Sunday, October 31, 2010

1

ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ

  • Sunday, October 31, 2010
  • ಡಾ.ಶ್ರೀಧರ ಎಚ್.ಜಿ.

  • ಬಾಲವನದಲ್ಲಿ ಶಿವರಾಮ ಕಾರಂತ ಜನ್ಮದಿನಾಚರಣೆ ಶಿವರಾಮಕಾರಂತ ಬಾಲವನ ಪ್ರಶಸ್ತಿ ಮತ್ತು ಬಹುಭಾಷಾ ಕವಿಗೋಷ್ಠಿ ೧೦.೧೦.೨೦೧೦.


    ಬಾಲವನದ ಮಟ್ಟಿಗೆ ಒಂದು ವಿಶಿಷ್ಟ ದಿನ. ಆಗಸದಲ್ಲಿ ಮೋಡಕಟ್ಟಿದ ವಾತಾವರಣ. ಆಗಾಗ ಹನಿಯುವ, ಒಮ್ಮೊಮ್ಮೆ ಧೋ ಎಂದು ಸುರಿಯುವ ಮಳೆ. ಬಾಲವನದ ವಾತಾವರಣ ಎಂದಿನಂತಿರಲಿಲ್ಲ. ಹೊಸದಾಗಿ ನಿರ್ಮಿಸಿದ ಬಯಲುರಂಗ ಮಂದಿರದಲ್ಲಿ ಎಲ್ಲಿ ನೋಡಿದರೂ ವಿದ್ಯಾರ್ಥಿಗಳು ಕುಳಿತಿದ್ದರು.

    ಎಲ್ಲರಿಗೂ ಮೊದಲ ವರ್ಷದ ಡಾ. ಶಿವರಾಮಕಾರಂತ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವ ಸಂಭ್ರಮ.

    ಅಂದು, ೨೦೦೯ರ ಶಿವರಾಮಕಾರಂತ ಜನ್ಮದಿನಾಚರಣೆಯ ಸಂದರ್ಭದಲ್ಲಿ ಬಾಲವನ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರಿನ ಸಹಾಯಕ ಕಮೀಷನರ್ ಡಾ. ಹರೀಶ್ ಕುಮಾರ್ ಕೆ. ಇವರು ಮುಂದಿನ ವರ್ಷ ಬಾಲವನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದ್ದರು. ಅವರು ಹೇಳಿದಂತೆ ಮಾಡಿ ತೋರಿಸಿದರು. ಮೊದಲ ಬಾಲವನ ಪ್ರಶಸ್ತಿಯನ್ನು ೧೦.೧೦.೨೦೧೦ರಂದು ನಡೆದ ಸಮಾರಂಭದಲ್ಲಿ ಕನ್ನಡದ ಹಿರಿಯ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿಯವರಿಗೆ ಬಾಲವನ ಸಮಿತಿಯ ವತಿಯಿಂದ ನೀಡಿ ಗೌರವಿಸಲಾಯಿತು.

    ಅನಂತರ ಕಾಲೇಜು ವಿದ್ಯಾರ್ಥಿಗಳ ಬಹುಭಾಷಾ ಕವಿಗೋಷ್ಠಿ. ವಿದ್ಯಾರ್ಥಿಗಳು ಒಂಬತ್ತು ಭಾಷೆಗಳಲ್ಲಿ ತಮ್ಮ ಕವಿತೆಗಳನ್ನು ಓದಿದರು. ಅಲ್ಲಿ ಸೇರಿದ್ದ ನೂರಾರು ಮಂದಿ ಹಿರಿಯರು ಮತ್ತು ಕಿರಿಯರು ವಿದ್ಯಾರ್ಥಿಗಳ ಕವಿಶಕ್ತಿಗೆ ತಲೆದೂಗಿದರು.

    ಡಾ. ವಸಂತಕುಮಾರ್ ಪೆರ್ಲರಿಂದ ಅಧ್ಯಕ್ಷೀಯ ನುಡಿಗಳು.

    ಗದ್ಯಕ್ಕಿಂತ ಭಿನ್ನವಾದುದು ಕವಿತೆ. ಕವಿ ತನ್ನ ಮನಸ್ಸಿನ ಅನಿಸಿಕೆಯನ್ನು ವ್ಯಕ್ತಪಡಿಸಲು ವಿವಿಧ ಪ್ರಕಾರಗಳನ್ನು ಬಳಸುತ್ತಾನೆ. ಇವುಗಳಲ್ಲಿ ಕವಿತೆಯೂ ಒಂದು. ಕವಿತೆಯು ಅದರ ಶಿಸ್ತಿನ ಎಲ್ಲ ಅಂಶಗಳನ್ನು ಒಳಗೊಳ್ಳಬೇಕು. ಅರ್ಥ, ಭಾವವೈವಿಧ್ಯ, ಸಂಕೀರ್ಣ ಅನುಭವಗಳನ್ನು ಓದುಗನಿಗೆ ಸಂವಹನಗೊಳಿಸಬೇಕು. ಗದ್ಯವು ಬುದ್ಧಿಗೆ, ಕವಿತೆ ಹೃದಯಕ್ಕೆ ಸಂಬಂಧಿಸಿದ್ದು. ಕಾವ್ಯ ಹೃದಯದೊಂದಿಗೆ ನೇರವಾಗಿ ಸಂವಾದ ಮಾಡುತ್ತದೆ. ಕವಿತೆ ಎಂದರೆ ಒಡೆದು ಕಟ್ಟುವ ಪ್ರಕ್ರಿಯೆ ಎಂದು ಕವಿ ಡಾ. ವಸಂತಕುಮಾರ ಪೆರ್ಲ ಹೇಳಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನುಭವಗಳಿಗೆ ದಕ್ಕುವ ವಿಷಯವನ್ನು ಆಯ್ದುಕೊಂಡಿದ್ದಾರೆ. ನಾವು ಮನೆಭಾಷೆಯನ್ನು ಶಕ್ತಿಯುತಗೊಳಿಸದಿದ್ದರೆ ಮುಖ್ಯಭಾಷೆ ನಿಸ್ಸತ್ವವಾಗುತ್ತದೆ. ಸ್ಥಳೀಯ ಭಾಷೆಗಳು ಸತ್ವಪೂರ್ಣವಾದರೆ ಮುಖ್ಯಭಾಷೆಗೆ ಚೈತನ್ಯ ಬರುತ್ತದೆ ಎಂದು ಈ ಸಂದರ್ಭದಲ್ಲಿ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

    ಬಹುಭಾಷಾ ಕವಿಗೋಷ್ಠಿಯಲ್ಲಿ ವಿವಿಧ ಕಾಲೇಜುಗಳಿಂದ ಬಂದ ೨೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವಿವೇಕಾನಂದ ಕಾಲೇಜು ಕನ್ನಡ ಸಂಘ ಮತ್ತು ಸಂತಫಿಲೋಮಿನಾ ಕಾಲೇಜು ಕನ್ನಡ ಸಂಘಗಳು ಜಂಟಿಯಾಗಿ ಆಯೋಜಿಸಿದ್ದವು. ಕಾರ್ಯಕ್ರಮದ ಕೊನೆಯಲ್ಲಿ ಬಾಲವನ ಸಮಿತಿಯ ವತಿಯಿಂದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

    Read more...

    Sunday, October 17, 2010

    1

    ಸದ್ಗುಣಿ ಕೃಷ್ಣಾಬಾಯಿ ಭಾಗ - 2

  • Sunday, October 17, 2010
  • ಡಾ.ಶ್ರೀಧರ ಎಚ್.ಜಿ.
  • ಸದ್ಗುಣಿ ಕೃಷ್ಣಾಬಾಯಿ ಕಾದಂಬರಿ ತನ್ನ ರಚನಾ ವಿನ್ಯಾಸದಲ್ಲಿ ಮೂರು ಅಂಶಗಳನ್ನು ಹೊಂದಿದೆ.

    ೧. ಉತ್ತಮ ಗೃಹಿಣಿಯ ಲಕ್ಷಣಗಳು

    ೨. ಸ್ತ್ರೀ ಶಿಕ್ಷಣ ಮತ್ತು ಸಮಸ್ಯೆಗಳು

    ೩. ಪುರುಷರು ಪಡೆಯುವ ಶಿಕ್ಷಣ ಮತ್ತು ಉದ್ಯೋಗದ ಸಾಧ್ಯತೆ

    ಎಳೆಯ ವಯಸ್ಸಿನಲ್ಲಿ ಪತಿಗೃಹವನ್ನು ಸೇರಿದರೂ ಅಲ್ಲಿನ ರೀತಿ ನೀತಿಗಳಿಗೆ ಕೃಷ್ಣಾಬಾಯಿ ಹೊಂದಿಕೊಳ್ಳುವಳು. ಖಾಯಿಲೆ ಬಿದ್ದ ಅತ್ತೆಯ ಸೇವೆ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನ, ಗಂಡನ ಓದಿಗಾಗಿ ಮಾಡುವ ತ್ಯಾಗ, ಇಂಗ್ಲೆಂಡಿಗೆ ಹೋಗುವ ದಾರಿಯಲ್ಲಿ ಒದಗಿದ ವಿಪತ್ತಿನಿಂದ ಪತಿಯನ್ನು ಅಗಲಿದರೂ ಆತನ ಬರುವಿಕೆಗಾಗಿ ಕಾಯುವ ತಾಳ್ಮೆ, ಅಕ್ಕನ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಸರಿದಾರಿಗೆ ತರುವಲ್ಲಿ ಆಕೆ ಪಡೆಯುವ ಯಶಸ್ಸು ಇವೆಲ್ಲವೂ ಕೃಷ್ಣಾಬಾಯಿ ತಾಳ್ಮೆ, ಸಹನೆ ಹಾಗೂ ಉತ್ತಮ ಗೃಹಿಣಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಸ್ತ್ರೀ ಆಧುನಿಕ ಶಿಕ್ಷಣವನ್ನು ಪಡೆದರೂ ಆಕೆ ಗೃಹಕೃತ್ಯದಲ್ಲಿಯೂ ನಿಪುಣಳಿರಬೇಕೆಂಬ ನಿಲುವು ಲೇಖಕಿಯದು.

    ಪಾಶ್ಚಾತ್ಯ ಶಿಕ್ಷಣವನ್ನು ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಪಡೆಯುವ ಅವಕಾಶ ದೊರೆತಾಗ ವಿಭಿನ್ನ ಪ್ರತಿಕ್ರಿಯೆಗಳು ಸಮಾಜದಲ್ಲಿ ಕಾಣಿಸಿಕೊಂಡವು. ಅದರಲ್ಲಿಯೂ ಸ್ತ್ರೀಗೆ ಶಿಕ್ಷಣ ಪಡೆಯುವ ಅವಕಾಶ ದೊರಕಿದ್ದು ಸಾಂಪ್ರದಾಯಿಕ ಸಮಾಜದಲ್ಲಿ ಪರ ವಿರೋಧದ ಸಂಘರ್ಷವನ್ನು ನಿರ್ಮಿಸಿತು. ಸ್ತ್ರೀಗೆ ಶಿಕ್ಷಣ ನೀಡಬೇಕೆಂಬ ಸುಧಾರಕ ಪಂಥದ ನಿಲುವುಗಳು ಪ್ರಚಾರದಲ್ಲಿರುವುದನ್ನು ಕಾದಂಬರಿ ಸೂಕ್ಷ್ಮವಾಗಿ ದಾಖಲಿಸುತ್ತದೆ. ಅದೇ ಹೊತ್ತಿನಲ್ಲಿ ಶಾಲೆಗೆಂದು ಬರುತ್ತಿದ್ದ ಹೆಣ್ಣು ಮಕ್ಕಳ ಬಗೆಗೆ ಅಸಹನೆ, ಅವರನ್ನು ಶಾಲೆಗೆ ಬರದಂತೆ ತಡೆಯುವ ಪ್ರಯತ್ನಗಳೂ ನಡೆದವು. ಕೃತಿಯೊಳಗೆ ಕೃಷ್ಣಾಬಾಯಿ ಸ್ವತ: ಈ ಬಗೆಯ ಅನುಭವಗಳನ್ನು ಪಡೆಯುವಳು. "ಕೃಷ್ಣಾಬಾಯಿಯು ಶಾಲೆಗೆ ಬರದಂತೆ ಮಾಡಬೇಕೆಂಬ ಪ್ರಯತ್ನ ನಡೆಯಿತು. ಆದರೆ ಕೃಷ್ಣಾಬಾಗೆ ಅಣ್ಣನದೂ, ಗುರುವಿನದೂ ಬೆಂಬಲವಿದ್ದಿದ್ದರಿಂದ ಅವರ ಪ್ರಯತ್ನ ನಿಷ್ಪಲವಾಯಿತು. ಅವರು ಎಷ್ಟೋಸಾರೆ ಇಲ್ಲಿಂದ ಎದ್ದು ಹೋಗಬಾರದೆ, ಇಲ್ಲಿ ಹೆಂಗಸರದೇನು ಕೆಲಸವದೆ, ಅವರ ಕೆಲಸ ಒಲಿಯ ಮುಂದಲ್ಲವೆ .. .. . ಇವರಿಗೆ ಓದು ಯಾತಕೆ ಬೇಕು ? ಬರಹ ಯಾತಕೆ ಬೇಕು? ದೇವರು ಕೊಟ್ಟದ್ದನ್ನು ಉಂಡು ತಿಂದು ಗಂಡಂದಿರ ಮನೆಯಲ್ಲಿ ಸಂಸಾರ ಮಾಡುವುದನ್ನು ಬಿಟ್ಟು ನಾಳೆ ಇವರು ಸಭೇ ಶಿರಸ್ತೆ ಕೆಲಸಗಳನ್ನು ಮಾಡಲಿಕ್ಕೆ ಹೋಗುವದು ಅಷ್ಟರಲ್ಲಿಯೇ ಇದೆ" ಎಂದು ಅಪಹಾಸ್ಯ ಮಾಡಿದ್ದಿದೆ. ಹಾಗೆಯೇ ಕೃಷ್ಣಾಬಾಯ ವಿವಾಹದ ಕುರಿತಾಗಿ ಮನೆಯಲ್ಲಿ ಮಾತುಕತೆಗಳು ಆರಂಭವಾದಾಗ ಮಾಧವರಾಯನ ತಾಯಿ ರಮಾಬಾಯಿ ಸಾಕಷ್ಟು ವಿಚಾರ ಮಾಡಹತ್ತಿದಳು. "ಅವಳು ಹಳೇ ತರದ ಹೆಂಗಸು ಇದ್ದು ಸಾಮಾಜಿಕದ ಸದ್ಯ ಸ್ಥಿತಿಯಲ್ಲಿ ಹೆಚ್ಚು ಕಡಿಮೆಯಾಗಬಾರದೆಂಬುವ ಜನರಲ್ಲಿ ಒಬ್ಬಳಾಗಿದ್ದಳು. ಪುಣೆ ಮುಂಬು ಮುಂತಾದ ಸುಧಾರಿಸಿದ ಪಟ್ಟಣಗಳಲ್ಲಿ ಆಕೆ ಬಹಳ ವರ್ಷಗಳವರೆಗೆ ಇದ್ದರೂ ಆಕೆಯ ಮೂಲ ಕರ್ನಾಟಕಸ್ಥಳಾದ್ದರಿಂದ ಹೆಂಗಸರು ವಿದ್ಯೆ ಕಲಿಯಬಾರದೆಂತಲೂ, ವಿದ್ಯೆ ಕಲಿಯುವುದರಿಂದ ಸ್ತ್ರೀಯರ ನೀತಿಯು ಕೆಡುತ್ತದೆಂತಲೂ, ಅವರು ಗುರು ಹಿರಿಯರಿಗೆ ಯೋಗ್ಯ ಸನ್ಮಾನವನ್ನು ತೋರಿಸುವದಿಲ್ಲೆಂತಲೂ ಅವರು ಸಂಸಾರದ ಕೆಲಸಗಳಲ್ಲಿ ಮನಸ್ಸು ಹಾಕುವುದಿಲ್ಲೆಂತಲೂ, ಆಕೆಯ ದೃಢ ತಿಳುವಳಿಕೆಯಾಗಿತ್ತು".(ಪು.೧೪) ಹೀಗಾಗಿ ಸ್ತ್ರೀಗೆ ಶಿಕ್ಷಣವನ್ನು ನೀಡುವುದರ ಬಗೆಗೆ ವಿರೋಧವಿದ್ದ ಎರಡು ಬಗೆಯ ಮಾದರಿಯನ್ನು ನೋಡಲು ಸಾಧ್ಯ.

    . ಶಿಕ್ಷಣವನ್ನು ಪಡೆಯಲು ಬರುವ ಸ್ತ್ರೀ, ಪುರುಷನಿಂದ ಟೀಕೆಗೆ ಒಳಗಾಗುವುದು

    . ಶಿಕ್ಷಣವನ್ನು ಪಡೆದ ಸ್ತ್ರೀಯನ್ನು ಸ್ವತ: ಮಹಿಳೆಯರೇ ಅನುಮಾನದಿಂದ ನೋಡುವುದು.

    ಅಂದರೆ ಸ್ತ್ರೀ ಶಿಕ್ಷಣದ ನಿರಾಕರಣೆಯ ನೆಲೆಗಳು ಆ ಕಾಲದ ಸಮಾಜದ ಒಳಗೇ ಇದ್ದವು. ಭಿನ್ನ ಕಾರಣಗಳಿಗಾಗಿ ಹಿರಿಯ ತಲೆಮಾರಿನ ಪುರುಷ ಮತ್ತು ಸ್ತ್ರೀಯರಿಬ್ಬರೂ, ಸ್ತ್ರೀಗೆ ಶಿಕ್ಷಣ ನೀಡುವುದನ್ನು ಅನುಮಾನದಿಂದ ನೋಡುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾವಂತ ಪುರುಷರೇ ಸ್ತ್ರೀ ಶಿಕ್ಷಣವನ್ನು ಸಮರ್ಥಿಸಿದ್ದನ್ನು ನೋಡುತ್ತೇವೆ. ಪ್ರಸ್ತುತ ಕಾದಂಬರಿಯಲ್ಲಿ ಮಾಧವರಾಯ ಹೇಳುವ " ಜ್ಞಾನವು ಎಲ್ಲ ಹೆಂಗಸರಿಗೂ ಗಂಡಸರಿಗೂ ಸರಿಯಾಗಿಯೇ ಅತ್ಯಗತ್ಯವಾದದ್ದು. --- ಕೃಷ್ಣೆಯು ವಿದ್ಯಾಭ್ಯಾಸ ಮಾಡಿರುವುದು ಪ್ರಶಂಸನೀಯ ಗುಣವೇ ಆಗುತ್ತದೆ" (ಪು.೧೫) ಮಾತುಗಳು ಗಮನಾರ್ಹ. ಅನಂತರದ ದಿನಗಳಲ್ಲಿ ಕೃಷ್ಣಾಬಾಯಿಯು ತನ್ನ ಅತ್ತೆ ರಮಾಬಾಯಿಯ ಅಭಿಪ್ರಾಯವನ್ನು ಸುಳ್ಳಾಗಿಸುವಂತೆ ಹಾಗೂ ಮಾಧವರಾಯನ ಮಾತುಗಳನ್ನು ಸಮರ್ಥಿಸುವಂತೆ ಬದುಕುತ್ತಾಳೆ. ಮಾತ್ರವಲ್ಲ, ವಿದ್ಯಾವಂತ ಸೊಸೆಯನ್ನು ಪಡೆದಿದ್ದರಿಂದ ಆ ಕುಟುಂಬಕ್ಕೆ ಆದ ಒಳಿತನ್ನು ಕಾದಂಬರಿ ಪ್ರತಿಪಾದಿಸುತ್ತದೆ. ಸ್ತ್ರೀಯರು ವಿದ್ಯಾವಂತರಾದರೂ ತಮ್ಮ ಕರ್ತವ್ಯಗಳನ್ನು ಚ್ಯುತಿಲ್ಲದೆ ನಡೆಸುವರೆಂದು ಪ್ರತಿಪಾದಿಸುವ ಅಗತ್ಯವಿತ್ತು. ಅಲ್ಲದೆ ಸ್ತ್ರೀಯರ ಉನ್ನತ ವಿದ್ಯಾಭ್ಯಾಸದ ಅಗತ್ಯವನ್ನೂ ಪ್ರತಿಪಾದಿಸಿ ಅವರು ಪ್ರಗತಿಪರ ನಿಲುವನ್ನು ತಳೆಯುವರು. ತಿರುಮಲಾಂಬ ಅವರ ಮೊದಲ ಕಾದಂಬರಿ ಸುಶೀಲೆಯಲ್ಲಿಯೂ ವಿದ್ಯಾವಂತ ಯುವತಿಯರು ಸಮಾಜದ ವಕ್ರದೃಷ್ಟಿಗೆ ಗುರಿಯಾಗುತ್ತಿದ್ದ ಚಿತ್ರ ದೊರೆಯುತ್ತದೆ. "ಒಳ್ಳೆಯ ಓದು, ಒಳ್ಳೆಯ ಓದು, ವಿರಾಮ ದೊರೆತು ಹೊತ್ತು ಹೋಗದಿದ್ದರೆ ಹಾಳು ಪುಸ್ತಕವನ್ನೇ ಓದಬೇಕೆ? ಓದು ಬರಹ ಬಲ್ಲ ಈ ಕಾಲದ ಹುಡುಗಿಯರನ್ನು ನಂಬುವುದು ಹೇಗೆ?" ಎಂಬ ಮಾತುಗಳು ದೊರೆಯುತ್ತವೆ. ಹೀಗಾಗಿ ಸ್ತ್ರೀಯರಿಗೆ ಶಿಕ್ಷಣದ ಅಗತ್ಯವನ್ನು ಸಮರ್ಥಿಸುವ ಅನಿವಾರ್ಯತೆ ಅಂದಿನ ಲೇಖಕಿಯರಿಗಿತ್ತು.

    ಸ್ತ್ರೀಯರು ಆಧುನಿಕ ವಿದ್ಯಾಭ್ಯಾಸದ ಜೊತೆಯಲ್ಲಿ ಗೃಹಕೃತ್ಯದಲ್ಲಿಯೂ ತಿಳುವಳಿಕೆ ಪಡೆದಿರಬೇಕೆಂಬ ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾದ ಪರಿಷ್ಕೃತ ನಿಲುವನ್ನು ಕಾದಂಬರಿ ತಾಳುತ್ತದೆ. ಇದು ಇಂಗ್ಲಿಷ್ ಶಿಕ್ಷಣಕ್ಕೆ ದೇಸಿನೆಲೆಯಲ್ಲಿ ಪ್ರತಿಕ್ರಿಸುವಂತೆ ಕಾಣುತ್ತದೆ. ಕೃಷ್ಣಾಬಾ ತನ್ನ ಅಕ್ಕನ ಮಕ್ಕಳಾದ ಕಾಶಿ ಮತ್ತು ಗೋದಾವರಿಗೆ ನೀಡುವ ಶಿಕ್ಷಣ ಈ ಬಗೆಯದು. ಮಕ್ಕಳ ಮನಸ್ಸನ್ನು ಬಂಧಿಸದೆ, ಬೆತ್ತದಲ್ಲಿ ದಂಡಿಸದೆ ಅವರ ಆಸಕ್ತಿಗೆ ಅನುಗುಣವಾದ ಶಿಕ್ಷಣ ನೀಡುವ ತಂತ್ರ ಕೃಷ್ಣಾಬಾಯದು. ಈ ರೀತಿಯ ಶಿಕ್ಷಣಕ್ಕೆ ಸಮಕಾಲೀನ ಸಾಮಾಜಿಕರಿಂದ ಟೀಕೆಗಳು ಬಂದಿವೆಯಾದರೂ ಕೃತಿಯ ಚೌಕಟ್ಟಿನೊಳಗೆ ಅವು ನಿಲ್ಲುವುದಿಲ್ಲ. ಶಿವರಾಮಕಾರಂತರು ಮಕ್ಕಳ ಶಿಕ್ಷಣದ ಬಗೆಗೆ ಆಲೋಚಿಸುವುದಕ್ಕಿಂತ ಸಾಕಷ್ಟು ಮೊದಲೇ ಮಕ್ಕಳ ಶಿಕ್ಷಣದ ಬಗೆಗೆ ಕಾದಂಬರಿ ತಳೆಯುವ ನಿಲುವು ಸಾಕಷ್ಟು ಹೊಸತನಗಳಿಂದ ಕೂಡಿದೆ. ಶಿಕ್ಷಣದ ಸಂದರ್ಭದಲ್ಲಿ ಕೃಷ್ಣಾಬಾಯಿ ಅಳವಡಿಸಿದ ಮಕ್ಕಳಿಗೆ ಚಿತ್ರಕಲೆ ಕಲಿಸುವುದು, ಹೊಲಿಗೆ ತರಬೇತಿ, ಅಡಿಗೆ ಮಾಡುವುದು, ತರಕಾರಿ ಬೆಳೆಯುವುದು, ಯಂತ್ರಗಳ ಪರಿಚಯ, ಛಾಪಖಾನೆಯನ್ನು ತೋರಿಸುವುದು ಮುಂತಾದ ಚಟುವಟಿಕೆಗಳು ಗಮನ ಸೆಳೆಯುತ್ತವೆ. ಲೇಖಕಿ ಸ್ವತ: ಶಿಕ್ಷಕಿಯಾದ್ದರಿಂದ ಮಕ್ಕಳ ಶಿಕ್ಷಣದ ಬಗೆಗೆ ವಿಶೇಷವಾಗಿ ಆಲೋಚಿಸಲು ಸಾಧ್ಯವಾದಂತಿದೆ. ಇವತ್ತಿಗೂ ಮಕ್ಕಳಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಬೇಕೆಂಬ ವಿಚಾರ ಚರ್ಚಿತವಾಗುತ್ತಿದ್ದು, ಲೇಖಕಿಯ ಈ ಧೋರಣೆ ಹೆಚ್ಚು ಪ್ರಸ್ತುತ. ಶಿಕ್ಷಣದಿಂದ ಹುಡುಗರು ನೀತಿವಂತರೂ, ವ್ಯವಹಾರಜ್ಞರೂ ಆಗಬೇಕೆಂಬುದು ಉದ್ದೇಶವಾಗಿತ್ತು.

    ಕೃಷ್ಣಾಬಾಯಿ ಕಾದಂಬರಿಯ ಕೇಂದ್ರ ಪಾತ್ರ. ಲೇಖಕಿಯ ಆದರ್ಶ ಪಾತ್ರವಿದು. ಮಾಧವರಾಯನ ಯಶಸ್ಸಿನ ಹಿಂದೆ ಕೃಷ್ಣಾಬಾಯಿಯ ತ್ಯಾಗವಿದೆ. ಸ್ವತ: ಕೃಷ್ಣಾಬಾಯಿ ಪ್ರಾಚೀನ ಕಾವ್ಯ, ಭಗವದ್ಗೀತೆ, ಸಂಸ್ಕೃತ, ಇಂಗ್ಲಿಷ್, ಆಧುನಿಕ ಕವನಗಳನ್ನು ಓದುವುದರ ಜೊತೆಗೆ ಟೈಲರಿಂಗ್, ಕಸೂತಿ, ರಂಗವಲ್ಲಿ, ಹಾಡು, ಹೆಣಿಗೆ, ಚಿತ್ರಕಲೆ ಮೊದಲಾದವುಗಳನ್ನು ಕಲಿತಿದ್ದಳು ಮಾತ್ರವಲ್ಲ, ಸಂಸ್ಕೃತ ಮತ್ತು ಇಂಗ್ಲಿಷ್‌ನಿಂದ ಭಾಷಾಂತರವನ್ನೂ ಮಾಡುತ್ತಿದ್ದಳು. ಹೀಗಾಗಿ ಕೃಷ್ಣಾಬಾಯಿಯದು ಹಳತು ಹೊಸದು, ಪರಂಪರೆ ಮತ್ತು ಆಧುನಿಕತೆಯತ್ತ ಮುಖಮಾಡಿದ ಸಮನ್ವಯದ ಮಾದರಿ ವ್ಯಕ್ತಿತ್ವ.

    ಮಾಧವರಾಯ ಲೇಖಕಿಯ ಇನ್ನೊಂದು ಆದರ್ಶ ಪಾತ್ರ. ಕೃಷ್ಣಾಬಾಯ ಪತಿ. ಪಶ್ಚಿಮದ ನೇರ ಪ್ರಭಾವಕ್ಕೆ ಒಳಗಾದವನು. ಇಂಗ್ಲೆಂಡಿನ ಬಗೆಗೆ ಗೌರವ ಇರುವ ವಸಾಹತು ಆಡಳಿತವನ್ನು ಒಪ್ಪಿಕೊಂಡ ವ್ಯಕ್ತ್ವಿ. ಬಿ.ಎ. ತರಗತಿಯಲ್ಲಿ ಓದುತ್ತಿದ್ದ ಆತ ಚಿಕ್ಕವನಾದರೂ ವಿದ್ಯಾವಂತ. ಉತ್ತಮ ವಾಗ್ಮಿ; ಭಾಷಣಕಾರ. ವಾರದಲ್ಲಿ ಒಂದೆರಡು ಸಲ ಮಾಧವನ ಭಾಷಣ ಸಣ್ಣ ದೊಡ್ಡ ಸಭೆಗಳಲ್ಲಿ ಆಗುತ್ತಿತ್ತು. ಕೃಷ್ಣಾಬಾಯಿಯನ್ನು ಮೊದಲ ಸಲ ನೋಡಿದಾಗಲೇ ಒಲವು ಮೂಡಿತು. ಆಕೆಯನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು 'ಕಲಿತವಳು' ಎಂಬ ಅಂಶ ಅಡ್ಡಬಂದಾಗ ಮಾಧವರಾಯನು ಕೃಷ್ಣಾಬಾಯಿಯ ಮೇಲಿನ ಪ್ರೇಮದಿಂದ "ಸುಶಿಕ್ಷಿತ ಸ್ತ್ರೀಯರು ಮಕ್ಕಳಿಗೂ ಗಂಡಂದಿರಿಗೂ ಉಪಯುಕ್ತರಾಗಿ ದೇಶೋನ್ನತಿಗೂ ಸಹ ಕಾರಣರಾಗುತ್ತಾರೆ" ಎಂಬ ನಿಲುವು ತಾಳುವನು. ಈ ವಿವಾಹಕ್ಕೆ ಎರಡೂ ಮನೆಯವರು ಒಪ್ಪಿದರೂ ಮಾಧವರಾಯನ 'ಒಲವು' ಮುಖ್ಯವಾಗುತ್ತದೆ. ಹೀಗಾಗಿ ಕಲಿತ ವರ್ಗದಲ್ಲಿ ವೈವಾಹಿಕ ಬದುಕಿನ ಬಗೆಗೆ ಆಗುತ್ತಿದ್ದ ಬದಲಾವಣೆಯ ನಿಲುವುಗಳನ್ನು ದಾಖಲಿಸುತ್ತದೆ. ಎಲ್.ಎಲ್.ಬಿ. ಪರೀಕ್ಷೆ ಬರೆದರೂ ಸರಕಾರಿ ಕಛೇರಿಗಳಲ್ಲಿ ಕೆಲಸ ದೊರಕುವುದು ಕಠಿಣವಾದ್ದರಿಂದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುವನು. ಈ ಹೊತ್ತಿಗೆ ಎಲ್.ಎಲ್.ಬಿ. ಪಾಸಾದರೂ ಮುಂಬುಯಂತಹ ಶಹರದಲ್ಲಿ ಸದ್ಯಕ್ಕೆ ವಕೀಲಿ ಮಾಡುವುದು ಲಾಭಕರವಾದೀತೆಂದು ಅನಿಸಲಿಲ್ಲ. ಹೀಗಾಗಿ ಹೆಂಡತಿ ಒಡವೆಗಳನ್ನು ಮಾರಿ ಒದಗಿಸಿದ ಆರ್ಥಿಕ ನೆರವಿನಿಂದ ಲಂಡನ್ನಿಗೆ ಹೆಚ್ಚಿನ ಅಧ್ಯಯನಕ್ಕೆ ತೆರಳುವನು. 'ಲ್ಯಾಂಬರ್ಟನ್' ಗೃಹಸ್ಥನ ಆಶ್ರಯದಲ್ಲಿದ್ದು ಸಿವಿಲ್‌ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಮುಂಬಯಿಗೆ ಮರಳಿ ಅಸಿಸ್ಟೆಂಟ್ ಕಲೆಕ್ಟರ್‌ನಾಗುವನು. ತನ್ಮೂಲಕ ವಸಾಹತುಶಾಹಿ ಆಡಳಿತದ ಒಂದು ಭಾಗವಾಗಿ ಬಿಡುವನು. ಈ ಕಾಲ ಘಟ್ಟದಲ್ಲಿ ಸರಕಾರಿ ಸೇವೆಗೆ ಸೇರಬೇಕೆಂಬ ಹಂಬಲ ವಿದ್ಯಾವಂತ ಯುವಕರ ಅಪೇಕ್ಷೆಯಾಗಿತ್ತ್ತೆಂಬ ಸುಳಿವು ಕಾದಂಬರಿಯಲ್ಲಿದೆ.

    ಆಧುನಿಕ ಶಿಕ್ಷಣವನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಂಡ ಉದಯಮಾನವಾದ ಒಂದು ವರ್ಗ ಕಾದಂಬರಿಯಲ್ಲಿ ಕಂಡುಬರುತ್ತದೆ. ಹರಿವಂತ, ಶಾಮರಾಯ, ರಾಧಾಬಾ, ಮಾಧವರಾಯ, ಜನಾರ್ದನಪಂತ ಮೊದಲಾದವರು ಈ ವರ್ಗದಲ್ಲಿ ಬರುವ ವ್ಯಕ್ತಿಗಳು. ಆಧುನಿಕ ಶಿಕ್ಷಣವನ್ನು ಆರಂಭದಲ್ಲಿ ಸಂಶಯ ದ್ವಂದ್ವದಿಂದ ನೋಡುವ ಯಶೋಧಾಬಾಯಿ ಮತ್ತು ಆಕೆಯ ಸ್ನೇಹಿತೆಯರು ಅಂತಿಮವಾಗಿ ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಬಂದು ನಿಲ್ಲುವರು. ಪಾಶ್ಚಾತ್ಯ ಶಿಕ್ಷಣವನ್ನು ಪಡೆದು ಸರ್ಕಾರದ ಸೇವೆಯಲ್ಲಿರುವ ಒಂದು ವರ್ಗವೇ ಕಾದಂಬರಿಯಲ್ಲಿದೆ. ಮಾಧವರಾಯ ಈ ವರ್ಗಕ್ಕೆ ಸೇರುವ ಹೊಸತಲೆಮಾರಿನ ಪ್ರತಿನಿಧಿ. ಈ ಹೊತ್ತಿಗೆ ಇಂಗ್ಲಿಷ್‌ನಿಂದ ಭಾಷಾಂತರ ಮಾಡುವ ಪ್ರಕ್ರಿಯೆ ಸಾಹಿತ್ಯದ ವಲಯದಲ್ಲಿ ನಡೆಯುತ್ತಿದ್ದ ಬಗ್ಗೆ ಕೃತಿಯೊಳಗೆ ಪ್ರಮಾಣಗಳು ದೊರೆಯುತ್ತವೆ. ಒಂದೆಡೆ ಸ್ತ್ರೀ ಶಿಕ್ಷಣವನ್ನು ಬೆಂಬಲಿಸಿ ಪ್ರಗತಿಪರ ನಿಲುವನ್ನು ತಳೆಯುವ ಕೃತಿ ಇನ್ನೊಂದೆಡೆ ೧೦-೧೨ ವರ್ಷದ ಹೆಣ್ಣುಮಕ್ಕಳಿಗೆ ವಿವಾಹ ಮಾಡುವ ಚಿತ್ರಣವನ್ನೂ ನೀಡುತ್ತದೆ. ಹೀಗಾಗಿ ಬಾಲ್ಯವಿವಾಹದ ವಿರೋಧಿ ನಿಲುವುಗಳು ಕೃತಿಯಲ್ಲಿ ಕಾಣುವುದಿಲ್ಲ.

    ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಆರಂಭವಾದ ಖಾಸಗಿ ಒಡೆತನದ ಸಂಸ್ಥೆಗಳು ನೌಕರರನ್ನು ಶೋಷಣೆ ಮಾಡುವ, ಮಿತಿಮೀರಿ ದುಡಿಸುವ ಚಿತ್ರ ಕೃತಿಯಲ್ಲಿದೆ. ಎಲ್.ಎಲ್.ಬಿ. ಮುಗಿದಾಕ್ಷಣ ದುಡಿಯಲು ಸೇರಿದ ಸಂಸ್ಥೆಯಲ್ಲಿ ಮಿತಿ ಮೀರಿ ಕೆಲಸ ಮಾಡಿದ ಪರಿಣಾಮವಾಗಿ ಮಾಧವರಾಯನ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದನ್ನು ಇದಕ್ಕೆ ಗಮನಿಸಬಹುದು. ಬಾಲಕಿಯರ ಶಿಕ್ಷಣದ ಸಲುವಾಗಿ ಆರಂಭವಾಗಿದ್ದ ಶೈಕ್ಷಣಿಕ ಸಂಸ್ಥೆ, ಮಾಹಿತಿ ಕಳಿಸಲು ವಸಾಹತು ಶಾಹಿ ಆಡಳಿತ ಆರಂಭಿಸಿದ 'ತಾರು ವ್ಯವಸ್ಥೆ' ಸುದ್ದಿಗಳಿಗಾಗಿ ಆರಂಭವಾಗಿದ್ದ ಪತ್ರಿಕೆಗಳ ಚಿತ್ರಣದ ಎಳೆಗಳು ಕೃತಿಯಲ್ಲಿದೆ. ಹಡಗು ದುರಂತದಲ್ಲಿ ಪರಸ್ಪರ ಬೇರೆಯಾಗಿದ್ದ ಮಾಧವರಾಯ ಮತ್ತು ಕೃಷ್ಣಾಬಾಯಿ ಮತ್ತೆ ಒಂದಾಗಲು ಪತ್ರಿಕೆಯಲ್ಲಿ ಬಂದ ಸುದ್ದಿಯಿಂದ ಸಾಧ್ಯವಾಗುತ್ತದೆ. ಮಾಧವರಾಯನ ಅಧ್ಯಯನಕ್ಕೆ ಇಂಗ್ಲೆಂಡಿನಲ್ಲಿ ಯಾವುದೇ ಅಪೇಕ್ಷೆಗಳಿಲ್ಲದೆ ಸಹಾಯ ಮಾಡುವ ಲ್ಯಾಂಬರ್ಟನ್ ಕುಟುಂಬದ ಸ್ನೇಹಪರತೆ ಕಾದಂಬರಿಯಲ್ಲಿ ಗಮನಸೆಳೆಯುತ್ತದೆ. ಹಿಂದೆಲ್ಲ ದೂರದ ಊರುಗಳಿಂದ ಮೈಸೂರಿನಂತಹ ಶೈಕ್ಷಣಿಕ ಕೇಂದ್ರಗಳಿಗೆ ಅಧ್ಯಯನದ ಸಲುವಾಗಿ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದ ವಿವಿಧ ರೀತಿಯ ಸಹಾಯವನ್ನು ಇದು ನೆನಪಿಸುತ್ತದೆ. ಬಡತನ ಅಧ್ಯಯನಕ್ಕೆ ಮಿತಿಯಾಗದು ಎಂಬ ಅಂಶ ಇಲ್ಲಿರುವಂತಿದೆ.

    ಇಂಗ್ಲೆಂಡಿಗೆ ಹೋಗಲು ಅಂದು ಇದ್ದ ಏಕೈಕ ದಾರಿಯೆಂದರೆ ಸಮುದ್ರಮಾರ್ಗ. ಇದಕ್ಕೆ ಸರಕು ಸಾಗಣೆಯ ಇಲ್ಲವೆ ಪ್ರಯಾಣಿಕ ಹಡಗನ್ನು ಬಳಸುವುದು ಅನಿವಾರ್ಯವಾಗಿತ್ತು. ಇಂತಹ ಹಡಗುಗಳು ಮಾರ್ಗ ಮಧ್ಯದಲ್ಲಿ ದುರಂತಕ್ಕೆ ಗುರಿಯಾಗುವುದೂ ಸಹಜವಾಗಿತ್ತು. ಈ ಬಗೆಗೆ ಲೇಖಕಿಗೆ ಸ್ಪಷ್ಟವಾದ ತಿಳುವಳಿಕೆದೆ. ಕುತೂಹಲದ ಸಂಗತಿಯೆಂದರೆ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಬೃಹತ್ ಹಡಗು 'ಟೈಟಾನಿಕ್' ಸಮುದ್ರ ಮಾರ್ಗ ಮಧ್ಯದಲ್ಲಿ ದುರಂತವನ್ನು ಹೊಂದಿರುವುದು ಇದೇ ಕಾಲ ಘಟ್ಟದಲ್ಲಿ ಎಂಬುದು ಗಮನಾರ್ಹ. ಸಾಮಾನ್ಯವಾಗಿ ಕಥಾನಾಯಕರು ಮಾತ್ರ ಹಡಗನ್ನೇರುತ್ತಿದ್ದ ಕಾಲಘಟ್ಟದಲ್ಲಿ ಲೇಖಕಿ ಕೃಷ್ಣಾಬಾಯಿಯನ್ನೂ ಇಂಗ್ಲೆಂಡಿಗೆ ಹೋಗುವ ಹಡಗು ಹತ್ತಿಸಿದ್ದಾರೆ. ಆಕೆ ಇಂಗ್ಲೆಂಡನ್ನು ತಲುಪಿದ್ದರೆ ಅದೊಂದು ಚಾರಿತ್ರಿಕ ಘಟನೆಯಾಗುತ್ತಿತ್ತು ; ಆದರೆ ಕೃಷ್ಣಾಬಾಯಿಗೆ ತಲುಪಲಾಗದೆ ಹೋದದ್ದು ದುರಂತವೇ ಸರಿ.

    ಶಾಂತಾಬಾಯಿ ತಮ್ಮ ಕೃತಿಯಲ್ಲಿ ಸ್ವಾತಂತ್ರ್ಯ ಪೂರ್ವದ ಆದರ್ಶ ಪ್ರಾಯಳಾದ ಸ್ತ್ರೀ ಮಾದರಿಯನ್ನು ನೀಡುತ್ತಿರುವಂತೆಯೇ ಬದುಕನ್ನು ವ್ಯರ್ಥವಾಗಿ ಕಳೆಯುತ್ತಿದ್ದ ಕೃಷ್ಣಾಬಾಯಿಯ ಅಕ್ಕ ಯಶೋಧಾಬಾಯ ಚಿತ್ರವನ್ನೂ ನೀಡುವರು. " ದೊಡ್ಡ ಶಹರಗಳಲ್ಲಿ ಜನರ ನೀತಿಯನ್ನು ಸುಧಾರಿಸುವ ಅನೇಕ ಸಾಧನಗಳಿರುವಂತೆಯೇ ಅದನ್ನು ಕೆಡಿಸುವ ಸಾಧನಗಳೂ ಅನೇಕ ಇರುವವು." ಎಂಬ ಲೇಖಕಿಯ ಮಾತು ಗಮನಾರ್ಹ. ಯಶೋಧಾಬಾಯಿ ಆರ್ಥಿಕವಾಗಿ ಸ್ವತಂತ್ರಳಾದರೂ ತಿರುಗಾಟ, ಹರಟೆ, ಆಟ, ನಾಟಕ ಮುಂತಾದ ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ತನ್ನ ಸಮಯವನ್ನು ಕಳೆಯುತ್ತಿದ್ದಳು. ಇಂಥ ತಾಯ ಮಕ್ಕಳು ಹೇಗೆ ಹಾದಿತಪ್ಪಿ ನಡೆಯುವರು ಎಂಬುದರ ಕಡೆಗೆ ಲೇಖಕಿ ಓದುಗರ ಗಮನ ಸೆಳೆಯುತ್ತಾರೆ. ಅಲ್ಲದೆ ಅಕ್ಕ ಮತ್ತು ತಂಗಿಯರ ವ್ಯಕ್ತಿತ್ವದಲ್ಲಿರುವ ವೈರುಧ್ಯಗಳನ್ನು ಚಿತ್ರಿಸುವುದರ ಮೂಲಕ ವರ್ತಮಾನದ ಬದುಕಿಗೆ ಅಪೇಕ್ಷಿತ ಸ್ತ್ರೀ ಮಾದರಿಯನ್ನು ನೀಡುತ್ತಾರೆ. ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಶಿಕ್ಷಣದ ಆಸಕ್ತಿಯನ್ನು ಬೆಳೆಸುವ ಕೃಷ್ಣಾಬಾಯಿ ಆಧುನಿಕ ಶಿಕ್ಷಣದ ಪ್ರತಿಪಾದಕಳಾಗಿ ನಿಲ್ಲುತ್ತಾಳೆ. ಮನೆಯೊಳಗೆ ಸ್ತ್ರೀಯರ ನಡುವೆ ಅಧಿಕಾರಕ್ಕಾಗಿ ನಡೆಯುವ ಹೋರಾಟ, ಮತ್ಸರ, ಇರುಸುಮುರುಸು, ಅಸಹನೀಯ ವಾತಾವರಣದ ಚಿತ್ರವನ್ನು ಗಂಗಾಬಾಯ ಸಂದರ್ಭದಲ್ಲಿ ನೋಡಲು ಸಾಧ್ಯ. ಕೃಷ್ಣಾಬಾಯ ಒಳ್ಳೆಯತನವನ್ನು ಗುರುತಿಸಲು ಗಂಗಾಬಾಯಿಯ ಪಾತ್ರದ ಬಳಕೆಯಾಗಿದೆ ಎಂದು ಅನಿಸಿದರೂ ಆಕೆಯ ದುಷ್ಟತನದ ಹಿಂದಿನ ಪ್ರೇರಣೆಗಳು ಬೇರೆಯದೇ ಆಗಿವೆ.

    ಒಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಂಡ ಮಧ್ಯಮವರ್ಗ ಈ ಸಂಸ್ಕೃತಿಂದ ಬೇರ್ಪಟ್ಟರೂ ಅದರೊಂದಿಗೆ ಮರುಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್‍ಯತೆತ್ತು. ಸ್ತ್ರೀಗೆ ವಿದ್ಯೆ ನೀಡಬೇಕು ಎನ್ನುವುದು ಈ ವರ್ಗದ ಖಚಿತವಾದ ನಿಲುವು. ಅಂದರೆ ಸುಧಾರಣಾವಾದ ಮೊದಲು ಮೇಲ್ವರ್ಗದಲ್ಲಿ ಕಂಡುಬಂತೆನ್ನುವ ವಾಸ್ತವವಾದಿ ಚಿತ್ರ ಇಲ್ಲಿದೆ. ಆರಂಭಕಾಲೀನ ಕಾದಂಬರಿಗಳಂತೆ ಈ ಕೃತಿಗೂ ಕಥಾನಾಯಕಿಯ ಹೆಸರನ್ನೇ ಇಡಲಾಗಿದೆ. ದೇಶದಲ್ಲೆಲ್ಲಾ ಸ್ವಾತಂತ್ರ್ಯ ಹೋರಾಟದ ವಾತಾವರಣವಿದ್ದರೂ ಕೃತಿ ಈ ಬಗ್ಗೆ ಮೌನವಹಿಸುತ್ತದೆ. ಮಾತ್ರವಲ್ಲ, ವಸಾಹತು ಆಡಳಿತದ ಬಗೆಗೆ ಗೌರವವಿದೆ. ಹೆಂಗಸರಿಗೆ ವಿದ್ಯೆ ಕಲಿಸಬೇಕೆಂಬ ವಿಷಯ " ಈ ದೇಶದಲ್ಲಿ ದಯಾಳು ಇಂಗ್ಲಿಷ್ ರಾಜ್ಯದಾಡಳಿತೆ ಪ್ರಾರಂಭವಾದಂದಿನಿಂದ ಜನರಿಗೆ ತಿಳಿಯ ಹತ್ತಿರುತ್ತದೆ" 'ಇಂಗ್ಲೆಂಡು ಲಕ್ಷ್ಮೀನಿವಾಸ' ಎಂಬಲ್ಲಿ ವಸಾಹತು ಆಡಳಿತದ ಬಗೆಗೆ ಆಸಕ್ತಿ ಮತ್ತು ಅದು ಸ್ವೀಕೃತವಾಗಲು ಕಾರಣ ಸೂಚಿತವಾಗಿದೆ. ಭಾಷಾಬಳಕೆಯ ದ್ವಂದ್ವದಿಂದಾಗಿ ಈ ಕೃತಿ ಗಮನ ಸೆಳೆಯುತ್ತದೆ. ಹೊಸಗನ್ನಡ ರೂಪುಗೊಳ್ಳುತ್ತಿದ್ದ ಕಾಲಘಟ್ಟದಲ್ಲಿ ಬಂದ ಕೃತಿಯಿದು. ಮುಖ್ಯವಾಗಿ ಉತ್ತರ ಕರ್ನಾಟಕದ ಜನಭಾಷೆಯ ಭಾಷಾರೂಪದ ಹಲವು ಪದಗಳು ಇಲ್ಲಿ ಬಳಕೆಯಾಗಿದೆ. ಇನಾಮು, ಕೋಠಿಮನೆ, ಇಂಗ್ರೇಜಿ, ಜಡ್ಡು, ಗೋಜಲು, ಜಿಂದಿಗಿ, ಅಬಚಿ, ಸೂಟಿ, ಅಡಚಣಿ, ಅಡಗಿ, ತಿನುಸಾಳಿ, ಖೊಳಂಬಿಸು, ಬುರಿಕೆ, ಯಾಕಾಗವಲ್ಲದು, ಹಳಹಳಿ, ಹುರುಪಳಿಸು, ಅರಿವೆ ಅಂಚಡಿ, ನೆಗೆಣ್ಣಿ ಮೊದಲಾದ ಪದಗಳು ಗಮನ ಸೆಳೆಯುತ್ತವೆ. 'ಸದ್ಗುಣಿ ಕೃಷ್ಣಾಬಾಯಿ' ಲೇಖಕಿಯರ ಹಾಗೂ ಶಾಂತಾಬಾಯಿಯವರ ಮೊದಲ ಕೃತಿ ಎಂಬ ಕಾರಣಕ್ಕೇ ಐತಿಹಾಸಿಕವಾಗಿ ಮುಖ್ಯವಾಗುವುದಿಲ್ಲ. ವಸಾಹತುಶಾಹಿ ಆಡಳಿತದ ಪರಿಣಾಮವಾಗಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಸೂಕ್ಷ್ಮ ಬದಲಾವಣೆಯ ಚಿತ್ರವಿದೆ. ವೈದ್ಯಶಾಸ್ತ್ರ, ವಕೀಲಿ ವೃತ್ತಿ, ಡಾಕ್ಟರ್ ವೃತ್ತಿ, ಖಾಸಗಿ ಕಂಪನಿಯಲ್ಲಿ ದುಡಿಸುವ ರೀತಿ, ಅಂಚೆ ಸೇವೆ, ತಾರು(ಟೆಲಿಗ್ರಾಂ) ಶಾಲಾರ್ವಾಕೋತ್ಸವ, ಪತ್ರಿಕೆ, ಕಂಪನಿ ನಾಟಕ, ಇಂಗ್ಲಿಷ್ ಸಾಹಿತ್ಯ, ಬದಲಾಗುತ್ತಿರುವ ಜೀವನ ಕ್ರಮ ಮೊದಲಾದ ಅಂಶಗಳನ್ನು ತನ್ನ ಒಡಲಿನಲ್ಲಿ ದಾಖಲಿಸಿದೆ. ಹೀಗಾಗಿ ಸಂಕ್ರಮಣ ಸ್ಥಿತಿಯಲ್ಲಿರುವ ಭಾರತೀಯ ಸಮಾಜ ಆಕಾರ ಪಡೆಯುತ್ತಿದ್ದ ವಿವಿಧ ಮುಖ ಮತ್ತು ವೈರುಧ್ಯಗಳನ್ನು ಯಾವುದೇ ಆಡಂಬರಗಳಿಲ್ಲದೆ ದಾಖಲಿಸುವ ಈ ಕೃತಿ ನಿಜ ಅರ್ಥದಲ್ಲಿ 'ಬದುಕಿನ ಕನ್ನಡಿ'ಯಾಗುತ್ತದೆ. ಸ್ವಾತಂತ್ರ್ಯಪೂರ್ವದ ಬದುಕನ್ನು ನಿರುದ್ವಿಗ್ನವಾಗಿ ಚಿತ್ರಿಸುವ ಈ ಕಾದಂಬರಿಯಲ್ಲಿ, ವಾಸ್ತವವಾದಿ ಸಾಹಿತ್ಯದ ಎಳೆಗಳು ಮೊದಲ ನೋಟಕ್ಕೆ ಎದುರಾಗುತ್ತವೆ.

    Read more...

    Sunday, October 3, 2010

    1

    ಸದ್ಗುಣಿ ಕೃಷ್ಣಾಬಾಯಿ - ಒಂದು ಮರುನೋಟ

  • Sunday, October 3, 2010
  • ಡಾ.ಶ್ರೀಧರ ಎಚ್.ಜಿ.
  • (ಎಸ್.ಡಿ.ಎಂ. ಕಾಲೇಜು ಉಜಿರೆಯವರು ಪ್ರಕಟಿಸಿದ ಶೋಧನ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ)

    ಶಾಂತಾಬಾಯಿ ನೀಲಗಾರ ಬರೆದ 'ಸದ್ಗುಣಿ ಕೃಷ್ಣಾಬಾ ಅಥವಾ ಉತ್ತಮ ಗೃಹಿಣಿ' (೧೯೦೮) ಕಾದಂಬರಿ ಪ್ರಕಟವಾಗಿ ಒಂದು ಶತಮಾನ ಕಳೆಯಿತು. ಲೇಖಕಿಯೊಬ್ಬರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ಎಂದು ಇದನ್ನು ಸದ್ಯಕ್ಕೆ ಸ್ವೀಕರಿಸಲಾಗಿದೆ. ಹೀಗಾಗಿ ಐತಿಹಾಸಿಕವಾಗಿ ಮೊದಲ ಕಾದಂಬರಿಕಾರ್ತಿ ಎಂಬ ಹೆಸರು ಸದ್ಯಕ್ಕೆ ಶಾಂತಾಬಾಯಿ ನೀಲಗಾರ ಅವರಿಗೆ ಸಲ್ಲುತ್ತದೆ.

    ಕೃತಿಯಲ್ಲಿ ೯೧ ಪುಟವಿದ್ದು ಇದರ ಬೆಲೆ ಎಂಟು ಅಣೆ. " ಚಚಡಿ ದೇಸಗತಿಯ ಕಾರಬಾರಿಗಳಾದ ಮ.ರಾ. ನರಸಿಂಹಾಚಾರ್ಯ ಕಾವ್ಯಾನಂದ ಪುಣೇಕರ ಎಂಬ ಸಭ್ಯಗೃಹಸ್ಥರು ತಮ್ಮ ಸ.ವಾ.ಸೌ. ರಾಧಾಬಾಯಿ ಪುಣೇಕರ ಇವರ ಸ್ಮರಣಕ್ಕಾಗಿ ಸಂತುಷ್ಟೋ ಭಾರ್ಯಾಯಾ ಭರ್ತಾ ಭರ್ತಾಭಾರ್ಯಾ ಪರಸ್ಪರಮ್ಯಸ್ಮಿನ್ನೇವ ಕುಲೇನಿತ್ಯಂ ಕಲ್ಯಾಣಂ ತತ್ರವೈದ್ರುವಮ್ಈ ಮನೂಕ್ತಿ ಶಿರೋಲೇಖನದ ನಿಬಂಧವನ್ನು ಬರೆಸುವುದಕ್ಕೆ ೨೫ರೂ ಪಾರಿತೋಷಕ ಕೊಡುತ್ತೇವೆಂದು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ತಿಳುಹಿಸಿದರು. ಈ ನಿಬಂಧವನ್ನು ನಮ್ಮ ದೇಶಭಗಿನಿಯರೊಳಗಿನವರೊಬ್ಬರು ಬರೆದರೆ ಬಹಳ ವಿಹಿತವಾಗುವುದೆಂದೂ ತಮ್ಮ ಅಭಿಪ್ರಾಯವನ್ನು ವ್ಯಕ್ತಮಾಡಿದ್ದರು. ಅದರಂತೆ ಸಂಘದವರು ಅಂತ:ಕರಣ ಪೂರ್ವಕವಾಗಿ ಆ ಕಾರ್ಯವನ್ನು ನನಗೆ ಒಪ್ಪಿಸಿದರು. ನಾನು ಒಂದು ಕಥಾರೂಪದಿಂದ ಅದನ್ನು ಕ್ರಮಕ್ರಮವಾಗಿ ವಾಗ್ಭೂಷಣದಲ್ಲಿ ಕೊಟ್ಟು ಮುದ್ರಿಸಿ ತಮ್ಮ ಮುಂದೆ ಇಟ್ಟಿರುವೆನು" ಎಂಬ ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ಲೇಖಕಿ ಈ ಕೃತಿ ಹುಟ್ಟಿ ಬಂದ ಹಿನ್ನೆಲೆ ಮತ್ತು ಆಶಯವನ್ನು ವಿವರಿಸಿದ್ದಾರೆ.

    ಮಹಿಳೆಯರನ್ನು ಬರವಣಿಗೆಯಲ್ಲಿ ತೊಡಗಿಸಲು ಸಂಘ ಸಂಸ್ಥೆಗಳು ಬಹುಮಾನಗಳನ್ನು ನೀಡುತ್ತಿದ್ದ ಅಂಶ ಇಲ್ಲಿ ವ್ಯಕ್ತವಾಗಿದೆ. ಈ ಬಗೆಯ ಆಹ್ವಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯಾಗಿ 'ಮಹಿಳೆಯ ಅಕ್ಷರಲೋಕ' ತೆರೆದುಕೊಂಡಿತು ಎನ್ನುವುದು ಗಮನಾರ್ಹ ಅಂಶ. ಕೃತಿಯ ಶೀರ್ಷಿಕೆಯ ಪುಟದಲ್ಲಿ ೧೯೦೮ ಎಂದಿದ್ದು ಪ್ರಸ್ತಾವನೆಯ ಕೊನೆಯಲ್ಲಿ 'ಧಾರವಾಡ ೩೧.೦೩.೦೯' ಎಂಬ ದಿನಾಂಕವು ನಮೂದಾಗಿದೆ. ಬಹುತೇಕ ಕೃತಿಯನ್ನು ೧೯೦೮ರಲ್ಲಿ ಬರೆದು ವಾಗ್ಭೂಷಣದಲ್ಲಿ ಕ್ರಮವಾಗಿ ಮುದ್ರಿಸಿ ೧೯೦೯ರಲ್ಲಿ ಇದನ್ನು ಒಟ್ಟು ಸೇರಿಸಿ ಕೃತಿ ರೂಪದಲ್ಲಿ ಪ್ರಕಟಿಸಿರಬೇಕು. 'ಪ್ರಸ್ತಾವನೆಯು' ಆಗಲೇ ಸೇರಿಕೊಂಡಿರಬೇಕು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ ಗ್ರಂಥಮಾಲೆಯ ೪೬ನೆಯ ಪುಸ್ತಕವಾಗಿ ಶಾಂತಾಬಾಯಿಯವರ ಕೃತಿ ಪ್ರಕಟವಾಗಿದೆ.

    ಶಾಂತಾಬಾಯಿ ನೀಲಗಾರ ಅವರು 'ಗರ್ಲಸ್ಕೂಲಿನ ಹೆ. ಮಿಸ್‌ಟ್ರೆಸ್' ಆಗಿದ್ದರು. ಅಂದರೆ ಉನ್ನತ ಶಿಕ್ಷಣವನ್ನು ಪಡೆದ ಲೇಖಕಿ ಬಾಲಕಿಯರ ಶಾಲೆಯಲ್ಲಿ ಮುಖ್ಯೋಪಾಧ್ಯಾನಿಯಾಗಿದ್ದರು. ಉಳಿದಂತೆ ಶಾಂತಾಬಾಯಿಯವರ ಬಗೆಗೆ ಖಚಿತ ಮಾಹಿತಿಗಳು ದೊರೆತಿಲ್ಲ. ಈ ಅಪೂರ್ವ ಕೃತಿಯನ್ನು ೧೯೯೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮರುಮುದ್ರಣ ಮಾಡಿದ್ದು ಇದಕ್ಕೆ ವಿಜಯಾ ದಬ್ಬೆಯವರು 'ಸಾಂಪ್ರದಾಕ ರೂಪ ಆಧುನಿಕ ಸತ್ತ್ವ' ಎಂಬ ಹೆಸರಿನಲ್ಲಿ ಕೃತಿಪರಿಚಯದ ಮಾತುಗಳನ್ನು ಆರಂಭದಲ್ಲಿ ಬರೆದಿರುವರು. ೧೯೯೬ರಲ್ಲಿ ಪ್ರಕಟವಾದ ಕೃತಿಯ ಮುಖಪುಟವನ್ನು ಈ ಲೇಖನದೊಂದಿಗೆ ಪ್ರಕಟಿಸಿದೆ.

    ಪಾಶ್ಚಾತ್ಯರ ಸಂಪರ್ಕದಿಂದಾಗಿ ಶತಮಾನಗಳಿಂದ ಬಂದ ಹಲವು ಆಚಾರ, ವಿಚಾರ, ಪದ್ಧತಿ, ಸಾಂಪ್ರದಾಕ ಮೌಲ್ಯಗಳ ಸ್ವರೂಪವು ಗುರುತು ಹಿಡಿಯಲಾಗದಷ್ಟು ವೇಗವಾಗಿ ಬದಲಾಯಿತು. ವಿರೋಧ, ಹೊಂದಾಣಿಕೆ, ಪರಿಷ್ಕಾರದ ನೆಲೆಗಳಲ್ಲಿ ಹೊಸ ಚಿಂತನೆಗಳು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಎಡೆಪಡೆದವು. ರಾಜಾರಾಂ ಮೋಹನ್‌ರಾಯ್ ಮುಂತಾದ ಸಮಾಜ ಸುಧಾರಕರ ಸುಧಾರಣಾವಾದಿ ಚಳುವಳಿ ಹಾಗೂ ಇಂಗ್ಲಿಷ್ ವಿದ್ಯಾಭ್ಯಾಸದ ಪರಿಣಾಮವಾಗಿ ಪರಂಪರಾಗತ ಶಿಕ್ಷಣ ಪದ್ಧತಿ ತನ್ನ ಅರ್ಥವಂತಿಕೆಯನ್ನು ಕಳೆದುಕೊಂಡು ಹೊಸ ದಿಕ್ಕಿನ ಕಡೆಗೆ ಚಲಿಸಿತು. ಪುರುಷರೊಂದಿಗೆ ಮಹಿಳೆಯರಿಗೂ ಶಿಕ್ಷಣದ ಬಾಗಿಲು ತೆರೆದುಕೊಂಡಿತು.

    ವಸಾಹತುಶಾಹಿ ಆಡಳಿತ, ಆಧುನಿಕ ಶಿಕ್ಷಣ, ಉದ್ಯೋಗದ ಹೊಸ ಸಾಧ್ಯತೆಂದಾಗಿ ಸಿದ್ಧಮಾದರಿಯ ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಯ ಒಳನೆಲೆಗಳಲ್ಲಿ ಬದಲಾವಣೆಯ ಚಲನೆ ಕಾಣಿಸಿಕೊಂಡಿತು. ಈ ದೃಷ್ಟಿಯಿಂದ 'ಸದ್ಗುಣಿ ಕೃಷ್ಣಾಬಾಯಿ' ಒಂದು ಗಮನಾರ್ಹ ಕೃತಿ. ಆಧುನಿಕ ಶಿಕ್ಷಣ ಸ್ತ್ರೀಗೆ ನೀಡಿದ ಒಳ ಎಚ್ಚರ ಈ ಕೃತಿಯ ನಾಯಕಿಯಲ್ಲಿದೆ. ಹೀಗಾಗಿ ಆಕೆಯಲ್ಲಿ ತನ್ನ ಪರಿಸರದ ಬದುಕಿನ ಚಲನೆಯನ್ನು ಬದಲಿಸುವ, ಮರು ರೂಪಿಸುವ ಶಕ್ತಿರುವುದನ್ನು ನೋಡಬಹುದು.

    ಕೃತಿಯ ಆರಂಭದಲ್ಲಿ ಬರುವ ಮಾತುಗಳಿಗೆ ಬದಲಾಗಿ ಶಿಕ್ಷಣವನ್ನು ಪಡೆದ ಸ್ತ್ರೀಯ ವ್ಯಕ್ತಿತ್ವದ ಸಾಧ್ಯತೆಗಳನ್ನು ಗುರುತಿಸುತ್ತಾ ಹೋಗುತ್ತದೆ. ಜೊತೆಗೆ ಸಾಮಾಜಿಕ ಸ್ತರಗಳಲ್ಲಿ ನೆಲೆಯೂರಿದ್ದ ಸ್ತ್ರೀ ವಿರೋಧಿ ನಿಲುವುಗಳನ್ನು ಮೌನವಾಗಿ ಮುರಿದು ಕಟ್ಟುತ್ತದೆ. ಶಾಂತಾಬಾಯವರ ಬರವಣಿಗೆಯಲ್ಲಿನ ಈ ಶಕ್ತಿ ಮುಂದಿನ ಸ್ತ್ರೀ ಪರ ಚಲನೆಗೆ ಮುನ್ನುಡಿಯಂತಿದೆ. ಕೃತಿಯಲ್ಲಿ ಏಳು ಪುಟದ ಉಪೋದ್ಘಾತ ಮತ್ತು ಒಂಬತ್ತು ಭಾಗವಿದೆ. ಉಪೋದ್ಘಾತದ ಭಾಗದಲ್ಲಿ ಲೇಖಕಿ ಉತ್ತಮ ಗೃಹಿಣಿಯಲ್ಲಿ ಇರಬೇಕಾದ ಗುಣಗಳನ್ನು ಸಾಂಪ್ರದಾಕ ತಿಳುವಳಿಕೆಯ ಹಿನ್ನೆಲೆಯಲ್ಲಿ ಗುರುತಿಸುತ್ತದೆ. ಹೊರನೋಟಕ್ಕೆ ಇಲ್ಲಿ ಲೇಖಕಿಯ ಧೋರಣೆಯು ಸಂಪ್ರದಾಯಕ್ಕಿಂತ ಭಿನ್ನವಾಗಿಲ್ಲ.

    " ಸುಶೀಲ ಸ್ತ್ರೀ ದೊರೆತರೆ ಅವನು ಶ್ರೀಮಂತನೇ ಇರಲಿ, ಬಡವನೇ ಇರಲಿ ಅವನು ನಿಜವಾಗಿ ಸುಖಿಯಾಗುವನು"(ಪು.೧) "ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಕೀರ್ತಿ ತರತಕ್ಕಂಥವರೇ ಉತ್ತಮ ಗೃಹಿಣಿಯರು" (ಪು.೨) "ನೀತಿವಂತಳೂ, ಈಶ್ವರ ನಿಷ್ಠಳೂ ಇದ್ದ ಹೊರ್ತು ಯಾರಿಗೂ ಉತ್ತಮ ಸ್ತ್ರೀ ಎಂಬ ಹೆಸರು ಬರಲಾರದು"(ಪು.೩) "ಯಾವ ಸ್ತ್ರೀಯು ತನ್ನ ಮನಸ್ಸನ್ನೂ ವಾಣಿಯನ್ನೂ ದೇಹವನ್ನೂ ತನ್ನ ಸ್ವಾಧೀನದಲ್ಲಿಟ್ಟುಕೊಂಡು ಪತಿಯ ಆಜ್ಞೆಯ ಹೊರತಾಗಿ ಯಾವ ಕೆಲಸವನ್ನೂ ಮಾಡುವುದಿಲ್ಲವೋ ಆಕೆಯೇ ಸಾಧ್ವಿಯೆಂದು ಮನು ನುಡಿದಿರುವನು"(ಪು.೩) "ನಿಜವಾದ ಪತ್ನಿ ಪತಿಯ ಸುಖವೇ ತನ್ನ ಸುಖವೆಂದು ಎಣಿಸುವಳು ಮತ್ತು ಅವನ ದು:ಖಗಳಲ್ಲಿ ಪಾಲುಗಾರಳಾಗುವಳು"(ಪು.೬) "ನಿಜವಾದ ಪತ್ನಿಯು ದೊಡ್ಡಮನಸ್ಸಿನವಳೂ, ಮಮತೆಯುಳ್ಳವಳೂ, ಸ್ವಾರ್ಥಶೂನ್ಯಳೂ ಇರುವಳು. ಆಕೆಯು ತನ್ನ ಸುಖದ ಕಡೆಗೆ ಲಕ್ಷ್ಯಕೊಡದೆ, ತನ್ನ ಪತಿಯ ಸುಖವೆ ತನ್ನ ಸುಖವೆಂದು ಎಣಿಸುವಳು".(ಪು.೬) ಇಂತಹ ಹಲವು ಮಾತುಗಳು ಈ ಭಾಗದಲ್ಲಿ ಬರುತ್ತವೆ. ಉತ್ತಮ ಗೃಹಿಣಿಯಲ್ಲಿರಬೇಕಾದ ಅಂಶಗಳನ್ನು ವ್ಯಕ್ತಮಾಡಿ ತೋರಿಸುವ ಚಿಕ್ಕ ಕಥೆಯನ್ನು ಬರೆಯುವೆನೆಂದು ತಿಳಿಸುವುದರೊಂದಿಗೆ ಉಪೋದ್ಘಾತ ಮುಗಿಯುವುದು.

    ಉಪೋದ್ಘಾತದಲ್ಲಿ ಬರುವ ವಿವರಗಳಿಗೆ ಕೃಷ್ಣಾಬಾಯ ಬದುಕು ಒಂದು ಮಾದರಿಯಾಗಿ ನಿಲ್ಲುತ್ತದೆ. ಕಥಾಸಾರಾಂಶ : ಕಥಾನಾಯಕಿ ಕೃಷ್ಣಾಬಾಯಿಯ ಹೆತ್ತವರು ಕರ್ನಾಟಕ ದೇಶದವರಾದರೂ ಸರಕಾರಿ ಕೆಲಸದ ಸಲುವಾಗಿ ಮಹಾರಾಷ್ಟ್ರ ದೇಶದಲ್ಲಿ ಬಹುಕಾಲ ವಾಸವಾಗಿದ್ದರು. ಈಕೆಯ ತಂದೆ ಹರಿವಂತ. ತಾಯಿ ರಾಧಾಬಾಯಿ. ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡ ಕೃಷ್ಣಾಬಾಯಿ ತನ್ನ ಅಣ್ಣ ಶಾಮರಾಯ ಹಾಗೂ ಗುರುಗಳ ಪ್ರೋತ್ಸಾಹದಿಂದ ಶಿಕ್ಷಣವನ್ನು ಕಲಿತಳು. ಇದರೊಂದಿಗೆ ಅಡಿಗೆ, ಕಸೂತಿ, ರಂಗವಲ್ಲಿ, ಹಾಡು, ಹೆಣಿಕೆ ಮುಂತಾದ ಗೃಹಕೃತ್ಯವನ್ನು ಶ್ರದ್ದೆಯಿಂದ ಕಲಿತಳು.

    ಉದ್ಯೋಗದ ನಿಮಿತ್ತ ಮುಂಬಯಿಗೆ ಬಂದ ಶಾಮರಾಯ ತಂಗಿಯನ್ನು ಅಲ್ಲಿನ ಝನಾನಾ ಮಿಶನದ ಬಾಲಿಕಾ ಶಾಲೆಗೆ ಸೇರಿಸಿದನು. ಶಿಕ್ಷಣದಲ್ಲಿ ಮೊದಲ ಸ್ಥಾನವನ್ನು ಪಡೆದ ಕೃಷ್ಣಾಬಾಗೆ ಅನೇಕ ಗಣ್ಯರ ಸಮ್ಮುಖದಲ್ಲಿ ಸುವರ್ಣಪದಕವೂ ಹಲವು ಇನಾಮುಗಳು ದೊರೆತು. ಬಹುಮಾನ ವಿತರಣೆಯ ಸಮಾರಂಭದಲ್ಲಿ ಕರ್ನಾಟಕ ಮೂಲದ ಭಾವೂಸಾಹೇಬ ಮತ್ತು ಆತನ ಮಗ ಮಾಧವರಾಯನ ಪರಿಚಯವಾಯಿತು.

    ಯೋಗಾಯೋಗವೆಂಬಂತೆ ಭಾವೂಸಾಹೇಬ ಮತ್ತು ಕೃಷ್ಣಾಬಾಯ ತಂದೆ ಹರಿವಂತರು ಬಾಲ್ಯ ಸ್ನೇಹಿತರಾಗಿದ್ದರು. ಇಲ್ಲಿ ಆದ ಪರಿಚಯ ಸಂಬಂಧಕ್ಕೆ ತಿರುಗಿ ಕೃಷ್ಣಾಬಾಯಿ ಮತ್ತು ಮಾಧವರಾಯನ ನಡುವೆ ವಿವಾಹ ನಡೆತು. ಇದಾಗಿ ಸ್ವಲ್ಪ ಸಮಯದಲ್ಲಿಯೇ ರಾಧಾಬಾಯಿಯ ಅರೋಗ್ಯ ಹವಾಮಾನದ ವ್ಯತ್ಯಯದಿಂದ ಹಾಳಾಗಿದ್ದರಿಂದ ಶ್ಯಾಮರಾಯನು ತಾಯಿಯನ್ನು ಕರೆದುಕೊಂಡು ಊರಿಗೆ ಹಿಂದಿರುಗಿದರು. ಆದರೆ ಯಾವುದೇ ಚಿಕಿತ್ಸೆಯೂ ಪರಿಣಾಮ ಬೀರದೆ ರಾಧಾಬಾಯಿ ಮೃತಳಾದಳು. ಇದಾಗಿ ಸ್ವಲ್ಪ ಸಮಯದಲ್ಲಿ ಅತ್ತೆ ರಮಾಬಾಯಿ ಮತ್ತು ಮಾವ ಬಾವೂಸಾಹೇಬರು ತೀರಿಕೊಂಡಳು.

    ಇದರಿಂದಾಗಿ ಮನೆಯ ಜವಾಬ್ದಾರಿ ಕೃಷ್ಣಾಬಾಯ ಹೆಗಲೇರಿತು. ಈ ವೇಳೆಗೆ ಆಕೆಯ ಪತಿ ಮಾಧವರಾಯ ಎಲ್.ಎಲ್.ಬಿ. ಪರೀಕ್ಷೆಯನ್ನು ಬರೆಯಲು ಅಧ್ಯಯನ ಮಾಡುತ್ತಿದ್ದನು. ಸಂಸಾರದ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ವಿಶಾಲವಾದ ಮನೆಯನ್ನು ಬಿಟ್ಟು ಬೇರೆ ಮನೆಗೆ ಹೋದರು. ಮುಂಬುಯಂಥ ಶಹರದಲ್ಲಿ ಸದ್ಯ ವಕೀಲಿ ಮಾಡುವುದು ಲಾಭಕರವಲ್ಲವೆಂದು ಯೋಚಿಸಿ ಮಾಧವರಾಯ ಮುಂಬುಯ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ಸ್ವಲ್ಪ ಸಮಯದಲ್ಲಿಯೇ ಆ ವೃತ್ತಿಯನ್ನು ತ್ಯಜಿಸಿ ಉನ್ನತ ಶಿಕ್ಷಣವನ್ನು ಪಡೆಯುವ ಹಂಬಲ ಹೆಚ್ಚಿತು.

    ಕೃಷ್ಣಾಬಾಯಿ ಗುಟ್ಟಿನಲ್ಲಿ ತನ್ನ ಒಡವೆಯನ್ನು ಮಾರಿ ಹಣದ ವ್ಯವಸ್ಥೆಯನ್ನು ಮಾಡಿದ್ದರಿಂದ ಸಿವಿಲ್ ಸರ್ವಿಸ್ ಅಥವಾ ಬ್ಯಾರಿಸ್ಟರ್ ಪರೀಕ್ಷೆಯನ್ನು ಬರೆಯಲು ಪತ್ನಿಯೊಂದಿಗೆ ಇಂಗ್ಲೆಂಡಿಗೆ ಹೊರಟನು. ಅವರು ಪ್ರಯಾಣ ಮಾಡುತ್ತಿದ್ದ ಹಡಗು ದಾರಿಯ ನಡುವೆ ಮುಳುಗುವ ಹಂತ ತಲುಪಿದಾಗ ಅಲ್ಲಿಂದ ಪಾರಾಗುವ ಗೊಂದಲದಲ್ಲಿ ಕೃಷ್ಣಾಬಾ ಯಿ ಮತ್ತು ಮಾಧವರಾಯ ಬೇರೆ ಬೇರೆ ಹಡಗುಗಳಿಗೆ ವರ್ಗಾಸಲ್ಪಟ್ಟರು. ಇದರ ಪರಿಣಾಮವಾಗಿ ಕೃಷ್ಣಾಬಾಯಿ ಮರಳಿ ಮುಂಬಯಿಗೂ , ಮಾಧವರಾಯ ಇಂಗ್ಲೆಂಡಿಗೂ ತಲುಪಿದರು. ಕೃಷ್ಣಾಬಾಯಿ ಪುಣೆಯ ತನ್ನ ಅಕ್ಕನ ಮನೆಯಲ್ಲಿ ಆಶ್ರಯಕ್ಕೆ ಬಂದಳು. ಅಕ್ಕನ ಮಕ್ಕಳಾದ ಕಾಶಿ, ಗೋದಾವರಿ, ಬಳವಂತರಿಗೆ ಸೂಕ್ತ ಶಿಕ್ಷಣ, ಮಾರ್ಗದರ್ಶನವನ್ನು ನೀಡಿ - ಗಂಗಾಬಾಯಿಯ ಮತ್ಸರದ ನಡುವೆಯೂ- ಎಲ್ಲರ ಮೆಚ್ಚುಗೆಯನ್ನು ಗಳಿಸಿದಳು. ಇಂಗ್ಲೆಂಡಿನ ವ್ಯಾಪಾರಿ ಲ್ಯಾಂಬರ್ಟಿನ್ ಸಾಹೇಬನ ನೆರವಿನಿಂದ ಮಾಧವರಾಯ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಮುಗಿಸಿ ಮುಂಬುಗೆ ಮರಳಿ ಪುಣೆಯಲ್ಲಿದ್ದ ಪತ್ನಿಯನ್ನು ಭೇಟಿಯಾದನು. ಅನಂತರ ಪುಣೆಯ ಅಸಿಸ್ಟೆಂಟ್ ಕಲೆಕ್ಟರನಾಗಿ ನೇಮಕಗೊಂಡನು. (ಮುಂದುವರಿಯುವುದು )
    Read more...

    Subscribe