Saturday, July 23, 2011

0

ಮೂರು . . . . . . ನಾಲ್ಕು . . . . .

  • Saturday, July 23, 2011
  • ಡಾ.ಶ್ರೀಧರ ಎಚ್.ಜಿ.

  • ದೊಡ್ಡಮ್ಮ ದಂಪತಿಗಳ ಭಾವ ಚಿತ್ರವಿದು
    ದೊಡ್ಡಮ್ಮನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಯಿತು ಕಳೆದಂತೆ ಅಲ್ಲಿಯ ಕೆಲಸಗಳು ಮಾಮೂಲಿಯಾದವು. ಮುಂಜಾನೆ ಸ್ನಾನಮಾಡಿ ದೇವರ ಪೂಜೆ ಮಾಡಿ ಕೆಲವೊಮ್ಮೆ ಶಾಲೆಗೆ ಹೋಗಬೇಕಿತ್ತು. ಬೇಸಾಯದ ದಿನಗಳಲ್ಲಿ ಗದ್ದೆಗೆ ಹೋಗಬೇಕಿತ್ತು. ಗದ್ದೆ ನಾಟಿಯ ಸಂದರ್ಭದಲ್ಲಿ ರಜೆಯಿದ್ದರೆ ಕೆಲಸದವರ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೆ. ಕಿತ್ತ ನಾಟಿಯ ಸಸಿಗಳನ್ನು ನೆಡುವ ಇಲ್ಲವೇ ಅದರ ಕಟ್ಟುಗಳನ್ನು ಅಲ್ಲಲ್ಲಿ ಇರಿಸುವ ಕೆಲಸಗಳನ್ನು ಮಾಡುವುದು ನಮಗೆ ಒಂದು ಆಟವಾಗಿತ್ತು. ಮಳೆಯಲ್ಲಿ ನೆನೆಯುವುದು ಒಂದು ಸಂಗತಿಯಾಗಿರಲಿಲ್ಲ. ತೋಟಕ್ಕೆ ಕೊಳೆ ಔಷಧಿ ಹೊಡೆಯಲು ಬಂದರೆ ಅವರಿಗೆ ನೆರವು ನೀಡುವುದು ನನಗೆ ಅತ್ಯಂತ ಸಂತೋಷದ ಸಂಗತಿಯಾಗಿತ್ತು.

    ಶಾಲೆಗೆ ಹೋದರೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದೆವು. ಆಗ ನಮ್ಮದು ಬಸ್ಸಿನ ವೇಗ. ನಾವೆಲ್ಲ ಒಂದೊಂದು ಬಸ್ಸಿನ ಹೆಸರನ್ನಿಟ್ಟುಕೊಂಡು ಓಡುತ್ತಿದ್ದೆವು. ಶಾಲೆಂದ ಮನೆಗೆ ಬರಲು ಒಟ್ಟು ಮೂರು ದಾರಿಗಳಿದ್ದವು. ಶಾಲೆಂದ ಹೊರಟು ಟಾರು ರಸ್ತೆಯಲ್ಲಿ ಒಂದು ಫರ್ಲಾಂಗಿನಷ್ಟು ಬಂದು ಬಲಕ್ಕೆ ತಿರುಗಿ ಮಣ್ಣಿನ ರಸ್ತೆಯಲ್ಲಿ ಇಳಿದರೆ ವಾಮನರಾಯರ ಮನೆ ಸಿಗುತ್ತಿತ್ತು. ಇವರ ಮನೆಯ ಬುಡದಲ್ಲಿ ಮತ್ತೆ ಎಡಕ್ಕೆ ತಿರುಗಿ ಸ್ವಲ್ಪ ದೂರ ಬಂದರೆ ಒಂದೆರಡು ಹಸಲರ ಮನೆಗಳು ಸಿಗುತ್ತಿದ್ದವು. ಅವರ ಮನೆಯ ಮುಂದೆ ಯಾವಾಗಲೂ ಕೋಳಿಗಳು "ಸರ್ಜಿಸಿದ ಮಲಮೂತ್ರಗಳು ಇರುತ್ತಿದ್ದವು. ನಮ್ಮ ಕಾಲಿಗೆ ಚಪ್ಪಲಿ ಇರಲಿಲ್ಲ. ಹಾಗಾಗಿ ನಾವು ಈ ದಾರಿಯಲ್ಲಿ ಬಂದರೆ ಕೋಳಿಯ ಮಲವನ್ನು ಮೆಟ್ಟಿಕೊಂಡೇ ಮನೆಗೆ ಬರಬೇಕಿತ್ತು. ಆದ್ದರಿಂದ ನಾವು ಈ ದಾರಿಯನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ.

    ಇನ್ನು ಎರಡನೆಯದು ಸ್ವಲ್ಪ ಕಾಡಿನ ದಾರಿ. ಟಾರು ರಸ್ತೆಯಲ್ಲಿ ಇನ್ನಷ್ಟು ಮುಂದೆ ಬಂದು ಬಲಕ್ಕೆ ತಿರುಗಿದರೆ ಕಾಡಿನ ಮೂಲಕ ಸಾಗುವ ಕಾಲುದಾರಿ ಸಿಗುತ್ತಿತ್ತು. ಇದು ಅಂಕುಡೊಂಕಾದ ಕಾಲುದಾರಿ. ಅಕ್ಕಪಕ್ಕದಲ್ಲಿ ಸಾಕಷ್ಟು ಮುಳ್ಳಿನ ಗಿಡಗಳು ಇರುತ್ತಿದ್ದವು. ಮರದ ಬೇರುಗಳು ಕಾಲಿಗೆ ಅಡ್ಡ ಬರುತ್ತಿದ್ದವು. ಇರುವುದರಲ್ಲಿ ಇದು ಹತ್ತಿರದ ದಾರಿಯಾಗಿತ್ತು. ಆದರೆ ಈ ದಾರಿಯಲ್ಲಿ ಒಬ್ಬರೇ ಬರಲು ನಮಗೆ ಹೆದರಿಕೆಯಾಗುತ್ತಿತ್ತು. ಕಾಡಿನ ದಾರಿಯಲ್ಲಿ ಕೆಲವೊಮ್ಮೆ ನರಿಯೋ ಹಂದಿಯೋ ಸಿಗುವುದಿತ್ತು.
    ಮೂರನೆಯದು ಟಾರು ರಸ್ತೆಯಲ್ಲಿ ನೇರವಾಗಿ ಒಂದು ಕಿಲೋಮಿಟರಿನಷ್ಟು ಬಂದು ಗಡಿಕಟ್ಟೆಗಿಂತ ಸ್ವಲ್ಪ ಮೊದಲು ಸಿಗುವ ಅರಳಿ ಮರದ ಎದುರು ಬಲಕ್ಕೆ ತಿರುಗಿದರೆ ನೇರವಾಗಿ ದೊಡ್ಡಮ್ಮನ ಮನೆಗೆ ಬಂದು ತಲುಪುತ್ತಿದ್ದೆವು. ಆದರೆ ಇದು ಅತ್ಯಂತ ಬಳಸು ದಾರಿಯಾಗಿತ್ತು. ಸಂಜೆ ಶಾಲೆ ಬಿಟ್ಟ ನಂತರ ಗೆಳೆಯರೊಂದಿಗೆ ಮಾತನಾಡಿಕೊಳ್ಳುತ್ತ ಈ ದಾರಿಯಲ್ಲಿ ಬರುತ್ತಿದ್ದವು.

    ದೊಡ್ಡಮ್ಮನ ಮಾರ್ಗದರ್ಶನದಲ್ಲಿ ನಾನು ಅಡಿಗೆಯ ಕೆಲಸವನ್ನು ಅಚ್ಚುಕಟ್ಟಾಗಿ ಕಲಿತೆ. ತಿಂಗಳಿಗೆ ನಾಲ್ಕುದಿನ ನನ್ನ ಪಾಲಿಗೆ ಅಡಿಗೆಯ ಕೆಲಸ ಬರುತ್ತಿತ್ತು. ಇದು ನನಗೆ ಮುಂದಿನ ಬದುಕಿನಲ್ಲಿ ಸಾಕಷ್ಟು ಪ್ರಯೋಜನಕ್ಕೆ ಬಂತು. ಅನ್ನ, ಸಾರು, ಹುಳಿ(ಸಾಂಬಾರು), ಪಲ್ಯ, ತಂಬಳಿ, ಪಾಯಸ, ಚಕ್ಕುಲಿ, ಕಾಕಡುಬು, ಪಂಚಕಜ್ಜಾಯ, ಹೀಗೆ ಹಲವು ತಿಂಡಿ ತಿನಿಸುಗಳನ್ನು ಮಾಡುವ ವಿಧಾನವನ್ನು ಕಲಿತುಕೊಂಡೆ. ದೊಡ್ಡಮ್ಮನ ಮನೆಯಲ್ಲಿ ಚೌತಿಯ ಹಬ್ಬಕ್ಕೆ ಗಣಪತಿಯನ್ನು ತರುತ್ತಿದ್ದರು. ಆ ಸಂದರ್ಭದಲ್ಲಿ ದೊಡ್ಡಮ್ಮನಿಗೆ ತಿಂಗಳ ರಜೆ ಏನಾದರೂ ಬಂದರೆ ಅಡಿಗೆ ಮನೆಯ ಕೆಲಸ ನನ್ನ ತಲೆಯ ಮೇಲೆ ಬೀಳುತ್ತಿತ್ತು.

    ದೊಡ್ಡಮ್ಮನ ಹಿರಿಯ ಮಗ ಮಹಾಬಲೇಶ್ವರ (ಈತನನ್ನು ಮಾಬಲಗಿರಿ ಎಂದೇ ಎಲ್ಲರೂ ಕರೆಯುವುದು) ನಮಗಿಂತ ಸಾಕಷ್ಟು ದೊಡ್ಡವನಾಗಿದ್ದ. ಹೀಗಾಗಿ ಆತನೊಂದಿಗೆ ನನಗೆ ಅಷ್ಟಾಗಿ ಸಲಿಗೆ ಇರಲಿಲ್ಲ. ಎರಡನೆಯವನು ತಿಮ್ಮಣ್ಣ ಭಟ್ಟ. ಈತ ನನಗಿಂತ ತುಸು ದೊಡ್ಡವನಾಗಿದ್ದ. ಓದುವಾಗಲೂ ನನಗಿಂತ ಒಂದೆರಡು ತರಗತಿ ಮೇಲಿನದರಲ್ಲಿ ಕಲಿಯುತ್ತಿದ್ದ. ಆದರೆ ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಲೆಕ್ಕಮಾಡಿ ಮಾತನಾಡುವ ಜಾಯಮಾನ. ಮೂರನೆಯವನು ಶ್ರೀಕಾಂತ. ನನಗಿಂತ ವಯಸ್ಸಿನಲ್ಲಿ ತುಸು ಕಿರಿಯವನು. ನಮ್ಮಿಬ್ಬರ ಮನೋಧರ್ಮ ಬಹುತೇಕ ಸರಿಹೊಂದುತ್ತಿತ್ತು. ಹೀಗಾಗಿ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು. ಒಟ್ಟಿಗೆ ಶಾಲೆಗೆ ಹೋಗಿ ಬರುತ್ತಿದ್ದೆವು. ದೊಡ್ಡಮ್ಮನಿಗೆ ಮೂವರು ಗಂಡುಮಕ್ಕಳ ನಂತರ ಹುಟ್ಟಿದವಳು ಮಮತ. ಈಕೆಯನ್ನು ಅತ್ಯಂತ ಮುದ್ದಿನಿಂದ ಬೆಳೆಸಿದ್ದರು. ದೊಡ್ಡಪ್ಪನಿಗಂತೂ ಮಗಳೆಂದರೆ ಪಂಚಪ್ರಾಣ. ಆಕೆಯ ಕೈಯ್ಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ.

    ಕಾಲ ನಿಲ್ಲುವುದಿಲ್ಲ. ನಾನು ಮೂರನೆಯ ತರಗತಿಯನ್ನು ದಾಟಿ ನಾಲ್ಕನೆಯ ತರಗತಿಗೆ ತಲುಪಿದ್ದೆ. ದೊಡ್ಡಮ್ಮನ ಮನಗೆ ನಾನು ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದೆ. ಆದರೆ ದೊಡ್ಡಮ್ಮನ ಮನೆಗೆ ನಾನು ಹೊರಗಿನ ವ್ಯಕ್ತಿಯಾಗಿದ್ದೆ. ಹೀಗಾಗಿ ಮಾಬಲಗಿರಿ ಮತ್ತು ತಿಮ್ಮಣ್ಣರ ಸಿಟ್ಟು ನನ್ನ ಮೇಲೆ ತಿರುಗುತ್ತಿತ್ತು. ಆಗೆಲ್ಲ ದೊಡ್ಡಮ್ಮ ತುಂಬಾ ಬೇಜಾರು ಮಾಡಿಕೊಳ್ಳುತ್ತಿದ್ದರು. ಈ ಪ್ರವೃತ್ತಿ ತುಸು ಅತಿರೇಕಕ್ಕೆ ಹೋಗುವ ಹೊತ್ತಿಗೆ ನಾನು ನಾಲ್ಕನೆಯ ತರಗತಿಯಲ್ಲಿ ಉತ್ತೀರ್ಣನಾಗಿದ್ದೆ. ಮುಂದಿನ ಓದಿಗೆ ಊರಿಗೆ ಹಿಂದಿರುರುಗುವುದೆಂದು ತೀರ್ಮಾನವಾಗಿತ್ತು. ಅಷ್ಟರಲ್ಲಿ ಅನಿರೀಕ್ಷಿತವಾದ ತಿರುವು ಸಂಭವಿಸಿತು.

    ದೊಡ್ಡಪ್ಪನ ಮನೆಯ ಪಕ್ಕದಲ್ಲಿ ಅವರ ತಮ್ಮ ಚಂದ್ರಶೇಖರ ಭಟ್ಟರು ಹೊಸದಾಗಿ ಮನೆ ಕಟ್ಟಿ ವಾಸ ಮಾಡಲು ತೊಡಗಿದ್ದರು. ಸ್ವಂತ ತಮ್ಮನಾದರೂ ಇಬ್ಬರಲ್ಲಿ ಸಂಬಂಧ ಅಷ್ಟಕ್ಕಷ್ಟೆ. ಹಾಗಂತ ವೈರತ್ವವೇನೂ ಇರಲಿಲ್ಲ. ಮಾತನಾಡುತ್ತಿದ್ದರು. ವಿಶೇಷ ಕಾರ್ಯಕ್ರಮವಾದರೆ ಹೋಗಿಬರುವ ಕ್ರಮತ್ತು. ಇಬ್ಬರ ಮನೆಗೆ ಇರುವುದು ಒಂದು ತಂತಿ ಬೇಲಿಯ ಗಡಿ ಮಾತ್ರ. ದೊಡ್ಡಪ್ಪನಿಗೆ ತನ್ನ ತಮ್ಮನ ಬಗೆಗೆ ಯಾವಾಗಲೂ ಒಂದು ಬಗೆಯ ವಿಚಿತ್ರ ಸಂಶಯ. ಆ ಸಂಶಯಕ್ಕೆ ನಿರ್ದಿಷ್ಟ ಕಾರಣವಿರಲಿಲ್ಲ. ನಾನು ಯಾವಾಗಲಾದರೊಮ್ಮೆ ಅವರ ಮನೆಗೆ ಹೋಗಿಬರುತ್ತಿದ್ದೆ. ಸಣ್ಣಪುಟ್ಟ ಕೆಲಸಗಳಲ್ಲಿ ಅವರಿಗೆ ನೆರವಾಗುತ್ತಿದ್ದೆ. ದೊಡ್ಡಪ್ಪನ ಮಕ್ಕಳು ರೇಗಿದಾಗ ತಂತಿ ಬೇಲಿಯ ಸಮೀಪ ನಿಂತು ಅಳುತ್ತಿದ್ದೆ. ಇದು ಚಂದ್ರಭಟ್ಟರಿಗೆ ಗೊತ್ತಾಗಿತ್ತು. ಈ ಹೊತ್ತಿಗೆ ಅವರಿಗೆ ಮದುವೆಯಾಗಿ ಸುಮಾರು ಎರಡು ವರ್ಷದ ಮಗಳಿದ್ದಳು. ಮನೆಯಲ್ಲಿ ಒಂದು ಜೊತೆ ಎತ್ತು, ನಾಲ್ಕಾರು ಎಮ್ಮೆ, ಒಂದೆರಡು ಕರೆಯುವ ಹಸುಗಳಿದ್ದವು. ನಾನು ಮನೆಗೆ ಹಿಂದಿರುಗುವ ವಿಷಯವನ್ನು ಅವರ ಮನೆಯಲ್ಲಿ ಒಮ್ಮೆ ಹೇಳಿದ್ದೆ. ಇದಾಗಿ ಸ್ವಲ್ಪ ದಿನಕ್ಕೆ ಅವರು "ಮುಂದಿನ ವರ್ಷ ನೀನು ನಮ್ಮ ಮನೆಂದ ಶಾಲೆಗೆ ಹೋಗು" ಎಂದು ಹೇಳಿದರು. ಅವರಲ್ಲಿ ನನಗೆ ಸಾಕಷ್ಟು ಸಲಿಗೆಯೂ ಈ ಹೊತ್ತಿಗೆ ಬೆಳೆದಿತ್ತು. ದೊಡ್ಡಮ್ಮನಿಗೂ ಇದು ಸರಿ ಎಂದು ಕಂಡಿರಬೇಕು. ಅವರೂ ಇದನ್ನು ಅನುಮೋದಿಸಿದರು. ನಾಲ್ಕನೆಯ ತರಗತಿ ಮುಗಿಸಿ ಹೊರಡುವಾಗ ನನ್ನ ಬಟ್ಟೆಗಳು ತಂತಿ ಬೇಲಿಯನ್ನು ದಾಟಿ ಪಕ್ಕದ ಮನೆ ಸೇರಿದವು. ರಜೆ ಮುಗಿಸಿ ಹಿಂದಿರುಗಿದ ನಾನು ಚಂದ್ರಭಟ್ಟರ ಮನೆಯನ್ನು ಸೇರಿದೆ. ಐದನೆಯ ತರಗತಿಗೆ ಅವರ ಮನೆಂದ ಶಾಲೆಗೆ ಹೋಗತೊಡಗಿದೆ.
    ಮುಂದುವರಿಯುವುದು. . . .
    Read more...

    Subscribe