Monday, December 27, 2010

0

ಕ್ವಾಟ : ಶಬ್ದಲೋಕ

  • Monday, December 27, 2010
  • ಡಾ.ಶ್ರೀಧರ ಎಚ್.ಜಿ.
  • ಕ್ವಾಟ ಎಂದರೇನು ಗೊತ್ತೇ ? ಗೊತ್ತಿಲ್ಲದಿದ್ದರೆ ಮುಂದೆ ಓದಿ.

    ಮಲೆನಾಡಿನಲ್ಲಿ ಈ ಸಲ ಒಳ್ಳೆಯ ಚಳಿ ಬಿದ್ದಿದೆ. ಒಂದು ರೀತಿಯಲ್ಲಿ ಕಿತ್ತು ತಿನ್ನುವ ಚಳಿ ಎಂದರೂ ತಪ್ಪಿಲ್ಲ. ಹಾಗೆ ನೋಡಿದರೆ ನನು ಇರುವ ಪುತ್ತೂರಿನಲ್ಲಿಯೂ ಈಸಲ ಸಾಕಷ್ಟು ವಾಡಿಕೆಗಿಂತ ಹೆಚ್ಚಿನ ಚಳಿ ಇದೆ.

    ಮಲೆನಾಡಿನಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಬಳಸುವ ಒಂದು ಅಪರೂಪದ ಶಬ್ದ ಕ್ವಾಟ. ಹೀಗೆ ಹೇಳಿದರೆ ಅರ್ಥವಾಗಲಿಕ್ಕಿಲ್ಲ.

    ಚಳಿಗಾಲದಲ್ಲಿ ಮುಂಜಾನೆ ಮುಖತೊಳೆಯುವುದು, ಕೈಕಾಲಿಗೆ ತಣ್ಣನೆಯ ನೀರು ಸುರಿದುಕೊಳ್ಳುವುದು ಒಂದು ರೀತಿ ರೋಮಾಂಚನ ನೀಡುವ ಅನುಭವ. ಈ ಸಂದರ್ಭದಲ್ಲಿ ಹಂಡೆಯಲ್ಲಿ ಅಥವಾ ಮಣ್ಣಿನಿಂದ ತಯಾರಿಸಿದ ಬಾನಿಯಲ್ಲಿ ತುಂಬಿಸಿಟ್ಟ ನೀರು ಮುಂಜಾನೆಯ ಹೊತ್ತಿಗೆ ತಣ್ಣಗೆ ಕೊರೆಯುತ್ತಿರುತ್ತದೆ. ಈ ಬಗೆಯ ತಣ್ಣನೆಯ ನೀರನ್ನು ಆಡುಮಾತಿನಲ್ಲಿ ಕ್ವಾಟ ಎಂದು ಕರೆಯುವುದಿದೆ.

    ಹಂಡೆಯ ನೀರನ್ನು ಮುಟ್ಟಲು ಸಾಧ್ಯವಿಲ್ಲ. ಕ್ವಾಟಾ ಅಂದ್ರೆ ಕ್ವಾಟ. ಬಿಸಿ ನೀರು ಇದ್ದರೆ ಚೆನ್ನಾಗಿತ್ತು ಎಂಬ ಮಾತುಗಳನ್ನು ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಕೇಳಬಹುದು.
    ನೀವೂ ಕ್ವಾಟದ ಸುಖವನ್ನು ಅನುಭವಿಸಿ.
    Read more...
    0

    ಪ್ರೊ. ಮಾಲತಿ ಪಟ್ಟಣ ಶೆಟ್ಟಿಗೆ ನಿರಂಜನ ಪ್ರಶಸ್ತಿ

  • ಡಾ.ಶ್ರೀಧರ ಎಚ್.ಜಿ.


  • ಇಲ್ಲಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರವು ಪ್ರತಿ ವರ್ಷ ನೀಡುವ ನಿರಂಜನ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಾಹಿತಿ ಪ್ರೊ. ಮಾಲತಿ ಪಟ್ಟಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಜನವರಿ ೯ರಂದು ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

    ಕಥೆ, ಕವಿತೆ, ಸಂಪಾದನೆ, ವಿಮರ್ಶೆ, ಭಾಷಾಂತರ ಮೊದಲಾದ ಸಾಹಿತ್ಯಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ನಿರಂಜನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

    ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ಮೌನಕರಗುವ ಹೊತ್ತು, ಎಷ್ಟೊಂದು ನಾವೆಗಳು ಮುಂತಾದ ಕವನ ಸಂಕಲನ, ಇಂದು ನಿನ್ನಿನ ಕಥೆಗಳು, ಸೂರ್ಯಮುಳುಗುವುದಿಲ್ಲ ಕಥಾಸಂಗ್ರಹ, ಬಸವರಾಜ ಕಟ್ಟೀಮನಿ ಮತ್ತು ಶ್ರೀನಿವಾಸ ವೈದ್ಯ ಬದುಕು ಬರಹ ಕೃತಿಗಳಲ್ಲದೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ರೇಡಿಯೋ ನಾಟಕ, ಮಕ್ಕಳ ನಾಟಕ, ಮಕ್ಕಳ ಪ್ರವಾಸ ಕಥನ, ಮಹಿಳೆಯರ ಸಾಮಾಜಿಕ ಸಮಸ್ಯೆಯನ್ನು ಕುರಿತು ಸಾಕಷ್ಟು ಕೆಲಸ ಮಾಡಿದ್ದಾರೆ.

    ಮೂಸಲ ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಟಾನದ ರಾಷ್ಟ್ರಮಟ್ಟದ ವರ್ಷದ ಲೇಖಕಿ ಪ್ರಶಸ್ತಿ-೨೦೦೯, ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ, ಮದರ್ ಥೆರೇಸಾ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ-ಸನ್ಮಾನಗಳಿಗೆ ಭಾಜನರಾಗಿರುವ ಮಾಲತಿ ಪಟ್ಟಣಶೆಟ್ಟಿ ಇವರ ಮುಡಿಗೆ ಇದೀಗ ನಿರಂಜನ ಪ್ರಶಸ್ತಿಯ ಗೌರವ ದೊರೆತಿದೆ.

    ಮೂಲತಃ ಕೊಲ್ಹಾಪುರದವರಾದ ಇವರು ಧಾರವಾಡದ ಜಿ.ಎಸ್.ಎಸ್. ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ-ಮುಖ್ಯಸ್ಥೆಯಾಗಿ ಸುಮಾರು ೩೪ ವರ್ಷ ಸೇವೆ ಸಲ್ಲಿಸಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಕೃತಿಗಳು ಕರ್ನಾಟಕ ವಿಶ್ವವಿದ್ಯಾನಿಲಯ ಹಾಗೂ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿರುವುದನ್ನೂ ಇಲ್ಲಿ ಸ್ಮರಿಸಬಹುದು.
    Read more...

    Thursday, December 16, 2010

    3

    ಶಬ್ದಗಳೊಂದಿಗೆ ಸಲ್ಲಾಪ :

  • Thursday, December 16, 2010
  • ಡಾ.ಶ್ರೀಧರ ಎಚ್.ಜಿ.


  • ವಬ್ಬೆ: ಹವ್ಯಕ ಭಾಷೆಯಲ್ಲಿ ಬಳಕೆಯಲ್ಲಿರುವ ಅಪರೂಪದ ಪದವಿದು. ಇತ್ತೀಚೆಗೆ ಊರಿಗೆ ಹೋದಾಗ ಮಾತಿನ ನಡುವೆ ಈ ಪದ ಬಂದುಹೋಯಿತು. ಅವತ್ತು ಮನೆಯಲ್ಲಿ ಬೆಳಗಿನ ತಿಂಡಿಗೆ ಇಡ್ಲಿಮಾಡಿದ್ದರು. ತಿಂಡಿ ಬಹುತೇಕ ಮುಗಿಯುತ್ತ ಬಂದಿತ್ತು. ಅಮ್ಮ ಮಾತನಾಡುವಾಗ ”ಇನ್ನೊಂದು ವಬ್ಬೆ ಇಡ್ಲಿ ಮಾಡಿದರೆ ಸಾಕು” ಎಂದರು. ತಕ್ಷಣ ನನ್ನ ಕಿವಿ ನೆಟ್ಟಗಾಯಿತು. ಇಲ್ಲಿ ’ವಬ್ಬೆ’ ಎಂದರೆ ’ಒಂದು ಸಲ, ಒಂದು ಬಾರಿ’ ಎಂದು ಅರ್ಥ.

    ಎಲ್ಲ ಸಂದರ್ಭಗಳಲ್ಲಿ ಈ ಪದ ಬಳಕೆಯಾಗುವುದಿಲ್ಲ. ತಿಂಡಿಗೆ ಸಂಬಂಧಿಸಿ ಈ ಪದ ಹೆಚ್ಚು ಬಳಕೆಯಾಗುತ್ತದೆ. ಅದರಲ್ಲಿಯೂ ಏಕ ಕಾಲಕ್ಕೆ ಒಂದಕ್ಕಿಂತ ಹೆಚ್ಚು ಮಾಡುವ ತಿಂಡಿಗಳಿಗೆ ಈ ಪದವನ್ನು ಬಳಸುವರು. ಇಡ್ಲಿಯನ್ನು ಹೊರತು ಪಡಿಸಿದರೆ ಒಂದು ವಬ್ಬೆ ಸುಟ್ಟವ್ವು, ಒಂದು ವಬ್ಬೆ ವಡೆ ಮುಂತಾದವುಗಳನ್ನು ಹೇಳುವಾಗ ಈ ಪದ ಬಳಕೆಯಲ್ಲಿದೆ. ಹಾಗೆಯೇ ಹಿಂದಿನ ಕಾಲದಲ್ಲಿ ಅವಲಕ್ಕಿಯನ್ನು ಕುಟ್ಟಿ ಮಾಡಿಕೊಳ್ಳ ಬೇಕಾಗಿತ್ತು. ಆಗಲೂ ’ಇನ್ನು ಒಂದು ವಬ್ಬೆ ಅವಲಕ್ಕಿ ಮಾಡಿದರೆ ಆಯಿತು’ ಎಂಬಲ್ಲಿ ಈ ಪದ ಬಳಕೆಯಾಗುತ್ತಿತ್ತು.

    ದಕ್ಷಿಣ ಕನ್ನಡದಲ್ಲಿ ಈ ಪದಕ್ಕೆ ಸಮನಾಗಿ ಬೇರೆ ಪದ ಬಳಕೆಯಲ್ಲಿ ಇದ್ದಂತಿಲ್ಲ. ಆದರೆ ಉತ್ತರ ಕನ್ನಡದಲ್ಲಿ ಇದಕ್ಕೆ ಹುಬ್ಬೆ ಎಂಬ ಪದವನ್ನು ಬಳಸುತ್ತಾರೆ.

    Read more...
    0

    ನೆನಪಿನಂಗಳ ೪ - ಹಿರಿಯರ ಹೆಜ್ಜೆ ಗುರುತು

  • ಡಾ.ಶ್ರೀಧರ ಎಚ್.ಜಿ.

  • ಈಗ ಗೊತ್ತಿರುವ ಮಟ್ಟಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಹೆಗ್ಗಾರಳ್ಳಿ ನಮ್ಮ ಮೂಲ ಸ್ಥಳ. ಆ ಊರಿನಲ್ಲಿ ನಮ್ಮ ಬಂಧುಗಳು ಈಗ ಯಾರಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಕುಟುಂಬಕ್ಕೆ ಹೆಗ್ಗಾರಳ್ಳಿ ಮನೆತನ ಎಂಬ ಹೆಸರು ಮಾತ್ರ ಈಗಲೂ ಉಳಿದುಕೊಂಡು ಬಂದಿದೆ. ನಮ್ಮ ಹೆಸರಿನ ಮುಂದಿರುವ ಎಚ್. ಎಂದರೆ ಹೆಗ್ಗಾರಳ್ಳಿ ಎಂದರ್ಥ. ಆದರೆ ನಾನು ಮಾತ್ರ ಇದುವರೆಗೆ ಹೆಗ್ಗಾರಳ್ಳಿಯ ಮುಖ ನೋಡಿದವನಲ್ಲ.

    ನಮ್ಮ ಅಜ್ಜನ ತಂದೆಯ ಕಾಲಕ್ಕೆ ಸಾಗರ ತಾಲೂಕಿನ ಶಿರವಂತೆ ಸಮೀಪದ ಸಾಲೆಕೊಪ್ಪಕ್ಕೆ ವಲಸೆ ಬಂದರು. ಅಜ್ಜನ ತಂದೆಯ ಹೆಸರು ನಾರಾಯಣಪ್ಪ. ನನ್ನ ಅಜ್ಜನ ಹೆಸರು ರಾಮಕೃಷ್ಣಯ್ಯ. ಈ ಹೊತ್ತಿಗೆ ನಮ್ಮ ಅಜ್ಜನಿಗೆ ಅತ್ಯಂತ ಚಿಕ್ಕ ಪ್ರಾಯ. ಆಗ ಅವರಿಗೆ ೮-೧೦ ವರ್ಷ. ಇಲ್ಲಿಗೆ ವಲಸೆ ಬಂದ ಸ್ವಲ್ಪ್ಪ ಸಮಯದಲ್ಲಿಯೇ ನಮ್ಮ ಮುತ್ತಜ್ಜ (ನಾರಾಯಣಪ್ಪ ತೀರಿಕೊಂಡರು.) ಹೀಗಾಗಿ ತಂದೆಯ ಕಡೆಯ ಕೊಂಡಿಯೊಂದು ಸದ್ದಿಲ್ಲದೆ ಕಳಚಿಕೊಂಡಿತು. ಹೀಗಾಗಿ ನಮಗೆ ಅಜ್ಜನ ಕಡೆಯ ಬಂಧುಗಳ ಪರಿಚಯವಿಲ್ಲ.

    ನಮ್ಮ ಅಜ್ಜ ರಾಮಕೃಷ್ಣಯ್ಯ. ಮತ್ತು ಭಾಗೀರಥಿ ದಂಪತಿಗಳಿಗೆ ನಾರಾಯಣಪ್ಪ, ಗಣಪತಿ, ಶ್ರೀಪತಿ, ಗಂಗಾಧರ, ಭಾಸ್ಕರ, ತಿಮ್ಮಪ್ಪ, ಮಹಾಲಕ್ಷ್ಮಿ, ಅನ್ನಪೂರ್ಣ, ಗೌರಿ ಎಂದು ಒಂಬತ್ತು ಮಂದಿ ಮಕ್ಕಳು. ತುಂಬಿದ ಸಂಸಾರ. ಹೇಳಿಕೊಳ್ಳುವಂತಹ ಆಸ್ತಿಯೇನೂ ಇರಲಿಲ್ಲ. ಸುಮಾರು ಎರಡು ಎಕರೆ ಅಡಿಕೆ ತೋಟವಿತ್ತು. ಇದರಲ್ಲಿ ಸಂಸಾರವನ್ನು ತೂಗಿಸಬೇಕಾಗಿತ್ತು. ಅಡಿಕೆಗೆ ಅಂತಹ ಧಾರಣೆಯೂ ಇರಲಿಲ್ಲ. ಆದರೂ ಬದುಕಿನ ಬಂಡಿ ಸಾಗುತ್ತಿತ್ತು. ಈ ಹೊತ್ತಿಗೆ ನಮ್ಮ ಅಜ್ಜನಿಗೆ ಅದೇನು ಕಂಡಿತೋ ಗೊತ್ತಿಲ್ಲ. ಸಂಸಾರವನ್ನು ನಡೆಸುವ ಜವಾಬ್ದಾರಿಯನ್ನು ಹಿರಿಯ ಮಗ ನಾರಾಯಣಪ್ಪನಿಗೆ ವಹಿಸಿ ಶಿವಾ ರಾಮ ಎಂದು ಮನೆಯಲ್ಲಿ ಉಳಿದರು. ಅಜ್ಜನಿಗೆ ಈ ಕಾಲಕ್ಕೆ ಅಂತಹ ವಯಸ್ಸೇನೂ ಆಗಿರಲಿಲ್ಲ.

    ನಮ್ಮ ಅಜ್ಜನ ಮನೆ ಬಹುತೇಕ ಊರಿನ ಕೊನೆಯಲ್ಲಿತ್ತು. ಇಲ್ಲಿಗೆ ಸಮೀಪದ ಪಟ್ಟಣವೆಂದರೆ ಸಾಗರದ ಪೇಟೆ. ಅಲ್ಲಿಗೆ ಹೋಗಬೇಕೆಂದರೆ, ಸುಮಾರು ಎರಡು ಗಂಟೆ ಕಾಲು ಹಾದಿಯಲ್ಲಿ ನಡೆದು ಸಿರಿವಂತೆ ಎಂಬ ಊರಿಗೆ ಬಂದು ಬಸ್ಸನ್ನು ಹಿಡಿಯಬೇಕು. ಸಿರಿವಂತೆಯಿಂದ ಸಾಗರಕ್ಕೆ ೮ ಕಿಲೋಮೀಟರ್. ಗಂಟೆಗೊಂದು ಬಸ್ಸು. ನಿಲ್ಲಿಸಿದರೆ ಕಾಯುತ್ತಿರುವವರ ಪೂರ್ವಜನ್ಮದ ಪುಣ್ಯ ಎಂದೇ ಹೇಳಬೇಕು. ಬಸ್ಸು ಇಲ್ಲಿಗೆ ಬರುವಾಗಲೇ ಸಾಮಾನ್ಯವಾಗಿ ತುಂಬಿ ತುಳುಕುತ್ತಿದ್ದವು. ಅದರಲ್ಲಿಯೂ ಸಾಗರದಿಂದ ಹಿಂದಿರುಗಿ ಬರುವಾಗ ಆರಂಭದಲ್ಲಿ ಬಸ್ಸನ್ನು ಹತ್ತಲು ಬಿಡುತ್ತಿರಲಿಲ್ಲ. ಖಾಸಗಿ ಬಸ್ಸಿನ ಏಜಂಟರು ಆಯಾ ಬಸ್ಸಿನ ಸರ್ವಾಧಿಕಾರಿಗಳು. ಅವರು ವಿಧಿಸಿದ ಕಟ್ಟಪ್ಪಣೆಯನ್ನು ಮೀರುವಂತಿಲ್ಲ. ಸಿರಿವಂತೆಯವರು ಕೊನೆಯಲ್ಲಿ ಹತ್ತಬೇಕು. ಮೊದಲೇ ಹತ್ತಿದರೆ ದೂರ ಹೋಗುವ ಪ್ರಯಾಣಿಕರಿಗೆ ಸೀಟು ಇರುವುದಿಲ್ಲವೆಂಬುದು ಅವರ ವಾದ. ಈ ಕಾರಣಕ್ಕೆ ಸಂಜೆಯ ಹೊತ್ತು ನಿರಂತರ ತಗಾದೆಗಳು ನಡೆಯುತ್ತಿದ್ದವು.

    ಈ ಊರಿಗೆ ಇರುವ ಇನ್ನೊಂದು ಸಂಪರ್ಕವೆಂದರೆ ಎತ್ತಿನಗಾಡಿ ಹೋಗುವ ದಾರಿ. ಸಾಲೆಕೊಪ್ಪದಿಂದ ಹೊರಟು ಹುಳೇಗಾರು ಮೂಲಕ ಸಿರಿವಂತೆಗೆ ಬಂದು ಸಾಗರದ ದಾರಿಯನ್ನು ಎತ್ತಿನ ಗಾಡಿಗಳು ಹಿಡಿಯಬೇಕಾಗಿತ್ತು. ಇದು ಸಾಕಷ್ಟು ಸುತ್ತು ಬಳಸಿನ ದಾರಿ. ಆದರೂ ಸಾಮಾನು ಸರಂಜಾಮುಗಳನ್ನು ಈ ದಾರಿಯಲ್ಲಿಯೇ ತರಬೇಕಾಗಿತ್ತು. ಹಳ್ಳಿಯಿಂದ ಅಡಿಕೆ ಮುಂತಾದ ಮಾರಾಟದ ಸಾಮಗ್ರಿಗಳನ್ನು ಈ ಮಾರ್ಗದಲ್ಲಿಯೇ ಸಾಗಿಸಬೇಕಾಗಿತ್ತು.

    ಅಜ್ಜಿಯ ತವರು ಮನೆ ಖಂಡಿಕ. ಆ ಕಾಲಕ್ಕೆ ಸಾಲೆಕೊಪ್ಪದಿಂದ ಖಂಡಿಕ್ಕೆ ಕಾಲುನಡಿಗೆಯಲ್ಲಿ ಸುಮಾರು ಎಂದೂವರೆ ಎರಡು ಗಂಟೆಯ ದಾರಿ. ಸಾಲೆಕೊಪ್ಪದಿಂದ ಹೊರಟು ಸಸರವಳ್ಳಿ ಸಿದ್ದಿವಿನಾಯಕ ದೇವಸ್ಥಾನದ ಎದುರು ಕಿರಿದಾದ ದಾರಿಗೆ ಇಳಿದರೆ ಇಕ್ಕೆಡೆಗಳಲ್ಲಿ ಹಸಿರಿನ ತೋರಣ. ಭತ್ತದ ಗದ್ದೆ, ಅಡಿಕೆ ತೋಟದ ನಡುವೆ ಪ್ರಯಾಣ. ಕೈತೋಟದ ಅಡಿಕೆ ತೋಟವನ್ನು ದಾಟಿ ಎದುರಿಗೆ ಸಿಗುವ ಗುಡ್ಡವನ್ನು ಹತ್ತಿ ಇಳಿದರೆ ಸಿಗುವುದು ಹಲಸಿನ ಘಟ್ಟ ಎಂಬ ಹಳ್ಳಿ. ಈ ಹೊತ್ತಿಗೆ ಬಾಯಾರಿಕೆಯಾದರೆ ಇಲ್ಲಿನ ರಾಮಭಟ್ಟರ ಮನೆಯಲ್ಲಿ ನೀರು ಕುಡಿದು ಮತ್ತೆ ತೋಟವಿಳಿದರೆ ಕಲ್ಮಕ್ಕಿಯ ಹೊಸೊಕ್ಕಲು ನಾರಣಪ್ಪನವರ ಮನೆ ಪಕ್ಕದಲ್ಲಿ ಸಂಕ ದಾಟಿದರೆ ರಸ್ತೆ ಸಿಗುತ್ತಿತ್ತು. ಇಲ್ಲಿಂದ ಬಲಕ್ಕೆ ತಿರುಗಿ ಏರುದಾರಿಯಲ್ಲಿ ಒಂದಷ್ಟು ದೂರ ಸಾಗಿದರೆ ಸಿಗುವುದು ಕಲ್ಮಕ್ಕಿಯ ರಾಮೇಶ್ವರ ಸನ್ನಿಧಿ. ದಾರಿಯಲ್ಲಿಯೇ ನಿಂತು ಕೈಮುಗಿದು ಗುಡ್ಡೆದಿಂಬವನ್ನು ದಾಟಿ ಒಂದಷ್ಟು ದೂರ ಹೋದರೆ ಖಂಡಿಕದ ಹೊರವಲಯ ಕಾಣುತ್ತಿತ್ತು. ಇವೆಲ್ಲ ನಿರ್ಜನ ಪ್ರದೇಶಗಳು. ಹಲಸಿನ ಘಟ್ಟ ಮತ್ತು ಗುಡ್ಡೆದಿಂಬದ ಸಮೀಪ ಕಾಡುಕೋಣ ಮತ್ತು ಹುಲಿಗಳು ಒಮ್ಮೊಮ್ಮೆ ಎದುರಾಗುವುದೂ ಇತ್ತು.

    ನಮ್ಮ ಅಜ್ಜಿ ಭಾಗೀರಥಿಗೆ ತನ್ನ ಮೊಮ್ಮಕ್ಕಳ ಮೇಲೆ ಇದ್ದ ಪ್ರೀತಿ ಯಾವ ರೀತಿಯದು ಎಂದು ಹೇಳುವುದು ಕಷ್ಟ. ಏಕೆಂದರೆ ನಾನಂತೂ ಅದರ ಸವಿಯನ್ನು ಉಂಡವನಲ್ಲ. ಅದಕ್ಕೆ ಬೇರೆಯದೇ ಆದ ಕಾರಣಗಳಿವೆ. ಇವೆ. ಮುಂದಿನ ದಿನಗಳಲ್ಲಿ ಅದನ್ನು ಹೇಳುತ್ತೇನೆ.

    ಇನ್ನು ಅಜ್ಜನದು ವಿಚಿತ್ರ ವ್ಯಕ್ತಿತ್ವ. ಮುಂಜಾನೆ ಎದ್ದು ಮನೆ ಎದುರಿನ ತೋಟಕ್ಕೆ ಮೆಟ್ಟಿಲಿಳಿದು ಹೋಗುತ್ತಿದ್ದರು. ಅಲ್ಲಿ ಒಂದು ಸಣ್ಣ ಕೊಳವಿತ್ತು. ಅದರ ಮೊದಲ ಮೆಟ್ಟಿಲ ಮೇಲೆ ನಿಂತು ನೀರನ್ನು ಆಕಡೆ ಈಕಡೆ ಸರಿಸುವುದು ಮುಖ ತೊಳೆಯುವುದು ಮಾಡುತ್ತಿದ್ದರು. ಸುಮಾರು ಒಂದು ಘಂಟೆಗಳ ಕಾಲ ಅವರ ಈ ಮುಖ ತೊಳೆಯುವ ಕಾರ್ಯಕ್ರಮ ನಡೆಯುತ್ತಿತ್ತು. ಅನಂತರ ಒಂದಷ್ಟು ಹೂಗಳನ್ನು ಕೊಯ್ದುಕೊಂಡು ಹಿಂದಿರುಗಿ ಬರುತ್ತಿದ್ದರು. ಸ್ನಾನ ಮಾಡುವಾಗಲೂ ಇದೇ ರೀತಿ. ಹಂಡೆಯಲ್ಲಿ ಇರುವ ನೀರನ್ನೆಲ್ಲ ಖಾಲಿ ಮಾಡಿಯೇ ಬರುವುದು ಅವರ ಸ್ವಭಾವ. ಅಜ್ಜನ ಮನೆಯಲ್ಲಿ ಅಬ್ಬಿ ನೀರು ಹಿತ್ತಿಲ ಕಡೆಗೆ ವರ್ಷವಿಡೀ ಬಂದು ಬೀಳುತ್ತಿತ್ತು. ವಿಶ್ವೇಶ್ವರಯ್ಯ ಇದನ್ನು ನೋಡಿದ್ದರೆ ಅಲ್ಲಿಯೂ ಒಂದು ಆಣೆಕಟ್ಟು ಮಾಡುತ್ತಿದ್ದರೇನೋ! ಹೀಗಾಗಿ ಇಲ್ಲಿ ಬಾವಿಯಿಂದ ನೀರನ್ನು ಸೇದ ಬೇಕಾಗಿರಲಿಲ್ಲ. ಈಗಲೂ ಸಾಲೆಕೊಪ್ಪದ ನಮ್ಮ ಅಜ್ಜನ ಮನೆಯಲ್ಲಿ ಬಾವಿಯಿಲ್ಲವೆಂದರೆ ನೀವು ನಂಬಲೇ ಬೇಕು. ನಿಜವಾದ ಅರ್ಥದಲ್ಲಿ ಭಾಗೀರಥಿ ಇಲ್ಲಿ ಮೈದೋರಿದ್ದಳು. ಹೀಗಾಗಿ ನಮ್ಮ ಅಜ್ಜನ ಸ್ನಾನ ಮತ್ತು ಸಂಜೆಯ ಕೈಕಾಲು ತೊಳೆಯುವ ಕಾರ್ಯಕ್ರಮಕ್ಕೆ ಯಾವುದೇ ಅಡಚಣೆ ಆಗುತ್ತಿರಲಿಲ್ಲ. ಬಾವಿಯಿಂದ ಸೇದಿ ಅಜ್ಜನಿಗೆ ನೀರು ಒದಗಿಸುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಅಜ್ಜ ತನಗಿನ್ನೂ ಮೈಯ್ಯಲ್ಲಿ ತ್ರಾಣವಿರುವಾಗಲೇ ಯಾಕೆ ಸಂಸಾರದ ಜವಾಬ್ದಾರಿಯನ್ನು ಹಿರಿಯ ಮಗ ನಾರಾಯಣನಿಗೆ ಕೊಟ್ಟರು ಎಂಬುದು ಇಂದಿಗೂ ಚಿದಂಬರ ರಹಸ್ಯವಾಗಿಯೇ ಉಳಿದುಕೊಂಡಿದೆ.

    ಅಜ್ಜ ರಾಮಕೃಷ್ಣಯ್ಯ ಮತ್ತು ಅಜ್ಜಿ ಭಾಗೀರಥಿ ಇವರ ದಾಂಪತ್ಯದ ಬಗೆಗೆ ಒಂದು ಮಾತನ್ನು ಇಲ್ಲಿ ಹೇಳಬೇಕು. ನಮಗೆ ಬುದ್ದಿ ಬಂದಾಗಿನಿಂದ ಇವರಿಬ್ಬರು ಅನ್ಯೋನ್ಯವಾಗಿ ಮಾತನಾಡಿದ್ದನ್ನು ನಾವ್ಯಾರೂ ನೋಡಲೇ ಇಲ್ಲ. ಅಜ್ಜಿ ನಿರಂತರವಾಗಿ ಅಜ್ಜನ ಮೇಲೆ ಎಗರಾಡುತ್ತಿದ್ದರು. ಅಜ್ಜ ಏನೂ ಹೇಳದೆ ಮೌನಕ್ಕೆ ಶರಣಾಗುತ್ತಿದ್ದರು. ಹೀಗಾಗಿ ಅಜ್ಜಿಯದು ಒನ್ ವೇ ಗದ್ದಲ. ಇಷ್ಟನ್ನು ಹೊರತು ಪಡಿಸಿದರೆ ಅವರ ತಾರುಣ್ಯದ ದಿನಗಳ ಬಗೆಗೆ, ದಾಂಪತ್ಯದ ಆರಂಭದ ದಿನಗಳ ಬಗೆಗೆ ಹೇಳುವುದಕ್ಕೆ ನನ್ನಲ್ಲಿ ಮಾಹಿತಿಗಳಿಲ್ಲ.

    Read more...

    Sunday, December 5, 2010

    0

    ನೆನಪಿನಂಗಳ - ೩ : ಆಲಳ್ಳಿ ಶಾಲೆಯಲ್ಲಿ ಅಕ್ಷರದ ಬೆಳಕು

  • Sunday, December 5, 2010
  • ಡಾ.ಶ್ರೀಧರ ಎಚ್.ಜಿ.

  • ಶಾಲೆ ಎಂದರೆ ಒಂದು ಕೊಠಡಿ; ಒಬ್ಬರು ಅಧ್ಯಾಪಕರು. ಅವರೇ ಶಾಲೆಯ ಹೆಡ್‌ಮಾಸ್ಟರ್, ಮಾಸ್ಟ್‌ರ್ ಮತ್ತು ಕ್ಲಾರ್ಕ್ ಕಮ್ ಜವಾನ. ಆಲ್ ಇನ್ ಒನ್. ಒಂದರಿಂದ ನಾಲ್ಕನೆಯ ತರಗತಿಯ ವರೆಗಿನ ಮಕ್ಕಳು ಒಂದೇ ಕೊಠಡಿಯಲ್ಲಿದ್ದೆವು.

    ನಾವು ಜನಗಣಮನ ಹೇಳುವುದರೊಂದಿಗೆ ಶಾಲೆ ಆರಂಭವಾಯಿತು. ಮೇಸ್ಟ್ರು ಖುರ್ಚಿಯಲ್ಲಿ ಆಸೀನರಾದರು. ನನ್ನ ಹೆಸರನ್ನು ಒಂದನೆ ತರಗತಿಯ ಹಾಜರಿ ಪುಸ್ತಕದಲ್ಲಿ ಕ್ರಮವತ್ತಾಗಿ ಬರೆದರು. ನಮ್ಮ ಶಾಲೆಯಲ್ಲಿ ಒಟ್ಟು ಸುಮಾರು ೨೦ ರಿಂದ ೨೫ ವಿದ್ಯಾರ್ಥಿಗಳು ಇದ್ದ ನೆನಪು. ತರಗತಿಯ ಆರಂಭದ ದ್ಯೋತಕವಾಗಿ ಎಲ್ಲಾ ತರಗತಿಯ ವಿದ್ಯಾರ್ಥಿಗಳ ಹೆಸರನ್ನು ಕರೆದು ಗುರುತು ಮಾಡಿಕೊಂಡರು. ಆ ಹೊತ್ತಿಗೆ ಶಾಲೆಯಿಂದ ಸ್ವಲ್ಪ ದೂರದಲ್ಲಿದ್ದ ಹೊಂಡದಿಂದ [ಕೆರೆಯೂ ಅಲ್ಲದ, ಬಾವಿಯೂ ಅಲ್ಲದ ನೀರಿನಾಶ್ರಯ] ಒಂದು ಕೊಡಪಾನ ನೀರನ್ನು ತಂದು ಶಾಲೆಯ ಕಟ್ಟೆಯ ಮೇಲೆ ನಾಲ್ಕಾರು ಮಂದಿ ವಿದ್ಯಾರ್ಥಿಗಳು ಇಟ್ಟರು.

    ನನ್ನ ಬದುಕಿನಲ್ಲಿ ದೊರೆತ ಮೊದಲ ಅಧ್ಯಾಪಕರ ಹೆಸರು ಶ್ರೀನಿವಾಸ. ಇಲ್ಲಿಂದ ಸ್ವಲ್ಪ ದೂರದ ಕಾನ್ಲೆ ಎಂಬ ಊರಿನಿಂದ ಬರುತ್ತಿದ್ದರು. ಬಿಳಿ ಅಂಗಿ, ಕಚ್ಚೆಪಂಜೆ, ಮೇಲೊಂದು ಬುಶ್‌ಕೋಟು, ಕಾಲಿಗೆ ಚರ್ಮದ ಚಪ್ಪಲಿ. ಎತ್ತರವಲ್ಲದ ಗಿಡ್ಡವೂ ಅಲ್ಲದ ಮಧ್ಯಮ ತರಗತಿಯ ಆಳ್ತನ. ಬಡಕಲು ಶರೀರ. ನೋಡಲು ತುಸು ಕಪ್ಪು. ಅವರೇ ನನ್ನ ಮೊದಲ ಗುರು. ಬದುಕಿಗೆ ಅಕ್ಷರದ ಬೆಳಕನ್ನು ಬಿತ್ತಿದವರು. ಒರಟಾಗಿದ್ದ ಮೊರಡು ಕಲ್ಲನ್ನು ತುಸು ಕೆತ್ತಿದವರು.

    ಕೊಠಡಿಯಲ್ಲಿ ನಮಗೆ ಕುಳಿತುಕೊಳ್ಳಲು ಕಾಲ್ಮಣೆಗಳಿದ್ದವು. ಈ ಕೊಠಡಿಗೆ ರಸ್ತೆಯ ಕಡೆಗೆ ಒಂದು ಬಾಗಿಲು. ಇನ್ನೊಂದು ಬದಿಯಲ್ಲಿ ಎರಡು ಕಿಟಕಿ. ತರಗತಿಯ ಒಳಗೆ ಸಾಲೆಯ ಸಾಮಗ್ರಿಯನ್ನು ಇಡಲು ಗೋಡೆಯಲ್ಲಿ ಒಂದು ಪುಟ್ಟ ಮರದ ಕಪಾಟು. ಶಾಲೆಯ ಸಾಮಗ್ರಿ ಎಂದರೆ ಬೋರ್ಡು ಒರೆಸುವ ಬಟ್ಟೆ, ಚಾಕ್‌ಪೀಸ್ ಮತ್ತು ಹಾಜರಿ ಪುಸ್ತಕ. ಕೊಠಡಿಯ ನಡುವೆ ಒಂದು ಹಳೆಯ ಮರದ ಟೇಬಲ್ ಮತ್ತು ಅಷ್ಟೇ ಹಳೆಯದಾದ ಒಂದು ಖುರ್ಚಿ.

    ಮೊದಲ ತರಗತಿಯ ನಮ್ಮ ಸಂಪತ್ತೆಂದರೆ ಒಂದು ಸ್ಲೇಟು; ಒಂದು ಕನ್ನಡ ಪುಸ್ತಕ. ಸ್ಲೇಟಿನ ಮೇಲೆ ಬರೆಯಲು ಒಂದು ಬಳಪದಕಡ್ಡಿ. ಶಾಲೆಗೆ ಹೋಗುವ ಮೊದಲ ದಿನ ಇವುಗಳನ್ನು ತೆಗೆದುಕೊಂಡು ಹೋಗಿದ್ದೆ. ಶ್ರೀನಿವಾಸ ಮೇಸ್ಟ್ರು ನನ್ನ ಸ್ಲೇಟಿನ ಮೇಲೆ ಅ ಆ ಅಕ್ಷರವನ್ನು ಬರೆದು ತಿದ್ದಲು ಹೇಳಿದರು. ನಾನು ಸುಮಾರು ಮಧ್ಯಾಹ್ನದವರೆಗೂ ಅದನ್ನು ತಿದ್ದಿದ ನೆನಪಿದೆ. ಅದರ ಮೇಲೆ ತಿದ್ದಿ, ತಿದ್ದಿ ಅದು ದಪ್ಪ ಅಕ್ಷರವಾಗಿ ಮಾರ್ಪಟ್ಟಿತ್ತು.

    ೧೧.೩೦ರ ಹೊತ್ತಿಗೆ ಎಲ್ಲರನ್ನೂ ಶೌಚಕ್ಕೆ ಹೋಗಲು ಬಿಟ್ಟರು. ನಾವು ಶಾಲೆಯ ಸುತ್ತ ಇದ್ದ ಪೊದೆಗಳ ಮರೆಗೆ ಹೋಗಿ ಮೂತ್ರಮಾಡಿ ಬಂದೆವು. ಎಡೆಯಲ್ಲಿ ಹೋಗಬೇಕೆಂದರೆ ಎದ್ದು ನಿಂತು ಕಿರುಬೆರಳನ್ನು ತೋರಿಸಿದರೆ ಹೊರಗೆ ಹೋಗಲು ಅನುಮತಿ ನೀಡುತ್ತಿದ್ದರು.

    ಮಧ್ಯಾಹ್ನ ಊಟದ ವಿರಾಮ. ನಾವು ಬಾಳೆ ಎಲೆಯಲ್ಲಿ ಕಟ್ಟಿ ತಂದ ತಿಂಡಿಯನ್ನು ತಿಂದು ಕೈತೊಳೆದೆವು. ನಮ್ಮ ಮೇಸ್ಟ್ರು ನಮ್ಮೊಂದಿಗೆ ತಿಂಡಿ ತಿಂದರು. ಒಮ್ಮೊಮ್ಮೆ ಸಮೀಪದ ಆಲಳ್ಳಿಗೆ ಹೋಗಿ ಅಲ್ಲಿದ್ದ ಏಕಮಾತ್ರ ಚಹ ಅಂಗಡಿಯಲ್ಲಿ ಅವಲಕ್ಕಿ ತಿಂದು ಬರುತ್ತಿದ್ದರು. ನನಗೆ ತಿಳಿದ ಮಟ್ಟಿಗೆ ಶ್ರೀನಿವಾಸರು ಶ್ರೀಮಂತರಲ್ಲ. ಅವರ ಅಮ್ಮ ನಮ್ಮ ಮನೆಯ ಸಮೀಪ ಕೂಲಿ ಕೆಲಸಕ್ಕೆ ಬರುತ್ತಿದ್ದರು.

    ಊಟದ ನಂತರ ಅ ಆ ಇ ಈ ಯಿಂದ ತೊಡಗಿ ಕಾಗುಣಿತದ ಬಳ್ಳಿಗಳನ್ನು ಹೇಳಿಕೊಡುತ್ತಿದ್ದರು. ಇದು ಳಂ ಳ:ವರೆಗೂ ಹೋಗುತ್ತಿತ್ತು. ಅನಂತರ ಮಗ್ಗಿ ಪಾಠ. ನಮಗಿಂತ ಸೀನಿಯರ್ ವಿದ್ಯಾರ್ಥಿಗಳು ಅಥವಾ ಮಗ್ಗಿ ಸರಿಯಾಗಿ ಬರುವವರು ಹೇಳಿಕೊಡುತ್ತಿದ್ದರು. ನಾವು ಹೇಳುತ್ತಿದ್ದವು. ಒಂದರಿಂದ ತೊಡಗಿ ನೂರರವರೆಗೆ ಒಬ್ಬರು. ಅನಂತರ ೨ ಒಂದ್ಲೆ ಎರಡು ಆರಂಭವಾಗಿ ೨೦ರ ಮಗ್ಗಿಯವರೆಗೂ ಹೋಗುತ್ತಿತ್ತು. ನಾವು ಇದನ್ನು ರಾಗಬದ್ಧವಾಗಿ ಹೇಳುತ್ತಿದ್ದವು. ಈ ಹೊತ್ತು ಮೇಸ್ಟ್ರಿಗೆ ತುಸು ವಿಶ್ರಾಂತಿಯ ಸಮಯ. ಅವರು ನಮ್ಮ ಈ ಗದ್ದಲದ ನಡುವೆಯೇ ನಿದ್ದೆ ಮಾಡಿ ಬಿಡುತ್ತಿದ್ದರು. ನಮಗೆ ಮಗ್ಗಿ ಪಾಠ ಮುಗಿದರೆ ಅವತ್ತಿನ ಶಾಲೆಯೂ ಮುಗಿದಂತೆ. ಎಲ್ಲರೂ ಮನೆಗೆ ಹೊರಡುತ್ತಿದ್ದವು. ಸಂಜೆ ಮನೆಗೆ ಹೊರಡುವ ಮೊದಲು ತರಗತಿಯ ಕೊಠಡಿಯ ಕಸಹೊಡೆದು ಬಿಡುತ್ತಿದ್ದವು.

    ನನಗೆ ಈ ಶಾಲೆಯಲ್ಲಿ ಸಿಕ್ಕಿದವರಲ್ಲಿ ಹಲವರು ಇಂದು ಕೃಷಿ ಮಾಡುತ್ತಿದ್ದಾರೆ. ಈ ದಿನಗಳಲ್ಲಿ ದೊರಕಿದ ಹಾಗೂ ಈಗಲೂ ನನ್ನೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳೆಂದರೆ ಕೊಡ್ಲಗದ್ದೆ ಮನೆಯ ನಟರಾಜ, ಮಲ್ಲೇಶ ಗೌಡರ ಮಗ ಜಯ ಮತ್ತು ವಿರೂಪಾಕ್ಷ. ಶಾಲೆಯ ದಿನಗಳಲ್ಲಿ ನಾವು ಒಳ್ಳೆಯ ಗೆಳೆಯರಾಗಿದ್ದವು. ಈಗಲೂ ಆ ಗೆಳೆತನ ಉಳಿದುಕೊಂಡಿದೆ.

    ಮೊದಲ ಕೆಲವು ದಿನ ನನ್ನನ್ನು ಅಪ್ಪ ಅಥವಾ ಅಮ್ಮ ಶಾಲೆಯವರೆಗೆ ಕಳಿಸಿ ಹೋಗುತ್ತಿದ್ದರು. ಸಂಜೆ ಬಂದು ಕರೆದುಕೊಂಡು ಹೋಗುತ್ತಿದ್ದರು. ಹೊಳೆದಾಟಿ ಕಾಡಿನ ದಾರಿಯಲ್ಲಿ ಹೋಗುವಾಗ ಜಯ, ವಿರೂಪಾಕ್ಷ ಮತ್ತು ನಾನು ಒಟ್ಟಿಗೆ ಹೋಗುತ್ತಿದ್ದವು. ಸಾಮಾನ್ಯವಾಗಿ ಅಪ್ಪ ಹೊಳೆ ದಾಟಿಸಿ ಬಿಡುತ್ತಿದ್ದರು. ಸಂಜೆ ನಾನು ಬರುವ ಹೊತ್ತಿಗೆ ಅವರು ಕಾದಿರುತ್ತಿದ್ದರು. ಹೊಳೆಯಲ್ಲಿ ನೀರು ಹೆಚ್ಚಿದ್ದರೆ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ದಾಟಿಸುತ್ತಿದ್ದರು.

    ಶಾಲೆಗೆ ಹೋಗಿ ಬರುವ ಕಾಡಿನ ದಾರಿಯಲ್ಲಿ ಹೊಳೆದಾಸವಾಳದ ಹಣ್ಣುಗಳು ಯಥೇಚ್ಚವಾಗಿ ಸಿಗುತ್ತಿದ್ದವು. ಅವುಗಳನ್ನು ಕೊಯ್ದು ತಿನ್ನುತ್ತಾ ಹೋಗುವುದು ನಮ್ಮ ನಿತ್ಯದ ಕಾಯಕ. ಒಮ್ಮೆ ಹುತ್ತದ ಮೇಲಿದ್ದ ಗಿಡದ ಹಣ್ಣು ಕೊಯ್ಯಲು ಕೈ ಹಾಕಿದಾಗ ಹಾವೊಂದು ಬುಸ್ ಎಂದದ್ದು ಈಗಲೂ ನೆನಪಿದೆ.

    ಕಾಡಿನ ದಾರಿಯಲ್ಲಿ ಹೋಗುವಾಗ ಒಮ್ಮೊಮ್ಮೆ ನರಿ, ಹಂದಿ, ಹಾವುಗಳು ಎದುರಿಗೆ ಸಿಗುತ್ತಿದ್ದವು. ಆಗೆಲ್ಲ ನಾವು ಹೆದರಿ ಕಂಗಾಲಾಗುತ್ತಿದ್ದವು. ಒಮ್ಮೆಯಂತೂ ದಾರಿಯ ಪಕ್ಕದ ಪೊದೆಯಲ್ಲಿದ್ದ ಹಂದಿಯೊಂದು ನಮ್ಮನ್ನು ಸ್ವಲ್ಪ ದೂರದವರೆಗೆ ಅಟ್ಟಿಸಿಕೊಂಡು ಬಂದಿತ್ತು. ಕೆಲವೊಮ್ಮೆ ಹತ್ತಾರು ಹಂದಿಗಳು ತಮ್ಮ ಸಂಸಾರವನ್ನು ಕಟ್ಟಿಕೊಂಡು ರಸ್ತೆಯನ್ನು ದಾಟುತ್ತಿದ್ದವು. ಆಗ ನಾವು ದೂರದಲ್ಲಿ ನಿಂತು ನೋಡುತ್ತಿದ್ದವು. ಎಲ್ಲವೂ ದಾಟಿದ್ದನ್ನು ಖಚಿತಪಡಿಸಿಕೊಂಡ ನಂತರ ಮುಂದೆ ಹೋಗುತ್ತಿದ್ದೆವು.

    ಬಾಲ್ಯದಿಂದಲೂ ನಾನು ಓದಿನಲ್ಲಿ ದಡ್ಡನಲ್ಲ. ಹೀಗಾಗಿ ಬಹಳ ಬೇಗ ಎಲ್ಲ ಅಕ್ಷರಗಳನ್ನು ಕಲಿತೆ. ಒಂದರಿಂದ ಇಪ್ಪತ್ತರವರೆಗಿನ ಮಗ್ಗಿಯ ಬಳ್ಳಿಯನ್ನು ಕಲಿತೆ. ಕೆಲವೊಮ್ಮೆ ನಾವು ಈ ಮಗ್ಗಿಯ ಬಳ್ಳಿಯನ್ನು ಹಿಂದು ಮುಂದಾಗಿ ಹೇಳಬೇಕಾಗಿತ್ತು.

    ಒಂದು ದಿನ ಸಂಜೆ ಅಪ್ಪ ಹೊಳೆದಾಟಿಸಲು ಬಂದಿರಲಿಲ್ಲ. ಅದು ಮಳೆಗಾಲದ ಸಮಯ. ಹೊಳೆಯಲ್ಲಿ ಸಾಕಷ್ಟು ನೀರಿತ್ತು. ಆಚೆ ದಡದಲ್ಲಿ ಅಪ್ಪ ಬಂದಿರಲಿಲ್ಲ. ತುಸು ಹೊತ್ತು ನೋಡಿದ ನಂತರ ನಾನೇ ದಾಟಲು ಸನ್ನದ್ದನಾದೆ. ಒಂದೊಂದೇ ಹೆಜ್ಜೆಯಿಟ್ಟುಕೊಂಡು ಹೊಳೆಯ ನಡುವಿಗೆ ಬಂದೆ. ಹೊಳೆಯ ನೀರು ಮೊಳಕಾಲನ್ನು ದಾಟಿ ತುಸು ಮೇಲೆ ಬಂದಿತ್ತು ಹಾಕಿಕೊಂಡಿದ್ದ ಚಡ್ಡಿ ಒದ್ದೆಯಾಗಿತ್ತು. ನೀರಿನ ಸೆಳವು ತುಸು ಜಾಸ್ತಿಯಾಯಿತು. ಕಾಲಡಿಯಲ್ಲಿದ್ದ ಮರಳು ಸರ್ರನೆ ಜಾರಿ ಹೋಗುತ್ತಿತ್ತು. ನನಗೆ ಮುಂದೆ ಹೆಜ್ಜೆಯಿಡಲು ಧೈರ್ಯ ಬರಲಿಲ್ಲ. ಹಿಂದೆ ಹೋಗುವಂತೆಯೂ ಇರಲಿಲ್ಲ. ಇನ್ನೇನು ಆಯ ತಪ್ಪಿ ಬೀಳಬೇಕು ಎಂಬಷ್ಟರಲ್ಲಿ ದನಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ಅಪರಿಚಿತರೊಬ್ಬರು ಬಂದು ನನ್ನನ್ನು ಹಿಡಿದುಕೊಂಡರು. ನಾನು ಅಂದಿಗೆ ಬಚಾವಾದೆ.
    ಈ ಸುದ್ದಿ ಒಂದೆರಡು ದಿನಗಳ ನಂತರ ಮನೆಗೆ ಮುಟ್ಟಿತು.

    ನಮ್ಮ ಶಾಲೆಯ ಎದುರು, ಸುಮಾರು ಅರ್ಧಫರ್ಲಾಂಗು ದೂರದಲ್ಲಿ ನಂದಿಕೋಲು ಬಸವಣ್ಣನ ಒಂದು ದೇವಸ್ಥಾನವಿತ್ತು. ನಾವು ಮಧ್ಯಾಹ್ನದ ಬಿಡುವಿನ ಹೊತ್ತಿನಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಅಲ್ಲಿಗೆ ಹೋಗುತ್ತಿದ್ದೆವು. ಅಲ್ಲಿ ಒಂದಷ್ಟು ಮಾವಿನ ಮರಗಳಿದ್ದು ಸಂಮೃದ್ಧವಾಗಿ ಮಾವಿನ ಹಣ್ಣು ಸಿಗುತ್ತಿತ್ತು. ಈ ಬಸವಣ್ಣನ ದೇವಸ್ಥಾನದ ಎದುರು ಒಂದೆರಡು ಕಲ್ಲುಗಳಿದ್ದವು. ಅದರಲ್ಲಿ ಒಂದು ಕಲ್ಲಿನ ಮೇಲೆ ಒಂದಷ್ಟು ಅಕ್ಷರಗಳಿದ್ದವು. ಆಗ ನಾವು ಆ ಅಕ್ಷರಗಳನ್ನು ಓದಲು ಪ್ರಯತ್ನಿಸಿ ಸೋತಿದ್ದೆವು. ಹಾಗೆಯೇ ಆ ಅಕ್ಷರಗಳನ್ನು ಓದಿದರೆ ಸಾಯುತ್ತಾರೆ ಎಂಬ ಕಥೆಗಳನ್ನು ಕೇಳಿ ಸುಮ್ಮನಾಗಿದ್ದೆವು. ಆದರೆ ಅದರ ಬಗೆಗಿನ ಕುತೂಹಲ ಮಾತ್ರ ಹೋಗಿರಲಿಲ್ಲ. ಕಳೆದ ವರ್ಷ ಊರಿಗೆ ಹೋದಾಗ ಮತ್ತೊಮ್ಮೆ ನಂದಿಕೋಲು ಬಸವಣ್ಣನನ್ನು ನೋಡಲು ಹೋಗಿದ್ದೆ. ಅದೇ ಕಲ್ಲು, ಅದೇ ಅಕ್ಷರಗಳು. ಯಾವುದೇ ಬದಲಾವಣೆಯಿಲ್ಲದೆ ಹಾಗೇ ಮರದ ಅಡಿಯಲ್ಲಿದ್ದವು. ಬಿ.ಎಲ್. ರೈಸರ ಶಾಸನ ಸಂಪುಟದಲ್ಲಿ ಈ ಶಾಸನದ ಒಕ್ಕಣೆ ಸಿಕ್ಕಿತು. ಕ್ರಿ. ಶ. ೧೪೫೩ಕ್ಕೆ ಸಲ್ಲುವ ಈ ಶಾಸನವು ಸಿರಿಊರ ಗೌಡರ ಮಗ ರಾಮಗೌಡರು ಮತ್ತು ಆಯಿಗ ಗೌಡರು ಯುದ್ಧವೊಂದರಲ್ಲಿ ಮಡಿದದ್ದು ಹಾಗೂ ಆತನ ಮಡದಿ ಎಚಿಗೆಯ ಗೌಡಿ ಸಹಗಮನ ಮಾಡಿದ ಸಂಗತಿಯನ್ನು ಹೇಳುತ್ತದೆ. ಶಿಲಾಶಾಸನದ ಪಕ್ಕದಲ್ಲಿ ಇಂದಿಗೂ ಒಂದು ಮಹಾಸತಿ ಕಲ್ಲಿದೆ. ಕರ್ನಾಟಕದಲ್ಲಿ ಮಹಾಸತಿ ಪದ್ಧತಿ ಇರುವುದರ ಬಗೆಗೆ ಓದಿದ್ದೆ. ಆದರೆ ನಮ್ಮೂರಿನಲ್ಲಿಯೇ ಸಹಗಮನ ನಡೆದ ಸಂಗತಿ ನನ್ನನ್ನು ದಿಗ್ಮೂಢನನ್ನಾಗಿ ಮಾಡಿತು.

    ಒಂದು ಮತ್ತು ಎರಡನೆಯ ತರಗತಿಯನ್ನು ಆಲಳ್ಳಿಯ ಶಾಲೆಯಲ್ಲಿ ಕಲಿತೆ. ಈ ಹೊತ್ತಿಗೆ ನಾನು ಹೊಳೆ ದಾಟಲು ಮಾಡಿದ ಸಾಹಸ ನಮ್ಮ ಬಂಧು ಬಳಗದಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದಿತ್ತು. ಇದು ನನ್ನ ದೊಡ್ಡಮ್ಮನ ಕಿವಿಗೂ ಬಿತ್ತು. ದೊಡ್ಡಮ್ಮನೆಂದರೆ ಅಮ್ಮನ ಅಕ್ಕ. ಗೌರಿ ಎಂದು ಇವರ ಹೆಸರು. ಅಮ್ಮ ಇವರನ್ನು ಗೌರಕ್ಕ ಎಂದು ಕರೆಯುತ್ತಿದ್ದರು.

    ಹೆಗ್ಗೋಡಿನ ಸಮೀಪ ಗಡಿಕಟ್ಟೆ ಎಂಬ ಊರಿದೆ. ಅಲ್ಲಿಂದ ತುಸು ಮುಂದೆ ಹೋದರೆ ಹಿರೇಮನೆ ಎಂಬ ಸ್ಥಳವಿದೆ. ದೊಡ್ಡಮ್ಮನ ಸಂಸಾರ ಅಲ್ಲಿ ವಾಸವಾಗಿತ್ತು. ವಾಸ್ತವವಾಗಿ ದೊಡ್ಡಪ್ಪನ ಮೂಲ ಮನೆ ಹೊನ್ನೆಸರದಲ್ಲಿತ್ತು. ದೊಡ್ಡಪ್ಪನ ತಂದೆ ಹಿರೇಮನೆಯಲ್ಲಿ ಜಮೀನು ತೆಗೆದುಕೊಂಡ ಮೇಲೆ ಇವರು ಇಲ್ಲಿಗೆ ಬಂದು ವಾಸವಾಗಿದ್ದರು.

    ಯಾವುದೋ ಕಾರ್ಯಕ್ರಮಕ್ಕೆ ಬಂದವರು ದೊಡ್ಡಮ್ಮ ಅಮ್ಮನಲ್ಲಿ ಹೇಳಿದರು. ಮುಂದಿನ ವರ್ಷದಿಂದ ಶ್ರೀಧರ ನಮ್ಮ ಮನೆಯಿಂದ ಶಾಲೆಗೆ ಹೋಗಲಿ. ನನ್ನ ಮಕ್ಕಳು ಓದುವ ಪುರಪ್ಪೆಮನೆ ಶಾಲೆಯಲ್ಲಿ ಅವನೂ ಕಲಿಯಲಿ ಎಂದು ತಾಕೀತು ಮಾಡಿದರು. ದೊಡ್ಡವರ ಅಪೇಕ್ಷೆಯಂತೆ ನಾನು ಆಲಳ್ಳಿಯ ಶಾಲೆಯನ್ನು ಬಿಟ್ಟು ಪುರಪ್ಪೆಮನೆ ಶಾಲೆಗೆ ಸೇರಿದೆ.

    Read more...

    Saturday, December 4, 2010

    0

    ನೆನಪಿನಂಗಳದಲ್ಲಿ ಆಲಳ್ಳಿ ಶಾಲೆ . . .

  • Saturday, December 4, 2010
  • ಡಾ.ಶ್ರೀಧರ ಎಚ್.ಜಿ.

  • ಸಾಲೆಕೊಪ್ಪದಿಂದ ಸ್ಕೂಲಿಗೆ ಹೋಗುವುದಿಲ್ಲವೆಂದು ಮನೆಗೆ ಬಂದ ಮೇಲೆ ಹೊಸ ಸಮಸ್ಯೆ ತಲೆದೋರಿತು. ಇವನನ್ನು ಎಲ್ಲಿ ಶಾಲೆಗೆ ಸೇರಿಸುವುದೆಂದು ಮನೆಯವರು ತಲೆಕೆಡಿಸಿಕೊಂಡರು. ಹೊರಗೆ ಎಲ್ಲಿಯೂ ಬಿಡುವಂತಿಲ್ಲ. ಮನೆಯ ಹತ್ತಿರ ಶಾಲೆಯಿಲ್ಲ. ಇರುವ ಒಂದೇ ಒಂದು ಆಯ್ಕೆಯೆಂದರೆ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದ ಆಲಳ್ಳಿ ಶಾಲೆಗೆ ಕಳಿಸುವುದು. ಆದರೆ ಅದೂ ಸಹ ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

    ಆಲಳ್ಳಿಯ ಶಾಲೆಗೆ ಮನೆಯಿಂದ ಹೋಗುವುದಕ್ಕೆ ಎರಡು ದಾರಿಗಳಿದ್ದವು. ನೇರವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಮೊದಲನೆಯದು. ಮನೆಯ ಮುಂದಿನ ಗದ್ದೆಗೆ ಇಳಿದು, ಎದುರಾಗುವ ಹೊಳೆದಾಟಿ, ಮುಂದೆ ಸುಗುವ ಕಾಡಿನಿಂದ ಆವೃತವಾದ ಗುಡ್ಡವನ್ನು ಹತ್ತಿ ಒಳಮಾರ್ಗದಲ್ಲಿ ಹೋಗುವುದು ಎರಡನೆಯ ದಾರಿ. ಇವೆರಡರಲ್ಲಿ ಎರಡನೆಯ ದಾರಿ ಹತ್ತಿರದ್ದು. ಆದರೆ ಬೇಸಿಗೆಯಲ್ಲಿ ಮಾತ್ರ ಇದರಲ್ಲಿ ಹೋಗುವುದು ಕಾರ್ಯಸಾಧುವಾಗಿತ್ತು. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ದಾಟುವುದು ಸುಲಭದ್ದಾಗಿರಲಿಲ್ಲ.

    ಮನೆಗೆ ಬಂದ ಒಂದೆರಡು ದಿನದ ನಂತರ ಅಪ್ಪ ನನ್ನನ್ನು ಆಲಳ್ಳಿ ಸಾಲೆಗೆ ಕರೆದುಕೊಂಡು ಹೋದರು. ಆ ಕಾಲಕ್ಕೆ ನಮ್ಮೂರಿನ ಪರಿಸರದಲ್ಲಿ ಇರುವುದೆಲ್ಲವೂ ಒಂದೇ ಶಾಲೆ. ಅವೆಲ್ಲವೂ ಸರ್ಕಾರಿ ಶಾಲೆಗಳು. ಕನ್ನಡ ಮಾಧ್ಯಮ ಮಾತ್ರ. ಆಯ್ಕೆಯ ಪ್ರಶ್ನೆಗಳಿರಲಿಲ್ಲ. ಹೀಗಾಗಿ ಇದು ಒಂದು ರೀತಿಯಲ್ಲಿ ಹೆತ್ತವರಿಗೆ ನೆಮ್ಮದಿಯ ಸಂಗತಿಯಾಗಿತ್ತು.

    ಮುಂಜಾನೆ ಹತ್ತುಗಂಟೆಯ ಸುಮಾರಿಗೆ ನಾವು ಶಾಲೆಯನ್ನು ತಲುಪಿದೆವು. ಮಳೆ ಸುರಿಯುತ್ತಿತ್ತು. ಶಾಲೆಯ ಬೀಗವೂ ತೆರೆದಿರಲಿಲ್ಲ. ಹೀಗಾಗಿ ಶಾಲೆಯ ಕಟ್ಟೆಯ ಮೇಲೆ ಕುಳಿತೆವು. ಈ ಶಾಲೆ ಕಾನಲೆ ರಸ್ತೆಯನ್ನು ದಾಟಿದ ನಂತರ ಆಲಳ್ಳಿ ಊರಿನ ಹೊಲಗದ್ದೆಗಳು ಆರಂಭವಾಗುವುದಕ್ಕಿಂತ ಮೊದಲು ಬಯಲಿನಲ್ಲಿತ್ತು. ಆ ಪರಿಸರಕ್ಕೆಲ್ಲ ಶಾಲೆಯ ಕಟ್ಟಡ ಮಾತ್ರ. ಸಮೀಪದಲ್ಲಿ ಯಾವುದೇ ಮನೆಗಳಿರಲಿಲ್ಲ. ಸುತ್ತ ಸಣ್ಣದಾಗಿ ಬೆಳೆದಿರುವ ಕಾಡು. ಕುಡಿಯುವ ನೀರಿಗೆ ಬಾವಿಯೂ ಇರಲಿಲ್ಲ. ಶಾಲೆಯ ಕಟ್ಟೆಯ ಮೇಲೆ ಕುಳಿತು ಕಣ್ಣು ಹಾಯಿಸಿದಷ್ಟು ದೂರ ಹಸಿರಿನಿಂದ ತುಂಬಿದ ಗದ್ದೆಗಳೇ ಕಾಣುತ್ತಿದ್ದವು. ಶಾಲೆಯ ಎದುರಿನ ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ಒಂದೊಂದು ವಾಹನಗಳು ಹೋಗುತ್ತಿದ್ದವು. ಅವುಗಳಲ್ಲಿ ಹೆಚ್ಚಿನವು ಗಜಾನನ ಕಂಪನಿಯ ಬಸ್ಸುಗಳು. ವಿರಳವಾಗಿ ವಿರಳವಾಗಿ ಹೋಗುತ್ತಿದ್ದವು. ಬೈಕಿನ ಸಂಗತಿಯಿರಲಿಲ್ಲ. ಕಾರುಗಳ ಸಂಖ್ಯೆಯೂ ಕಡಿಮೆ.

    ಸಮಯ ಕಳೆದಂತೆ ವಿದ್ಯಾರ್ಥಿಗಳು ಬರಲಾರಂಭಿಸಿದರು. ನಾವು ಶಾಲೆಯ ಕಟ್ಟೆಯ ಮೇಲೆ ಕುಳಿತೇ ಇದ್ದೆವು. ಹನ್ನೊಂದು ಗಂಟೆಯ ಹೊತ್ತಿಗೆ ಕಚ್ಚೆ ಪಂಜೆ ಧರಿಸಿದ್ದ ಹಿರಿಯರೊಬ್ಬರು ಶಾಲೆಯ ಕಡೆಗೆ ಬಂದರು. ಅವರನ್ನು ನೋಡಿ ಅಲ್ಲಿದ್ದ ವಿದ್ಯಾರ್ಥಿಗಳು ಗಂಭೀರವಾದರು. ಒಬ್ಬ ಹುಡುಗ ಓಡಿ ಹೋಗಿ ಅಧ್ಯಾಪಕರ ಕೈಯಿಂದ ಬೀಗದ ಕೀಯನ್ನು ತಂದು ಬಾಗಿಲನ್ನು ತೆರೆದ. ನಾವು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಧ್ಯಾಪಕರು ಕೊನೆಗೂ ಬಂದರು.

    ತಮ್ಮ ಪರಿಚಯವನ್ನು ಅಪ್ಪ ಹೇಳಿಕೊಂಡರು. ಅನಂತರ ನನ್ನನ್ನು ಆಲಳ್ಳಿ ಶಾಲೆಗೆ ಸೇರಿಸುವ ಪ್ರಕ್ರಿಯೆ ವಿದ್ಯುಕ್ತವಾಗಿ ನಡೆಯಿತು. ಅಪ್ಪ ನನ್ನನ್ನು ಅಲ್ಲಿಯೇ ಬಿಟ್ಟು ಮನೆಗೆ ಹೊರಟು ಹೋದರು.

    Read more...

    Subscribe