Sunday, April 25, 2010

0

ತಿಂಗಳ ತರಂಗ - ಉಪನ್ಯಾಸ

  • Sunday, April 25, 2010
  • ಡಾ.ಶ್ರೀಧರ ಎಚ್.ಜಿ.
  • ವಾಸ್ತವತಾವಾದಿ ಪರಂಪರೆಯ ಮುಖ್ಯ ಸಾಹಿತ್ಯ ಪ್ರಕಾರ ಕಾದಂಬರಿ. ಸ್ವಾತಂತ್ರ್ಯ ಪೂರ್ವದ ಕಾದಂಬರಿಗಳಲ್ಲಿ ಆಧುನಿಕ ಶಿಕ್ಷಣದಿಂದ ಭಾರತೀಯ ಜೀವನ ಕ್ರಮದಲ್ಲಿ ಉಂಟಾದ ತಲ್ಲಣ, ಸೈದ್ಧಾಂತಿಕ ಸಂಘರ್ಷ, ಆದರ್ಶ ಮತ್ತು ಆಧ್ಯಾತ್ಮದ ಬಗೆಗಿನ ಚಿಂತನೆಗಳನ್ನು ನೋಡಲು ಸಾಧ್ಯ. ಸ್ವಾಸ್ಥ್ಯ ಸಮಾಜದ ಆದರ್ಶವನ್ನು ಇಟ್ಟುಕೊಂಡ ಕನಸುಗಾರಿಕೆ ಕನ್ನಡದ ಆರಂಭದ ಕಾದಂಬರಿಗಳಲ್ಲಿದೆ. ಪಾಶ್ಚಾತ್ಯ ಸಂಸ್ಕೃತಿಗೆ ತೆರೆದುಕೊಂಡ ಭಾರತೀಯ ಸಂಸ್ಕೃತಿ ಅನುಕರಣೆ, ಆತ್ಮಸಮರ್ಥನೆ ಮತ್ತು ಸುಧಾರಣೆಯ ಮಾರ್ಗದಲ್ಲಿ ಚಲಿಸಿದ್ದನ್ನು ಕನ್ನಡ ಕಾದಂಬರಿಗಳು ದಾಖಲಿಸಿವೆ ಎಂದು ಪ್ರಾಧ್ಯಾಪಕ ರಮೇಶ್ ಭಟ್ ಎಸ್. ಜಿ. ಹೇಳಿದರು.

    ಅವರು ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ತಿಂಗಳ ತರಂಗ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಪೂರ್ವ ಕನ್ನಡ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

    ಈ ಕಾಲದ ಕಾದಂಬರಿಗಳಲ್ಲಿ ಸಮಾಜ ಸುಧಾರಣೆಯ ಕಡೆಗಿನ ಚಿಂತನೆ ಮತ್ತು ವಿಶ್ಲೇಷಣೆ ವಿಶೇಷವಾಗಿ ಕಾಣುತ್ತದೆ. ಲೇಖಕರ ಅನುಭವದ ನೆಲೆ ಇಲ್ಲಿ ಮುಖ್ಯವಾಗಿತ್ತು ಎಂದು ಅವರು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಮಾತನಾಡುತ್ತ ಪಾಶ್ಚಾತ್ಯ ಶಿಕ್ಷಣವನ್ನು ಪಡೆದ ಪರಿಣಾಮವಾಗಿ ಭಾರತೀಯರಿಗೆ ವ್ಯವಸ್ಥೆಯನ್ನು ಹೊಸದೃಷ್ಟಿಯಿಂದ ನೋಡಲು ಸಾಧ್ಯವಾಯಿತು. ರಾಷ್ಟ್ರೀಯತೆ, ದೇಶೀಯತೆ ,ಆಧುನಿಕ ಶಿಕ್ಷಣದ ಪರಿಣಾಮ, ನಿಸರ್ಗದ ಕಡೆಗಿನ ಒಲವು ಈ ಕಾಲ ಘಟ್ಟದ ಕಾದಂಬರಿಗಳಲ್ಲಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಸಾಹಿತಿ ಡಾ. ಶ್ರೀನಿವಾಸ ಹಾವನೂರ ಮತ್ತು ರಂಗಭೂಮಿ ಕಲಾವಿದ ಆನಂದ ಗಾಣಿಗ ಇವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

    ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಸ್ವಾಗತಿಸಿದರು. ಶ್ರೀಮತಿ ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಶ್ರೀಧರ ಎಚ್. ಜಿ. ವಂದಿಸಿದರು.
    Read more...
    0

    ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ- ಬಹುಮಾನ ವಿತರಣೆ

  • ಡಾ.ಶ್ರೀಧರ ಎಚ್.ಜಿ.
  • ಪುತ್ತೂರು: ಡಾ.ಕೋಟ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರಂತರ ಕರುಳಿನ ಕುಡಿ ಕಾದಂಬರಿಯಲ್ಲಿ ಜೀವನ ಮೌಲ್ಯ ಎಂಬ ವಿಷಯಾಧಾರಿತ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕಾಲೇಜಿನಲ್ಲಿ ಶನಿವಾರ ನಡೆಯಿತು.
    ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಡಾ.ನಾ.ಮೊಗಸಾಲೆ ಬರೆಯುವವನಿಗೆ ಕನಿಷ್ಟ ಮೌಲ್ಯವಾದರೂ ಇರಬೇಕು. ಈ ಹಿನ್ನಲೆಯಲ್ಲಿ ಕಾರಂತರು ಆದರ್ಶಪ್ರಾಯರು. ಅವರ ಕುರಿತಾಗಿ ಮಾತನಾಡುವುದು ಅಥವ ಬರೆಯುವುದೆಂದರೆ ಜೀವನ ಮೌಲ್ಯಗಳ ಬಗೆಗೆ ಚರ್ಚಿಸಿದಂತೆ. ಇಂದು ನಾವೆಲ್ಲಾ ಚಿಂತಿಸುವ ಜಾಗತೀಕರಣದಂತಹ ಸಂಗತಿಗಳನ್ನು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ಕಾರಂತರು ವಿಶ್ಲೇಷಿಸಿದ್ದರು ಎಂದರು.
    ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ವಿಚಾರಗಳಿಗೆ ಒತ್ತಿಲ್ಲದಿರುವುದು ದುರದೃಷ್ಟಕರ. ಯುವ ಪೀಳಿಗೆಗೆ ಸರಿಯಾಗಿ ಮಾರ್ಗದರ್ಶನ ಮಾಡುವಲ್ಲಿ ಹಿರಿಯರು ಸೋತಿದ್ದಾರೆ. ಆದ್ದರಿಂದಲೇ ಮೌಲ್ಯಗಳ ಅಧಃಪತನವನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.
    ಅಧ್ಯಕ್ಷತೆ ವಹಿಸಿದ್ದ ಕಾರಂತ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ತಾಳ್ತಜೆ ವಸಂತ ಕುಮಾರ್ ಕಹಿ ವಾಸ್ತವದ ಜೊತೆಜೊತೆಗೇ ರಮ್ಯ ಬದುಕೂ ಇದೆ. ಅದನ್ನು ಯುವ ಪೀಳಿಗೆ ಅನುಭವಿಸುವಂತಾಗಬೇಕು ಎಂದರು.
    ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕೆ.ಎಂ.ಭೈರಪ್ಪ ಮೊದಲ ಸ್ಥಾನ ಪಡೆದರೆ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿದ್ಯಾರ್ಥಿ ಗಿರೀಶ್ ಎಂ.ಜಿ ದ್ವಿತೀಯ ಸ್ಥಾನಕ್ಕೆ ಭಾಜನರಾದರು. ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ವಿಜ್ಞಾನ ಪದವಿ ವಿದ್ಯಾರ್ಥಿ ಶರೋನ್ ಅಲೋವೆರಾ ತೃತೀಯ ಸ್ಥಾನ ಪಡೆದರು.
    ವೇದಿಕೆಯಲ್ಲಿ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಕೆ.ರಾಮಭಟ್, ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಎ.ವಿ.ನಾರಾಯಣ ಉಪಸ್ಥಿತರಿದ್ದರು.
    ವಿದ್ಯಾರ್ಥಿನಿ ಅನನ್ಯಾ ಬಿ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ವೇದವ್ಯಾಸ ಸ್ವಾಗತಿಸಿ ಪ್ರಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಎಚ್.ಮಾಧವ ಭಟ್ ವಂದಿಸಿದರು. ವಿದ್ಯಾರ್ಥಿ ಕೃಷ್ಣರಾಜ ಜೋಯಿಸ ಕಾರ್ಯಕ್ರಮ ನಿರೂಪಿಸಿದರು.
    Read more...

    Sunday, April 4, 2010

    3

    ೦೩.೦೪.೨೦೧೦ ಶನಿವಾರ - ಉಪನ್ಯಾಸ ಮತ್ತು ಕವಿಗೋಷ್ಟಿ

  • Sunday, April 4, 2010
  • ಡಾ.ಶ್ರೀಧರ ಎಚ್.ಜಿ.
  • ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಲಿಟರರಿ ಕ್ಲಬ್‌ನ ಸಹಯೋಗದಲ್ಲಿ ಚಂದ್ರಗಿರಿಯ ತೀರ ಕಾದಂಬರಿಯ ಬಗೆಗೆ ಉಪನ್ಯಾಸ, ಅನಂತರ ವಿದ್ಯಾರ್ಥಿಗಳಿಂದ ಬಹುಭಾಷಾ ಕವಿಗೋಷ್ಟಿ ನಡೆಯಿತು.
    ಸಾರಾ ಅಬೂಬಕರ್ ೨೫ ವರ್ಷಗಳ ಹಿಂದೆ ಬರೆದ ಕಾದಂಬರಿ ಚಂದ್ರಗಿರಿಯ ತೀರ. ಈ ಕೃತಿ ಪ್ರಕಟವಾಗಿ ೨೫ ವರ್ಷಗಳು ಕಳೆದ ಪ್ರಯುಕ್ತ ಇದರ ಕುರಿತು ಒಂದು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಸೂಕ್ಷ್ಮ ಸಂವೇದನೆಯುಳ್ಳ ಕವಿ ಮತ್ತು ವಿಮರ್ಶಕಿ ಡಾ. ಕವಿತಾ ರೈ ಉಪನ್ಯಾಸ ನೀಡುವ ಸಲುವಾಗಿ ಕಾಲೇಜಿಗೆ ಬಂದಿದ್ದರು. "ಮಹಿಳೆ : ಅಸ್ತಿತ್ವದ ಸಂಕಥನ" ಕೃತಿಯಲ್ಲಿ ಈ ಕಾದಂಬರಿಯ ಬಗೆಗೆ ಅವರು ವಿವಿಧ ನೆಲೆಯಲ್ಲಿ ಚಿಂತನೆ ನಡೆಸಿದ್ದಾರೆ. ಮಾತ್ರವಲ್ಲ, ಕನ್ನಡದಲ್ಲಿ ಬಂದಿರುವ ಕೆಲವು ಉತ್ತಮ ವಿಮರ್ಶೆಯ ಕೃತಿಗಳಲ್ಲಿ ಇದೂ ಒಂದು. ಆಸಕ್ತರು ಈ ಕೃತಿಯನ್ನು ನೋಡಬಹುದು.

    ಕಳೆದ ಮೂರು ವರ್ಷಗಳಿಂದ ಚಂದ್ರಗಿರಿಯ ತೀರ ಕಾದಂಬರಿಯ ಬಗೆಗೆ ಒಂದು ಉಪನ್ಯಾಸವನ್ನು ಏರ್ಪಡಿಸಬೇಕೆಂದು ಯೋಚಿಸಿದ್ದೆ. ಆದರೆ ಅದು ಕಾರ್ಯಗತವಾಗಿರಲಿಲ್ಲ. ಇಂದು ಅದು ಪ್ರಕಟವಾದ ೨೫ ವರ್ಷವಾದ ಈ ಸಂದರ್ಭದಲ್ಲಿ ಅದು ಈಡೇರಿದೆ.

    ಅಂಚಿಗೆ ಸರಿಸಲ್ಪಟ್ಟ ಅಸ್ಮಿತೆಗಳನ್ನು ಸಾಹಿತ್ಯದಲ್ಲಿ ತೋರಿಸಿದ ಸಾರಾ ಅವರ ಸಾಹಿತ್ಯ ವಿಶಿಷ್ಟವಾದುದು. ಧಾರ್ಮಿಕತೆ, ಪುರುಷನಿಷ್ಟ ಸಮಾಜ ಹೆಣ್ಣನ್ನು ದೇಹ ಮಾತ್ರ ಎಂದು ತಿಳಿದಿದೆ. ಮನಸ್ಸು ಇಲ್ಲವೇ ಇಲ್ಲವೆಂಬ ರೀತಿಯಲ್ಲಿ ನೋಡುತ್ತಿದೆ. ಧಾರ್ಮಿಕ ನಿರ್ಣಯಗಳು ಸ್ತ್ರೀಯ ಅಸ್ತಿತ್ವವನ್ನು ಅತಂತ್ರಗೊಳಿಸಿದಾಗ ನಾದಿರನಂತವರು ಆತ್ಮಹತ್ಯೆಯ ಮೂಲಕ ಪ್ರತಿರೋಧವನ್ನು ತೋರುತ್ತಾರೆ. ಕಾದಂಬರಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನೀಡುವ ವಿವಾಹ ವಿಚ್ಚೇದನವೂ ಹೆಣ್ಣಿನ ಬದುಕನ್ನು ವಿಚಲಿತಗೊಳಿಸುತ್ತದೆ. ಅಲ್ಲದೆ ಕಾದಂಬರಿಯಲ್ಲಿ ಎದುರಾಗುವ ಸಮಸ್ಯೆಯ ನಿವಾರಣೆಗೆ ಇರುವ ಹಲವು ಸಾಧ್ಯತೆಯನ್ನು ಲೇಖಕಿ ತೆರೆದಿಡುತ್ತಾ ಹೋಗುತ್ತಾರೆ. ಆದರೆ ಪುರುಷನಿಷ್ಠ ವ್ಯವಸ್ಥೆ ಇದರ ಕಡೆಗೆ ಗಮನಿಸದೆ ತನ್ನ ಮೂಗಿನ ನೇರಕ್ಕೆ ವ್ಯವಹರಿಸುತ್ತದೆ ಎಂದು ಡಾ. ಕವಿತಾ ರೈ ಉದಾಹರಣೆ ಸಹಿತ ವಿವರಿಸಿದರು.

    ಕಾರ್ಯಕ್ರಮದ ಎರಡನೆಯ ಭಾಗವಾಗಿ ನಡೆದ ಕವಿಗೋಷ್ಟಿಯಲ್ಲಿ ಕನ್ನಡ, ತುಳು, ಹವಿಗನ್ನಡ, ಹಿಂದಿ, ಕೊಡವ, ಇಂಗ್ಲಿಷ್ ಮೊದಲಾದ ಭಾಷೆಯಲ್ಲಿ ಬರೆದ ಕವನಗಳನ್ನು ವಿದ್ಯಾರ್ಥಿಗಳು ವಾಚಿಸಿದರು. ಇವರ ಕವಿತೆಗಳು ವರ್ತಮಾನದ ವಿವಿಧ ಸಮಸ್ಯೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾದವು.

    ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರಕ್ರಿಯೆಯನ್ನು ಕ್ರಿಯಾಶೀಲಗೊಳಿಸುವುದಕ್ಕೆ ಇಂತಹ ಕವಿಗೋಷ್ಟಿಗಳು ಪ್ರೇರಣೆಯಾಗುತ್ತವೆ. ಜಗತ್ತಿನಲ್ಲಿ ಕವನಕ್ಕೆ ವಸ್ತುವಾಗಬಲ್ಲ ಸಂಗತಿಗಳು ಸಾಕಷ್ಟಿವೆ. ಆದರೆ ಅವುಗಳನ್ನು ನಾವು ಹೇಗೆ ನೋಡುತ್ತೇವೆ ಮತ್ತು ಅಭಿವ್ಯಕ್ತಿಸುತ್ತೇವೆ ಎಂಬುದು ಮುಖ್ಯ. ಜನರ ಮನಸ್ಸನ್ನು ತಟ್ಟುವ ಭಾವನೆಗಳು ಕಾವ್ಯವಾಗುತ್ತದೆ. ಕಾವ್ಯವನ್ನು ಬರೆಯಲು ಕಾವ್ಯಭಾಷೆ ಮತ್ತು ವ್ಯವಧಾನವಿರಬೇಕು ಎಂದು ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಮಾಧವ ಭಟ್ ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲದೆ ಡಾ. ಇಂದಿರಮ್ಮ, ಡಾ. ಕವಿತಾ ರೈ, ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಮಾಧವ ಭಟ್ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.

    ಕಾರ್ಯಕ್ರಮದ ಆರಂಭದಲ್ಲಿ ಡಾ. ಶ್ರೀಧರ ಎಚ್. ಜಿ. ಸ್ವಾಗತಿಸಿದರು. ಭರತ್‌ರಾಜ್ ವಂದಿಸಿದರು. ಶ್ರೀಮತಿ ಮೋತಿಬಾಯಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
    Read more...

    Subscribe