Friday, September 10, 2010

1

ವಾಕಿಂಗ್ ಸ್ಟಿಕ್ ಬಿಟ್ಟದ್ದು . . . .

  • Friday, September 10, 2010
  • ಡಾ.ಶ್ರೀಧರ ಎಚ್.ಜಿ.
  • Share
  • ಇಲ್ಲಿರುವುದು ಆಸ್ಪತ್ರೆಯಿಂದ ಮನೆಗೆ ಬಂದ ಕ್ಷಣದ ಭಾವಚಿತ್ರ.
    ನಾನು ಜುಲೈ ೧೪ರಿಂದ ಕಾಲೇಜಿಗೆ ಹೋಗಲು ಆರಂಭಿಸಿದ್ದರೂ ಕಾಲು ಸಂಪೂರ್ಣ ಗುಣವಾಗಿರಲಿಲ್ಲ. ನಮಗೆ ಅವರಸರವಿದೆಯೆಂದು ರೋಗ ಗುಣವಾಗುತ್ತದೆಯೇ? ಅದಕ್ಕೆ ಅದರದ್ದೇ ಆದ ಸಮಯ ಹಿಡಿಯುತ್ತದೆ. ನಾನು ಹೋದ ದ್ವಿತೀಯ ಮತ್ತು ತೃತೀಯ ಪದವಿ ತರಗತಿಗಳಲ್ಲಿ ನನ್ನ ಕಾಲಿನ ಬಗೆಗೆ ವಿವರಣೆ ಕೊಡುವುದು ಅನಿವಾರ್ಯವಾಗಿತ್ತು. ಆದರೆ ಪ್ರಥಮ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನನ್ನ ಪರಿಚಯವಿಲ್ಲದ್ದರಿಂದ ಅವರಿಗೂ ಈ ಬಗೆಗೆ ವಿವರಿಸಬೇಕಾಯ್ತು. ಮೊದಲ ಒಂದು ವಾರ ಸಂಜೆಯಾಗುವಾಗ ಕಾಲಿಗೆ ವಿಪರೀತ ಆಯಾಸವಾಗುತ್ತಿತ್ತು.
    ಆದರೆ ನಿರಂತರವಾಗಿ ನಿಂತು ಪಾಠಮಾಡುವುದು ಅನಿವಾರ್ಯವೂ ಆಗಿತ್ತು. ತರಗತಿಗಳಲ್ಲಿ ಕುಳಿತು ಪಾಠಮಾಡುವುದಕ್ಕೆ ಸ್ವತ: ನನಗೇ ಕಿರಿಕಿರಿಯಾಗುತ್ತಿತ್ತು. ಇನ್ನು ಕುಳಿತುಕೊಳ್ಳಲು ಬೇಕಾದ ಸಾಧನವೂ ಇರಲಿಲ್ಲ. ಭಾಷಾ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಕುಳಿತರೆ ಹಿಂದಿನವರಿಗೆ ಕಾಣುವುದೂ ಇಲ್ಲ. ಹೀಗಾಗಿ ನಿಂತು ಪಾಠ ಮಾಡುವುದು ಒಂದು ಸಮಸ್ಯೆಯಾಗಿ ಕಾಡತೊಡಗಿತು. ಇದರ ಗೊಡವೆಯೇ ಬೇಡವೆಂದು ರಜೆ ಹಾಕುವ ಯೋಚನೆಯೂ ಬಂದಿತ್ತು. ಆದರೆ ಹಾಗೆ ಮಾಡಿದರೆ ಸೆಮಿಸ್ಟರ್ ವ್ಯವಸ್ಥೆಯಲ್ಲಿ ಪಾಠ ಮಾಡಿ ಮುಗಿಸುವುದಾದರೂ ಹೇಗೆ ? ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.
    ಒಂದು ವಾರವಾಗುವಾಗ ಅಭ್ಯಾಸವಾಗಿ ಕಾಲು ಸಹಕರಿಸಿತು. ಆದರೆ ಮೆಟ್ಟಿಲು ಹತ್ತಿ ಇಳಿಯುವುದೇ ಒಂದು ಸಾಹಸವಾತು. ನಮ್ಮ ಕನ್ನಡ ವಿಭಾಗವು, ನೆಲದಿಂದ ಸ್ವಲ್ಪದೂರ ಆಕಾಶಕ್ಕೆ ತುಸು ಹತ್ತಿರ ಎಂಬಂತಿರುವ ನಡುವಣ ಮಹಡಿಯಲ್ಲಿದೆ. ಈ ವಿಭಾಗದ ವಿಶೇಷವೆಂದರೆ ನಾನು ಸೇರಿದ ಮೇಲೆ ಇದು ನಾಲ್ಕನೆಯ ಸ್ಥಳ. ೧೯೮೭ರಲ್ಲಿ ನಾನು ಕಾಲೇಜಿಗೆ ಸೇರಿದಾಗ ವಿಭಾಗವು ನೆಲ ಮಹಡಿಯಲ್ಲಿತ್ತು. ಅನಂತರ ಅಲ್ಲಿ ಸ್ಥಳ ಕಿರಿದಾತೆಂದು ಕಾಲೇಜಿನ ಪ್ರವೇಶದ್ವಾರಕ್ಕೆ ಗೋಡೆ ಕಟ್ಟಿ ಅಲ್ಲಿಗೆ ವರ್ಗಾಸಲಾಯಿತು. ಇಲ್ಲಿ ನಾಲ್ಕಾರು ವರ್ಷ ಕಳೆದ ನಂತರ ಪ್ರವೇಶ ದ್ವಾರಕ್ಕೆ ಗೋಡೆ ಕಟ್ಟಿದ್ದು ಸರಿಯಲ್ಲ, ಇದು ವಾಸ್ತುದೋಷಕ್ಕೆ ಕಾರಣವಾಗಿದೆ ಎಂದು ಗೋಡೆಯನ್ನು ತೆಗೆದು ನಮ್ಮನ್ನು ತಾತ್ಕಾಲಿಕ ನೆಲೆಯಲ್ಲಿ ಸಸ್ಯಶಾಸ್ತ್ರ ವಿಭಾಗಕ್ಕೆ ಕಳಿಸಿದರು. ಅಲ್ಲಿ ಎರಡು ವರ್ಷ ಕಳೆದಮೇಲೆ ಈಗ ಪ್ರವೇಶದ್ವಾರದ ಮೇಲ್ಗಾಗದಲ್ಲಿ ಒಂಡು ಕೊಠಡಿಯಲ್ಲಿ ಠಿಕಾಣಿ ಹೂಡಿದ್ದೇವೆ. [ಈ ಕೊಠಡಿ ಒಂದು ಕಾಲದಲ್ಲಿ (ಸುಮಾರು ೨೦ ವರ್ಷದ ಹಿಂದೆ) ಮಹಿಳೆಯರ ವಿರಾಮದ ಕೊಠಡಿ ಮತ್ತು ಶೌಚಾಲಯವಾಗಿತ್ತು] ನಮ್ಮೊಂದಿಗೆ ಹಿಂದಿ, ಸಂಸ್ಕೃತ ಮತ್ತು ಪತ್ರಿಕೋದ್ಯಮ ವಿಭಾಗವೂ ಅಲ್ಲಿಯೇ ಇದೆ.
    ಹೀಗಾಗಿ ಒಂದೆರಡು ಸಣ್ಣ ತರಗತಿಗಳನ್ನು ನನ್ನ ವಿಭಾಗಕ್ಕೆ ಹತ್ತಿರವಿರುವ ಕೊಠಡಿಗಳಿಗೆ ವರ್ಗಾಯಿಸಿದೆ. ಆದರೂ ನೆಲ ಅಂತಸ್ತಿನಲ್ಲಿ ಮತ್ತು ಮೇಲಿನ ಮಹಡಿಯಲ್ಲಿ (ಇದನ್ನು ಸ್ವರ್ಗವೆಂದು ಕರೆಯುವ ಪದ್ಧತಿದೆ) ನಡೆಯುವ ತರಗತಿಗಳಿಗೆ ನಾನು ಹತ್ತಿ ಇಳಿಯದೆ ನಿರ್ವಾಹವಿರಲಿಲ್ಲ. ಇದಕ್ಕೆ ಮೆಟ್ಟಿಲು ಹತ್ತಿ ಇಳಿಯುವುದೆಂದರೆ ಪ್ರಾಣಕ್ಕೆ ಬರುತ್ತಿತ್ತು. ಆಗಸ್ಟ್ ೨೫ರವರೆಗೂ ವಾಕಿಂಗ್ ಸ್ಟಿಕ್ ಬಳಸಿ ಓಡಾಡುವುದು ಅನಿವಾರ್ಯವಾಗಿತ್ತು. ಅನಂತರ ಸಮತಟ್ಟಾದ ಪ್ರದೇಶದಲ್ಲಿ ನಡೆಯುವಾಗ ವಾಕಿಂಗ್ ಸ್ಟಿಕ್ ಬಳಸುವುದನ್ನು ಬಿಟ್ಟೆ. ಮೆಟ್ಟಿಲು ಇರುವಲ್ಲಿ ಮಾತ್ರ ಇದರ ನೆರವು ಪಡೆಯುತ್ತಿದ್ದೆ. ಸಪ್ಟಂಬರ್ ಒಂದರಿಂದ ಸಂಪೂರ್ಣವಾಗಿ ಸ್ಟಿಟ್ ಬಿಟ್ಟು ನಡೆಯಲು ಪ್ರಯತ್ನಿಸಿದೆ.
    ಹೀಗೆ ಯಾವುದೇ ನೆರವಿಲ್ಲದೆ ನಡೆದುಕೊಂಡು ಅಂತಿಮ ಬಿ.ಎ. ತರಗತಿಗೆ ಹೋದಾಗ ಮೊದಲ ಸಲ ಹೋದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆ ಕ್ಷಣದಲ್ಲಿ ಅವರು ನನ್ನ ಮೇಲಿಟ್ಟಿರುವ ಪ್ರೀತಿಗೆ ತುಸು ಬಾವುಕನಾದೆ. ಉಳಿದಂತೆ ಹಲವು ವಿದ್ಯಾರ್ಥಿಗಳು ಸ್ಟಿಕ್ ಬಿಡುವುದು ಯಾವಾಗ ಎಂದು ವಿಚಾರಿಸುತ್ತಲೇ ಇದ್ದರು. ಹೀಗೆ ಆರಂಭದಲ್ಲಿ ಕೇವಲ ಕೋಲಿನ ನೆರವಿನಿಂದ, ಅನಂತರ ಕಾಲು ಮತ್ತು ಕೋಲಿನ ಸಹಾಯದಿಂದ ನಡೆದ ನಾನು, ನನ್ನದೇ ಕಾಲಿನಲ್ಲಿ ಸ್ವತಂತ್ರವಾಗಿ ನಡೆಯಲು ಆರಂಭಿಸಿದಾಗ ವಿಚಿತ್ರ ಸಂತೋಷವಾಗತೊಡಗಿತು. ಎಲ್ಲರಂತೆಯೇ ನನಗೂ ನಡೆಯಲು ಸಾಧ್ಯ ಎಂಬ ಆತ್ಮವಿಶ್ವಾಸ ಮನಸ್ಸಿನಲ್ಲಿ ಮೂಡತೊಡಗಿತು. ಆರಂಭದಲ್ಲಿ ನೂರಕ್ಕೆ ನೂರು ಕೋಲು, ಅನಂತರದ ದಿನಗಳಲ್ಲಿ ಕೋಲು ಐವತ್ತು ಮತ್ತು ಕಾಲು ಐವತ್ತು, ದಿನಕಳೆದಂತೆ ಕಾಲು ಎಪ್ಪತ್ತೈದು ಕೋಲು ಇಪ್ಪತ್ತೈದು ಎಂಬ ಮಾಪನದಲ್ಲಿ ಕಾಲು ಮತ್ತು ಕೋಲಿನ ಸಾಂಗತ್ಯವಿತ್ತು. ಮೆಟ್ಟಿಲನ್ನು ಹತ್ತಿ ಇಳಿಯುವಾಗ ಮೊಳಕಾಲಿನಲ್ಲಿ ತುಸು ನೋವು ಕಾಣಿಸಿಕೊಂಡಿತು. ಮೆಟ್ಟಿಲ ಪಕ್ಕದಲ್ಲಿರುವ ದಂಡೆ ಅಥವಾ ಸರಳನ್ನು ಆಧಾರಕ್ಕೆ ಬಳಸಿದೆ. ಇದರಿಂದ ಶ್ರಮ ತುಸು ಕಡಿಮೆಯಾತು.

    ಮೆಡಿಕ್ಲೈಮ್ ಮಾಯೆ . . .
    ಹಿಂದೆ ನಾನು ಮೆಡಿಕ್ಲೈಮ್ ಮಾಡಿಸಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದೆ. ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಕ್ರೋಢೀಕರಿಸಿ ಪಟ್ಟಿಯನ್ನು ತಯಾರಿಸಿದೆ. ನಮ್ಮ ಕಾಲೇಜಿನಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿರುವ ಶ್ರೀ ಶಂಕರನಾರಾಯಣ ಭಟ್ಟರು ಈ ವಿಷಯದಲ್ಲಿ ನನಗೆ ಸೂಕ್ತ ಮಾರ್ಗದರ್ಶನವನ್ನು ಮಾಡಿದರು. ಪ್ರತಿಯೊಂದು ರಶೀದಿಗೂ ಡಾಕ್ಟರ್ ಬರೆದುಕೊಟ್ಟ ಚೀಟಿ ಕಡ್ಡಾಯವಾಗಿರಬೇಕು. ಇದಕ್ಕನುಗುಣವಾಗಿ ಒಂದೊಂದಾಗಿ ಜೋಡಿಸತೊಡಗಿದಾಗ ಕೆಲವು ಬಿಲ್‌ಗಳಿಗೆ ಡಾಕ್ಟರ್ ಬರೆದುಕೊಟ್ಟ ಚೀಟಿ ಇಲ್ಲದಿರುವುದು ಪತ್ತೆಯಾತು. ಆಸ್ಪತ್ರೆಗೆ ಹೋಗಿ ಬಿಲ್‌ಗಳಿಗೆ ಅನುಗುಣವಾಗಿ ಡಾಕ್ಟರ್ ಚೀಟಿಯನ್ನು ಬರೆಸಿಕೊಂಡು ಬಂದು ಜೋಡಿಸಲಾಯ್ತು. ಇದನ್ನು ಮೆಡಿಕ್ಲೈಮ್ ಅರ್ಜಿಯಲ್ಲಿ ತುಂಬಿ ಅಗತ್ಯ ದಾಖಲೆಗಳ ಮೂಲಪ್ರತಿಗಳನ್ನು ಜೊತೆಯಲ್ಲಿಟ್ಟು ಕಳಿಸಲಾಯ್ತು. ಎಕ್ಸ್‌ರೇ ಪ್ರತಿಯನ್ನೂ ನೀಡಬೇಕೆಂಬ ಬೇಡಿಕೆ ಪುತ್ತೂರು ಕಛೇರಿಂದ ಬಂತು. ನನ್ನಲ್ಲಿ ಆಪರೇಷನ್‌ಗಿಂತ ಮೊದಲು ತೆಗೆದ ಎಕ್ಸ್‌ರೇ ಮಾತ್ರವಿತ್ತು. ಆಪರೇಷನ್ ನಂತರ ತೆಗೆದ ಎರಡು ಎಕ್ಸ್‌ರೇಗಳು ವೈದ್ಯರ ಬಳಿತ್ತು. ಅವರು ಅದನ್ನು ಶೈಕ್ಷಣಿಕ ಉದ್ದೇಶದಿಂದ ತಮ್ಮಲ್ಲಿಯೇ ಉಳಿಸಿಕೊಂಡಿದ್ದರು. ಯಾವುದಾದರೂ ಸೆಮಿನಾರ್‌ಗಳಲ್ಲಿ ಪ್ರಬಂಧವನ್ನು ಮಂಡಿಸಲು ಅನುಕೂಲವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ನನ್ನಲ್ಲಿ ಇರುವ ಒಂದು ಪ್ರತಿಯನ್ನು ಕಳಿಸಿದೆ.
    ಇದಾಗಿ ಒಂದು ವಾರದಲ್ಲಿ ಬೆಂಗಳೂರಿನ ಮೆಡಿಕ್ಲೈಮ್ ಕಛೇರಿಂದ ಎರಡು ಪ್ರಶ್ನೆಗಳನ್ನು ಕೇಳಿ ಒಂದು ಕಾಗದ ಬಂತು! ಅದರಲ್ಲಿ ಮೊದಲ ಪ್ರಶ್ನೆಗೆ ಅಪಘಾತವಾದಾಗ ನಾನು ಯಾವುದೇ ರೀತಿಯ ಆಲ್ಕೊಹಾಲ್ ಸೇವಿಸಿರಲಿಲ್ಲವೆಂದು ವೈದ್ಯರ ಪ್ರಮಾಣಪತ್ರವನ್ನು ನೀಡಬೇಕಾಗಿತ್ತು. ಎರಡನೆಯ ಪ್ರಶ್ನೆಗೆ ಇದು ಪೋಲೀಸ್ ಕೇಸ್ ಅಲ್ಲದ ಅಪಘಾತವೆಂದು ವೈದ್ಯರು ದೃಢೀಕರಣ ನೀಡಬೇಕಾಗಿತ್ತು. ನಾನು ಕುಡಿದಿರಲಿಲ್ಲ ಎಂಬ ಸರ್ಟಿಫಿಕೇಟನ್ನು ನಾನೇ ನೀಡುವಂತೆ ಆದುದು ಒಂದು ವೈಚಿತ್ರ್ಯವೇ ಸರಿ. ಈ ಬಗೆಯ ಪಾಲಿಸಿಗಳನ್ನು ಮಾಡುವಾಗ ಅತ್ಯಂತ ಸರಳ ಮಾದರಿ. ಯಾವುದೇ ತರ್ಲೆಗಳಿಲ್ಲ ಎಂದು ಬಣ್ಣದ ಮಾತುಗಳಲ್ಲಿ ಪ್ರತಿನಿಧಿಗಳು ಹೇಳುವಾಗ ನಾವು ಮರುಳಾಗುತ್ತೇವೆ. ಅನಂತರ ಒಂದೊಂದೆ ಕಿರಿಕ್ಕುಗಳನ್ನು ಆರಂಭಿಸುತ್ತಾರೆ. ಇನ್ನಾವ ಪ್ರಶ್ನೆಯನ್ನು ಕೇಳುವರೆಂದು ಕಾಯುತ್ತಿದ್ದೇನೆ.
    ವೈದ್ಯೋ ನಾರಾಯಣೋ ಹರಿ: . . . .
    ಒಟ್ಟಿನಲ್ಲಿ ಒಂದು ಅಪೂರ್ವ ಅನುಭವವನ್ನು ಈ ಅಪಘಾತ ನೀಡಿದೆ. ಆಸ್ಪತ್ರೆಯ ಬದುಕಿನ ಒಳನೋಟವನ್ನು ಪಡೆಯಲು ನನಗೆ ಇದರಿಂದ ಸಾಧ್ಯವಾಯಿತು. ಮುಂಜಾನೆಯಿಂದ ರಾತ್ರಿಯವರೆಗೆ ಕೆಲಸ ಮಾಡುವ ವೈದ್ಯರು, ನರ್ಸ್‌ಗಳ ಶ್ರಮದಾಯಕ ಕೆಲಸದ ಅರಿವು ನನ್ನಲ್ಲಿ ಮೂಡಿತು. ಇಷ್ಟಾಗಿಯೂ ಅವರು ಎಲ್ಲಾ ರೋಗಿಗಳಲ್ಲಿ ಅತ್ಯಂತ ಸಮಾಧಾನದಿಂದ ಮಾತನಾಡುವುದು, ಅವರಿಗೆ ಸಾಂತ್ವನ ಹೇಳುವುದು ನಿಜಕ್ಕೂ ಒಂದು ಅದ್ಭುತವೇ ಸರಿ. ಆದ್ದರಿಂದ ವೈದ್ಯಕೀಯ ಜಗತ್ತನ್ನು ವೃತಿಯಾಗಿ ಆರಿಸಿಕೊಳ್ಳಲು ಬಯಸುವವರಿಗೆ ಅಪಾರವಾದ ತಾಳ್ಮೆ, ಶ್ರದ್ಧೆ, ರೋಗಿಗಳ ಮನಸ್ಸನ್ನು ಅರ್ಥಮಾಡಿಕೊಂಡು ವ್ಯವಹರಿಸುವ ಜಾಣ್ಮೆ ಇರುವುದು ಅನಿವಾರ್ಯ. ಇದಿಲ್ಲದಿದ್ದವರು ಅನಂತರ ರೂಢಿಸಿಕೊಳ್ಳುವುದು ಅತ್ಯಗತ್ಯ. ಹೀಗಿರುವವರಿಗೆ ವೈದ್ಯೋ ನಾರಾಯಣೋ ಹರಿ: ಎಂಬ ಮಾತು ಸರಿಯಾಗಿ ಅನ್ವಯವಾಗುತ್ತದೆ.
    ಆಸ್ಪತ್ರೆಯ ದಿನಗಳನ್ನು ನನ್ನ ಅನುಭವದ ಹಿನ್ನೆಲೆಯಲ್ಲಿ ಇಲ್ಲಿ ಒಂದಷ್ಟು ದಾಖಲಿಸಿದ್ದೇನೆ. ಇದನ್ನು ಎಷ್ಟು ಜನ ಓದುತ್ತಾರೆ ಎಂಬ ಅರಿವು ನನಗಿರಲಿಲ್ಲ. ಮೊದಲ ಎರಡು ಕಂತನ್ನು ಪ್ರಕಟಿಸಿದಾಗ, ಅದಕ್ಕೆ ಪ್ರತಿಕ್ರಿಯೆ ಬಂದಾಗ ಕೆಲವರಾದರೂ ಓದುಗರಿದ್ದಾರೆ ಎಂಬ ವಿಶ್ವಾಸ ಬಂತು. ಕಳೆದ ವಾರ ನನ್ನ ವಿದ್ಯಾರ್ಥಿ ಸುಶಾಂತ್ ಬನಾರಿ ಇದಕ್ಕೊಂದು ಸಂಖ್ಯಾಮಾಪಕವನ್ನು ಅಳವಡಿಸಿದ್ದರಿಂದ ಇದನ್ನು ಓದುವವರಿದ್ದಾರೆ ಎಂಬ ಭರವಸೆ ಮೂಡಿತು.
    ಕಳೆದವಾರ ಮಡಿಕೇರಿಯ ನನ್ನ ವಿದ್ಯಾರ್ಥಿನಿ ಶ್ರೀಧನ್ಯ ದೂರವಾಣಿಯಲ್ಲಿ ಸಂಪರ್ಕಿಸಿ ನನ್ನ ಆರೋಗ್ಯವನ್ನು ವಿಚಾರಿಸಿದರು. "ನಾವೆಲ್ಲ ನಿಮ್ಮ ನೆರಳಿನಲ್ಲಿ ಬೆಳೆದಿದ್ದೇವೆ ಸರ್, ನೀವು ಆದಷ್ಟು ಬೇಗ ಗುಣವಾಗಬೇಕು" ಎಂಬ ಮಾತನ್ನು ಶ್ರೀಧನ್ಯ ಹೇಳಿದಾಗ ನನ್ನಲ್ಲಿ ನಿಜಕ್ಕೂ ಧನ್ಯತೆಯ ಭಾವ ಮೂಡಿತು. ವಿದ್ಯಾರ್ಥಿಗಳಿಗೆ ಇನ್ನೂ ನನ್ನ ನೆನಪಿದೆಯಲ್ಲಾ ಎಂಬ ಭಾವದಿಂದ ಮನಸ್ಸು ತುಂಬಿ ಬಂತು. ಆಕೆ ಕಳೆದ ಕೆಲವು ಸಮಯದಿಂದ ಸಂಪರ್ಕದಲ್ಲಿ ಇರಲಿಲ್ಲ. ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದರಿಂದ ಸಂಪರ್ಕದ ಕೊಂಡಿ ಕಳಚಿ ಹೋಗಿತ್ತು.
    ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಇದನ್ನು ಓದುತ್ತಿದ್ದರೆ ದಯವಿಟ್ಟು ಸಂಪರ್ಕದಲ್ಲಿರಿ. ಕಾಲೇಜಿಗೆ ನ್ಯಾಕ್ ಬರುವ ದಿನಗಳು ಹತ್ತಿರದಲ್ಲಿದೆ. ಆ ಸಂದರ್ಭದಲ್ಲಿ ನಿಮ್ಮ ಉಪಸ್ಥಿತಿ ಸಂಸ್ಥೆಗೆ ತುಂಬಾ ಅಗತ್ಯ.
    ಕೆಲವರು ನೆನಪಿನಂಗಳವನ್ನು ಮುಂದುವರಿಸಿ ಎಂದು ಕೇಳಿದ್ದಾರೆ. ಅದು ಮುಂದಿನ ದಿನಗಳಲ್ಲಿ ಮುಂದುವರಿಯುತ್ತದೆ. ಹಾಗೆಯೇ ಕನ್ನಡದಲ್ಲಿ ಲೇಖಕಿಯೊಬ್ಬರು ಬರೆದ ಮೊದಲ ಕಾದಂಬರಿ 'ಸದ್ಗುಣಿ ಕೃಷ್ಣಾಬಾಯಿ' ಕಾದಂಬರಿಯ ಬಗೆಗೆ ಲೇಖನವೊಂದು ಇಷ್ಟರಲ್ಲಿಯೇ 'ಸಿರಿಮನೆ'ಯನ್ನು ಅಲಂಕರಿಸಲಿದೆ. ಶಬ್ದವಿಹಾರ ಮತ್ತೆ ಆರಂಭವಾಗಲಿದೆ. ಓದುಗರಾದ ನಿಮ್ಮ ಬೆಂಬಲ, ಹಾರೈಕೆ, ಹೀಗೇ ಇರಲಿ. 'ಸಿರಿಮನೆ'ಗೆ ಭೇಟಿ ನೀಡುತ್ತಿರುವ ಎಲ್ಲರಿಗೂ ನನ್ನ ಕೃತಜ್ಞತೆಗಳು.
    ನನ್ನ ಈ ಮೇಲ್ ವಿಳಾಸ sreedharahg63@gmail.com ಗೂ ನೀವು ಪ್ರತಿಕ್ರಿಯೆಯನ್ನು ಕಳಿಸಬಹುದು. ಹಾಗೆಯೇ ಬರೆಯಲಾಗದವರು ದೂರವಾಣಿ ೦೮೨೫೧-೨೩೪೩೪೨ಗೆ ಮಾತನಾಡಿ ಸಂಪರ್ಕವನ್ನು ಬೆಳೆಸಬಹುದು. ಗುರುತಿನವರಾದರೆ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಸಾಧ್ಯ. ಸ್ಥಿರ ದೂರವಾಣಿಗೆ ಮಾತನಾಡುವವರು ಸಂಜೆ ೮ ಗಂಟೆಯ ನಂತರ ಮಾತನಾಡಬೇಕಾಗಿ ವಿನಂತಿ.
    ವಾಹನಗಳನ್ನು ಜಾಗರೂಕತೆಯಿಂದ ನಡೆಸಿ. ನಿಮ್ಮ ಹಿಂದಿನವರಿಗೂ ಜಾಗರೂಕತೆಯಿಂದ ವಾಹನ ಚಲಾಯಿಸಲು ಭಗವಂತ ಬುದ್ದಿಕೊಡಲಿ.
    ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು

    1 Responses to “ವಾಕಿಂಗ್ ಸ್ಟಿಕ್ ಬಿಟ್ಟದ್ದು . . . .”

    kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...
    September 10, 2010 at 8:04 PM

    ಸಾರ್, ನಿಮ್ಮ ಈ ಆಸ್ಪತ್ರೆವಾಸದ ಎಲ್ಲಾ ಅನುಭವ ಕಥನ ಓದಿದ ಮೇಲೆ ನನಗನ್ನಿಸಿದ್ದು ನಿಮ್ಮಈ ಎಲ್ಲ ನೋವನ್ನೂ ಇಷ್ಟು ಸ್ವಾರಸ್ಯವಾಗಿಸಿದಿರಲ್ಲ ಎ೦ದು.ನೀವು ಗುಣಮುಖರಾದ್ದು ಕೇಳಿ ಸ೦ತೋಷವಾಯಿತು.ಬಿಡುವಾದಾಗಲೊಮ್ಮೆ ಬ೯ದು ಭೇಟಿಯಾಗುತ್ತೇನೆ ಸಾರ್,ಅನ್ಯಥಾ ಭಾವಿಸದಿರಿ.ನಮಸ್ಕಾರ.


    Subscribe