ ರವಾನಿಸಿದೆ.

    ಇಡೀ ರಾತ್ರಿ ಸರಿಯಾಗಿ ನಿದ್ರೆ ಬರಲಿಲ್ಲ. ಹೊಸಜಾಗ. ಆಗಾಗ ಬಂದು ಸುರಿಯುವ ಮಳೆಯ ಶಬ್ದ. ಅದರೊಂದಿಗೆ ಕಾಲಿನಲ್ಲಿ ಕಿರಿಕಿರಿ. ಕಣ್ಣು ಮುಚ್ಚಿದರೆ ಏನೇನೋ ಚಿತ್ರ ವಿಚಿತ್ರ ಕನಸುಗಳು ! ನನಗೆ ಆಪರೇಶನ್ ಆದ ಹಾಗೆ, ಕಾಲು ಸರಿಯಾಗಿ ನಡೆಯಲು ತೊಡಗಿದಂತೆ, ಅದ್ಯಾವುದೋ ಕ್ರೀಡಾಕೂಟದಲ್ಲಿ ಭಾಗವಹಿಸಿ ಓಡುವ ಸ್ಪರ್ಧೆಯಲ್ಲಿ ಮೊದಲು ಬಂದಂತೆ, ಮತ್ತೊಮ್ಮೆ ನಡೆಯಲು ಸಾಧ್ಯವಾಗದ ಹಾಗೆ, ವಿದ್ಯಾರ್ಥಿಗಳಿಗೆ ಒಂದೇ ಕಾಲಿನಲ್ಲಿ ನಿಂತು ಪಾಠ ಮಾಡುತ್ತಿರುವಂತೆ . . . . ಹೀಗೆ ವಿಚಿತ್ರ ಕಲ್ಪನೆಗಳು ಮನಸ್ಸಿನಾಳದಲ್ಲಿ ನಿರಂತರವಾಗಿ ಹಾದುಹೋಗುತ್ತಿದ್ದವು.

    ಬೆಳಗ್ಗೆ ೬.೩೦ಕ್ಕೆ ಸರಿಯಾಗಿ ಸಿಸ್ಟರ್ ಇಬ್ಬರು ಬಂದು ರಕ್ತವನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋದರು. ಹಾಗೆಯೇ ಒಂದು ಇಂಜಕ್ಷನ್ ಕೊಟ್ಟರು. ಆಹಾರಕ್ಕೆ ಮೊದಲು ಮತ್ತು ಕೊನೆಗೆ ಎಂದು ಎರಡು ಮಾತ್ರೆಯನ್ನು ಇಟ್ಟು ಹೋದರು. ೧೦ ಗಂಟೆಯ ಹೊತ್ತಿಗೆ ಒಂದಷ್ಟು ಗಂಜಿ ಊಟಮಾಡಿ ನೀರುಕುಡಿದೆ. ಇಂದಿಗೆ ಇದೇ ನನ್ನ ಕೊನೆಯ ಗಂಜಿಊಟ ! ಮತ್ತಿನದೆಲ್ಲ ಶಸ್ತ್ರ ಚಿಕಿತ್ಸೆ ಆದ ಮೇಲೆ ಎಂದು ನೆನಪಾಗಿ ಮನಸ್ಸಿಗೆ ತುಸು ಕಸಿವಿಸಿ. ವಿಚಿತ್ರವಾದ ತಲ್ಲಣ. ತಿರುಗುವ ಫ್ಯಾನನ್ನು ನೋಡುತ್ತಾ ಸುಮ್ಮೆನೆ ಮಲಗಿದೆ. ಸಮಯ ಹೋದಂತೆ ನನ್ನೊಳಗೆ ನಿಧಾನವಾಗಿ ಆತಂಕ ಮಡುಗಟ್ಟತೊಡಗಿತು.

    ರಾತ್ರಿಯ ಬಸ್ಸಿನಲ್ಲಿ ಹೊರಟು ಊರಿನಿಂದ ಪತ್ನಿ ಸವಿತಳ ತಮ್ಮ ಸತೀಶ ಬಂದಿದ್ದ. ಇಷ್ಟಲ್ಲದೆ ಆಪರೇಶನ್ ಆಗುವಾಗ ಬರುವುದಾಗಿ ವಿ.ಜಿ. ಭಟ್ಟರು, ಡಾ.ಮನಮೋಹನ ಮೊದಲಾದವರು ತಿಳಿಸಿದ್ದರು. ಇದು ಒಂದು ರೀತಿಯಲ್ಲಿ ನನಗೆ ಮಾನಸಿಕ ಸಮಾಧಾನವನ್ನು ನೀಡಿತ್ತು.

    ೩.೩೦ರ ಹೊತ್ತಿಗೆ ಡಾ. ಜೋಶಿ ಬಂದು ನನ್ನನ್ನು ಪೂರ್ವ ಭಾವಿಯಾಗಿ ಪರಿಶೀಲಿಸಿದರು. ನನಗೆ ಆ ಹೊತ್ತಿಗಾಗಲೇ ಹಸಿವಾಗತೊಡಗಿತ್ತು. ಅದಕ್ಕೆ ಸರಿಯಾಗಿ ಅವರು 'ಹಸಿವಾಗುತ್ತದೆಯೇ?' ಎಂದು ಕೇಳಿದರು. ಹಾಗೆಯೇ ಈ ಹಿಂದೆ ನನಗೆ ಆಪರೇಶನ್ ಆಗಿತ್ತೆ? ಹಿಂದೆ ಯಾವಾಗಲಾದರೂ ಅನಸ್ತೇಶಿಯಾ ತೆಗೆದುಕೊಂಡ ನಿದರ್ಶನವಿದೆಯೇ? ಎಂದು ಮುಂತಾಗಿ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ನಾನು ಅನಸ್ತೇಶಿಯಾ ಹೇಗೆ ಕೊಡುವುದು ಎಂದು ತುಸು ಆತಂಕದಿಂದ ಕೇಳಿದೆ. ನೀವೇನೂ ಹೆದರುವ ಅಗತ್ಯವಿಲ್ಲ ಎಂದು ಭರವಸೆಯ ಮಾತುಗಳನ್ನು ಹೇಳಿದ್ದು ನನ್ನ ಮನಸ್ಸಿಗೆ ತುಸು ಹಿತವಾಯಿತು. ನನಗೆ ಗ್ಲೂಕೋಸ್ ನೀಡಲು ಸೂಚಿಸಿ ಅವರು ತೆರಳಿದರು.

    ಸಂಜೆ ೪ ಗಂಟೆಗೆ ಆಪರೇಶನ್ ಮಾಡುವಾಗ ಹಾಕಿಕೊಳ್ಳುವ ಬಟ್ಟೆಯನ್ನು ತಂದು ಕೊಟ್ಟರು. ಅದಾಗಿ ಹತ್ತು ನಿಮಿಷಕ್ಕೆ ನನ್ನನ್ನು ಟ್ರಾಲಿಯಲ್ಲಿ ಕರೆದುಕೊಂಡು ಹೋದರು.

    ಮುಂದಿನ ಭಾಗ - ಆಪರೇಶನ್ ಥಿಯೇಟರ್ ಎಂಬ ಜೀವಲೋಕ
    Read more...

    Subscribe